ಅರೆಬರೆ ಕಾಮಗಾರಿ | ಕೊಳಚೆ ಪ್ರದೇಶವಾಗಿ ಮಾರ್ಪಟ್ಟ ಗ್ರಾಮ | ಸೊಳ್ಳೆಗಳ ಹಾವಳಿ | ಸಾಂಕ್ರಾಮಿಕ ರೋಗದ ಭೀತಿ
– ಸಾಯಬಣ್ಣ ಮಾದರ, ಸಲಾದಳ್ಳಿ
ವಿಜಯಪುರ: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆಯು ಗುತ್ತಿಗೆದಾರರ ನಿರ್ಲಕ್ಷದಿಂದ ಕಳಪೆ ಮತ್ತು ಅರೆಬರೆ ಕಾಮಗಾರಿ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯು ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರ್ಕಾರಿ ನಿಯಮ ಪಾಲನೆಮಾಡದೆ ಕಾಮಗಾರಿ ನಡೆಯುತ್ತಿರುವುದು ಕಂಡುಬಂದಿದೆ. ಕಾಮಗಾರಿಗಾಗಿ ಎಲ್ಲೆಂದರಲ್ಲಿ ಗುಂಡಿಗಳನ್ನು ತೆಗೆದಿದ್ದು, ಅದರಲ್ಲಿ ಮಳೆ ನೀರು, ಚರಂಡಿ ನೀರು ನಿಂತು ಪ್ರತಿ ವಾರ್ಡ್ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಕೊಳಚೆ ನೀರಿನಿಂದಾಗಿ ಸೊಳ್ಳೆಗಳು ವಿಪರೀತ ಹೆಚ್ಚಾಗಿದ್ದು ಹೊನ್ನಳ್ಳಿ ಗ್ರಾಮದಲ್ಲಿ ಡೆಂಗ್ಯೂ, ಮಲೇರಿಯಾ ವ್ಯಾಪಕವಾಗಿ ಹರಡುವ ಲಕ್ಷಣಗಳಿದ್ದು ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ.
ರಾಜ್ಯದೆಲ್ಲೆಡೆ ಹೆಮ್ಮಾರಿ ಡೆಂಗ್ಯೂ ತನ್ನ ಅಟ್ಟಹಾಸ ಮೆರೆಯುತ್ತಿರುವಾಗಲೇ ಗ್ರಾಮದ ಹಲವರು ಅನಾರೋಗ್ಯದಿಂದ ವಿಜಯಪುರದ ಹಲವು ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕುಡಿಯಲು ಬಳಸುವ ನೀರಿನಲ್ಲಿ ಕೊಳಚೆ ನೀರು ಸೇರಿ ಗ್ರಾಮದಲ್ಲಿ ಕಾಲರಾ ಹರಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೆಲ್ಲ ಗಮನಿಸಬೇಕಾದ ಅಧಿಕಾರಿಗಳು ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ. ಗುತ್ತಿಗೆದಾರರು ಎಲ್ಲೆಂದರಲ್ಲಿ ರಸ್ತೆ ಚರಂಡಿ ಅಗೆದು ಕಾಂಕ್ರೀಟ್ ತ್ಯಾಜ್ಯ ಗುಡ್ಡೆ ಹಾಕಿದ್ದಾರೆ. ಪ್ರತಿ ಮನೆಗಳ ಮುಂದೆ ಮೊಳಕಾಲುದ್ದ ಗುಂಡಿಗಳನ್ನು ಅಗೆದು ಹಾಗೇ ಬಿಡಲಾಗಿದೆ. ವಯೋವೃದ್ಧರು ಮತ್ತು ಮಕ್ಕಳು ಬಿದ್ದು ಕೈ-ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.
ಈ ನಮ್ಮ ಕಷ್ಟ ಯಾರಿಗೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಗ್ರಾಮದ ನಿವಾಸಿ ಶರಣಪ್ಪ ದೊಡ್ಮನಿ ಸೇರಿದಂತೆ ಹಲವು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ, ಗುಣಮಟ್ಟದ ಕಾಮಗಾರಿಗೆ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಅಂಬೋಣವಾಗಿದೆ.

