ಮುದ್ದೇಬಿಹಾಳ: ಶರಣರ ವಚನಗಳಲ್ಲಿ ಬದುಕಿನ ಮೌಲ್ಯಗಳು ಅಡಕವಾಗಿವೆ. ವಚನಗಳನ್ನು ನಿತ್ಯ ಪಠಣಮಾಡಿ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಬಂಗಾರವಾಗುತ್ತದೆ ಎಂದು ಹಿರಿಯ ಸಾಹಿತಿ ಅಶೋಕ ಮಣಿ ಅಭಿಪ್ರಾಯ ಪಟ್ಟರು.
ಪಟ್ಟಣದ ಮಾರುತಿ ನಗರದ ಸಿದ್ದಣ್ಣ ರೇವಡಿ ಅವರ ಮನೆಯಲ್ಲಿ ಬಸವ ಮಹಾಮನೆ ಸಮೀತಿ ಹಾಗೂ ಶರಣ ಸಾಹಿತ್ಯ ಪರಿಷತ್ತು ಶರಣ ಶ್ರಾವಣದ ಅಂಗವಾಗಿ ಹಮ್ಮಿಕೊಂಡ ಮನೆಯಂಗಳದಿಂದ ಮನದಂಗಳಕ್ಕೆ ಶರಣರ ಸಂದೇಶ ೩ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
೧೨ ನೇ ಶತಮಾನದಲ್ಲಿ ಬಸವಾದಿ ಪ್ರಮಥರು ರಚಿಸಿರವ ವಚನಗಳು ತ್ರಿಕಾಲ ಸತ್ಯ. ವಚನಗಳಲ್ಲಿಯ ತಿರುಳನ್ನು ಪಚನಮಾಡಿಕೊಂಡಾಗ ಮಾತ್ರ ಬದುಕು ಹಸನಾಗಿ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಸಿಗಲು ಸಾಧ್ಯ. ಪಾಲಕರಾದವರು ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತಂದು ಶರಣರ ವಚನಗಳ ಪರಿಚಯವನ್ನು ಮಾಡಿಕೊಡುವುದು ಅತ್ಯವಶ್ಯ. ದಾರಿ ತಪ್ಪುವವರನ್ನು ಸರಿದಾರಿಗೆ ತರುವಲ್ಲಿ ವಚನಗಳು ದಾರಿ ದೀಪವಾಗಬಲ್ಲವು ಎಂದರು.
ಚಿತ್ತರಗಿ -ಇಲಕಲ್ಲ ಮಠದ ಶ್ರೀ ವಿಜಯಮಹಾಂತ ಮಹಾಸ್ವಾಮಿಗಳ ಜೀವನ ಕುರಿತು ಬಸವ ಮಹಾಮನೆ ಸಮಿತಿಯ ಅಧ್ಯಕ್ಷ ಬಸವರಾಜ ಕೋರಿ ಅನುಭಾವ ನೀಡುತ್ತ ಶ್ರೀಗಳು, ಘನವಿದ್ವಾಂಸರು, ಕಾಯಕ ನಿಷ್ಠರು ಹಾಗೂ ಬಸವ ತತ್ವ ಪರಿಪಾಲಕರೂ ಆಗಿದ್ದರು. ತಮ್ಮ ಬದುಕಿನುದ್ದಕ್ಕೂ ಶರಣರ ವಚನಗಳನ್ನು ಅರಿತು ಆಚರಿಸಿ, ಪರಿಪಾಲಿಸಿದರು. ಜನರಲ್ಲಿ ಮನೆಮಾಡಿದ್ದ ದುಶ್ಚಟಗಳನ್ನು ನಿರ್ಮೂಲನೆ ಮಾಡಲು ಮಹಾಂತ ಜೋಳಿಗೆ ಎಂಬ ವಿನೂತನ ಆಂಧೋಲನವನ್ನೇ ಶ್ರೀಗಳು ಮಾಡಿ ವ್ಯಸನ ಮುಕ್ತ ನವ ಸಮಾಜದ ನಿರ್ಮಾಣಕ್ಕಾಗಿ ಅಹೋರಾತ್ರಿ ಶ್ರಮಿಸಿ ಹೆಸರಾದರು ಎಂದರು.
ಕಾರ್ಯಕ್ರಮದಲ್ಲಿ ಶರಣರಾದ ಚಂದ್ರಶೇಖರ ನಾಗರಾಳ, ಎಸ್.ಎಸ್.ಹುನಗುಂದ, ಎಂ.ಎಸ್.ಬಿರಾದಾರ, ಎಚ್.ಎಸ್.ಪಾಟೀಲ್, ಎಸ್.ಆರ್.ಗೌಡರ ಸೇರಿದಂತೆ ಕಲ್ಯಾಣಿ, ರೇವಡಿ ಕುಟುಂಬದ ಬಂಧು ಬಳಗದವರು, ಇದ್ದರು.
ಬಸವ ಭಜನೆ, ಶಿವ ಭಜನೆ ಹಾಗೂ ನೆನಹು ಪ್ರಾರ್ಥನೆಯನ್ನು ಮಹಾಮನೆ ಬಳಗದ ಸಂಚಾಲಕ ಎಸ್.ಬಿ.ಕನ್ನೂರ, ಬಿ.ಜಿ.ರಾಂಪೂರ, ಬಾಪುಗೌಡ ಪಾಟೀಲ ನಡೆಸಿಕೊಟ್ಟರು.
ಸಿದ್ದಣ್ಣ ರೇವಡಿ ಸ್ವಾಗತಿಸಿದರು. ಶಿಕ್ಷಕ ಎಂ.ಬಿ.ಪಾಟೀಲ ಶರಣು ಸಮರ್ಪಿಸಿದರು. ಬಿ.ಎಸ್.ಮೇಟಿ ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

