ಮೊಳಗಿದ ರಾಜು ಅಮರ ರಹೇ ಹೈ ಘೋಷಣೆ | ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ | ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ
ತಿಕೋಟಾ: ಭಾರತೀಯ ಸೇನೆಯ ರಾಷ್ಟ್ರೀಯ ರೈಪಲ್ಸನ 51 ಯುನಿಟ್ ಮಹರ ರೆಜಿಮೆಂಟ್ 13 ಜಮ್ಮು ಕಾಶ್ಮಿರದಲ್ಲಿ ನಿಧನ ಹೊಂದಿದ ವೀರಯೋಧ ರಾಜು ಗಿರಮಲ್ಲ ಕರಜಗಿ ಅವರ ಪಾರ್ಥಿವ ಶರೀರ ಹುಟ್ಟೂರು ತಿಕೋಟಾಕ್ಕೆ ಬುಧವಾರ ಬೆಳಗ್ಗೆ ಆಗಮಿಸುತ್ತಿದ್ದಂತೆ ರಾಜು ಅಮರ ರಹೇ ಹೈ, ಬೊಲೊ ಭಾರತ ಮಾತಾಕಿ ಜೈ ಘೋಷಣೆಗಳು ಮೊಳಗಿದವು.
ಪಾರ್ಥಿವ ಶರೀರ ವಾಡೆ ಮೈದಾನಕ್ಕೆ ಬರುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತು ಸಹೋದರ, ಮಾವ ಹಾಗೂ ಸಂಬಂಧಿಕರು ವೀರಯೋಧನ ಒಡನಾಡ ನೆನಪಿಸಿಕೊಂಡು ಕಣ್ಣಿರು ಹಾಕಿದರು.
ಪಟ್ಟಣದ ವಾಡೆ ಮೈದಾನದಲ್ಲಿ ಮದ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರು, ಶಾಲಾ ಮಕ್ಕಳು, ಸುತ್ತಲಿನ ಹಳ್ಳಿಯ ಜನರು ಅಂತಿಮ ದರ್ಶನ ಪಡೆದರು. ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಕೆ.ಪಾಟೀಲ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಹುಲಜಂತಿ ಮಾಳಿಂಗರಾಯ ಮಹಾರಾಜ, ಬಾಬುರಾವ ಮಹಾರಾಜ, ಮಾಜಿ ಸೈನಿಕರು, ಶಾಲಾ ಕಾಲೇಜಿನ ಮಕ್ಕಳು, ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಮೆರವಣಿಗೆ: ಹೂವುಗಳಿಂದ ಸಿಂಗಾರಗೊಂಡ ತೆರೆದ ವಾಹನದಲ್ಲಿ ಮದ್ಯಾಹ್ನ 1 ಗಂಟೆಗೆ ಯೋಧನ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಯಿತು. ದಾರಿಯುದ್ದಕ್ಕೂ ದೇಶ ಭಕ್ತಿಗೀತೆಗಳು, ಮತ್ತೆ ಹುಟ್ಟಿ ಬಾ ರಾಜು, ಅಮರ ರಹೇ ಹೈ ರಾಜು ಮುಂತಾದ ಘೋಷಣೆಗಳು ಮೊಳಗಿದವು. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಸಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ತಲುಪಿತು.
ಗೌರವ ವಂದನೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಶಸ್ತ್ರ ಮೀಸಲು ಪಡೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿತು.
ದ್ವಜ ಹಸ್ತಾಂತರ: ಪಾರ್ಥಿವ ಶರೀರದ ಮೇಲೆ ಹೊದಿಸಿರುವ ರಾಷ್ಟ್ರ ದ್ವಜವನ್ನು ಪತ್ನಿ ಸುಧಾ ಅವರಿಗೆ ಸೇನೆಯ ಹಿರಿಯ ಅಧಿಕಾರಿಗಳು ಹಸ್ತಾಂತರಿಸಿದರು.
