Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ

’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ

’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಹೂವಿಗೆ ನೀರಿದ್ದಂತೆ ಸುಂದರ ಬದುಕಿಗೆ ಪ್ರಯತ್ನ”
ವಿಶೇಷ ಲೇಖನ

ಹೂವಿಗೆ ನೀರಿದ್ದಂತೆ ಸುಂದರ ಬದುಕಿಗೆ ಪ್ರಯತ್ನ”

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ. ಜೆ. ಅಬ್ಬಿಗೇರಿ,ಇಂಗ್ಲೀಷ ಉಪನ್ಯಾಸಕರು, ಬೆಳಗಾವಿಮೊ:೯೪೪೯೨೩೪೧೪೨

ದೊಡ್ಡ ಕಂಪನಿಯ ವ್ಯವಸ್ಥಾಪಕನೊಬ್ಬ ನಿವೃತ್ತನಾದ. ಆತನಿಗೆ ವಿದಾಯ ಕೂಟವನ್ನು ಏರ್ಪಡಿಸಲಾಗಿತ್ತು. ಆತ ಹೊಸ ವ್ಯವಸ್ಥಾಪಕನಿಗೆ ಎರಡು ಲಕೋಟೆಗಳನ್ನು ಕೊಟ್ಟ. ಕಂಪನಿಯಲ್ಲಿ ಪರಿಹರಿಸಲಾಗದಂಥ ಬಿಕ್ಕಟ್ಟು ತಲೆದೋರಿದಾಗ ಮೊದಲನೇ ಲಕೋಟೆ ತೆರೆ. ಮುಂದಿನ ಬಿಕ್ಕಟ್ಟು ಬಂದಾಗ ಎರಡನೇ ಲಕೋಟೆ ಒಡೆದು ನೋಡು ಎಂದು ಹೇಳಿದ. ಕೆಲ ಕಾಲದ ನಂತರ ಬಿಕ್ಕಟ್ಟು ಉಂಟಾದಾಗ ಮೊದಲನೇ ಲಕೋಟೆ ತೆರೆದ. ‘ಈ ಬಿಕ್ಕಟ್ಟಿಗಾಗಿ ಮೊದಲಿಗಿದ್ದ ವ್ಯವಸ್ಥಾಪಕನನ್ನು ದೂರು.’ ಎಂದು ಆ ಚೀಟಿಯಲ್ಲಿ ಬರೆದಿತ್ತು. ಕೆಲ ವರ್ಷಗಳ ನಂತರ ಮತ್ತೊಂದು ಬಿಕ್ಕಟ್ಟು ಎದುರಾಯಿತು. ಆಗ ಎರಡನೇ ಲಕೋಟೆ ತೆರೆದ. ‘ನಿನ್ನ ಮುಂದಿನ ವ್ಯವಸ್ಥಾಪಕನಿಗೆ ಎರಡು ಲಕೋಟೆ ಸಿದ್ಧಪಡಿಸು.’ ಎಂದು ಬರೆದಿತ್ತು. ಪ್ರಯತ್ನ ಪಡದವರು ಮತ್ತೊಬ್ಬರ ಮೇಲೆ ದೋಷಾರೋಪಣೆ ಮಾಡುವುದನ್ನೇ ಕಾಯಕವಾಗಿಸಿಕೊಂಡಿರುತ್ತಾರೆ ಎನ್ನುವ ದಿವ್ಯ ಸಂದೇಶವನ್ನು ಈ ದೃಷ್ಟಾಂತ ಸಾರುತ್ತದೆ.
ಉತ್ಸಾಹದಿ ಒಂದು ಅಡಿ ಇಡಿ
ಬದುಕಿನ ಹಕ್ಕಿಗೆ ಕನಸಿನ ರೆಕ್ಕೆಗಳನ್ನು ಕಟ್ಟಿ ಮುಗಿಲಿನಲ್ಲಿ ಹಾರಲು ಬಿಡುವುದು ಚೆಂದ. ಆದರೆ ಹಾಗೆ ಹಾರುವ ಮುಗಿಲ ಹಕ್ಕಿ ಕಂಡು ಮನಸ್ಸು ಗುಸು ಗುಸು ಪಿಸು ಪಿಸು ಎಂದು ಶುರು ಹಚ್ಚಿಕೊಳ್ಳುತ್ತದೆ. ನಿನ್ನಿಂದಾಗದು ಎಂದು ಮುಂದಿಟ್ಟ ಹೆಜ್ಜೆಯನು ಹಿಂದಿಡುವಂತೆ ಮಾಡುವಲ್ಲಿ ಗೆದ್ದು ಬಿಡುತ್ತದೆ. ಪಕ್ಕದವರು ಏರಿದ ಎತ್ತರ ಕಂಡು, ನಾನು ಅಂದು ದುರ್ಬಲ ಮನಸ್ಸಿನ ಮಾತು ಕೇಳಿರದಿದ್ದರೆ ಇಂದು ಅವರಂತೆ ಬಾನೆತ್ತರದಲ್ಲಿ ವಿಹರಿಸುತ್ತಿದ್ದೆ. ಎಂದು ಗೋಳಾಡುತ್ತೇವೆ. ಅಲ್ಲ, ಒಮ್ಮೆ ಪ್ರಯತ್ನ ಪಟ್ಟು ನೋಡುವುದರಲ್ಲಿ ತಪ್ಪೇನಿದೆ? ಎಂದು ಉತ್ಸಾಹದಿ ಒಂದು ಅಡಿ ಮುಂದಿಟ್ಟರೆ ಅದರ ಫಲವೇ ಬೇರೆ ಆಗಿರುತ್ತದೆ. ಪ್ರಯತ್ನ ಮಾಡದೇ ಚಂಚಲ ಮನಸ್ಸನ್ನು ಅನುಸರಿಸಿದರೆ, ಮುಕ್ತ ಜೀವನ ಬಯಸಿದರೆ, ಬದುಕು ಮೂರಾಬಟ್ಟಿ ಆಗುವುದು ಖಂಡಿತ.
ಕಣ್ಣಂದಾಜು ಬಿಡಿ
ಪ್ರಯತ್ನದ ಹಾದಿಯಲ್ಲಿರುವವರ ಬದುಕಿನ ಹಣತೆ ಉರಿಯುವುದನ್ನು ನೋಡುವ ಸೊಬಗೇ ವಿಶೇಷ. ಕಂಡದ್ದನ್ನು ಬಯಸುತ್ತದೆ ಕಣ್ಣು. ಸೋಮಾರಿ ಮನಸ್ಸು ದೂರದಿಂದಲೇ ಅಳತೆ ಹಾಕಿ ಅದು ನಿನ್ನ ಕೈಯಿಂದಾಗದೆಂದು ಬೈದು ಕುಳ್ಳರಿಸುತ್ತದೆ. ನಮ್ಮ ಬದುಕಿನ ಬಹುತೇಕ ನಿರ್ಧಾರಗಳು ಹೀಗೇ ಕಣ್ಣಂದಾಜಿನಲ್ಲೇ ಆಗಿ ಹೋಗುತ್ತವೆ. ಎಲ್ಲವನ್ನೂ ಬಲ್ಲವರಂತೆ ಅಳೆಯುವ ಹುಂಬ ಮನಸ್ಥಿತಿ ನಮ್ಮದು. ಮೂಲಭೂತವಾಗಿ ದೃಢ ಚಿತ್ತ, ಹದವಾದ ಪ್ರಯತ್ನ ಉನ್ನತ ಮಟ್ಟದ ಅಭಿಲಾಷೆ ಬೇಕು. ಕರ್ಮಗಳಿಗೆ ದೇವರು ಪ್ರಯತ್ನದೆಡೆಗೆ ಬೆರಳು ತೋರಿದ್ದಾನೆ. ಬುದ್ಧ ಬಸವ ಕ್ರಿಸ್ತರಂಥ ದಾರಿ ತೋರುವ ಗುರುಗಳನ್ನು ಮುಂದಿಟ್ಟಿದ್ದಾನೆ. ಪ್ರಯತ್ನ ಮಾರ್ಗವೊಂದೇ ಫಲದ ಆಸ್ತಿ ಎಂಬುದು ನಿರ್ವಿವಾದ. ಪ್ರಯತ್ನಿಸಿ ಸೋಲುವುದು ತಪ್ಪಲ್ಲ. ಪ್ರಯತ್ನಿಸದೇ ಇರುವುದು ತಪ್ಪು. ಹೆಬ್ಬಯಕೆಗಳ ಹಾದಿಯಲ್ಲಿ ಹೆಜ್ಜೆ ಇಡುವ ಮುನ್ನ ಮನಸ್ಸನ್ನು ತೆರೆದಿಡಿ. ನಾನೇನುಂಬುದನ್ನು ಅರ್ಥ ಮಾಡಿಕೊಳ್ಳಿ. ಆಗ ನಾವು ಊಹಿಸಿರದ ರೀತಿಯಲ್ಲಿ ವೇಗದ ಗತಿಯಲ್ಲಿ ಮನಸ್ಸು ಸಮರ್ಥವಾಗಿ ನಿರಂತರವಾಗಿ ಪ್ರಯತ್ನದಲ್ಲಿ ತೊಡಗಿಕೊಳ್ಳುತ್ತದೆ.
