ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವ ಆಗಷ್ಟ್ ೨೬ ರಿಂದ ಐದು ದಿನಗಳ ಕಾಲ ಜರುಗಲಿದ್ದು. ಜಾತ್ರೆಗೆ ಬರುವ ಭಕ್ತ ಸಮೂಹಕ್ಕೆ ಐದು ದಿನಗಳ ಕಾಲ ನಿರಂತರ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ದಾಸೋಹವನ್ನು ದೇವಸ್ಥಾನದ ಹತ್ತಿರವಿರುವ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಹೇಳಿದರು.
ಪಟ್ಟಣದ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಾತ್ರೆಯಂಗವಾಗಿ ದಾಸೋಹದ ಅಡುಗೆ ತಯಾರಿಸಲು ತಾತ್ಕಲಿಕವಾಗಿ ಹಾಕಲಾಗುತ್ತಿರುವ ಶೆಡ್ ಅನ್ನು ಬುಧವಾರ ಸಂಜೆ ವೀಕ್ಷಿಸಿ ಮಾತನಾಡಿದ ಅವರು, ಈಗಾಗಲೇ ಜಾತ್ರೆಗೆ ಬೇಕಾದ ಅಗತ್ಯ ಸಿದ್ಧತೆ ಭರದಿಂದ ಸಾಗಿದೆ. ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿನಿತ್ಯ ದಾಸೋಹ ವ್ಯವಸ್ಥೆ ಇರುತ್ತದೆ. ಜಾತ್ರೆಗೆ ಅಪಾರ ಪ್ರಮಾಣದ ಭಕ್ತರು ಬರುವದರಿಂದಾಗಿ ಅಲ್ಲಿ ಜಾಗೆ ವಿಶಾಲವಾಗಿಲ್ಲದೇ ಇರುವದರಿಂದಾಗಿ ಪ್ರತಿ ವರ್ಷ ಜಾತ್ರೆಯ ದಾಸೋಹದ ವ್ಯವಸ್ಥೆಯನ್ನು ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಡಳಿಯಿಂದ ವ್ಯವಸ್ಥೆ ಮಾಡಲಾಗುತ್ತದೆ. ದಾಸೋಹವನ್ನು ಸುವ್ಯವಸ್ಥಿತವಾಗಿ ನಡೆಸುವಂತೆ ಮಂಡಳಿಯ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಇದಕ್ಕೆ ಅಗತ್ಯ ಸಿದ್ಧತೆಯ ಬಗ್ಗೆ ಇಂದು ಸಂಬಂಧಿಸಿದವರ ಸಭೆ ಕರೆದು ಅವರಿಗೆ ತಿಳಿಸಲಾಗಿದೆ. ಜಾತ್ರೆಯಂಗವಾಗಿ ದೇವಸ್ಥಾನ, ದೇವಸ್ಥಾನದ ದ್ವಾರಬಾಗಿಲುಗಳಿಗೆ ಅಲಂಕಾರಿಕ ವಿದ್ಯುದೀಪ ವ್ಯವಸ್ಥೆ ಮಾಡಲಾಗುತ್ತಿದೆ. ದೇವಸ್ಥಾನದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಎಲ್ಲ ಶಿಕ್ಷಕರು ಸಹ ದೇವಸ್ಥಾನಕ್ಕೆ ಸಂಬಂಧಿಸಿದ ರುದ್ರಾಭಿಷೇಕ ಪಾವತಿ ಕೇಂದ್ರದಲ್ಲಿ, ದಾಸೋಹ ಕೇಂದ್ರದಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎರಡೂ ಶಾಲೆಗಳ ಶಿಕ್ಷಕರ ಸಭೆ ಕರೆದು ಇದರ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವವು ಪ್ರತಿ ವರ್ಷ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಹಾಗೂ ಜಾತ್ರಾ ಉತ್ಸವ ಸಮಿತಿ ಸೇರಿದಂತೆ ಪಟ್ಟಣದ ಹಿರಿಯರ ಮಾರ್ಗದರ್ಶನದಲ್ಲಿ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಈ ವರ್ಷದ ಜಾತ್ರೆಯು ಅದ್ದೂರಿಯಾಗಿ ನಡೆಯಲಿದೆ. ಜಾತ್ರೆಯಲ್ಲಿ ಸಂಪ್ರದಾಯದಂತೆ ನಡೆಯುವ ಪಲ್ಲಕ್ಕಿ ಉತ್ಸವ, ದಾಸೋಹ ಸೇರಿದಂತೆ ವಿವಿಧ ಕಾರ್ಯಗಳಿಗೆ ಮಂಡಳಿಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಂಡಳಿಯ ತಹಸೀಲ್ದಾರ ಜೆ.ಎಸ್.ಚಿನಿವಾಲರ, ಲೆಕ್ಕ ಅಧಿಕ್ಷಕ ಬಸವರಾಜ ಕಳ್ಳಿ, ಸುರೇಶ ಪಡಶೆಟ್ಟಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಮೂಲನಂದೀಶ್ವರ ಜಾತ್ರಾಮಹೋತ್ಸವಕ್ಕೆ ಮಂಡಳಿಯಿಂದ ಸಂಪೂರ್ಣ ಸಹಕಾರ
Related Posts
Add A Comment

