ವಿಜಯಪುರ: ವಿದ್ಯಾರ್ಥಿಗಳು ಸರಿಯಾದ ಯೋಜನೆ, ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಹಾಗೂ ಛಲದೊಂದಿಗೆ ಮುನ್ನಡೆದರೆ ಸಾಧನೆಯ ಪಥ ತಲುಪಲು ಸಾಧ್ಯ. ಜೀವನದಲ್ಲಿ ಯಶಸ್ವಿಯಾಗಲು ಸಕಾರಾತ್ಮಕ ಮನೋಭಾವ ಹೊಂದಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಅವರು ನಗರದ ಆಲಕುಂಟೆ ನಗರದಲ್ಲಿ ಪಿನ್ಯಾಕಲ್ ಕ್ಲಾಸಿಸ್ ವತಿಯಿಂದ ‘ವರ್ಷದ ಸಂಸ್ಕೃತಿ ಸಂಭ್ರಮ-2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು, ಸ್ವಯಂ ಶಿಸ್ತು, ಬದ್ಧತೆಯೊಂದಿಗೆ ಗಂಭೀರವಾಗಿ ಅಧ್ಯಯನ ಮಾಡಬೇಕು. ವಿದ್ಯಾರ್ಥಿಯು ಶೈಕ್ಷಣಿಕ ಉತ್ಕೃಷ್ಟತೆ ಸಾಧಿಸಲು ಅವರ ಪರಿಶ್ರಮದೊಂದಿಗೆ ಪೋಷಕರ ಪ್ರೋತ್ಸಾಹ ಬಹುಮುಖ್ಯ.
ವಿದ್ಯಾರ್ಥಿಗಳಿಗೆ ‘ಪುಸ್ತಕ ಹಿಡಿ ಮೊಬೈಲ್ ಬಿಡಿ’ ಎಂದು ಕಿವಿಮಾತು ಹೇಳುತ್ತಾ, ಮಕ್ಕಳು ಪಾಲಕರ ಕಷ್ಟವನ್ನು ಅರಿತು ಚೆನ್ನಾಗಿ ಅಭ್ಯಾಸ ಮಾಡಿದಾಗ ಪಾಲಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗುತ್ತದೆ ಎಂದರು.
ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ, ನಮ್ಮ ಜೀವನ ಶೈಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಆಗಬೇಕು. ಶಿಕ್ಷಣದ ಮೂಲಕ ಮಕ್ಕಳು ಸಹಿಷ್ಣುತೆ, ದಯೆ ಮತ್ತು ಸಮಾಜದ ಜವಾಬ್ದಾರಿಗಳ ಮಹತ್ವವನ್ನು ತಿಳಿದು ಮುನ್ನಡೆಯಬೇಕು. ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಹಸ್ರಾರು ಜೀವಿಗಳಿಗೆ ವಿದ್ಯಾದೀವಿಗೆಯಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಬಾಪುರಾಯ ಮೇಡೆಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ. ಅದನ್ನು ಸಂಪಾದಿಸಲು ದೃಢ ಸಂಕಲ್ಪ ಮಾಡಬೇಕು. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರದೊಂದಿಗೆ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸನ್ನು ಕಾಣಲು ಶಿಸ್ತು, ತಾಳ್ಮೆ ಬಹಳ ಅಗತ್ಯ ಎಂದು ಹೇಳಿದರು.
ಸಂಯೋಜಕ ಶಿವಕುಮಾರ ನೇಕಾರ, ಮಹೇಶಕುಮಾರ ಪತ್ತಾರ, ಶಿಕ್ಷಕರಾದ ಮಂಜುಳಾ, ಗೀತಾ, ಗೋವಿಂದ, ಅವಿನಾಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕುಮಾರಿ ನವ್ಯಶ್ರೀ ಪತ್ತಾರ ಸ್ವಾಗತಿಸಿ,ನಿರೂಪಿಸಿದರು.
ಕುಮಾರ ಓಂಕಾರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