ಬೇಯಲೇಬೇಕು ಪ್ರಯತ್ನದ ಕುಲುಮೆಯಲ್ಲಿ
ಪ್ರಯತ್ನವೆಂಬ ಕುಲುಮೆಯಲ್ಲಿ ಬೇಯದೇ ಸಮಾಧಾನ ಖುಷಿ ನೆಮ್ಮದಿ ಪಡೆಯುವ ದಾವಂತ ನಮ್ಮದು. ಹೇಗೋ ಮಾಡಿ ನೋವು ಸಾಗು ಹಾಕಿದರೆ ಸಾಕು ಎನ್ನುವ ಮನೋಭಾವ ಕಷ್ಟದ ಗಡಿ ದಾಟುವ ದಾವಂತದಲ್ಲಿ, ಜೀವನದ ಇನ್ನೊಂದು ಬದಿಯಿಂದ ದುಃಖ ತುಂಬಿದ ದೊಡ್ಡದಾದ ಬುಟ್ಟಿಯನ್ನು ಹೊತ್ತು ನಮ್ಮತ್ತಲೇ ಬರುವುದು ತಿಳಿಯುವುದೇ ಇಲ್ಲ. ಪ್ರೀತಿಯಿಂದ ಪ್ರಯತ್ನಿಸುವವರ ಮೊಗದಲ್ಲಿ ಪ್ರಸನ್ನ ಭಾವ. ಅಲ್ಲಿ ಒಂದಿನಿತೂ ಆಯಾಸದ ಸೋಂಕಿಲ್ಲ. ಅಂಥವರ ಬಾಳಲ್ಲಿ ಗೆಲುವಿನ ಸಾಲಂಕೃತ ವೈಭವ. ನೋಡುಗರಿಗೆ ಬೆರಗು ಮೂಡಿಸುತ್ತದೆ. ಪ್ರಯತ್ನವೆಂಬ ಮೆಟ್ಟಿಲು ಬಳಸಿ ತಮಗೆ ಬೇಕಾದ ಹಣ್ಣುಗಳನ್ನೆಲ್ಲ ಸರಸರನೆ ಹೆಕ್ಕಿ ಬುಟ್ಟಿಯಲ್ಲಿ ತುಂಬಿಕೊಳ್ಳುವುದು ನಮ್ಮ ಕಣ್ಣಿಗೆ ಸೂರ್ಯನ ಕಿರಣದಂತೆ ಹೊಳೆಯುತ್ತದೆ. ಅದು ಅವರ ಅದೃಷ್ಟವೆನ್ನುತ್ತೇವೆ. ನಮ್ಮ ದುರಾದೃಷ್ಟಕ್ಕೆ ಕೊರಗುತ್ತೇವೆ. ಪ್ರಯತ್ನದ ಫಲಕ್ಕೆ ಪ್ರಯತ್ನಿಸಿದವರ ಕಂಗಳಲ್ಲಿ ಕೃತಜ್ಞತೆಯ ಮಹಾಪೂರ ಹರಿಯುತ್ತದೆ. ಫಲಗಳು ಪ್ರಯತ್ನಿಸಿದವನ ಭುಜವನ್ನು ಹಿತವಾಗಿ ಅಮುಕಿ ನಿನ್ನೊಂದಿಗೆ ಸದಾ ಇರುವೆ ಹೆದರದಿರು ಎಂದು ಮತ್ತಷ್ಟು ಉಮೇದು ತುಂಬುವವು..
ಸಹಾಯ ಹಸ್ತ ಹಿಡಿ


ಉಸಿರು ಬಿಗಿ ಹಿಡಿದು ಪ್ರತಿ ಹೆಜ್ಜೆಯನ್ನೂ ಪ್ರಯಾಸಮಯವಾಗಿ ಇಡುವುದಕ್ಕಿಂತ ಪ್ರಯತ್ನಿಸುವುದು ಲೇಸಲ್ಲವೇ? ಶುದ್ಧ ಮನಸ್ಸಿನ ಪ್ರಾರ್ಥನೆಗೆ ದೇವರೇ ಒಲಿಯುವನಂತೆ. ಹಾಗಿದ್ದಾಗ ಪ್ರಯತ್ನಕ್ಕೆ ಫಲ ದೊರೆಯುವುದಿಲ್ಲವೇ? ದಟ್ಟ ಕಾಡಿನ ಗೂಡಿಗೆ ಬೆಳಕು ತಲುಪುವುದೇ ತಡ. ಹಾಗೆಯೇ ಸಂತೃಪ್ತ ಜೀವನ ಪಡೆಯಲೇಬೇಕೆನ್ನುವ ಆಂತರ್ಯದ ತುಡಿತ ಇಲ್ಲದಲ್ಲಿ ಪ್ರಯತ್ನವೆಂಬ ದೈವದ ಬೆಳಕು ಬೀಳುವುದೂ ತಡ. ಬದುಕಿನ ಹಾದಿ ಹೆಚ್ಚು ಕಡಿಮೆ ಸವೆದು ಸ್ತಬ್ದವಾಗುವ ಹೊತ್ತಿನಲ್ಲಿ ಪ್ರಯತ್ನ -ಫಲದ ಜ್ಞಾನೋದಯವಾಗುವುದು. ಅನತಿ ದೂರದಲ್ಲಿ ಯಮ ನಿಂತು ಮುಗಳ್ನಗುತ್ತಿರುವಾಗ ಪ್ರಯತ್ನಕ್ಕೆ ಕೈ ಹಾಕಿ ಉಪಯೋಗವಿಲ್ಲ. ಪ್ರಯತ್ನಿಸಲು ಶಕ್ತಿಯೂ ಇಲ್ಲವೆಂದು ಕೈ ಚೆಲ್ಲುವ ಪ್ರಸಂಗ ಎದುರು ನಿಲ್ಲುತ್ತದೆ. ಬದುಕಿನ ಬದಿಯಲ್ಲಿ ನಿಂತ ಪ್ರಯತ್ನವೆಂಬ ಸ್ನೇಹಿತನ ಸಹಾಯ ಹಸ್ತ ಹಿಡಿದು ನಡೆದರೆ ನೋಡು ಬೋಡುತ್ತಿದ್ದಂತೆಯೇ ಜೀವನ ಹೊಸ ವಸಂತ ಮಾಸದ ತಿರುವಿನಲ್ಲಿ ನಗೆ ಚೆಲ್ಲುತ್ತದೆ.
ಸಾಧ್ಯವಿದ್ದಷ್ಟು ಮಾಡಿ
ಇಚ್ಛಾಶಕ್ತಿ ಕತೃತ್ವ ಶಕ್ತಿ ಕ್ರಿಯಾಶೀಲತೆಗಳು ಇದ್ದರೆ ಸಾಲದು ಇವುಗಳೊಂದಿಗೆ ಪರಿಸರ ಪರಿಸ್ಥಿತಿಗಳ ಕುರಿತು ಅವಲೋಕನ ಬೇಕು. ಪ್ರಯತ್ನದ ಮಾರ್ಗದಲ್ಲಿ ಎಡರು ತೊಡರುಗಳಂತೆ ನಿಲ್ಲುವ ಸಮಸ್ಯೆಗಳ ಕುರಿತು ಆಳವಾದ ಚಿಂತನ ಮಂಥನವೂ ಬೇಕು. ಪ್ರಯತ್ನದ ಮೂಲಕ ಹಾದು ಹೋಗುವ ಸಂತೃಪ್ತ ಬದುಕಿನ ಬಸ್ಸಿನ ಮಾಹಿತಿ ಸೋಲೆಂಬ ಗುರು ಚೆನ್ನಾಗಿ ನೀಡಬಲ್ಲ. ಸೋಲು ಅಡೆತಡೆಯಲ್ಲ. ಅದೊಂದು ಮೈಲಿಗಲ್ಲು. ಆತ್ಮ ಬಲ ನೀಡುವ ಸಾಧನ. ಯಾವುದೇ ಸಾಧನೆಗೂ ಆತ್ಮ ಬಲ ಮುಖ್ಯ. ಅಂತಃಶಕ್ತಿಯನ್ನು ಜಾಗೃತಗೊಳಿಸಬಲ್ಲ ಶಕ್ತಿ ಸೋಲಿಗಿದೆ. ಒಳಗಿನ ಶಕ್ತಿಯನ್ನು ಜಾಗೃತಗೊಳಿಸಿ ಪ್ರಯತ್ನದ ಹಾದಿಯಲ್ಲಿ ಮುನ್ನಡೆಯಬೇಕು. ‘ನಿನಗೆ ಏನು ಎಷ್ಟು ಸಾಧ್ಯವಿದೆಯೋ ಅಷ್ಟನ್ನು ಮಾಡಿ ಬಿಡು. ಫಲಾಫಲಗಳ ಬಗ್ಗೆ ಚಿಂತೆ ಬಿಡು.’ ಎಂದು ಕೃಷ್ಣ ಅರ್ಜುನನಿಗೆ ಭಗವದ್ಗೀತೆಯಲ್ಲಿ ಹೇಳಿದ್ದಾನೆ.
ಯುಕ್ತ ರೀತಿಯಲ್ಲಿ ಉತ್ತರಿಸಿ
ನಿತ್ಯ ಜೀವನದ ಏಕತಾನತೆಯಲ್ಲಿ ಬೇಸತ್ತು ಹೋದ ಮನಸ್ಸಿಗೆ ವಿನೂತನ ಪ್ರಯತ್ನ ಒಂದು ತರದ ಠೇವಣಿ ಇದ್ದ ಹಾಗೆ. ಮುನ್ನಡೆಸುವ ಇಂಧನ ಇದ್ದ ಹಾಗೆ. ಸಂಬಂಧಗಳ ಸುತ್ತ ಹೆಣೆದಿರುವ ಬದುಕಿನಲ್ಲಿ ಜಗಳ ರಂಪ ರಗಳೆಗಳು ಮನಸ್ತಾಪಗಳು ಸಾಮಾನ್ಯ. ಹಾಗಂತ ಅವುಗಳ ನೆಪದಲ್ಲಿ ಅದೃಷ್ಟದ ಕೈಯಲ್ಲಿ ಜೀವನ ಕೊಟ್ಟು ಪ್ರಯತ್ನ ಮಾಡದಿರುವುದು ತರವಲ್ಲ. ಪ್ರಯತ್ನದ ದಾರಿಯಲ್ಲಿ ಎಷ್ಟೇ ಟೀಕೆಗಳು ಕೇಳಿ ಬಂದರೂ ಕಷ್ಟಗಳು ಎದುರಾದರೂ ತಾಳ್ಮೆ ಕಳೆದುಕೊಳ್ಳದೆ ನಿಭಾಯಿಸುವ ಸಹಿಷ್ಣುತೆಯನ್ನು ಪಡೆಯಬೇಕು. ಎದುರಾಳಿಗಳಂತೆ ಬಲವಾಗಿ ಪ್ರಹಾರ ಮಾಡುವವರಿಗೆ ಮೃದುವಾಗಿ ಮಧುರವಾಗಿ ಯುಕ್ತ ರೀತಿಯಲ್ಲಿ ಉತ್ತರಿಸುವ ಯೋಗ್ಯತೆ ಬೆಳೆಸಿಕೊಳ್ಳಬೇಕು.
ತೋಟಗಾರನು ಗಿಡದ ರೆಂಬೆಗಳನ್ನು ತರಿಯುವಿಕೆಯಿಂದ ಹೇಗೆ ರೆಂಬೆಗಳು ದೃಢವಾಗಿ ಮಾಡುವನೋ ಹಾಗೇ ನಾವೂ ಸಹ ಅನವಶ್ಯಕ ಚಟುವಟಿಕೆಗಳಲ್ಲಿ ಸಮಯ ವ್ಯರ್ಥಗೊಳಿಸುವುದನ್ನು ನಿಲ್ಲಿಸಿ ಉತ್ತಮ ಕಾರ್ಯಗಳೆಡೆಗೆ ಗಮನ ಹರಿಸಬೇಕು. ಬದುಕನ್ನು ಸರಳವಾಗಿಸಿಕೊಳ್ಳುವುದು ಸುಂದರವಾಗಿಸಿಕೊಳ್ಳುವುದು ಒಂದು ಕಲೆ. ಅದೊಂದು ಜಾಣತನ. ಅದು ಪೂರ್ತಿಯಾಗಿ ಶ್ರದ್ಧೆಯಿಂದ ಕೂಡಿದ ಪ್ರಯತ್ನದ ಮೇಲೆ ನಿಂತಿದೆ. ಈ ಜಗತ್ತು ಒಂದು ನಾಟಕ ರಂಗ ಎಂದಿದ್ದಾನೆ ಷೇಕ್ಸ್ಪಿಯರ್ ನಾವೆಲ್ಲ ರಂಗಭೂಮಿಯ ಮೇಲೆ ಪಾತ್ರದಾರಿಗಳು. ರಂಗ ಮಂಚದ ಮೇಲಿದ್ದ ಎಲ್ಲ ಪಾತ್ರದಾರಿಗಳನ್ನು ಜಗತ್ತು ನೆನೆಯುವುದಿಲ್ಲ. ಕಲಾ ಚಾತುರ‍್ಯದಿಂದ ಬೆವರಿಳಿಸಿ ಶ್ರಮಿಸಿದ ಕಲಾವಿದನನ್ನು ಪ್ರೇಕ್ಷಕರು ಎಂದೂ ಮರೆಯುವುದಿಲ್ಲ. ಪಾತ್ರ ಚಿಕ್ಕದಿರಬಹುದು ದೊಡ್ಡದಿರಬಹುದು ಅದು ಮುಖ್ಯವಲ್ಲ. ಆ ಪಾತ್ರವನ್ನು ಅಭಿನಯಿಸಿದ ಬಗೆ ಜನ ಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡುತ್ತದೆ.ಹೂವಿಗೆ ನೀರಿನಂತೆ ಸುಂದರ ಬದುಕಿಗೆ ಪ್ರಯತ್ನ. ‘ತನ್ನ ಕೆಲಸದಲ್ಲಿ ಸಾಮಾನ್ಯ ವ್ಯಕ್ತಿ ಶಕ್ತಿ ಸಾಮರ್ಥ್ಯಗಳ ಶೇ ೨೫ ರಷ್ಟನ್ನು ಮಾತ್ರ ಉಪಯೋಗಿಸುತ್ತಾನೆ. ತಮ್ಮ ಸಾಮರ್ಥ್ಯದ ಶೇ ೫೦ ರಷ್ಟನ್ನು ಅಥವಾ ಅದಕ್ಕೂ ಹೆಚ್ಚಿನದನ್ನು ಹಾಕಿದವನಿಗೆ ಇಡೀ ವಿಶ್ವವೇ ಸಲಾಮು ಹೊಡೆಯುತ್ತದೆ. ತಮ್ಮ ಇಡೀ ಸಾಮರ್ಥ್ಯವನ್ನು ಹಾಕುವ ಬೆರಳೆಣಿಕೆಯಷ್ಟು ಆತ್ಮಗಳನ್ನು ಕಂಡು ವಿಶ್ವವು ನಿಬ್ಬೆರಗಾಗಿ ನಿಲ್ಲುವುದು.’ಎಂದಿದ್ದಾನೆ ಆಂಡ್ರ್ಯೂ ಕಾರ್ನೇಗಿ. ಆತನ ಮಾತಿನಂತೆ ಶಕ್ತಿ ಸಾಮರ್ಥ್ಯಗಳನ್ನು ಪ್ರಯತ್ನದಲ್ಲಿ ಬಳಸಿದರೆ ಸುಂದರ ಬದುಕು ಘಮ ಘಮಿಸುವುದು ಖಂಡಿತ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ

’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ

’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ
    In ವಿಶೇಷ ಲೇಖನ
  • ’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ’ಉದಯರಶ್ಮಿ’ ಬಳಗದಿಂದ ವಾರ್ತಾಧಿಕಾರಿ ದೊಡಮನಿ ಅವರಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ
    In (ರಾಜ್ಯ ) ಜಿಲ್ಲೆ
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.