ಕೊಲ್ಹಾರ: ತಾಲೂಕಿನ ನಾಗರದಿನ್ನಿ ಗ್ರಾಮದ ಜಮೀನೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಟ್ಟು ಮಾಡಿದೆ.
ರವಿವಾರ ಸಾಯಂಕಾಲ ಗ್ರಾಮದ ರೈತ ಸುರೇಶ ಕುಬಕಡ್ಡಿ ತಮ್ಮ ಜಮೀನಿನಿಂದ ನಾಗರದಿನ್ನಿ ಗ್ರಾಮದಕಡೆಗೆ ಬರುವಾಗ ಮಹಾದೇವ ಕೋಲ್ಕಾರ ಎಂಬ ರೈತರ ಜಮೀನಿನ ಬೇಲಿಯನ್ನು ಚಿರತೆಯು ಹಾರಿ ಗೋವಿನ ಜೋಳದ ಬೇಳೆಯಲ್ಲಿ ಹೋಗುವದನ್ನು ನೋಡಿದ್ದಾರೆ. ಗಾಬರಿಗೊಂಡ ಅವರು ಗ್ರಾಮಕ್ಕೆ ಆಗಮಿಸಿ ಗ್ರಾಮದ ಜನರಿಗೆ ಚಿರತೆ ಇರುವುದನ್ನು ತಿಳಿಸಿದ್ದಾರೆ. ಯುವಕರು ತಕ್ಷಣ ಅರಣ್ಯ ಇಲಾಖೆಗೆ ಹಾಗೂ ತಹಶೀಲ್ದಾರ ಎಸ್.ಎಸ್. ನಾಯಕಲಮಠ ಅವರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಬಸವನಗೌಡ ಬಿರಾದಾರ, ಬಿ.ಎಸ್.ಕೊಣ್ಣೂರ ಹಾಗೂ ಸಿಬ್ಬಂದಿ ಗ್ರಾಮಸ್ಥರೊಂದಿಗೆ ರಾತ್ರಿ ಭೇಟಿ ನೀಡಿ ಪರೀಶೀಲನೆ ನಡೆಸಿದ ಅರಣ್ಯ ಸಿಬ್ಬಂದಿ ಹೆಜ್ಜೆ ಗುರುತಿನ ಚಿತ್ರಗಳನ್ನು ತೆಗೆದುಕೊಂಡ ಹೋಗಿದ್ದಾರೆ.
ಬೆಳಗ್ಗೆ ತಹಶೀಲ್ದಾರ ಎಸ್.ಎಸ್. ನಾಯಕಲಮಠ ಹಾಗೂ ಪಿಎಸ್ಐ ಎಂ.ಬಿ. ಬಿರಾದಾರ ಅವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ, ಚಿರತೆ ಇರುವುದು ಇನ್ನೂ ದೃಢಪಟ್ಟಿಲ್ಲ ಆದರೂ ಸುತ್ತಮುತ್ತಲಿನ ಗ್ರಾಮಸ್ಥರು ಜಾಗೃತಿಯಿಂದ ಇರಲು ತಿಳಿಸಿದರು. ಹೆಜ್ಜೆ ಗುರುತಿನ ಪರಿಶೀಲನೆಯಿಂದ ಚಿರತೆ ಅಥವಾ ಕತ್ತೆಕಿರುಬು ಎಂಬುದು ಗೊತ್ತಾಗುವುದು. ಆದ್ದರಿಂದ ಭಯಪಡದೆ ಎಚ್ಚರಿಕೆಯಿಂದ ಇರಲು ತಿಳಿಸಿದರು.
” ಚಿರತೆಯ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದ್ದು ಆದಷ್ಟು ಬೇಗನೆ ಸಂಬಂಧಿಸಿದ ಇಲಾಖೆಯವರು ಡ್ರೋನ್ ಕ್ಯಾಮೆರಾ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಚಿರತೆಯೋ ಅಥವಾ ಕತ್ತೆ ಕಿರುಬೊ ಎಂಬುದನ್ನು ದೃಢಪಡಿಸಿ ಜನರ ಆತಂಕವನ್ನು ದೂರ ಮಾಡಬೇಕು.”
– ಪ್ರದೀಪ ಪಾಟೀಲ, ಗ್ರಾಪಂ ಸದಸ್ಯರು

