ಕಲಕೇರಿ: ಗ್ರಾಮದ ಜೆ ಜೆ ಶಿಕ್ಷಣ ಸಂಸ್ಥೆ ಯ ಆವರಣದಲ್ಲಿ ಕಳೆದ ೧೧ ದಿನಗಳಿಂದ ಹಮ್ಮಿಕೊಂಡ ಆದಿಗುರು ಪಂಚಾಚಾರ್ಯರ ಯುಗಮಾನೋತ್ಸವ, ವೀರಶೈವ ಶಿವಾಚಾರ್ಯರ ಸಮ್ಮೇಳನ, ಸಿದ್ದಾಂತ ಶಿಖಾಮಣಿ ಪ್ರವಚನದ ಸಮಾರೋಪ ಮಂಗಳವಾರ ನಡೆಯಿತು.
ಕಾಶಿ ಪೀಠದ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕಾರ್ಯಕ್ರಮದ ಸನ್ನಿದಾನವನ್ನು ವಹಿಸಿ, ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಪಂಚಪೀಠಗಳು ವೀರಶೈವ ಸಮಗ್ರ ಅಭಿವ್ರದ್ಧಿಯ ವಿಚಾರಧಾರೆಗಳೊಂದಿಗೆ ಸ್ವಸ್ಥ ಸಮಾಜವನ್ನು ನಿರ್ಮಿಸಿ ಭಕ್ತರನ್ನು ಉದ್ಧರಿಸುವ ಕಾರ್ಯವನ್ನು ಮಾಡುತ್ತಿವೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಕ್ಕೂ ಹೆಚ್ಚು ಸಾಧಕರಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷ ಮಹಾರಾಷ್ಟ್ರದ ದಾರೇಶ್ವರ ಮಠದ ನೀಲಕಂಠ ಶಿವಾಚಾರ್ಯರು, ಜಾಲಹಳ್ಳಿಯ ಜಗಧಾರಾಧ್ಯ ಜಯಶಾಂತಲಿಂಗೇಶ್ವರ ಶ್ರೀಗಳು, ಪಂಡಿತ್ ರಾಜಗುರು ಗುರುಸ್ವಾಮಿ ಕಲಕೇರಿ, ಹಿರೂರಿನ ಜಯಸಿದ್ದೇಶ್ವರ ಶಿವಾಚಾರ್ಯರು, ಮೇಲಣಗವಿಮಠದ ಡಾ.ಮಲಯಶಾಂತಮುನಿ ಶ್ರೀಗಳು,ಬೆಂಗಳೂರಿನ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶ್ರೀಗಳು ಸೇರಿದಂತೆ ಇತರರು ಮಾತನಾಡಿದರು.
ಇದೇ ವೇಳೆ ಮುಂದಿನ ವರ್ಷದ ಯುಗಮಾನೋತ್ಸವ ಹಾಗೂ ಸಮ್ಮೇಳನವನ್ನು ಸೋಲಾಪುರದ ಹೊಟಗಿಮಠದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ನಾಡಿನ ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು. ಶಿವಪ್ರಕಾಶ ಹಿರೇಮಠ ನಿರೂಪಿಸಿದರು, ಶಿವಾನಂದ ಜಾಲಿಹಾಳ ಪ್ರಾರ್ಥಿಸಿದರು, ಬಿ ಡಿ ಗುಮಶೆಟ್ಟಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment