–ಕೆ.ಪಿ.ಬೊಳೆಗಾಂವ
ಚಡಚಣ: ನಾಗಠಾಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಅಚ್ಚರಿಯ ಹೆಸರು ಪ್ರಕಟಿಸುವ ಮೂಲಕ ಟಿಕೆಟ್ ಆಕಾಂಕ್ಷಿಗಳಿಗೆ ದಿಗ್ಬ್ರಮೆ ಯಾಗುವಂತೆ ಬಿಜೆಪಿ ವರಿಷ್ಟರು ನಿರ್ಧಾರ ಕೈಗೆ ತೆಗೆದುಕೊಂಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳಿಂದ ಪರಾಭವಗೊಂಡ ಹಾಗೂ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳ ಅವರು ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ ಪಕ್ಷದ ಪ್ರಚಾರ, ಸತತ ಜನರ ಸಂಪರ್ಕ ದೊಂದಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆಂಬ ಭಾವನೆಯಲ್ಲಿದ್ದರು. ಅಲ್ಲದೆ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪಕ್ಷದ ಸಂಘಟನೆ ಮಾಡುತ್ತಾ ಬಂದಿದ್ದರು.
ಒಬ್ಬರದು ಈ ಕಥೆಯಾದರೆ ಇನ್ನೊಬ್ಬರ ಕತೆಯೇ ಬೇರೆ. ಕಳೆದ ಕೆಲ ದಿನಗಳ ಹಿಂದೆ ಸಿಪಿಐ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಅಣಿಯಾಗಿದ್ದ ಮಹೇಂದ್ರ ನಾಯಕ್ ಅವರಿಗೂ ಶಾಕ್ ಆಗಿದೆ. ಪಕ್ಷದ ಹಿರಿಯ ಮುಖಂಡರ ಭರವಸೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಅವರೀಗ ಹೈಕಮಾಂಡ ನಡೆಯಿಂದ ಕೈ ಹಿಸುಕಿಕೊಳ್ಳುವಂತಾಗಿದೆ.
ಕಾರ್ಯಕರ್ತರಲ್ಲಿ ಗೊಂದಲ :
ಚುನಾವಣೆ ದಿನಾಂಕ ಪ್ರಕಟವಾದಾಗಿನಿಂದ ಇಲ್ಲಿಯವರೆಗೆ ಮತಕ್ಷೇತ್ರದ ಕಾರ್ಯಕರ್ತರು ತಮಗೆ ಬೇಕಾದ ನಾಯಕರ ಹೆಸರು ಪ್ರಚಾರ ಮಾಡುತ್ತ ಹೊರಟಿದ್ದರು. ಮೊದಲು ಗೋಪಾಲ ಕಾರಜೋಳ ಅವರಿಗೆ ಟಿಕೆಟ್ ಸಿಗುತ್ತದೆಂಬ ಹೆಸರು ಹೆಚ್ಚಾಗಿ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಸಂಸದ ರಮೇಶ ಜಿಗಜಿಣಗಿ ಹೆಸರು ಮತಕ್ಷೇತ್ರದ ತುಂಬೆಲ್ಲ ಪಸರಿಸಿತ್ತು. ತದನಂತರ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣಕ್ಕಿಳಿದ ಮಹೇಂದ್ರಕುಮಾರ ನಾಯಕ ಅವರ ಹೆಸರು ಕೇಳಿ ಬಂದಿತ್ತು. ಅಲ್ಲದೆ ಸಂಸದ ರಮೇಶ ಜಿಗಜಿಣಗಿ ಅವರ ಪರಮಾತ್ಮ ಶಿವಾನಂದ ಮಕಣಾಪುರ ಹೆಸರೂ ಸಹ ಕೇಳಿಬಂದಿತ್ತು. ಆದರೆ ಪಕ್ಷದ ವರಿಷ್ಠರು ಯಾರೂ ಊಹಿಸದ ಹೆಸರು ಘೋಷಿಸಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಗೆ,ಕಾರ್ಯಕರ್ತರಿಗೆ ಹಾಗೂ ಜನಪ್ರತಿನಿಧಿಗಳಿಗೆ ಪರಮಾಶ್ಚರ್ಯ ಮೂಡಿಸಿದ್ದಂತೂ ಸತ್ಯ.
ಪಕ್ಷದ ನಿರ್ಣಯವೇ ಅಂತಿಮ. ಆದರೂ ಮತಕ್ಷೇತ್ರದಲ್ಲಿ ನಿರಂತರ ಸಂಪರ್ಕ ಹಾಗೂ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿದವರನ್ನು ಅಭ್ಯರ್ಥಿಯಾಗಿಸಿದ್ದರೆ ಚನ್ನಾಗಿರುತ್ತಿತ್ತು. ಇದರಲ್ಲಿ ಪ್ರಬುದ್ಧ ರಾಜಕಾರಣಿಗಳ ಕುತಂತ್ರ ಅಡಗಿರುವ ಸಂಶಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
-ಶಿವಾನಂದ ಮಕಣಾಪುರ, ಬಿಜೆಪಿ ಟಿಕೆಟ್ ಆಕಾಂಕ್ಷಿ, ನಾಗಠಾಣ ಮತಕ್ಷೇತ್ರ
ನಾಗಠಾಣ ಮತಕ್ಷೆತ್ರದ ಅಪರಿಚಿತ ವ್ಯಕ್ತಿಗೆ ಟಿಕೇಟ್ ನೀಡಲು ಜಿಲ್ಲೆಯ ಪ್ರಮುಖ ಮುಖಂಡ ಹೊಂದಾಣಿಕೆ ಸ್ವಪ್ರತಿಷ್ಠೆ ಹಾಗೂ ಅಧಿಕಾರದ ದಾಹ ಕಾರಣ. -ಸಿದ್ದು -ಬಗಲಿ, ಬಿಜೆಪಿ ಕಾರ್ಯಕರ್ತ, ಏಳಗಿ (ಪಿ ಎಚ್ )