“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ
ನಿಮಗೆ ಓದಿಸಲು ಅದೆಷ್ಟು ಖರ್ಚು ಮಾಡಿದ್ದೇವೆ ಗೊತ್ತಾ, ಹೊಟ್ಟೆ ಬಟ್ಟೆ ಕಟ್ಟಿ ನಾವು ಅಷ್ಟೊಂದು ಸಪೋರ್ಟ್ ಮಾಡಿರೋದ್ರಿಂದಲೇ ನೀನು ಇಂದು ಇಷ್ಟು ಮುಂದೆ ಬಂದಿರುವುದು, ಕಣ್ಣಿಗೆ ಹೆಣ್ಣಿಗೆ ಬಿಟ್ಟುಕೊಂಡು ಹಗಲು ರಾತ್ರಿ ನಿಮ್ಮನ್ನು ಓದಿಸಿದ್ದೇವೆ, ನಿಮ್ಮನ್ನು ಓದಿಸಬೇಕಾದರೆ ಕಣ್ಣೀರಲ್ಲ ರಕ್ತ ಸುರಿಸಿ ದುಡಿದಿದ್ದೇವೆ
ಅಕಸ್ಮಾತ್ ನಾನು ನಿನ್ನನ್ನು ನಮ್ಮಿಂದ ಸಾಧ್ಯವಾಗುವುದಿಲ್ಲ ಅಂತ ಬಿಟ್ಟು ಹೋಗಿದ್ರೆ ನೀನೇನ್ ಆಗ್ತಿದ್ದೆ ಗೊತ್ತಾ
ನೀ ಹುಟ್ಟೋಕು ಮುಂಚೆ ನಿನ್ನನ್ನ ಅಬಾರ್ಷನ್ ಮಾಡಿಸಿ ತೆಗೆಸಬೇಕು ಅಂತ ಮಾಡಿದ್ದೆ ನಾನೇನು ಮಾಡಿದ್ರೂ ನಿನಗೆ ಅದರ ಕಿಮ್ಮತ್ತು ಗೊತ್ತಾಗ್ತಾ ಇಲ್ಲ, ನಾನು ಸತ್ತು ಹೋದ ಮೇಲೆ ನನ್ನ ಬೆಲೆ ನಿನಗೆ ಗೊತ್ತಾಗುತ್ತದೆ… ಹೀಗೆಲ್ಲಾ ಪಾಲಕರು ತಮ್ಮ ಮಕ್ಕಳಿಗೆ ಹೇಳುವುದನ್ನು ಆಗಾಗ ನಾವು ಕೇಳುತ್ತೇವೆ. ಇದು ಅವರ ಮನದಾಳದ ಮಾತುಗಳು.
ಮಕ್ಕಳನ್ನು ಬೆಳೆಸಿ ಅವರಿಗೆ ನಾವು ಉಪಕಾರ ಮಾಡಿದ್ದೇವೆ ಎಂಬಂತಹ ಭಾವವನ್ನು ಅವರಲ್ಲಿ ಬಿತ್ತುವ ಪಾಲಕರು ಅವರಿಂದ ಕೃತಜ್ಞತೆಯ ಬೆಳೆಯನ್ನು ನಿರೀಕ್ಷಿಸುತ್ತಾರೆ. ಆದರೆ ಹಾಗೆ ಮಾಡುವುದು ಅವರ ಕರ್ತವ್ಯವಾಗಿತ್ತು ಎಂಬುದನ್ನು ಅವರು ಮರೆಯುತ್ತಾರೆ.
ಆದರೆ ಇಲ್ಲಿ ಪಾಲಕರು ನೆನಪಿಸಿಕೊಳ್ಳಬೇಕಾದ ಒಂದು ವಿಷಯವಿದೆ… ತಮಗೆ ಮಕ್ಕಳಾಗಲಿ ಎಂದು ಬಯಸಿದ್ದು ಪಾಲಕರಾದ ತಾವುಗಳೇ ಹೊರತು ತಮ್ಮ ಮಕ್ಕಳಲ್ಲ ಎಂಬುದು ಅವರಿಗೆ ಅರಿವಿರಬೇಕು.
ತಾಯಿಯ ಉದರದಲ್ಲಿ ಮೂಡಿದಾಗಿನಿಂದ ಮಕ್ಕಳು ಬೆಳೆದು ದೊಡ್ಡವರಾಗುವವರೆಗೆ ಅವರು ನಮ್ಮದೇ ಜವಾಬ್ದಾರಿ. ಅವರು ನಮ್ಮಿಂದ ಮೂಡಿರುತ್ತಾರೆ ಎಂಬ ಪ್ರಜ್ಞೆ ಪಾಲಕರಿಗೆ ಇರಬೇಕು.
ಪಾಲಕರ ಎಲ್ಲಾ ಹೇಳಿಕೆಗಳಿಗೆ ಮಕ್ಕಳು ಬದ್ಧರಾಗಿರಬೇಕು ಎಂಬ ನಿರೀಕ್ಷೆ ತಪ್ಪು.ಮಕ್ಕಳನ್ನು ಪಾಲಕರು ತಮ್ಮ ಭವಿಷ್ಯದ ಹೂಡಿಕೆ ಎಂದು ಭಾವಿಸಿ ತಮ್ಮೆಲ್ಲಾ ಕನಸುಗಳನ್ನು, ನಿರೀಕ್ಷೆಗಳನ್ನು ಮಕ್ಕಳು ಈಡೇರಿಸಲಿ ಎಂಬ ಆಶಯ ಖಂಡಿತ ಬೇಡ. ಮಕ್ಕಳಿಗೆ ಅವರದ್ದೇ ಆದ ನಾಳೆಗಳಿವೆ, ಬಹುಶಹ ಅವರ ನಾಳೆಗಳನ್ನು ಪಾಲಕರು ಊಹಿಸಲು ಕೂಡ ಸಾಧ್ಯವಿಲ್ಲ. ಪಾಲಕರ ಕನಸುಗಳನ್ನು ಪೂರೈಸಲು ನ ಮಕ್ಕಳು ತಮ್ಮ ಕನಸುಗಳನ್ನು ಒತ್ತಟ್ಟಿಗಿಡುವುದು ಬೇಡ.

ಆದ್ದರಿಂದಲೇ ಖಲೀಲ್ ಗಿಬ್ರಾನ್ ಎಂಬ ಮಹಾನ್ ದಾರ್ಶನಿಕ, ಕವಿ
ನಿಮ್ಮ ಮಕ್ಕಳು ನಿಮ್ಮಿಂದ ಹೊರಹೊಮ್ಮಿದವರು ಆದರೆ ನಿಮ್ಮವರಲ್ಲ
ಅವರು ಪಾಲಕ ಎಂಬ ಬಿಲ್ಲಿನಿಂದ ಹೂಡಿದ ಬಾಣಗಳು, ಗುರಿ ನಮ್ಮದಾದರೂ ತಲುಪುವ ದಾರಿ ಮತ್ತು ವೇಗ ಅವರದೇ
ಅವರೆಂದು ನಮ್ಮ ಕನಸಿನ ಮುಂದುವರಿಕೆಗಳಲ್ಲ
ಅವರಿಗೆ ಅವರದ್ದೇ ಆದ ಮನೆಗಳಿವೆ ಆ ಮನೆಗಳನ್ನು ನಾವು ಕನಸಿನಲ್ಲಿಯೂ ಊಹಿಸಲು ಸಾಧ್ಯವಿಲ್ಲ
ಎಂಬರ್ಥ ಬರುವ ಮಾತುಗಳನ್ನು ತನ್ನ ಕವನದಲ್ಲಿ ಹೇಳಿದ್ದಾನೆ.
ಖಲೀಲ್ ಗಿಬ್ರಾನನ ಈ ಮಾತುಗಳನ್ನು ಪಾಲಕರು ಮನದಟ್ಟು ಮಾಡಿಕೊಳ್ಳಲೇಬೇಕು, ಮತ್ತು ತಮ್ಮ ಮಕ್ಕಳ ಮೇಲೆ ಅಪಾರ ಪ್ರೀತಿ ಮತ್ತು ವಿಶ್ವಾಸ ಇರಲಿ ಆದರೆ ಅವರು ನಾವು ಹೇಳಿದಂತೆಯೇ ನಡೆಯಲಿ ಎಂಬ ಹುಂಬತನ ಬೇಡ.
ತಮ್ಮ ಇಂದಿನ ಜೀವನಕ್ಕೆ ತಮ್ಮ ಪಾಲಕರೇ ಕಾರಣಕರ್ತರು ಎಂಬುದನ್ನು ಯಾವ ಮಕ್ಕಳೂ ಮರೆಯುವುದಿಲ್ಲ, ಅವರಿಗೆ ಅವರದ್ದೇ ಆದ ಕರ್ತವ್ಯ ಮತ್ತು ಬದ್ಧತೆಗಳು ಇದ್ದರೂ ಕೂಡ ಅವರು ತಮಗಾಗಿ ಕರ್ತವ್ಯ ನಿರ್ವಹಿಸಿದ ತಮ್ಮ ಪಾಲಕರನ್ನು ಮರೆಯಲು ಸಾಧ್ಯವಿಲ್ಲ.
ತಮ್ಮ ಪಾಲಕರ ತ್ಯಾಗದ ಕುರಿತು ಮಕ್ಕಳು ಹೇಳಿಕೊಳ್ಳದಿರಬಹುದು ಆದರೆ ಸ್ವತಃ ಅವರಿಗೆ ಮಕ್ಕಳಾದಾಗ ತಮ್ಮ ತಂದೆ ತಾಯಿ ತಮಗೆ ಮಾಡಿದ ಸೇವೆ, ಬೆಳೆಸಿದ ರೀತಿ, ಶಾಲೆಗೆ ಕಳುಹಿಸಿ ಓದಿಸಿ ಬರೆಸಿ ವಿದ್ಯಾವಂತರನ್ನಾಗಿಸಿದ ಪರಿ, ಕಡು ಕಷ್ಟದಲ್ಲೂ ತಮ್ಮೆಲ್ಲ ಆಸೆಗಳನ್ನು ಶಕ್ತಿ ಮೀರಿ ಪೂರೈಸಲು ಪ್ರಯತ್ನಿಸಿದ ನೆನಪುಗಳು ತಮ್ಮ ಮಕ್ಕಳನ್ನು ಬೆಳೆಸುವಾಗ ಅವರಿಗೆ ಖಂಡಿತವಾಗಿಯೂ ಮರುಕಳಿಸುತ್ತವೆ. ಕೇವಲ ಒಬ್ಬಿಬ್ಬರು ಮಕ್ಕಳಿರುವ ಸಂಸಾರದಲ್ಲಿ ತನ್ನ ಮಕ್ಕಳಿಗೆ ತಾನು ಮಾಡುತ್ತಿರುವುದಕ್ಕಿಂತ ತುಸು ಹೆಚ್ಚಿನ ತ್ಯಾಗವನ್ನು ಅರೆಂಟು ಜನ ಮಕ್ಕಳನ್ನು ಹೊಂದಿರುವ ತನ್ನ ಪಾಲಕರು ಮಾಡಿದ್ದಾರೆ ಎಂಬ ಭಾವ ಆತನಲ್ಲಿ ಖಂಡಿತವಾಗಿಯೂ ಸ್ಪುರಿಸಿ ತನ್ನ ಪಾಲಕರ ಕುರಿತು ಧನ್ಯತೆ ಮತ್ತು ಕೃತಜ್ಞತೆ ಮೂಡುತ್ತದೆ
ಒಳ್ಳೆಯ ಪಾಲಕರು ಜೀವನದ ಒಳ್ಳೆಯ ಸಂಗತಿಗಳನ್ನು ಅನುಭವಿಸಲು ಅತ್ಯಂತ ಅರ್ಹರಾಗಿರುತ್ತಾರೆ… ಆದರೆ ನಿರೀಕ್ಷೆಗಳು ಅವರಲ್ಲಿ ಅಸಹನೆಯನ್ನು ಉಂಟು ಮಾಡುತ್ತವೆ. ನಿಷ್ಕಾಮ ಕರ್ತವ್ಯ ಎಂದು ಕರೆಯುವುದು ಈ ಕಾರಣಕ್ಕೆ ಇರಬಹುದು. ಯಾವುದೇ ರೀತಿಯ ಆಸೆ ಆಕಾಂಕ್ಷೆಗಳನ್ನು ಹೊಂದದೆ ತಮ್ಮ ಪಾಲಿಗೆ ಬಂದ ಕರ್ತವ್ಯಗಳನ್ನು ಚಾಚೂ ತಪ್ಪದೇ ನಿರ್ವಹಿಸುವುದು.
ಹೌದಲ್ಲವೇ ಸ್ನೇಹಿತರೆ,
ವೆನ್ ದೇರ್ ಇಸ್ ನೋ ಎಕ್ಸ್ಪೆಕ್ಟೇಶನ್, ಎವರಿಥಿಂಗ್ ವಿಲ್ ಬಿ ಎಕ್ಸೆಪ್ಟೆಡ್ ಆಸ್ ಇಟ್ ಕಮ್ಸ್ ಇನ್ ಅವರ್ ಲೈವ್ಸ್
ಯಾವುದೇ ನಿರೀಕ್ಷೆಗಳಿಲ್ಲದೆ ನಾವು ಕರ್ತವ್ಯವನ್ನು ನಿರ್ವಹಿಸಿದಾಗ, ಬಂದದ್ದೆಲ್ಲವನ್ನು ‘ ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ’ ಎಂಬಂತೆ ನಾವು ಒಪ್ಪಿಕೊಳ್ಳುತ್ತೇವೆ. ಆ ಮೂಲಕ ಮಾನಸಿಕ ಶಾಂತಿಯನ್ನು ಹೊಂದುತ್ತೇವೆ.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ

