“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ
ಎಲ್ಲಿ ನೋಡಿದರಲ್ಲಿ ಬಿಸಿಲ ಧಗೆಯಿಂದ ಒಣಗಿರುವ ಗಿಡ ಮರಗಳು, ನೆರಳು ಹುಡುಕಿ ಮಲಗುವ ಜಾನುವಾರುಗಳು, ಪಶು ಪಕ್ಷಿಗಳು.. ಇನ್ನು ಮನುಷ್ಯರದಂತೂ ಕೇಳಬೇಡಿ ಆಗೊಮ್ಮೆ ಈಗೊಮ್ಮೆ ಹುಶ್ ಎಂದು, ಅಬ್ಬ ಎಂದು ನಿಡುಸುಯ್ಯುವ ಮನುಷ್ಯರು. ದುಡ್ಡಿದ್ದವರು ಏರ್ ಕಂಡೀಷನರ್ ಗಳು ಏರ್ ಕೂಲರ್ಗಳ ಮೊರೆ ಹೋಗಿದ್ದರೆ ಉಳಿದವರು ಫ್ಯಾನುಗಳ ಮೊರೆ ಹೋಗಿದ್ದಾರೆ. ಯಾವುದಕ್ಕೂ ಕರೆಂಟ್ ಬೇಕಲ್ಲವೇ?? ಒಂದು ಕ್ಷಣ ಕರೆಂಟ್ ಹೋದರೆ ಒದ್ದಾಡುವ ಜನರ ಪರಿಸ್ಥಿತಿ ಯಾರಿಗೂ ಬೇಡ?? ಮತ್ತೆ ಕೆಲವರು ಊರ ಹೊರಗಿರುವ ಮರಗಳ ದೊಡ್ಡ ದೊಡ್ಡ ಕಟ್ಟಡಗಳ ಕೆಳಗೆ ಕುಳಿತು, ಮಲಗಿ ದಣಿವಾರಿಸಿಕೊಳ್ಳುತ್ತಾರೆ.
ಈಗಾಗಲೇ ಭೂಮಿಯ ಒಡಲು ಕಾದುಹೋಗಿದೆ. ಬಿಸಿಲಿನ ಬೇಗೆಗೆ ಗಿಡ ಮರಗಳು ಸುಟ್ಟು ಹೋಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇನ್ನು ಕೆಲವೇ ವರ್ಷಗಳಲ್ಲಿ ವಾತಾವರಣದಲ್ಲಿನ ತಾಪಮಾನವು ಇನ್ನಷ್ಟು ಹೆಚ್ಚಾಗಿ ಭೂಮಿಯ ಮೇಲಿನ ತೇವಾಂಶ ಕುಸಿದು ಹೋಗಬಹುದು. ವಿವಿಧ ಬಗೆಯ ಚರ್ಮರೋಗಗಳು ಆರೋಗ್ಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಜನರು ಬಿಸಿಲಿನ ಶಾಖದಿಂದಾಗಿ ನಿರ್ಜಲೀಕರಣದಿಂದ, ವಾಂತಿ ಭೇದಿ ಕಾಲರಾದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇನ್ನು ತಾಪಮಾನವು ಹೀಗೆಯೇ ಮುಂದುವರೆದು ಹೆಚ್ಚಾಗುತ್ತಾ ಹೋದರೆ ಮನುಷ್ಯ ವಿಧವಿಧದ ಕಾಯಿಲೆಗಳಿಗೆ ತುತ್ತಾಗುತ್ತಾನೆ. ತನ್ನ ಗೋರಿಯನ್ನು ತಾನೇ ತೋಡಿಕೊಂಡಂತಹ ಪರಿಸ್ಥಿತಿ ನಮ್ಮದಾಗಿದೆ.
