ಕನ್ನೊಳ್ಳಿ, ಗಬಸಾವಳಗಿ ಗ್ರಾ.ಪಂಗಳಿಗೆ ಭೇಟಿ ನೀಡಿದ ಜಿಪಂ, ಸಿಇಒ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ
ವಿಜಯಪುರ: ಗ್ರಾಮಪಂಚಾಯತಿಗಳಿಂದ ಪ್ರಸ್ತುತ ಶೇ.೪ ರಷ್ಟು ಮಾತ್ರ ತೆರಿಗೆ ಸಂಗ್ರಹಣೆಯಾಗಿದ್ದು, ಮುಂದಿನ ಒಂದು ವಾರದಲ್ಲಿ ಶೇ.೧೦ರಷ್ಟು ಗುರಿ ತೆರಿಗೆ ಸಂಗ್ರಹಿಸುವ ಗುರಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಸಿಂದಗಿ ತಾಲೂಕಿನ ಕನ್ನೊಳ್ಳಿ ಹಾಗೂ ಆಲಮೇಲ ತಾಲೂಕಿನ ಗಬಸಾವಳಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಸಂಗ್ರಹವಾದ ತೆರಿಗೆಯಲ್ಲಿ ಶೇ.೬ರಷ್ಟು ಗ್ರಂಥಾಲಯಗಳಿಗೆ ಪುಸ್ತಕಗಳು ಹಾಗೂ ದಿನ ಪತ್ರಿಕೆಳಿಗೆ ಅನುದಾನ ಕಾಯ್ದಿರಿಸಬೇಕು. ಗ್ರಾಮದಲ್ಲಿ ಕುಡಿಯುವ ನೀರು ಇತರೆ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಬೇಕು. ತಮ್ಮ ನಿಯೋಜಿತ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ವಿವಿಧ ಯೋಜನೆಗಳ ಪ್ರಗತಿಯ ಗುರಿ ಸಾಧಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳಾದ ಮಹಾತ್ಮಗಾಂಧಿ ನರೇಗಾ ಯೋಜನೆ, ವಸತಿ ಯೋಜನೆ, ಸ್ವಚ್ಚ ಭಾರತ ಮಿಷನ್, ಸಕಾಲ, ಆಸ್ತಿಗಳ ಸಮೀಕ್ಷೆ, ಗ್ರಂಥಾಲಯಗಳ ಡಿಜಿಟಲೀಕರಣ, ಇ-ಸ್ವತ್ತು ಹಾಗೂ ತೆರಿಗೆ ವಸೂಲಾತಿ ಹಾಗೂ ವಿವಿಧ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತೋಟಗಾರಿಕೆ ಸಹಯೋಗದಲ್ಲಿ ಲಿಂಬೆ ಸಸಿ ನಾಟಿ ಮಾಡಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಿ, ಕಾಮಗಾರಿ ಅನುಷ್ಠಾನ ಸಂಬಂಧಿಸಿದಂತೆ ನರೇಗಾ ಯೋಜನೆಯ ಸಹಾಯಧನ, ಸಸಿಗಳ ಲಭ್ಯತೆ, ಸಸಿಗಳ ನಾಟಿ ಹಾಗೂ ರೈತರಿಗೆ ದೊರೆಯುವ ಲಾಭಾಂಶ ಕುರಿತಾಗಿ ರೈತರೊಂದಿಗೆ ಸಂವಾದ ನಡೆಸಿದರು. ಲಿಂಬೆ ಬೆಳೆಗೆ ತಗಲುವ ರೋಗಬಾಧೆ ನಿಯಂತ್ರಿಸಲು ರೈತರಿಗೆ ಅಗತ್ಯ ಸಲಹೆ ನೀಡಲು ಸ್ಥಳದಲ್ಲಿದ್ದ ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಿರ್ಮಾಣವಾದ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಯಾವುದೇ ದುರಸ್ತಿ ಕಾಮಗಾರಿಳಿದ್ದರೆ ಆದ್ಯತೆ ಮೇರೆಗೆ ಮುಂದಿನ ಹದಿನೈದು ದಿನಗಳಲ್ಲಿ ಪೂರ್ಣಗೊಳಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ತಾರಾನಾಥ ರಾಠೋಡ ಅವರಿಗೆ ಸೂಚನೆ ನೀಡಿದರು. ನವೀಕರಣಗೊಳ್ಳುತ್ತಿರುವ ಕನ್ನೊಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿಗೆ ವೇಗ ನೀಡಿ ಆದಷ್ಟು ಬೇಗ ಪೂರ್ಣಗೊಳಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ವಿಜಯಕುಮಾರ ಆಜೂರ, ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಬಸವರಾಜ ಕುಂಬಾರ, ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಎನ್. ಎಮ್ ಗಬಸಾವಳಗಿ, ಸಿಂದಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮು ಜಿ ಅಗ್ನಿ, ಆಲಮೇಲ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಫರೀದಾಬಾನು ಪಠಾಣ, ಜಿ.ಪಂ. ಸಹಾಯಕ ಯೋಜನಾಧಿಕಾರಿಗಳಾದ ಅರುಣಕುಮಾರ ದಳವಾಯಿ, ಸಿಂದಗಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರು ನಿತ್ಯಾನಂದ ಯಲಗೋಡ, ಆಲಮೇಲ ತಾಲೂಕಿನ ಸಹಾಯಕ ನಿರ್ದೇಶಕ ಸಿದ್ದು ಅಂಕಲಗಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿ. ವಾಯ್. ಮುರಾಳ, ಕೆಆರ್ಐಡಿಎಲ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಾಜಶೇಖರ ಜೊತಗೊಂಡ, ಕನ್ನೊಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ ನಾಯಕ, ಗಬಸಾವಳಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜ್ಯೋತಿ ಶೇಗಾವಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

