“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ
ಬಿಹಾರ ರಾಜ್ಯದ ಗಯಾದ ಬಳಿಯ ಗೆಹಲೊರ್ ಎಂಬ ಊರಿನಲ್ಲಿ ವಾಸವಾಗಿದ್ದ ಆ ವ್ಯಕ್ತಿಯ ಹೆಸರು ದಶರಥ ಮಾಂಜಿ. ಮುಷಾಯಿರ ಎಂಬ ಅತ್ಯಂತ ಕೆಳ ವರ್ಗದ ಜಾತಿಯಲ್ಲಿ ಜನಿಸಿದ ಅವರ ಮೂಲವೃತ್ತಿ ಇಲಿಗಳನ್ನು ಹಿಡಿಯುವುದು.
ಪ್ರಾಪ್ತ ವಯಸ್ಸಿಗೆ ಬಂದಾಗ ಆತನಿಗೆ ಫಲ್ಗುಣಿ ದೇವಿ ಎಂಬ ಹೆಣ್ಣು ಮಗಳೊಂದಿಗೆ ವಿವಾಹವಾಯಿತು. ಮದುವೆಯಾದ ಮೊದಲ ಏಳು ವರ್ಷ ಇಂದಿನ ಝಾರ್ಕಂಡ್ ರಾಜ್ಯದ ಧನಭಾದ್ ನ ಕಲ್ಲಿದ್ದಲ ಗಣಿಗಳಲ್ಲಿ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸಿದ ದಶರಥ ಮಾಂಜಿ ಅಂತಿಮವಾಗಿ ಮನೆಗೆ ಬಂದು ಸಂಸಾರ ಹೂಡಿದನು. ಅವರಿಬ್ಬರ ಅನುರೂಪದ ದಾಂಪತ್ಯದ ಫಲವಾಗಿ ಈಗಾಗಲೇ ಒಬ್ಬಳು ಮಗಳನ್ನು ಪಡೆದಿದ್ದು ಪಲ್ಗುಣಿ ದೇವಿ ಮತ್ತೆ ಗರ್ಭಿಣಿಯಾಗಿದ್ದಳು.
ಮಾಂಜಿ ವಾಸವಾಗಿದ್ದ ಗೆಹಲೋರಿನಲ್ಲಿ ಆರೋಗ್ಯ ಚಿಕಿತ್ಸಾ ಕೇಂದ್ರ ಇರಲಿಲ್ಲ. ಏನಾದರೂ ವೈದ್ಯಕೀಯ ನೆರವು ಪಡೆಯಬೇಕೆಂದರೆ ಸುಮಾರು 40 ನಾಲ್ಕು ಮೈಲಿ ದೂರ ಇರುವ ವಜೀರ್ ಗಂಜಿಗೆ ಪಯಣಿಸಬೇಕಿತ್ತು ಇಲ್ಲವೇ ಆತನ ಊರಿನ ಅಂಚಿನಲ್ಲಿದ್ದ ಕಡಿದಾದ ಗುಡ್ಡವನ್ನು ಹತ್ತಿ ಇಳಿಯಬೇಕಾಗಿತ್ತು. ಎಲ್ಲ ರೀತಿಯ ಮೂಲ ಸೌಲಭ್ಯಗಳಿಂದ ವಂಚಿತವಾಗಿತ್ತು ಮಾಂಜಿಯ ಊರು.
ಗುಡ್ಡದ ಆಚೆ ತುದಿಯಲ್ಲಿ ತನ್ನ ಕೆಲಸದಲ್ಲಿ ಕಾರ್ಯನಿರತನಾಗಿರುತ್ತಿದ್ದ ದಶರಥ ಮಾಂಜಿಗೆ ಊಟವನ್ನು ಕೊಟ್ಟು ಬರಲು ಆತನ ಪತ್ನಿ ಕಡಿದಾದ ಗುಡ್ಡವನ್ನು ಏರಿ ಮತ್ತೊಂದು ಬದಿಯಲ್ಲಿ ಇಳಿಯುತ್ತಿದ್ದಳು. ವಿಪರೀತ ಬಿಸಿಲು, ಬಸಿರಿನ ಆಯಾಸ ಬಾಯಾರಿಕೆಗಳಿಂದ ಬಳಲಿದ ಪಲ್ಗುಣಿ ದೇವಿ ತನ್ನ ಸೆರಗಿನಿಂದ ಮುಖ ಒರೆಸಿಕೊಳ್ಳುವಾಗ ಆಯ ತಪ್ಪಿ ಆಳವಾದ ಪ್ರಪಾತಕ್ಕೆ ಜಾರಿ ಬಿದ್ದಳು. ಇದನ್ನು ನೋಡಿದ ಕುರಿಗಾಹಿಯೊಬ್ಬ ಓಡಿ ಹೋಗಿ ದಶರಥ ಮಾಂಜಿಗೆ ವಿಷಯವನ್ನು ಮುಟ್ಟಿಸಿದ. ಕೂಡಲೇ ಪತ್ನಿ ಬಿದ್ದ ಸ್ಥಳವನ್ನು ಹುಡುಕುತ್ತಾ ಓಡಿ ಬಂದ ದಶರಥ ಮಾಂಜಿಗೆ ಅಲ್ಲಿ ದೊರೆತದ್ದು ವಿಪರೀತ ರಕ್ತಸ್ರಾವದಿಂದ ಮಗುವನ್ನು ಹೆತ್ತು ಈ ಲೋಕವನ್ನು ಬಿಟ್ಟು ಹೋಗಿದ್ದ ಪತ್ನಿಯ ಶವ.

ಇದುವೇ ಮಾಂಜಿಯ ಜೀವನದ ಅತಿ ದೊಡ್ಡ ತಿರುವು. ಪತ್ನಿಯ ಮರಣದ ನಂತರ ಮಾಂಜಿ ಪ್ರತಿದಿನ ಮುಂಜಾನೆ ಗುಡ್ಡವನ್ನು ಕಡಿಯಲು ಬೇಕಾದ ಹಾರೆ ಮುಂತಾದ ಸಾಮಗ್ರಿಗಳನ್ನು ಹಿಡಿದು ಕಲ್ಲಿನ ಗುಡ್ಡಕ್ಕೆ ತೆರಳಿ ಗುಡ್ಡವನ್ನು ಸಮನಾಗಿಸಲು ಪ್ರಾರಂಭಿಸಿದನು. ಆರಂಭದಲ್ಲಿ ಆತನ ಈ ಪ್ರಯತ್ನವನ್ನು ಕಂಡ ಹಳ್ಳಿಗರು ಪತ್ನಿಯನ್ನು ಕಳೆದುಕೊಂಡು ಮಾನಸಿಕ ಭ್ರಮೆಯಿಂದ ಬಳಲುತ್ತಿರುವ ಹುಚ್ಚ ಎಂದು ಜರಿದು ಹೀಯಾಳಿಸಿದರು. ಆದರೆ ಇದು ಯಾವುದಕ್ಕೂ ಜಗ್ಗದ ಮಾಂಜಿ ತನ್ನ ಕಾರ್ಯದಿಂದ ಹಿಂದೆ ಸರಿಯಲಿಲ್ಲ. ಆತನ ಛಲವನ್ನು ಕಂಡ ಜನ ಮುಂದಿನ ದಿನಗಳಲ್ಲಿ ಆತನಿಗೆ ಆಹಾರ ಮತ್ತು ಗುಡ್ಡವನ್ನು ಕಡಿಯಲು ಬೇಕಾಗುವ ಸಲಕರಣೆಗಳನ್ನು ಒದಗಿಸಿದರು.
1960 ರಿಂದ 1982 ರವರೆಗೆ ಮುಂದಿನ 22 ವರ್ಷಗಳ ಕಾಲ ಸತತವಾಗಿ ಗುಡ್ಡವನ್ನು ಕಡಿದ ಮಾಂಜಿ 360 ಮೀಟರ್ ಉದ್ದ 30 ಮೀಟರ್ ಅಗಲ ಮತ್ತು 25 ಮೀಟರ್ ಎತ್ತರದ ರಸ್ತೆಯನ್ನು ನಿರ್ಮಿಸಿದನು. ಮಾಂಜಿ ಕಡಿದ ರಸ್ತೆಯಿಂದಾಗಿ ಬಿಹಾರದ ಗಯಾ ಜಿಲ್ಲೆಯ ಅತ್ರಿ ಮತ್ತು ವಜೀರ್ ಗಂಜಿಗಳ ನಡುವಿನ ದೂರ 55 ಕಿ.ಮೀ ನಿಂದ ಹದಿನೈದು ಕಿಲೋಮೀಟರ್ ಗೆ ಇಳಿಯಿತು.
ತನ್ನ ಪತ್ನಿಯ ಮೇಲಿನ ಪ್ರೀತಿ ಮತ್ತು ಊರಿನ ಜನರ ಮೇಲಿನ ಕಾಳಜಿಯಿಂದಾಗಿ ಭಗೀರಥ ಪ್ರಯತ್ನ ಮಾಡಿ ಗುಡ್ಡವನ್ನು ಕಡಿದು ರಸ್ತೆಯನ್ನು ನಿರ್ಮಿಸಿದ ದಶರಥ ಮಾಂಜಿಯನ್ನು ಮುಂದೆ ಮೌಂಟೇನ್ ಮ್ಯಾನ್, ಪಹಡಿ ಬಾಬಾ ಎಂದು ಕರೆದು ಗೌರವಿಸಿದರು.
ಬಿಹಾರ ಸರ್ಕಾರವು ಆತನಿಗೆ ಪದ್ಮಶ್ರೀ ಪ್ರಶಸ್ತಿಗೆ ಅನುಮೋದನೆ ನೀಡಿತು. 2016ರಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರವರು ದಶತ್ ಮಾಂಜಿ ಹೆಸರಿನಲ್ಲಿ ಪೋಸ್ಟಲ್ ಸ್ಟ್ಯಾಂಪ್ ಒಂದನ್ನು ಬಿಡುಗಡೆ ಮಾಡಿದ್ದಾರೆ
ಅದಮ್ಯವಾದ ಆತ್ಮವಿಶ್ವಾಸ ಮತ್ತು ಛಲ ಇದ್ದರೆ ಮನುಷ್ಯ ಪರ್ವತವನ್ನೇ ಅಲುಗಿಸಬಲ್ಲನು ಎಂಬುದಕ್ಕೆ ದಶರಥ ಮಾಂಜಿ ನಿರ್ಮಿಸಿದ ರಸ್ತೆ ಸಾಕ್ಷಿಯಾಗಿ ನಿಂತಿದೆ.
ನಮ್ಮ ಬದುಕು ಹಾಗೆ ಅಲ್ಲವೇ ಸ್ನೇಹಿತರೆ, ನಮ್ಮ ಬದುಕಿನಲ್ಲಿ ಬರುವ ಹಲವಾರು ಸಣ್ಣ ಪುಟ್ಟ ಎಡರು ತೊಡರುಗಳು, ತೊಂದರೆಗಳನ್ನು ನಾವು ಗುಡ್ಡದಂತೆ ಭಾವಿಸಿ ಪ್ರತಿಯೊಂದಕ್ಕೂ ಬೇರೊಬ್ಬರ ಸಹಾಯಕ್ಕಾಗಿ ಎದುರು ನೋಡುತ್ತೇವೆ.
ಮನೆಯ ಮುಂದಿನ ಚರಂಡಿ ಇರಲಿ, ನಮ್ಮೂರಿನ ಹಳ್ಳವಿರಲಿ ಪ್ರತಿಯೊಂದಕ್ಕೂ ಸಂಬಂಧಪಟ್ಟ ಇಲಾಖೆಯವರು ಬಂದು ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇವೆ. ನಾವು ಅವರಿಗೆ ಟ್ಯಾಕ್ಸ್ ಕೊಡೋದಿಲ್ಲವೇ ನಮಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡುವುದು ಅವರ ಜವಾಬ್ದಾರಿ ಎಂದು ಗಟ್ಟಿಸಿ ಕೇಳುತ್ತೇವೆ…. ನಿಜ ಹಾಗೆ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಅಪಘಾತದಂತಹ ಕೆಲ ತೊಂದರೆಗಳು ಸಂಭವಿಸಿದಾಗ ಪೊಲೀಸರು ಬರಲಿ ಎಂದು ಕಾಯುತ್ತಾ ಕುಳಿತರೆ ರೋಗಿಯ ಜೀವಕ್ಕೆ ಅಪಾಯ ಸಂಭವಿಸಬಹುದು ಎಂಬುದಕ್ಕಿಂತ ಹೆಚ್ಚಾಗಿ ನಂತರ ಪೊಲೀಸು ಕೋರ್ಟು, ಕೇಸ್ ಯಾರಿಗೆ ಬೇಕಪ್ಪ ಈ ತಲೆನೋವು
ಎಂದು ಬಹಳಷ್ಟು ಬಾರಿ ನಮ್ಮ ನಾಗರಿಕ ಪ್ರಜ್ಞೆಯ ಔಚಿತ್ಯತೆಯನ್ನು ಮರೆತುಬಿಡುತ್ತೇವೆ.
ನಮ್ಮ ಸಮಾಜ ನಮ್ಮ ಜವಾಬ್ದಾರಿ, ಯಾವ ರೀತಿ ನಮ್ಮ ಮನೆಯ ಕೆಲಸ ಕಾರ್ಯಗಳನ್ನು ನಾವು ಜವಾಬ್ದಾರಿಯತವಾಗಿ ನಿರ್ವಹಿಸುತ್ತೇವೆಯೋ ಆಂತೆಯೇ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪರಿಪಾಲಿಸಬೇಕು.
ಸರ್ಕಾರವೇ ತನ್ನ ಊರಿಗೆ ರಸ್ತೆ ಮಾಡಬೇಕು ಎಂದು ದಶರಥ ಮಾಂಜಿ ಕುಳಿತುಕೊಂಡಿದ್ದರೆ ಇಂದು ಆತ ಇಡೀ ಭಾರತ ದೇಶದಲ್ಲಿನ ಕೋಟ್ಯಂತರ ಜನರಲ್ಲಿ ಯಾವುದೋ ಒಬ್ಬ ನಗಣ್ಯ ವ್ಯಕ್ತಿ ಎನಿಸಿಕೊಳ್ಳುತ್ತಿದ್ದ…. ಯಾರನ್ನೂ ದೂರದೆ ಯಾರಿಗೂ ಕಾಯದೆ ಯಾರ ಕೆಸರೆರಚಾಟಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಧ್ಯೇಯವನ್ನು ಈಡೇರಿಸಿಕೊಂಡ ದಶರಥ ಮಾಂಜಿ ಕಲಿಯುಗದ ಭಗೀರಥ ಎಂದರೆ ತಪ್ಪಿಲ್ಲ.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ

