ವಿಜಯಪುರ: ಸಂತ ಮಹಾಂತರ ಬದುಕು ಉರಿಯುವ ಕರ್ಪುರದಂತಾಗಬೇಕು. ಮಠಾಧಿಪತಿಗಳಿಗೆ ಮನೋನಿಗ್ರಹ ಮೂಲವಾಗಬೇಕು. ಜಪ ತಪ ಮೌನ ಅನುಷ್ಠಾನಗಳು ಮನುಷ್ಯನನ್ನು ದೈವತ್ವಕ್ಕೇರಿಸುತ್ತವೆ. ಆಗ ಅಧ್ಯಾತ್ಮದ ಹಾದಿ ಸುಗಮವಾಗುತ್ತದೆ ಎಂದು ಗುಣದಾಳ ಹಿರೇಮಠದ ಪೂಜ್ಯ ಡಾ ವಿವೇಕಾನಂದ ದೇವರು ಅಭಿಪ್ರಾಯಪಟ್ಟರು.
ಬಬಲೇಶ್ವರ ತಾಲೂಕಿನ ಹರಳಯ್ಯನಗುಂಡ ಕ್ಷೇತ್ರದಲ್ಲಿ ಚಿಕ್ಕಗಲಗಲಿಯ ಸಾಯಿಬಾಬಾ ಆಶ್ರಮದ ಪೀಠಾಧಿಪತಿ ಶರಣ ಚಮನಸಾಬ ಬಾಬಾ ಕೈಕೊಂಡ ಮೌನ ಅನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಮಂತ್ರಘೋಷ ನೆರವೇರಿಸಿ ಮಾತನಾಡುತ್ತಾ , ಅನುಷ್ಠಾನಕ್ಕೆ ದಿವ್ಯ ಶಕ್ತಿ ಇದೆ. ಕಠಿಣ ಪರಿಶ್ರಮಕ್ಕೆ ಕರ್ತೃತ್ವ ಶಕ್ತಿ ಪ್ರಾಪ್ತಿಯಾಗುತ್ತದೆ. ಈ ಶಕ್ತಿ ಸಮಾಜಕ್ಕೆ ವಿನಿಯೋಗವಾಗಲಿ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಚಿಕ್ಕಲಕಿ ಭಗೀರಥ ಪೀಠದ ಪೂಜ್ಯ ಶಿವಾನಂದ ಸ್ವಾಮೀಜಿ, ಪ್ರಪಂಚದಲ್ಲಿದ್ದು ಪಾರಮಾರ್ಥ ಸಾಧಿಸುವುದು ಸಾಮಾನ್ಯ ಕೆಲಸವಲ್ಲ. ಸತ್ಯ ಶುದ್ಧ ಬದುಕು ಸಾಧಿಸುತ್ತ ಅಧ್ಯಾತ್ಮವಾದಿಯಾಗಿ ಭಾವೈಕ್ಯದ ಸಂತನೆನಿಸಿಕೊಂಡಿರುವ ಚಮನಸಾಬ ಬಾಬಾರು, ನೊಂದು ಬೆಂದವರ ಕಣ್ಣೀರೊರೆಸುವ ಕರುಣಾಮಯಿಯಾಗಿದ್ದಾರೆ. ಅಧ್ಯಾತ್ಮವಾದಿಗಳಿಗೆ ಆದರ್ಶರಾಗಿದ್ದಾರೆ. ಈ ಅನುಷ್ಠಾನದಿಂದ ಸಮಾಜಕ್ಕೆ ಒಳಿತಾಗಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿರಸಂಗಿ ಲಿಂಗರಾಜ ದೇಸಾಯಿ ಟ್ರಸ್ಟಿ ಜಿ ಪಂ ಮಾಜಿ ಸದಸ್ಯ ಬಾಪುಗೌಡ ಪಾಟೀಲ (ಶೇಗುಣಸಿ) ಉತ್ತರ ಕರ್ನಾಟಕದಲ್ಲಿ ಮಠಗಳು ಸದೃಢವಾಗಿಲ್ಲ. ಭಕ್ತರು ತನು – ಮನ – ಧನಗಳಿಂದ ಮಠಗಳನ್ನು ಕಟ್ಟಬೇಕು. ತನ್ಮೂಲಕ ಮಠಾಧಿಪತಿಗಳು ಸಮಾಜ ಸುಧಾರಣೆಗೆ ಕಂಕಣಬದ್ಧರಾಗಿ ದುಡಿಯಬೇಕು. ಎಂದು ಹೇಳಿದರು.
ಪ್ರವಚನಕಾರ ಮೃತ್ಯುಂಜಯ ಹಿರೇಮಠ , ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ( ಪಡಗಾನೂರು) ಮಕ್ತುಮಸಾಬ ಮಂಟೂರ ಮಾತನಾಡಿದರು.
ವೇದಿಕೆಯಲ್ಲಿ ಚಿಕ್ಕಹಂಚಿನಾಳದ ಪೂಜ್ಯ ಶಾಂತಾನಂದ ಸ್ವಾಮೀಜಿ, ಹರಳಯ್ಯಗುಂಡದ ಸ್ವಾಮೀಜಿ, ಬಸಯ್ಯಸ್ವಾಮಿ ಹೀರೆಮಠ (ಬಿದರಿ), ಪಾಂಡು ಬಿರಾದಾರ, ರಾಜೇಸಾಬ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಸಾಯಿಬಾಬಾ ಆಶ್ರಮದ ಯಾಸಿನ ಬಾಬಾ ಸ್ವಾಗತಿಸಿದರು. ರಾಚಯ್ಯಸ್ವಾಮಿ ಪೂಜಾರಿ ನಿರೂಪಿಸಿದರು. ಸಂಗಣ್ಣ ಮುದ್ನೂರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