ಇದಕ್ಕೆಲ್ಲಾ ಕಾರಣ ನಮ್ಮ ವಿಸ್ಮೃತಿ. ಆಧುನೀಕರಣದ ಹೆಸರಿನಲ್ಲಿ ನಗರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ, ದೇಶದ ಪ್ರತಿ ನಗರ, ಪಟ್ಟಣ, ಹಳ್ಳಿಗಳ ಓಣಿ ಓಣಿಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಅರಣ್ಯ ಮತ್ತು ಕೆರೆಕಟ್ಟೆಗಳ ಒತ್ತುವರಿ, ಮಳೆ ನೀರನ್ನು ಹಿಡಿದಿಟ್ಟುಕೊಳ್ಳದ ಬೇಜವಾಬ್ದಾರಿತನ, ಅತಿಯಾದ ಪ್ಲಾಸ್ಟಿಕ್ ಬಳಕೆ, ಗಿಡ ಮರಗಳ ಮಾರಣಹೋಮ ಇದಕ್ಕೆಲ್ಲಾ ಕಾರಣ ಎಂದು ಮೇಲ್ನೋಟಕ್ಕೆ ತೋರಿದರೂ.. ಇದು ಕೇವಲ ಒಂದೆರಡು ದಿನಗಳಲ್ಲಿ ಆಗಿರುವ ಬದಲಾವಣೆಯಲ್ಲ.
ಪ್ರಪಂಚದ ಹವಾಮಾನ ತಜ್ಞರು, ವಿಜ್ಞಾನಿಗಳು ದಶಕಗಳ ಹಿಂದೆಯೇ ಈ ಕುರಿತು ಎಚ್ಚರಿಕೆ ನೀಡಿದ್ದರು. ಉತ್ತರ ಧ್ರುವಗಳಲ್ಲಿ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಹಿಮದ ಬೃಹತ್ ನೀರ್ಗಲ್ಲುಗಳು ಕರಗಿ ಹೋಗುತ್ತಿರುವಾಗಲೇ ಅಪಾಯದ ಗಂಟೆ ಬಾರಿಸತೊಡಗಿತ್ತು. ಹಿಮಾಲಯದಲ್ಲಿ ಅಲ್ಲಲ್ಲಿ ಹಿಮಕುಸಿತವಾಗಿ, ಕರಗಿದ ಹಿಮದಿಂದ ಹಿಮಾಲಯದಲ್ಲಿ ಹುಟ್ಟಿರುವ ನದಿಗಳಲ್ಲಿ ಉಂಟಾದ ಪ್ರವಾಹದಿಂದಾಗಿ ಹಲವಾರು ಪ್ರಾಕೃತಿಕ ವಿಕೋಪಗಳಿಗೆ ನಾವು ತುತ್ತಾಗಿದ್ದೇವೆ. ಆಗಲೂ ನಾವು ಎಚ್ಚೆತ್ತುಕೊಳ್ಳಲಿಲ್ಲ.
ಬಾನಿಗೊಂದು ಎಲ್ಲೆ ಎಲ್ಲಿದೆ??ನಿನ್ನಾಸೆಗೆಲ್ಲಿ ಕೊನೆಯಿದೆ..
ಮನುಷ್ಯನ ಆಸೆಗೆ ಕೊನೆಯಿಲ್ಲ. ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ. ಅಲ್ಲಲ್ಲಿ ಕಾಡುಪ್ರಾಣಿಗಳ ದಾಳಿ ನಡೆಯುವುದನ್ನು, ಅದರ ವಿರುದ್ಧ ಜನರ ಆಕ್ರೋಶಗಳು ಪತ್ರಿಕೆಗಳಲ್ಲಿ ಆಗಾಗ ವರದಿಯಾಗುತ್ತಲೇ ಇವೆ. ಇದಕ್ಕೆ ಕಾರಣ ನಮ್ಮ ದುರಾಸೆ. ಅತಿಯಾದ ಜನಸಂಖ್ಯೆಯಿಂದಾಗಿ ಕಾಡನ್ನು ಒತ್ತುವರಿ ಮಾಡಿಕೊಂಡು ನಾಡು ಬೆಳೆಯುತ್ತಿದೆ. ತಮ್ಮ ಮೂಲ ಸ್ಥಾನವನ್ನು, ಆಹಾರವನ್ನು ಹುಡುಕಿಕೊಂಡು ಕಾಡು ಪ್ರಾಣಿಗಳು ಒತ್ತುವರಿಗೊಂಡ ಕಾಡಂಚಿನ ನಾಡಿನತ್ತ ಬರುವುದು ಸಹಜವಲ್ಲವೇ??
ಕೆಲವೇ ದಶಕಗಳ ಹಿಂದೆ ಒಂದೆರಡು ಮಳೆಯಾದರೆ ಕೆರೆಕಟ್ಟೆಗಳು ತುಂಬುತ್ತಿದ್ದವು. ಆದರೆ ವರದಿಗಳ ಪ್ರಕಾರ ಇದೀಗ ನಾಡಿನಲ್ಲಿರುವ ಕೆರೆ-ಕಟ್ಟೆಗಳು, ಡ್ಯಾಮ್ ಗಳಲ್ಲಿ ಅವುಗಳ ನಿರ್ವಹಣೆಯ ಸಾಮರ್ಥ್ಯದ ಶೇಕಡ 17ರಷ್ಟು ಮಾತ್ರ ನೀರಿದೆ. ಕಾರಣ ನಾವೇ. ಸರ್ಕಾರವೇ ಮಾಡಲಿ, ಪಂಚಾಯಿತಿಗಳೇ ಮಾಡಲಿ ಪಾಲಿಕೆಗಳು ಮಾಡಲಿ ಎಂದು ಜಲ ಮೂಲಗಳ ನಿರ್ವಹಣೆಯನ್ನು ಇಸ್ ಕೀ ಟೋಪಿ ಉಸ್ಕಿ ಸರ್, ಉಸ್ಕಿ ಟೋಪಿ ಇಸ್ ಕಿ ಸರ್ ಎಂಬಂತೆ ತಮ್ಮ ತಮ್ಮ ಜವಾಬ್ದಾರಿ ಗಳಿಂದ ನುಣುಚಿಕೊಳ್ಳುವ ಇಲ್ಲವೇ ಬೇರೊಬ್ಬರಿಗೆ ವರ್ಗಾಯಿಸುವ ಜನ ಮತ್ತು ಸರಕಾರಿ ಸಂಸ್ಥೆಗಳು ನಮ್ಮಲ್ಲಿವೆ. ಇವರಿಬ್ಬರ ನಡುವಣ ಜಗಳವನ್ನು ಬಗೆಹರಿಸುವ ಹೊತ್ತಿಗೆ ಒಂದೆರಡು ಮಳೆಗಳಾಗಿ ತಕ್ಕಮಟ್ಟಿಗೆ ಕೆರೆಕಟ್ಟೆಗಳು ತುಂಬುತ್ತವೆ. ಅಲ್ಲಿಗೆ ಜನರ ಜೊತೆಗೆ ಸರ್ಕಾರದ ಆಡಳಿತ ಕಚೇರಿಗಳು ಕೂಡ ಸುಮ್ಮನಾಗಿಬಿಡುತ್ತವೆ. ಮತ್ತೆ ಅಭಿವೃದ್ಧಿ ಕಾರ್ಯಗಳು ನೆನಪಾಗುವುದು ಭೂಮಿಯ ಒಡಲೆಲ್ಲ ಬರಿದಾಗಿ ಕೆರೆಕಟ್ಟೆಗಳಲ್ಲಿ ನೀರು ಕಾಣೆಯಾದಾಗ ಮಾತ್ರ!
