-ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ಆಗಷ್ಟೇ ಅಗಾಧ ಪರಿಣಾಮವುಂಟು ಮಾಡಿದ್ದ ಮಹಾಭಾರತ ಯುದ್ಧವು ಮುಗಿದಿತ್ತು. ಹದಿನೆಂಟು ದಿನಗಳ ಕಾಲ ನಡೆದ ಈ ಯುದ್ಧದ ಪರಿಣಾಮವು ದ್ರೌಪದಿಯನ್ನು ಆಕೆಯ ಎಂಭತ್ತನೆಯ ವಯಸ್ಸಿನಲ್ಲೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತಗೊಳಿಸತ್ತು. ಊರಿನ ಎಲ್ಲೆಡೆ ವಿಧವೆಯರು, ಕೈ ಕಾಲು ಕಳೆದುಕೊಂಡು ಅಂಗವೈಕಲ್ಯಗೊಂಡ ಪುರುಷರು, ಅನಾಥ ಮಕ್ಕಳು ಓಡಾಡುತ್ತಿದ್ದರು. ನಂದನವನದಂತಿದ್ದ ಹಸ್ತಿನಾಪುರವು ಸಂಪೂರ್ಣ ಸ್ಮಶಾನ ಮೌನಕ್ಕೀಡಾಗಿತ್ತು. ಹಸ್ತಿನಾಪುರದ ರಾಣಿಯಾದ ದ್ರೌಪದಿಯು ಶೂನ್ಯಮನಸ್ಕಳಾಗಿ ಗೋಡೆಯನ್ನು ನೋಡುತ್ತಾ ಕುಳಿತಿದ್ದಳು. ಆಗ ಶ್ರೀಕೃಷ್ಣನು ಅಲ್ಲಿಗೆ ಬಂದಾಗ ದ್ರೌಪದಿಯು ಓಡೋಡಿ ಬಂದು ಕೃಷ್ಣನನ್ನು ತಬ್ಬಿಕೊಂಡು ಅಳತೊಡಗಿದಳು. ಕೃಷ್ಣ ದ್ರೌಪದಿಯ ತಲೆಯನ್ನು ನೇವರಿಸಿ, ಸಮಾಧಾನ ಮಾಡತೊಡಗಿದ. ಆಗ ಕಣ್ಣೀರಿಡುತ್ತಾ ದ್ರೌಪದಿಯು ಕೃಷ್ಣಾ ಏನಿದೆಲ್ಲ? ಹೀಗೆಲ್ಲ ಆಗುತ್ತದೆಯೆಂದು ನಾನಂದುಕೊಂಡೇ ಇರಲಿಲ್ಲ ಎಂದಳು.
ಆಗ ಕೃಷ್ಣನು ದ್ರೌಪದೀ, ಕರ್ತವ್ಯ ಮತ್ತು ನಿಯತ್ತು ಎಂಬುವುದು ಅತ್ಯಂತ ಕ್ರೂರಿಗಳು, ಅವುಗಳು ನಾವಂದುಕೊಂಡಂತೆ ಇರುವುದಿಲ್ಲ. ನಾವು ಮಾಡುವ ಪ್ರತಿಯೊಂದು ಕರ್ಮಗಳನ್ನು ಅವುಗಳ ಪರಿಣಾಮಗಳಲ್ಲಿ ಬದಲಾಯಿಸಿಬಿಡುತ್ತವೆ. ನೀನು ಕೌರವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಅಂದುಕೊಂಡಿದ್ದರಿಂದ ನಿನ್ನ ಸೇಡು ತೀರಿತು. ಇದರಿಂದಾಗಿ ದುಶ್ಯಾಸನ, ಧುರ್ಯೋಧನರಷ್ಟೇ ಅಲ್ಲದೇ ಇಡೀ ಕೌರವ ವಂಶವೇ ನಿರ್ವಂಶವಾಯಿತು. ಇದೆಲ್ಲವೂ ನಿನ್ನ ಇಚ್ಛೆಯಂತೆಯೇ ನಡೆದಿದ್ದು, ನೀನು ಸಂತೋಷ ಪಡುವ ವಿಚಾರ. ನಿನಗೆ ಸಂತಸವಾಗುತ್ತಿಲ್ಲವೇ ಎಂದು ದ್ರೌಪದಿಯನ್ನು ಕೃಷ್ಣ ಪ್ರಶ್ನಿಸುತ್ತಾನೆ.

