ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಮತ
ವಿಜಯಪುರ: ಸರ್ವಜನಾಂಗದ ಒಳಿತಿಗಾಗಿ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣಗುರು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಮಂಗಳವಾರ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿರುವ ಜಾತಿ ತಾರತಮ್ಯ, ಮೌಢ್ಯತೆ, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡಿ ಸಾಮಾಜಿಕ ಸಮಾನತೆಗೆ ಅನೇಕ ಸುಧಾರಣೆಗಳನ್ನು ತಂದರು. ಸರ್ವರೂ ಸಮಾನ ಎಂದು ಪ್ರತಿಪಾದಿಸಿದ ಅವರ ಸಮಾಜ ಮುಖಿ ಸುಧಾರಣೆಗಳನ್ನು ತಂದರು ಎಂದು ಹೇಳಿದರು.
ಸಮಾಜದ ವ್ಯವಸ್ಥೆ ಬದಲಾವಣೆ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟು ಶ್ರಮಿಸಿದ ಮಹನೀಯರ ಆದರ್ಶಗಳನ್ನು ಜೀವನ ಚರಿತ್ರೆ ಯನ್ನು ನಾವು ಅರಿಯಬೇಕಾಗಿದೆ ಎಂದು ಹೇಳಿದರು.
ಉಪನ್ಯಾಸಕ ಕಾಶೀನಾಥ ಕೊಣೆನವರ, ಶ್ರೀ ನಾರಾಯಣ ಗುರುಗಳು ಕೇರಳದಲ್ಲಿ ಜನಿಸಿದರು. ಅವರು ತತ್ವಜ್ಞಾನಿ, ಆಧ್ಯಾತ್ಮಿಕ ನಾಯಕ ಮತ್ತು ಸಮಾಜ ಸುಧಾರಕರಾಗಿದ್ದರು. ಸಾಮಾಜಿಕ ಸಮಾನತೆಯನ್ನು ತರಲು, ಸುಧಾರಣಾ ಪ್ರಯತ್ನವನ್ನು ಪ್ರಾರಂಭಿಸಿ ಜಾತಿ ವ್ಯವಸ್ಥೆ, ಅನಿಷ್ಟ ಪದ್ದತಿ ವಿರುದ್ಧ ಜಾಗೃತಿ ಮೂಡಿಸಿದರು ಎಂದು ಅವರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಬ್ರಹ್ಮಶ್ರೀ ನಾರಯಣಗುರು ಅವರ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹರೀಶ್ ಹೆಗ್ಡೆ ತಂಡದಿಂದ ಸುಗಮ ಸಂಗೀತ
ಜರುಗಿತು. ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಮತಿ ಅನಸೂಯಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮುಖಂಡ ಪ್ರಭಾಕರ ಈಳಗೆರ, ದೇವೇಂದ್ರ ಮೀರೆಕರ, ಡಾ. ನಾಗಪ್ಪ ಈಳಗೆರ, ಶ್ರೀಶೈಲ ನಿಡಗುತ್ತಿ, ರಾಜಪ್ಪ ಈಳಗೆರ, ಶ್ರೀಮತಿ ಡಾ. ಸುಷ್ಮಾ ಪ್ರಭಾಕರ,ಡಾ. ಸೌಭಾಗ್ಯ ಲಕ್ಷ್ಮಿ ಉಪಸ್ಥಿತರಿದ್ದರು.