ಒಂದು ದೇಶದ ಅಭಿವೃದ್ಧಿ ಆ ದೇಶದಲ್ಲಿರುವ ಬೃಹತ್ ಕಟ್ಟಡಗಳು, ಫ್ಲೈ ಓವರಗಳು, ಕಾಂಕ್ರೀಟ್ ರಸ್ತೆಗಳು ಮತ್ತು ವೈಜ್ಞಾನಿಕ ಆವಿಷ್ಕಾರಗಳಲ್ಲಿ ಇಲ್ಲ. ತಮ್ಮ ದೇಶದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ನೀರು, ಆಹಾರ, ವಿದ್ಯುತ್ ಮತ್ತು ವಸತಿ ವ್ಯವಸ್ಥೆಗಳಲ್ಲಿ ಸಂಪೂರ್ಣ ಸ್ವಾವಲಂಬನೆಯನ್ನು ಹೊಂದಿದ್ದು ಪ್ರತಿ ಮನೆಯು ಕನಿಷ್ಠ ಸೌಲಭ್ಯಗಳನ್ನು ಹೊಂದಿರುವ, ಬಡತನದ ರೇಖೆಯಿಂದ ಮೇಲಿರುವ ನೆಮ್ಮದಿಯ ಸೂಚ್ಯಂಕ ಹೆಚ್ಚಿರುವ ದೇಶ ಅದೆಷ್ಟೇ ಪುಟ್ಟದಾದರೂ ಸ್ವಾವಲಂಬಿಯೇ.
ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚು ಒಪ್ಪಿಕೊಳ್ಳೋಣ.. ಅಂತೆಯೇ ಅವಶ್ಯಕತೆಗಳು ಕೂಡ. ಆದರೆ ನಮ್ಮ ಜನರ ಮಾನಸಿಕತೆ ವಿಭ್ರಮೆ ಹುಟ್ಟಿಸುವಂತದ್ದು. ಅದೆಷ್ಟೇ ಲಕ್ಷಾಂತರ ವಿಜ್ಞಾನಿಗಳು ಮಂಡಿಯೂರಿ ಬೇಡಿಕೊಂಡರೂ ಒಂದು ಪರ್ವತವನ್ನು, ಒಂದು ನದಿಯನ್ನು ಆವಿಷ್ಕರಿಸಲಾರರು.
ಬೃಹತ್ ಯಂತ್ರಗಳನ್ನು ಬಳಸಿ ಕ್ಷಣಮಾತ್ರದಲ್ಲಿ ಕಾಡನ್ನು ಸವರುವ ಜನ ಅದೆಷ್ಟೇ ತಿಪ್ಪರಲಾಗ ಹಾಕಿದರೂ ಒಂದೇ ದಿನದಲ್ಲಿ ಒಂದು ಗಿಡವನ್ನು ಕೂಡ ಬೆಳೆಸಲಾರರು.

ಪ್ರತಿಯೊಂದನ್ನು ಬೇರೆಯವರಿಂದಲೇ ನಿರೀಕ್ಷಿಸುವುದು ನಮ್ಮ ಜಾಯಮಾನವಾಗಿದೆ.
ಒಬ್ಬ ವಿಜ್ಞಾನಿ ಹೇಳಿದನಂತೆ.. “the greatest threat to the mankind is the belief that someone else will save ಗೂ” ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಇದರರ್ಥ ಈ ಮಾನವ ಕುಲದ ಅತಿ ಭಯಾನಕ ಸತ್ಯವೆಂದರೆ ಬೇರೆ ಯಾರಾದರೂ ಈ ಕೆಲಸವನ್ನು ಮಾಡುತ್ತಾರೆ ಎಂಬ ಭ್ರಮೆಯನ್ನು ನಾವೆಲ್ಲ ಹೊಂದಿರುವುದು.
