ಇಂಡಿ:ತಾಲ್ಲೂಕಿನ ಗೋರನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಚುನಾವಣೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ವೆಂಕಟರಾಯ ಪಾಟೀಲ ಅವರ ಬಣದ ೧೨ಜನ ಸದಸ್ಯರು ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಕೆ.ಎಚ್.ವಡ್ಡರ ಮತ್ತು ವಿ.ಪಿ.ನಾಯಕ ತಿಳಿಸಿದ್ದಾರೆ.
ಚುನಾವಣೆ ಪತ್ರ ಪಡೆದ ನಂತರ ಸಂಘದ ಕಚೇರಿಯಲ್ಲಿ ವೆಂಕಟರಾಯ ಪಾಟೀಲ ಮಾತನಾಡಿ, ಸಂಘ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಂದು ಅನೇಕ ಸಹಕಾರಿ ಸಂಘಗಳು ಸಾರ್ವಜನಿಕರಿಗೆ ಸ್ಪಂದಿಸುವ ಮೂಲಕ ಸಮಾಜಮುಖಿಯಾಗಿ ಒಳ್ಳೆಯ ಸಹಕಾರ ನೀಡುತ್ತಿವೆ. ಸಂಘಗಳು ಕೇವಲ ಲಾಭದ ಉದ್ದೇಶ ಹೊಂದಿರದೇ ಸಾರ್ವಜನಿಕರಿಗೆ ಸಹಕಾರಿಯಾಗಿ ಬೆಳೆಯಬೇಕು. ಜನರ ಸೇವಕರು ಎಂಬ ಭಾವನೆ ರಾಜಕೀಯ ನಾಯಕರಲ್ಲಿರಬೇಕು. ಮತ ಹಾಕಿದವರೂ ನಮ್ಮವರೇ, ಹಾಕದವರೂ ನಮ್ಮವರೇ. ಚುನಾವಣೆ ನಡೆದಾಗ ಮಾತ್ರ ರಾಜಕೀಯ ಮಾಡೋಣ. ಉಳಿದ ದಿನಗಳಲ್ಲಿ ಜನರ ಅಭಿವೃದ್ಧಿ ಪರ ಕೆಲಸ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ದೇಶದ ಪ್ರತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಹಿರಿದಾಗಿದೆ. ಆರ್ಥಿಕ, ಸಾಮಾಜಿಕ ರಾಜಕೀಯ ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳ ಅಭಿವೃದ್ದಿಯಲ್ಲಿ ಸಹಕಾರ ಅತ್ಯಗತ್ಯ. ಸಹಕಾರಿ ಸಂಘಗಳಲ್ಲಿ ಮಹಿಳೆಯರು ಸ್ತ್ರೀ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕ ವ್ಯವಹಾರ, ಹೈನುಗಾರಿಕೆ, ವ್ಯಾಪಾರ, ಗೃಹ ಉದ್ಯೋಗ ಮುಂತಾದ ಕೌಶಲ್ಯ ಅಭಿವೃದ್ದಿ ಕಾರ್ಯಗಳನ್ನು ನಡೆಸುವ ಮೂಲಕ ಅರ್ಥಿಕ ಜೀವನ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಎಲ್ಲರೂ ಸಹಕಾರ ಮನೋಭಾವ ಹೊಂದಿ ಜೀವನವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರು.
ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ನೂತನ ಸದಸ್ಯರಾಗಿ ವೆಂಕಟರಾಯ ಪಾಟೀಲ, ಸಿದ್ದಗೊಂಡ ಗಂಗನಳ್ಳಿ, ದೂಳಪ್ಪ ಜಿಡ್ಡಿಮನಿ, ಲಕ್ಷ್ಮಣ್ ತೆನ್ನಹಳ್ಳಿ, ಸಿದ್ದಪ್ಪ ತಳವಾರ, ಸುನಂದ ಹಿರೇಕುರಬರ, ರೇಣುಕಾ ನಾವಿ, ತುಕರಾಮ ಕುಂಬಾರ, ಬಸಯ್ಯ ಮಠಪತಿ, ಮಲ್ಲು ಸಾಗನೂರ, ವಿಠ್ಠಲ ಬಜಂತ್ರಿ, ಬಸವರಾಜ ಹಟ್ಟಿ ಆಯ್ಕೆ ಆಗಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

