ಆಲಮಟ್ಟಿ:ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಿಗೆ ಏಫ್ರೀಲ್ 30ರ ವರೆಗೆ ಎಲ್ಲಾ ಕಾಲುವೆಗಳಿಗೆ ನೀರು ಹರಿಸುವುದನ್ನು ಮುಂದುವರೆಸಿ ಬೇಸಿಗೆ ಸಂದರ್ಭದಲ್ಲಿ ಬೆಳೆಯುವ ಬೆಳೆಗಳಿಗೆ ಅನುವು ಮಾಡಿ ಕೊಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ಈ ಮೊದಲು ಮಾರ್ಚ 30ರ ವರೆಗೆ ಮಾತ್ರ ಕಾಲುವೆಗೆ ನೀರು ಹರಿಸುವುದಾಗಿ ನವೆಂಬರ 23 ರಂದು ಬೆಂಗಳೂರಿನಲ್ಲಿ ನಡೆಸಿದ್ದ ಐ.ಸಿ.ಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಏ. 30ರ ವರೆಗೂ ಎಲ್ಲ ಕಾಲುವೆಗಳಿಗೂ ನೀರು ಹರಿಸಲು ಸಂಘಟನೆ ವತಿಯಿಂದ ಹಲವು ಭಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗಿತ್ತು. ನಮ್ಮ ಹೋರಾಟಕ್ಕೆ ಸ್ಪಂದಿಸಿದ ನೀರಾವರಿ ಸಲಹಾ ಸಮೀತಿ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಸಿ.ಸಿ. ಪಾಟೀಲ ಮತ್ತೆ ಏ. 10ರ ವರೆಗೆ ಮಾತ್ರ ನೀರು ಹರಿಸುವದನ್ನು ಮುಂದು ವರೆಸುವದಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಒಂದು ವೇಳೆ ಏ.10 ಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ಬೇಸಿಗೆ ಬೆಳೆಗಳು ರೈತರ ಕೈಗೆ ಸಿಗುವದಿಲ್ಲ. ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರಿಂದ ಮುಂದೆ 20 ದಿನಗಳಲ್ಲಿ ಎಲ್ಲ ಬೆಳೆಗಳು ಹಾಳಾಗಿ ಹೋಗುತ್ತವೆ. ಜಲಾಶಯದಲ್ಲಿ ಇನ್ನು 34 ಟಿ.ಎಂ.ಸಿ ನೀರು ಸಂಗ್ರಹವಿದೆ. ಆದ್ದರಿಂದ ಏ.30ರ ವರೆಗೆ ನೀರು ಹರಿಸಬೇಕು. ವಿಧಾನ ಸಭೆಯ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಜನ ಪ್ರತಿನಿಧಿಗಳು ಅಧಿಕಾರ ಕಳೆದು ಕೊಂಡಿದ್ದಾರೆ. ನೀರಾವರಿ ಸಲಹಾ ಸಮೀತಿಯು ಕೂಡಾ ರದ್ದಾಗುತ್ತದೆ. ಈ ಸದ್ಯ ನೀರು ಹರಿಸಲು ಆದೇಶ ನೀಡುವ ಅಧಿಕಾರ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಇದೆ. ಆದ್ದರಿಂದ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಕುರಿತು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment