“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ್
ತಾಯಿ ಮತ್ತು ಮಗುವಿನ ಸಂಬಂಧದ ಸ್ವರೂಪವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ವಿದ್ಯಾನಂದ್ ಶೆಣೈಯವರು ‘ಭಾರತ ದರ್ಶನ’ ಎಂಬ ತಮ್ಮ ಧ್ವನಿಸುರುಳಿಯಲ್ಲಿ ತಾಯಿ ಮಗುವಿಗೆ ಸಂಸ್ಕಾರಗಳನ್ನು ಹೇಗೆ ಕಲಿಸುತ್ತಾಳೆ ಎಂಬುದರ ಕುರಿತು ಹೇಳುವಾಗ ತಾಯಿ ತನ್ನ ಮಗುವಿಗೆ ನೋಟ್ ಬುಕ್ ತೆಗೆದುಕೊಂಡು ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ಬರೆದುಕೋ ಎಂದು ಯಾವಾಗಲೂ ಹೇಳುವುದಿಲ್ಲ. ಆಕೆ ತನ್ನ ದೈನಂದಿನ ಬದುಕಿನ ಕ್ರಿಯೆಯ ಮೂಲಕ ಮಕ್ಕಳಿಗೆ ಮಾದರಿಯಾಗಿ ನಿಲ್ಲುತ್ತಾಳೆ.
ನಮ್ಮ ಗ್ರಾಮೀಣ ಹೆಣ್ಣು ಮಕ್ಕಳು ಮುಂಜಾನೆ ಎದ್ದೊಡನೆ
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ / ಎಳ್ಳು ಜೀರಿಗೆ ಬೆಳೆಯೋಳ ಭೂಮ್ತಾಯಿ ಎದ್ದೊಂದು ಘಳಿಗೆ ನೆನೆದೇನ
ಎಂದು ಹಾಡಿಕೊಳ್ಳುತ್ತಾ ಭೂಮಿ ತಾಯಿಗೆ ನಮಿಸಿ ಮೇಲೇಳುತ್ತಾಳೆ. ತಾಯಿಯನ್ನು ಅನುಕರಿಸುವ ಮಗು ಕೂಡ ಅಮ್ಮನಂತೆ ನೆಲಕ್ಕೆ ಪೊಡಮೊಡುತ್ತದೆ.
ಈ ಮೂಲಕ ನಮಗೆ ಅನ್ನ ನೀಡುವ, ಆಶ್ರಯ ನೀಡುವ, ಈ ಭೂಮಿ ತಾಯಿಗೆ ನಾವು ಚಿರಋಣಿಯಾಗಿರಬೇಕು ಎಂಬ ಪಾಠವನ್ನು ಕಲಿಯುತ್ತದೆ ಎಂದು ಅವರು ವಿವರಿಸಿದ್ದರು.
ನಿನ್ನೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಇದೇ ಜಾನಪದ ಗೀತೆಯ ಸಾಲುಗಳನ್ನು ತಮ್ಮ ಹಾಡಿನ ಮೂಲಕ ಒಬ್ಬರು ಪ್ರಸ್ತುತಪಡಿಸಿದರು. ಮುಂದೆ ಆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದವರು ಆ ಜಾನಪದ ಗೀತೆಯನ್ನು ವಿಶ್ಲೇಷಿಸಿದ್ದು ಹೀಗೆ
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಂದರೆ ಈ ಭೂಮಿಯಲ್ಲಿ ಬದುಕಲು ನಮಗೆ ಸಹಕರಿಸಿದ ಎಲ್ಲ ಪುಣ್ಯ ಜೀವಿಗಳನ್ನು ಪಂಚಮಹಾಭೂತಗಳನ್ನು ನೆನೆಸಿಕೊಳ್ಳುತ್ತಾ ಎಳ್ಳು ಜೀರಿಗೆ ಬೆಳೆಯುವ ಭೂಮಿ ತಾಯಿಯನ್ನು ನೆನೆಯೋಣ ಎಂಬ ಮಾತನ್ನು ಜಾನಪದ ಕವಿ ಹೇಳಿದ್ದಾನೆ.
ನಾವು ಈ ಭೂಮಿಗೆ ಬಂದಾಗಿನಿಂದ ನಮ್ಮನ್ನು ಸಲಹುವ ಭೂಮಿ ತಾಯಿ ನಾವು ಮರಣ ಹೊಂದಿದ ನಂತರವೂ ನಮ್ಮನ್ನು ತನ್ನ ಮಡಿಲಲ್ಲಿಟ್ಟು ಕಾಯುತ್ತಾಳೆ, ಆದ್ದರಿಂದಲೇ ಆಕೆ ತಾಯಿಗಿಂತಲೂ ಹೆಚ್ಚು, ಪರಸ್ಪರ ವಿರೋಧಿಗಳಿಗೂ ಕೂಡ ಆಕೆಯೇ ಮಾತೃ ಸ್ವರೂಪಳು. ಇದನ್ನು ಮನಗಂಡೇ ನಮ್ಮ ಪ್ರಾಚೀನ ಕವಿಗಳು ಭೂಮಿ ಸೂಕ್ತ ಎಂಬ ಕೃತಿಯಲ್ಲಿ

“ಮಾತಾ ಭೂಮಿಹಿ, ಪುತ್ರೋಹಂ ಪೃಥ್ವಿವ್ಯಾಹ”
ಅಂದರೆ ಭೂಮಿ ತಾಯಿ ನಮ್ಮೆಲ್ಲರಿಗೂ ಮಾತೃ ಸ್ವರೂಪಳು… ಆಕೆಯ ಮಡಿಲಲ್ಲಿ ಅರಳುವ, ಹೊರಳುವ, ಎದ್ದು ನಡೆದಾಡುವ, ಬದುಕು ಸಾಗಿಸುವ ಮುಂದೆ ಸತ್ತ ನಂತರವೂ ಆಕೆಯ ಮಣ್ಣಲ್ಲಿ ಮಣ್ಣಾಗಿ ಆಕೆಯಲ್ಲಿ ಒಂದಾಗುವ ನಮ್ಮೆಲ್ಲರಿಗೂ ತಾಯಿ ಸ್ವರೂಪಳು ಈ ಭೂಮಿ ತಾಯಿ,ಆದ್ದರಿಂದಲೇ “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದು ನಮ್ಮ ಹಿರಿಯರು ಬಣ್ಣಿಸಿದ್ದಾರೆ.
ಇಲ್ಲಿ ಕವಿಯ ಆಶಯವನ್ನು ಒಮ್ಮೆ ಗಮನಿಸಿದರೆ ನಮ್ಮ ಅರಿವಿಗೆ ಬರುವುದು ಭತ್ತ ಬೆಳೆಯುವ, ಹತ್ತಿ ಬೆಳೆಯುವ, ಗೋದಿ ಬೆಳೆಯುವ ಭೂಮಿ ತಾಯಿಯನ್ನು ನೆನೆಯೋಣ ಎಂದು ಆತ ಹೇಳುತ್ತಿಲ್ಲ. ಬದಲಾಗಿ ಎಳ್ಳು ಮತ್ತು ಜೀರಿಗೆಯನ್ನು ಬೆಳೆಯುವ ಭೂಮಿ ತಾಯಿಯನ್ನು ನೆನೆಯುವ ಕುರಿತು ಮಾತನಾಡಿದ್ದಾನೆ.
ಇಲ್ಲಿ ಜೀರಿಗೆ ಹುಟ್ಟಿನ ಸಂಕೇತವಾದರೆ, ಎಳ್ಳು ಸಾವಿನ ಮತ್ತು ಮುಕ್ತಿಯ ಸಂಕೇತ.
ನೀವೆಲ್ಲ ಗಮನಿಸಿರಬಹುದು… ಮನೆಯಲ್ಲಿ ತುಂಬಿದ ಬಸುರಿ ಹೆಣ್ಣುಮಗಳು ಇದ್ದರೆ ಆಕೆಗೆ ಹೊಟ್ಟೆಯ ನೋವು ಕಾಣಿಸಿಕೊಂಡಾಗ ಅದು ನಿಜದ ಹೆರಿಗೆ ನೋವು ಹೌದೋ ಅಲ್ಲವೋ ಎಂಬುದನ್ನು ಅರಿಯಲು ಒಂದೆರಡು ಚಮಚದಷ್ಟು ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಕುಡಿಯಲು ಕೊಡುತ್ತಾರೆ. ಈ ಜೀರಿಗೆ ಕಷಾಯವನ್ನು ಕುಡಿದ ನಂತರ ನೋವು ಹೆಚ್ಚಾದರೆ ನಿಜದ ಹೆರಿಗೆ ನೋವು ಎಂದೂ, ನೋವು ಶಮನವಾದರೆ, ಕಡಿಮೆಯಾದರೆ ಹುಸಿ ಹೆರಿಗೆ ನೋವು ಎಂದು ತಿಳಿಯುತ್ತಾರೆ. ಈ ರೀತಿ ಜೀರಿಗೆಯು ಹುಟ್ಟಿನ ಸಂಕೇತವಾಗಿ ನಮ್ಮ ಬದುಕಿನಲ್ಲಿ ಪ್ರತಿಫಲಿಸುತ್ತದೆ.
ಓರ್ವ ವ್ಯಕ್ತಿಯು ಸತ್ತಾಗ ಆತನಿಗೆ ಮಾಡುವ ಅಂತಿಮ ವಿಧಿ ವಿಧಾನಗಳಲ್ಲಿ ಎಳ್ಳು ಮತ್ತು ನೀರನ್ನು ಬಳಸುತ್ತಾರೆ. ಅದು ಮುಕ್ತಿಯ ಸಂಕೇತ… ಎಲ್ಲ ರೀತಿಯ ಭರವಸೆಗಳನ್ನು ಕಳೆದುಕೊಂಡಾಗ ಕೂಡ ಎಳ್ಳು ನೀರು ಬಿಡುವುದು ಎಂದು ಹೇಳುತ್ತಾರೆ. ಇದನ್ನು ಸಂಸ್ಕೃತದಲ್ಲಿ ತಿಲಾಂಜಲಿ ಎಂದು ಕೂಡ ಹೇಳುತ್ತಾರೆ. ಹೀಗಾಗಿ ಮುಕ್ತಿಯ ಸಂಕೇತವಾಗಿ ಎಳ್ಳು ಬಳಸಲ್ಪಡುತ್ತದೆ.
ನೋಡಿದಿರಾ ಸ್ನೇಹಿತರೆ, ನಮ್ಮ ಜನಪದರ ಜಾಣ್ಮೆ ಯನ್ನು. ಏನೋ ಪ್ರಾಸ ಪದಗಳು ಸಿಕ್ಕವು ಎಂದು ಅವರು ಪದ ಕಟ್ಟಿ ಹಾಡಲಿಲ್ಲ ಬದಲಾಗಿ ಅರಿತು ಬರೆದ ಪದಗಳಿವು. ಗ್ರಾಮೀಣರ ಅನುಭಾವದಿಂದ ಬಂದ ಈ ಜನಪದ ಗೀತವು ಗಟ್ಟಿ ಗಾಳಿನಂತೆ ಸತ್ವಯುತವಾಗಿವೆ ಅಲ್ಲವೇ.
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ್