ದ್ರೌಪದಿಯು ಕೃಷ್ಣಾ, ನೀನು ನನ್ನ ಕಣ್ಣೀರು ಒರೆಸಲು ಬಂದಿರುವೆಯಾ ಅಥವಾ ನನ್ನ ಬೇಸರದ ಗಾಯಗಳ ಮೇಲೆ ಉಪ್ಪು ಸುರಿಯಲು ಬಂದಿರುವೆಯಾ ಎನ್ನುತ್ತಾಳೆ. ಆಗ ಕೃಷ್ಣನು ಅವೆರಡೂ ಅಲ್ಲ ದ್ರೌಪದಿ, ನಾನು ವಾಸ್ತವ ವಿಚಾರವನ್ನು ನಿನಗೆ ಅರ್ಥ ಮಾಡಿಕೊಡಲು ಬಂದಿದ್ದೇನೆ. ನಮ್ಮ ಕರ್ಮದ ಫಲಗಳ ಪರಿಣಾಮಗಳು ಎಂದಿಗೂ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆ ಫಲಗಳು ನಮ್ಮನ್ನು ಸಮೀಪಿಸಿದಾಗ ನಮ್ಮ ಕೈಯಲ್ಲೇನೂ ಉಳಿದಿರುವುದಿಲ್ಲ ಎನ್ನುತ್ತಾನೆ. ಆಗ ದ್ರೌಪದಿಯು, ಅಂದರೆ ಇವೆಲ್ಲದಕ್ಕೂ ನಾನೇ ನೇರ ಕಾರಣಳೇ? ಎಂದು ಕೃಷ್ಣನನ್ನು ಕೇಳುತ್ತಾಳೆ. ಆಗ ಕೃಷ್ಣನು ಇಲ್ಲ ದ್ರೌಪದಿ, ಈ ವಿಚಾರದಲ್ಲಿ ನಿನ್ನನ್ನು ನೀನು ಅಷ್ಟೊಂದು ಮಹತ್ವಪೂರ್ಣಳು ಎಂದು ತಿಳಿದುಕೊಳ್ಳಬೇಡ. ಆದರೆ ನೀನು ನಿನ್ನ ಕರ್ಮಗಳಲ್ಲಿ (ನಿರ್ಧಾರಗಳಲ್ಲಿ) ಸ್ವಲ್ಪ ಮಟ್ಟಿನ ದೂರದೃಷ್ಟಿಯನ್ನು ಇಟ್ಟಿದ್ದಿದ್ದರೆ ಇಂದು ನೀನು ಹೀಗೆ ದುಃಖಿಸಬೇಕಾದ ಪರಿಸ್ಥಿತಿಯು ನಿನಗೆ ಬರುತ್ತಿರಲಿಲ್ಲ ಎನ್ನುತ್ತಾನೆ.
ದ್ರೌಪದಿಯು ಪ್ರಶ್ನಾರ್ಥಕವಾಗಿ ಕೃಷ್ಣನನ್ನು ನೋಡಿದಾಗ ಕೃಷ್ಣನು ಅಂದು ಸ್ವಯಂವರದಲ್ಲಿ ಕರ್ಣನಿಗೆ ನೀನು ಅವಮಾನ ಮಾಡದೆ, ಆತನಿಗೂ ಸ್ವಯಂವರದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರೆ ಅದರ ಪರಿಣಾಮ ಬೇರೆಯೇ ಆಗಿರುತ್ತಿತ್ತು. ನಂತರ ಕುಂತಿಮಾತೆಯು ನಿನಗೆ ಐವರೂ ಪಾಂಡವರನ್ನು ಮದುವೆಯಾಗಲು ಆಹ್ವಾನ ನೀಡಿದಾಗ ನೀನು ತಿರಸ್ಕರಿಸಿದ್ದರೆ ಅದರ ಪರಿಣಾಮವೂ ಇಂದು ಬೇರೆಯೇ ಇರುತ್ತಿತ್ತು. ನಂತರ ನಿನ್ನ ಅರಮನೆಯಲ್ಲಿ ದುರ್ಯೋಧನನಿಗೆ ಅವಮಾನ ಮಾಡದೇ ಇರುತ್ತಿದ್ದರೆ, ನಿನ್ನ ವಸ್ತ್ರಾಪಹರಣವೂ ಆಗುತ್ತಿರಲಿಲ್ಲ. ಆಗಲೂ ಪರಿಸ್ಥಿತಿಯೆಲ್ಲವೂ ಬೇರೆಯೇ ಆಗಿರುತ್ತಿತ್ತು ಎನ್ನುತ್ತಾನೆ. ಇದನ್ನು ಕೇಳಿದ ದ್ರೌಪದಿಯು ಮೌನಿಯಾಗುತ್ತಾಳೆ.
ನಮ್ಮ ಪ್ರತಿಯೊಂದು ಶಬ್ದಗಳೂ ಸಹ ನಮ್ಮ ಕರ್ಮಗಳಾಗಿರುತ್ತವೆ ದ್ರೌಪದಿ. ನಾವು ಶಬ್ದಗಳನ್ನು ಆಡುವ ಮೊದಲು ಅವುಗಳನ್ನು ತೂಗಿ ಅಳೆದು ಮಾತನಾಡಬೇಕಾಗುತ್ತದೆ. ಇಲ್ಲವಾದರೆ ಅದರ ದುಷ್ಪರಿಣಾಮವನ್ನು ನಾವಷ್ಟೇ ಅಲ್ಲ, ನಮ್ಮ ಸುತ್ತಮುತ್ತಲಿನ ವಾತಾವರಣವೂ ಅನುಭವಿಸಬೇಕಾಗುತ್ತದೆ. ಎಲ್ಲ ಜೀವರಾಶಿಗಳ ಪೈಕಿ ಮನುಷ್ಯನೆಂಬ ಏಕಮಾತ್ರ ಜೀವಿಯ ವಿಷವು ಆತನ ಹಲ್ಲಿನಲ್ಲಿರದೇ ಆತ ಆಡುವ ಶಬ್ದಗಳಲ್ಲಿರುತ್ತದೆ. ಅದಕ್ಕಾಗಿಯೇ ನಾವು ಆಡುವ ಶಬ್ದಗಳನ್ನು ಇತರರ ಮನಸ್ಸಿಗೆ ನಾಟದಂತೆ, ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಆಡಬೇಕು. ಅಂತಹ ಶಬ್ದಗಳನ್ನಷ್ಟೇ ಇಟ್ಟುಕೊಂಡು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಆಗ ಜೀವನ ಸಾರ್ಥಕತೆ ಪಡೆಯುತ್ತದೆ.
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

