– ಜಯಶ್ರೀ.ಜೆ. ಅಬ್ಬಿಗೇರಿ,
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ. ಮೊ: ೯೪೪೯೨೩೪೧೪೨

ಜೀವನ ನಮ್ಮನ್ನು ಸುಖಮಯ ದಾರಿಯಲ್ಲಿ ಕರೆದುಕೊಂಡು ಹೊರಟಾಗ ನಾವು ಮೇಲ್ಮೆöÊಯಲ್ಲೇ ಬದುಕಿ ಬಿಡುತ್ತೇವೆ. ಬದುಕು ನಾವು ಅಂದುಕೊಂಡದಕ್ಕಿಂತ ಸ್ನೇಹಮಯಿಯಾಗಿದೆ ಅಂತ ಜ್ಞಾನದ ಮೂಸೆಯಿಂದ ಒಂದು ಮಾತು ಬರೋದೇ ಇಲ್ಲ. ಆದರೆ ಯಾತನೆಗಳು ಸುತ್ತುವರಿದಾಗ ಬದುಕಿನ ಜಟಕಾ ಬಂಡಿ ಓಡಿಸುವುದು ತುಂಬಾ ದುಸ್ತರವೆನಿಸುತ್ತದೆ. ಕಂಡ ಕಂಡವರ ಮುಂದೆ ಗೋಳಿಡುತ್ತೇವೆ. ಸುಖದ ಬೆಳಕಿನಲ್ಲಿ ಕಣ್ಮುಚ್ಚಿದ್ದ ನಮಗೆ ಕಷ್ಟ ಬಂದಾಗ ಬದುಕಿನಾಳ ತಿಳಿಯುತ್ತದೆ. ಕಷ್ಟ ನಮ್ಮವರು ಯಾರೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಎಂಬ ಜ್ಞಾನವಿದ್ದರೂ ಕ್ರಿಯೆಯಲ್ಲಿ ತರಲು ಸಾಧ್ಯವಾಗುವುದಿಲ್ಲ. ಕಷ್ಟದ ಕತ್ತಲಲ್ಲಿ ತಡಕಾಡುತ್ತಿರುವಾಗ ಸುಖದ ಕಿಟಕಿಯಿಂದ ಒಂದೇ ಒಂದು ಕಿರಣ ಒಳನುಸುಳಿದರೂ ಸಾಕು ಅದನ್ನು ಗಬಕ್ಕನೇ ಹಿಡಿಕೊಳ್ಳಲು ಕಾತರಿಸುತ್ತೇವೆ. ಸುಖವನ್ನು ಸುಖವಾಗಿ ಕಳೆಯುತ್ತೇವೆ. ಮತ್ತೊಬ್ಬರ ಭಾವನೆಗಳನ್ನು ಅಗತ್ಯಗಳನ್ನು ಲೆಕ್ಕಿಸದೇ ಕಳೆದುಬಿಡುತ್ತೇವೆ. ಆದರೆ ಕಷ್ಟವನ್ನು ಸಹಿಸಿಕೊಳ್ಳಲಾಗುವುದಿಲ್ಲ. ಬದುಕಿನ ಕೊನೆಯ ಕ್ಷಣವೇ ಬಂದಂತೆ ಕ್ಷಣ ಕ್ಷಣವೂ ವಿಲ ವಿಲ ಒದ್ದಾಡುತ್ತೇವೆ. ಹಬ್ಬಕ್ಕೆ ತೊಡಬೇಕೆಂದು ತಂದ ಹೊಸ ಧಿರಿಸೊಂದು ಕೊಳೆಯಲ್ಲಿ ಬಿದ್ದರೆ ಸ್ವಲ್ಪ ಹೊತ್ತು ನೋವೆನಿಸುತ್ತದೆ. ನಂತರ ಅದನ್ನೇ ಶುಚಿಗೊಳಿಸಿ ಹಾಕಿಕೊಂಡು ನಲಿಯುತ್ತೇವೆ. ಹಾಗೆಯೇ ಕಷ್ಟಗಳ ಮಧ್ಯೆ ಬದುಕುವುದನ್ನು ಕಲಿಯಬೇಕು. ಅದು ನಮ್ಮನ್ನು ಹಿಂಡಿ ಹಿಪ್ಪಿ ಮಾಡಿದಾಗಲೂ ಸಾವರಿಸಿಕೊಂಡು ಮುನ್ನಡೆಯಬೇಕು. ಕಡುಕತ್ತಲೆಯನ್ನು ಅಡಗಿಸಲು ಪ್ರಕಾಶಮಾನವಾದ ಸೂರ್ಯನ ಕಿರಣ ಬಂದಂತೆ ಸಂಕಟ ಪರಿಸರಿಸಲು ಆತ್ಮೀಯರು ಗೆಳೆಯರು ಹಿತೈಷಿಗಳು ನೆರವಾಗುತ್ತಾರೆ.
ನಮ್ಮ ಕಷ್ಟದ ಗುಡ್ಡ ಕರಗಲಿ. ನಗು ನಗುತ ಹಾಯಾಗಿರಲಿ ಎಂದು ಅವರು ಆಶಿಸುತ್ತಿದ್ದಾರೆ. ಎಂದೆಲ್ಲ ಹೇಳಿಕೊಳ್ಳುತ್ತ ಬದುಕಿನ ಬವಣೆಗಳನ್ನು ದೂಡಲು ಸಿದ್ಧರಾಗುತ್ತೇವೆ. ಇದನ್ನೇ ಬಲ್ಲವರು ಅಂತಃಸ್ಪೂರ್ತಿ ಎಂದು ಕರೆದಿದ್ದಾರೆ. ’ಜಗತ್ತಿನಲ್ಲಿ ಒಂದು ಧ್ವನಿಯಿದೆ. ಅದು ಈ ಶ್ರೇಷ್ಠ ಭೂಮಿಯಲ್ಲಿ ನಮ್ಮ ಬದುಕಿನ ಉದ್ದೇಶವನ್ನು ಆಗಿಂದಾಗ್ಗೆ ನೆನಪಿಸುತ್ತಲೇ ಇರುತ್ತದೆ. ಅದುವೇ ಸ್ಪೂರ್ತಿಯ ವಾಣಿ ಅದು ಭುವಿಯಲ್ಲಿದೆ. ಹಾಗೆಯೇ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದೆ.’ ಎಂದಿದ್ದಾನೆ ವ್ಯಾನ್ ರೈನ್ ‘ಬದುಕೆಂದರೆ ಸ್ಪೂರ್ತಿ.’ ಇದನ್ನು ಅರ್ಥ ಮಾಡಿಕೊಂಡು ಬದುಕನ್ನು ಯಾರು ಬದುಕುತ್ತಾರಲ್ಲ ಅಂತವರನ್ನು ಗಮನಿಸಿ ನೋಡಿ, ಅವರು ಅಷ್ಟು ಸುಲಭಕ್ಕೆ ಬದುಕಿನಿಂದ ದೂರವಾಗಲು ಇಷ್ಟ ಪಡುವುದೇ ಇಲ್ಲ. ಪರಿಶುದ್ಧ ಹೃದಯ ಮತ್ತು ವಿವೇಚನೆಯುಳ್ಳ ಜನ ಸಹಜವಾಗಿ ಉತ್ತಮ ಆಂತರಿಕ ಸ್ಪೂರ್ತಿ ಪಡೆದಿರುತ್ತಾರೆ. ಕಷ್ಟಗಳು ಔಷಧಿಯಂತೆ ಕಹಿಯಾದರೂ ಶಕ್ತಿದಾಯಕ.’ ಎಂಬ ಫ್ರೆಂಚ್ ನಾಣ್ಣುಡಿಯನ್ನು ಅರಿತು ಬಾಳಬೇಕು. ಕಷ್ಟಗಳ ಹಾವಳಿಗೆ ಕೈ ಚೆಲ್ಲಿ ಬದುಕನ್ನು ತೊರೆಯಲು ನಿಶ್ಚಯಿಸಿದರೆ ನಮ್ಮಂಥ ಕಡು ಮೂರ್ಖರು ಯಾರೂ ಇಲ್ಲ. ‘ಸುಖ ದೇಹಕ್ಕೆ ಲಾಭಕರ. ಆದರೆ ಬುದ್ಧಿಯ ಬಲವನ್ನು ಹೆಚ್ಚಿಸಬೇಕೆಂದರೆ ದುಃಖವೇ ಮೂಲ,’ ಎನ್ನುತ್ತದೆ ಒಂದು ಸುಭಾಷಿತ.