ತಿಕೋಟಾ ಪಟ್ಟಣದಲ್ಲಿ ರೈತ ಕುಟುಂಬದ ತಂದೆ ಗಿರಮಲ್ಲ ತಾಯಿ ಅಕ್ಕೂತಾಯಿ ದಂಪತಿಗಳ ಪುತ್ರನಾಗಿ ಜೂನ 1, 1986 ರಲ್ಲಿ ಜನಿಸಿದ ವೀರ ಯೋಧ ರಾಜು ಒಂದರಿಂದ ಐದನೇ ತರಗತಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಆರರಿಂದ ಏಳನೇ ತರಗತಿ ಜತ್ತ ತಾಲ್ಲೂಕಿನ ಉಮರಾಣಿ ಶಾಲೆ, ಪ್ರೌಢ ಶಿಕ್ಷಣ, ಪಿಯುಸಿ ಹಾಗೂ ಪದವಿ ಶಿಕ್ಷಣ ಗ್ರಾಮದ ಎ.ಬಿ.ಜತ್ತಿ ಶಾಲೆ ತಿಕೋಟಾದಲ್ಲಿ ಪೂರೈಸಿದನು. ದೇಶ ಸೇವೆ ಮಾಡುವ ಮಹದಾಶೆ ಇಟ್ಟುಕೊಂಡ ಯೋಧ ರಾಜು ಪದವಿ ಶಿಕ್ಷಣ ಪಡೆಯುವಾಗಲೇ ಎನ್.ಸಿ.ಸಿ ಆಯ್ಕೆ ಮಾಡಿಕೊಂಡು ಪ್ರತಿದಿನ ದೈಹಿಕ ಕಸರತ್ತು ನಡೆಸುತ್ತಿದ್ದನು.
ಸತತ ಪರಿಶ್ರಮದಿಂದ ದೇಶ ಸೇವೆ ಮಾಡಲು ಸೈನಿಕ ಹುದ್ದೆಗೆ ಆಯ್ಕೆಯಾಗಿ ಮಾರ್ಚ 21, 2009 ರಂದು ಕರ್ತವ್ಯಕ್ಕೆ ಹಾಜರಾದನು. 2013 ಮೇ 12 ರಂದು ಅಕ್ಕ ಭಾಗ್ಯಶ್ರಿಯ ಮಗಳು ಸುಧಾ ಜೊತೆ ವೈವಾಹಿಕ ಜೀವನ ಆರಂಭಿಸಿದರು. ಮಧ್ಯಪ್ರದೇಶ, ಪಂಜಾಬ, ಆಸ್ಸಾಂ, ಜಮ್ಮು ಕಾಶ್ಮಿರದಲ್ಲಿ ಸೇವೆ ಸಲ್ಲಿಸಿದ್ದು, ಇತ್ತಿಚೆಗಷ್ಟೆ ಹವಾಲ್ದಾರ್ ಆಗಿ ಪದೊನ್ನತಿ ಹೊಂದಿದ್ದರು. ಇನ್ನೇನು ಎರಡ್ಮೂರು ವರ್ಷಗಳಲ್ಲಿ ನಿವೃತ್ತಿ ಹೊಂದುತ್ತಿದ್ದರು. ದಿನಾಲು ವಿಡಿಯೋ ಕರೆ ಮಾಡಿ ಕುಟುಂಬದವರೊಂದಿಗೆ ಮಾತನಾಡುತ್ತಿದ್ದ, ರವಿವಾರ ಬೆಳಗ್ಗೆ ಸೇನಾ ಸಿಬ್ಬಂದಿಯಿಂದ ಹುತಾತ್ಮ ಆಗಿದ್ದಾನೆಂದು ಸುದ್ದಿ ಬಂದಿದೆ ಎಂದು ಸಹೋದರ ಮಹಾದೇವ ದುಃಖ ತೋಡಿಕೊಂಡರು.