ಕಾಮಗಾರಿಯಲ್ಲಿ ಭ್ರಷ್ಟಾಚಾರದ ಆರೋಪ
ಕಾಮಗಾರಿಯಲ್ಲಿ ಭ್ರಷ್ಟಾಚಾರ
ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಏಕೆಂದರೆ ಅಂದಾಜು ಪತ್ರಿಕೆಯಂತೆ ಕಾಮಗಾರಿ ನಿರ್ವಹಿಸದೆ ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿ ಕಾರಿದ್ದಾರೆ.
ಸಾರ್ವಜನಿಕರು ಓಡಾಡುವ ಪ್ರದೇಶದಲ್ಲಿ ತ್ವರಿತವಾಗಿ ಪೈಪ್ ಲೈನ್ ಮಾಡಿ ಸಿಸಿ ಹಾಕಿ ಮುಚ್ಚದೆ ರಸ್ತೆ ಇಕ್ಕಲಗಾಳಗಿ ಮಾಡಿ ಹೋಗಿದ್ದಾರೆ. ಸರ್ಕಾರಿ ನಿಯಮದ ಪ್ರಕಾರ ಮೂರು ಅಡಿ ಆಳವನ್ನು ತೆಗೆದು ಪೈಪ್ ಲೈನ್ ಅಳವಡಿಸಬೇಕು. ಆದರೆ ಕಾಟಾಚಾರಕ್ಕೆ ಒಂದು ಅಡಿಯಷ್ಟು ಅಗೆದು ಪೈಪ್ ಲೈನ್ ಅಲ್ಲಲ್ಲಿ ಅಳವಡಿಸಿದ್ದಾರೆ. ಇವರು ಹಾಕಿರುವ ಮೀಟರ್ ಕಂಬಗಳು ಕಳಪೆಮಟ್ಟದಲ್ಲಿವೆ.
ಇಂತಿಷ್ಟೇ ಆಳದಲ್ಲಿ ಪೈಪುಗಳು ಅಳವಡಿಸಬೇಕು ಎಂಬ ನಿಯಮವಿದ್ದು ಅದನ್ನು ಉಲ್ಲಂಘಿಸಿದ್ದಾರೆ. ಕಡಿಮೆ ಗುಣಮಟ್ಟದ ಪೈಪುಗಳನ್ನು ಅಳವಡಿಸಿದ್ದು ಸರ್ಕಾರಿ ನಿಯಮವನ್ನು ಗಾಳಿಗೆ ತೂರಿ ಗ್ರಾಮ ಪಂಚಾಯಿತಿಯಿಂದ ಅಳವಡಿಸಿದ್ದ ಪೈಪುಗಳಿಗೆ ಸಂಪರ್ಕ ಕಲ್ಪಿಸಿ, ಕಾಂಕ್ರೆಟ್ ಇಲ್ಲದಿರುವ ಕಡೆಯು ಪೈಪ್ ಲೈನ್ ಅಳವಡಿಸಿದ್ದೇವೆ ಎಂದು ದಾಖಲೆ ಸೃಷ್ಟಿಸಿ ಹಣ ಬಿಡುಗಡೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರಾದ ಮಶಾಕ್ ತಾಳಿಕೋಟಿ ಆರೋಪಿಸಿದ್ದಾರೆ.
ಗುತ್ತಿಗೆದಾರರೊಂದಿಗೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳಪೆ ಕಾಮಗಾರಿಯನ್ನು ನಿಲ್ಲಿಸಿ ಸಂಪೂರ್ಣ ತನಿಖೆಗೆ ಒಳಪಡಿಸಬೇಕೆಂದು ಗ್ರಾಮದ ಹುಸೇನ್ ಸಾಬ್ ಯಂಕಂಚಿ, ಖಾದರ್ ಸಾಬ್ ಪೊಲೇಶಿ, ದವಲ ಸಾಬ್ ಓತಿಹಾಳ, ದೇವಿಂದ್ರ ರತ್ಯಾಳ, ಶರಣಪ್ಪ ದೊಡ್ಡಮನಿ, ಆನಂದ್ ತಳವಾರ ಮುಂತಾದವರು ಆಗ್ರಹಿಸಿದ್ದಾರೆ.