ಅಂತರಂಗದಲ್ಲಿ ಅರಿವಾದೊಡೇನಯ್ಯ
ಬಹಿರಂಗದಲ್ಲಿ ಕ್ರಿಯೆಯಿಲ್ಲದನ್ನಕ್ಕರ
ದೇಹವಿಲ್ಲದಿರ್ದೊಡೆ ಪ್ರಾಣಕ್ಕಾಶ್ರಯವುಂಟೆ?
ಕನ್ನಡಿಯಿಲ್ಲದಿರ್ದೊಡೆ ತನ್ನ ಮುಖ ಕಾಣಬಹುದೆ?
ಸಾಕಾರ ನಿರಾಕಾರ ಏಕೋದೇವ
ನಮ್ಮ ಕೂಡಲ ಸಂಗಮದೇವ
ಕ್ರಿಯೆಯೇ ಜ್ಞಾನ. ಆ ಜ್ಞಾನವೇ ಕ್ರಿಯೆ. ಜ್ಞಾನ ಕ್ರಿಯೆ ಒಂದಾಗಿರಲಿ. ಜ್ಞಾನ ಮತ್ತು ಕ್ರಿಯೆಗಳ ನಡುವೆ ತಾದ್ಯಾತ್ಮತೆ ಇರಲಿ ಎಂದಿದ್ದಾರೆ ಬಸವಣ್ಣನವರು. ಪಡೆಯುತ್ತಿರುವ ಜ್ಞಾನ, ಸಾಗರದಷ್ಟು ಅದರಲ್ಲಿ ಹನಿಯಷ್ಟೂ ಕ್ರಿಯೆಯಾಗಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಅರಿತು ಸುಪ್ರಸಿದ್ಧ ಸೂಫಿ ಸಂತ,’ಹನಿಯಾಗಬೇಡ ಸಾಗರವಾಗು.’ಎಂದಿದ್ದಾನೆ. ಜ್ಞಾನದೊಂದಿಗೆ ಕಾರ್ಯಪ್ರವೃತ್ತರಾಗೋಣ. ಸೂರ್ಯಕಿರಣಗಳನ್ನು ಭೂತಗನ್ನಡಿಯಲ್ಲಿ ಕಿರಿದಾಗಿಸಿದರೆ ಕಾಗದವನ್ನು ಸುಡುತ್ತದಲ್ಲವೇ? ಅದೇ ರೀತಿ ಕಷ್ಟಗಳ ಕಡೆ ತೀಕ್ಷ್ಣವಾಗುತ್ತ ಮುನ್ನುಗ್ಗುವ ವಿಧಾನ ಅನುಸರಿಸೋಣ. ಕಷ್ಟಗಳ ಬೆಟ್ಟವೇ ಎದುರಿದ್ದರೂ ಒಂದೊಂದಾಗಿ ಪರಿಹರಿಸೋಣ. ಜ್ಞಾನ ಕ್ರಿಯೆ ಒಂದಾಗಿಸಿಕೊಂಡು ಬದುಕು ಸುಂದರವಾಗಿಸಿಕೊಳ್ಳೋಣ.