ನಮ್ಮ ಮೂಲಭೂತ ಅವಶ್ಯಕತೆಗಳಾದ ನೀರು, ಆಹಾರಗಳ ಸ್ವಾವಲಂಬನೆಯನ್ನು ನಾವು ಹೊಂದಲೇಬೇಕು. ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕಾಯುವ ಅವಶ್ಯಕತೆ ಇಲ್ಲ. ಸರ್ಕಾರದ ಸವಲತ್ತುಗಳು ನಮ್ಮ ತಟ್ಟೆಗೆ ಬಂದು ಬೀಳಬಹುದು, ಆದರೆ ಉಣ್ಣಬೇಕಾದವರು ನಾವಲ್ಲವೇ?
ನಮ್ಮ ಮನೆಗಳ ಮಟ್ಟಿಗೆ ನಮ್ಮ ಭಾಗದಲ್ಲಿ ಆಗುವ ಮಳೆ ನೀರನ್ನು ಹಿಡಿದಿಟ್ಟುಕೊಂಡು ಕನಿಷ್ಠ ಕುಡಿಯುವ ನೀರನ್ನು ಹೊಂದುವ ಮಳೆ ಕೊಯ್ಲು ಪದ್ದತಿಯನ್ನು ನಾವೇಕೆ ಅಳವಡಿಸಿಕೊಳ್ಳಬಾರದು?? ಮನೆ ಕಟ್ಟುವವರು, ದೊಡ್ಡ ದೊಡ್ಡ ಬೃಹತ್ ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಾಡಿಕೊಳ್ಳಿ ಅಳವಡಿಸುವ ಮೂಲಕ ಜಲ ಸ್ವಾವಲಂಬನೆಯನ್ನು ಹೊಂದಬಹುದು. ಇನ್ನು ಪ್ರತಿ ಊರುಗಳಲ್ಲಿ, ಗ್ರಾಮಗಳಲ್ಲಿ ನಮ್ಮ ಊರು ನಮ್ಮ ಜವಾಬ್ದಾರಿ ಎಂಬ ಭಾವದಲ್ಲಿ ಸಾಮುದಾಯಿಕ ನಾಯಕತ್ವದಲ್ಲಿ ಆಯಾ ಊರುಗಳ ಕೆರೆಕಟ್ಟೆಗಳ ಹೂಳು ತೆಗೆಯುವ, ಪುನರುಜ್ಜೀವನಗೊಳಿಸುವ ಮಳೆಗಾಲದ ಹೊತ್ತಿಗೆ ಎಲ್ಲೆಡೆಯಿಂದ ಹರಿದು ಬರುವ ಮಳೆ ನೀರನ್ನು ಸಂಗ್ರಹಿಸಲು ಅನುವಾಗುವಂತೆ ಸಜ್ಜು ಮಾಡಬಹುದು. ಇಲ್ಲಿ ಯಾವುದೇ ರೀತಿಯ ಜಾತಿ ಮತ ಪಂಥ ಭೇದವಿಲ್ಲದೆ ಎಲ್ಲರೂ ಸೇರಿ ಈ ಕಾರ್ಯವನ್ನು ಮಾಡಿದಾಗ ನನ್ನದು ಎಂಬ ಅಭಿಮಾನವೂ ಜವಾಬ್ದಾರಿಯೂ ಒಟ್ಟಿಗೆ ಒಡ ಮೂಡುತ್ತದೆ. ಇದುವೇ ನಮ್ಮ ಸದ್ಯದ ಅವಶ್ಯಕತೆ.

ಇದೇ ಸಮುದಾಯಿಕ ನೇತೃತ್ವದಲ್ಲಿ ಗುಂಪು ತೋಪುಗಳನ್ನು ನಿರ್ಮಿಸುವ, ಹಳ್ಳ ನದಿಗಳ ಅಂಚುಗಳಲ್ಲಿ ಮಳೆ ನೀರಿಗೆ ಮಣ್ಣು ಕೊಚ್ಚಿ ಹೋಗದಂತೆ ನೂರಾರು,ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಬೇಕು. ಜಾತಿ, ಮತ, ಪಕ್ಷ, ಪಂಥಗಳ ಭೇದವಿಲ್ಲದೆ ಊರ ಹಿರಿಯರ ನೇತೃತ್ವದಲ್ಲಿ ಇಂತಹ ಸಮುದಾಯಿಕ ಕಾರ್ಯಗಳನ್ನು ಕೈಗೊಂಡಾಗ ಪುಟ್ಟ ಪುಟ್ಟ ವನಗಳನ್ನು ನಾವು ನಿರ್ಮಿಸಲು ಸಾಧ್ಯ. ಮಳೆಯನ್ನು ಆಕರ್ಷಿಸುವ ಕಾಡುಗಳು, ಹಸಿರು ತೋಪುಗಳು ನಮ್ಮ ಇಂದಿನ ಅವಶ್ಯಕತೆ. ಅನಾದಿಕಾಲದಿಂದಲೂ ಕಾಡಿನಲ್ಲಿಯೇ ಹೆಚ್ಚು ಮಳೆ ಸುರಿಯುತ್ತದೆ. ದೊಡ್ಡ ದೊಡ್ಡ ಬೆಟ್ಟ ಗುಡ್ಡಗಳಲ್ಲಿ ಕೂಡ ಮಳೆಯ ಪ್ರಮಾಣ ತುಸು ಹೆಚ್ಚು. ಆದ್ದರಿಂದಲೇ ನಮ್ಮ ಪೂರ್ವಿಕರು ಹಲವಾರು ಬೆಟ್ಟ ಗುಡ್ಡಗಳ ನೀರು ಕೆಳಗೆ ಹರಿದು ಬರುವ ಜಾಗದಲ್ಲಿ ದೊಡ್ಡ ಕೆರೆಗಳನ್ನು ನಿರ್ಮಿಸುತ್ತಿದ್ದರು. ಅದು ಸುತ್ತಲ ಹತ್ತು ಹಳ್ಳಿಗಳ ನೀರಿನ ಅವಶ್ಯಕತೆಯನ್ನು ಪೂರೈಸುತ್ತಿತ್ತು.
ಮತ್ತೆ ನಾವು ನಮ್ಮ ಗ್ರಾಮೀಣ ಬದುಕಿನತ್ತ ಮುಖ ಮಾಡಬೇಕು. ನಮ್ಮ ಹಿರಿಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ದೂರದರ್ಶಿತ್ವವನ್ನು, ಸರಳ ಜೀವನ ತತ್ವಗಳನ್ನು ನಾವು ಕೂಡ ಅಳವಡಿಸಿಕೊಳ್ಳಬೇಕು. ನಮ್ಮ ಹಿರಿಯರು ನಮ್ಮ ಸುತ್ತಣ ಪರಿಸರವನ್ನು ಎಂದೂ ಕೇವಲವಾಗಿ ಭಾವಿಸಲಿಲ್ಲ ಬದಲಾಗಿ ನಾವು ಮೆಟ್ಟುವ ಈ ನೆಲವನ್ನು ನಮ್ಮನ್ನು ಪೊರೆಯುವ ಭೂಮಿ ತಾಯಿ ಎಂದು, ನಾವು ಕುಡಿಯುವ ನೀರನ್ನು ಜೀವದಾಯಿನಿ ಗಂಗಾ ಮಾತೆಯೆಂದು ನಮ್ಮ ಸುತ್ತಣ ಪ್ರಕೃತಿಯನ್ನು ವನ ದೇವತೆಯೆಂದು, ಪ್ರತಿಯೊಂದು