ಆಲಮಟ್ಟಿ: ಆಲಮಟ್ಟಿ ಜಲಾಶಯದ ಗೇಟ್ ಗಳು ಸೇರಿದಂತೆ ಜಲಾಶಯಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ, ಎಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು
ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜು ತಿಳಿಸಿದರು.
ಆಲಮಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಾತ್ರಂತ್ರೋತ್ಸವದ ಅಂಗವಾಗಿ ಬುಧವಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಿಗಮದ ನೌಕರರಿಗಾಗಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ನಂತರ ಅವರು ಈ ವಿಷಯ ತಿಳಿಸಿದರು.
ಈಗಾಗಲೇ ಆಲಮಟ್ಟಿ ಜಲಾಶಯದ ಗೇಟ್ ಗಳ ಮೇಲ್ವಿಚಾರಣೆ ಮುಂಗಾರು ಹಂಗಾಮಿಗೂ ಮೊದಲು ನಡೆಸಲಾಗಿದೆ, ಆದರೆ ಈಗ ಜಲಸಂಪನ್ಮೂಲ ಸಚಿವರು ಹಾಗೂ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳು ಮತ್ತೊಮ್ಮೆ ಜಲಾಶಯವನ್ನು ಪರೀಕ್ಷಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಆ ಪ್ರಕಾರ ಎರಡು ದಿನಗಳಲ್ಲಿ ಮತ್ತೊಮ್ಮೆ ವಿವರವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಆಲಮಟ್ಟಿ ಜಲಾಶಯದ ಕಾಲುವೆಗಳಿಗೆ ನೀರು ಹರಿಸಿ ಅದರ ಮೂಲಕ ಜಿಲ್ಲೆಯ 100 ಕ್ಕೂ ಅಧಿಕ ಕೆರೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಲಾಶಯ ಭರ್ತಿಯತ್ತ ಸಾಗಿದ್ದು ಖುಷಿ ತಂದಿದೆ, ಈ ಬಾರಿ ಹಿಂಗಾರಿಗೂ ನೀರು ಹರಿಸುವ ಸಾಧ್ಯತೆಯಿದೆ. ಇನ್ನೂ ಒಂದು ತಿಂಗಳುಗಳ ಕಾಲ ಜಲಾಶಯಕ್ಕೆ ನೀರು ಹರಿದುಬರುವ ನಿರೀಕ್ಷೆಯಿದೆ ಎಂದರು.
ಬಾಗಿನ ಅರ್ಪಣೆಗಾಗಿ ಈಗಾಗಲೇ ಚರ್ಚಿಸಲಾಗಿದ್ದು, ಬಹುತೇಕ ಇದೇ ತಿಂಗಳಲ್ಲಿ ಬಾಗಿನ ಅರ್ಪಣೆ ನಡೆಯಲಿದೆ ಎಂದರು.
ಇದಕ್ಕೂ ಮೊದಲು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಈ ರೀತಿಯ ನೌಕರರ ಮಧ್ಯೆ ಸೌಹಾರ್ದಯುತ ಕ್ರೀಡೆಗಳಿಂದ ನೌಕರರಲ್ಲಿ ಆತ್ಮೀಯತೆ ಹೆಚ್ಚಿ, ಮನಸ್ಸು ಪ್ರಫುಲ್ಲವಾಗುತ್ತದೆ ಎಂದರು.
ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ಪ್ರಧಾನ ಕಾರ್ಯದರ್ಶಿ ವೈ.ಎಂ. ಪಾತ್ರೋಟ, ಸೂಪರಿಂಟೆಡಿಂಗ್ ಎಂಜಿನಿಯರ್ ಗಳಾದ ಬಿ.ಎಸ್. ಪಾಟೀಲ, ವಿ.ಆರ್. ಹಿರೇಗೌಡರ, ಡಿಎಫ್ ಓ ರಾಜಣ್ಣ ನಾಗಶೆಟ್ಟಿ, ಶರಣಪ್ಪ ಚಲವಾದಿ, ಕೆ. ಜಯಣ್ಣ, ಆರ್.ಎಫ್ ಓ ಮಹೇಶ ಪಾಟೀಲ, ಎಸಿಎಫ್ ಎಸ್.ಆರ್. ಪಾತ್ರೋಟ, ರಮೇಶ ಚವ್ಹಾಣ, ವಿಠ್ಠಲ ಜಾಧವ ಮತ್ತೀತರರು ಇದ್ದರು. ಆಲಮಟ್ಟಿ ಎಂಜಿನಿಯರ್ಸ್ ತಂಡ ಪ್ರಥಮ, ಅರಣ್ಯ ಇಲಾಖೆಯ ತಂಡ ದ್ವಿತೀಯ, ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳ ಇಲಾಖೆಯ ತಂಡ ತೃತೀಯ ಸ್ಥಾನ ಪಡೆಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