ಮರದಲ್ಲಿನ ಅಂತಃಶಕ್ತಿಯನ್ನು ಅರಿತು ವೃಕ್ಷ ದೇವತೆ ಎಂದು ಪೂಜಿಸಿದ್ದಾರೆ. ಮರ ಕಡಿಯುವ ಮುನ್ನ 10 ಬಾರಿ ಯೋಚಿಸುತ್ತಿದ್ದ ನಮ್ಮ ಪೂರ್ವಜರು ಮರಕ್ಕೆ ಕೊಡಲಿ ಏಟು ಹಾಕಿದರೆ ವೃಕ್ಷ ದೇವತೆ ಮುನಿಸಿಕೊಂಡಾಳು ಎಂದು ಭಾವಿಸಿ ಜೀವನ ಸಾಗಿಸುತ್ತಿದ್ದರು. ಅಂದು ನಮ್ಮೆಲ್ಲರ ದೃಷ್ಟಿಯಲ್ಲಿ ಮೌಢ್ಯತೆ ಎಂದು ಕರೆಸಿಕೊಂಡ ಎಷ್ಟೋ ವಿಷಯಗಳು
ಇಂದು ಅವರ ಪ್ರಕೃತಿ ಪ್ರೇಮವನ್ನು, ಪರಿಸರ ಪ್ರಜ್ಞೆಯನ್ನು, ಮಾನವನ ವಿಕಾಸಕ್ಕೆ ಪರಿಸರ ಕೊಡುವ ಕಾಣಿಕೆಯ ಅರಿವನ್ನು ತೋರುತ್ತದೆ. ನಮ್ಮ ಪೂರ್ವಜರು ತಮ್ಮ ಸುತ್ತಣ ಪರಿಸರವನ್ನು ಕಲುಷಿತಗೊಳ್ಳದಂತೆ ಆರಾಧನೆಯ ದೃಷ್ಟಿಯಿಂದ ನೋಡುತ್ತಾ ಪರಿಸರದೊಂದಿಗೆ ಸಮರಸ ಜೀವನವನ್ನು ಸಾಗಿಸುತ್ತಿದ್ದರು.
ಈಗಾಗಲೇ ಕಾಲ ಮಿಂಚಿದೆ. ಗಡುವು ಮೀರುತ್ತಿದೆ..
ನಿಜ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಇನ್ಯಾವಾಗಲೂ ಎಚ್ಚೆತ್ತುಕೊಳ್ಳಲು ಸಾಧ್ಯವಾಗದು. ಆದ್ದರಿಂದ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ಯುದ್ಧೋಪಾದಿಯಲ್ಲಿ ಪರಿಸರ ರಕ್ಷಣೆಯಲ್ಲಿ ಪ್ರತಿದಿನ, ಪ್ರತಿ ಕ್ಷಣ ತೊಡಗಿಕೊಳ್ಳೋಣ. ಮನೆ ಮನೆಗಳಲ್ಲೂ ಉದ್ಯಾನಗಳನ್ನು ನಿರ್ಮಿಸಿ ಹಸಿರನ್ನು ಹೆಚ್ಚಿಸೋಣ. ಪ್ಲಾಸ್ಟಿಕ್ ಬಳಕೆಗೆ ಸ್ವಯಂ ಕಡಿವಾಣವನ್ನು ಹಾಕೋಣ. ನೀರನ್ನು ಮಿತವಾಗಿ ಬಳಸುತ್ತಾ ಉಳಿಸೋಣ. ಪರಿಸರಕ್ಕೆ ಹಾನಿಯಾಗುವ ಎಲ್ಲ ವಸ್ತುಗಳನ್ನು ಸಾಧ್ಯವಾದಷ್ಟು ನಿಷೇಧಿಸೋಣ. ಸರಳ ಜೀವನ ಪದ್ಧತಿಗಳನ್ನು ಅಳವಡಿಸಿಕೊಂಡು ಆಂತರಿಕವಾಗಿ ಹಿರಿದಾದ ನೆಮ್ಮದಿಯ ಜೀವನವನ್ನು ಕಟ್ಟಿಕೊಳ್ಳೋಣ.
ನಮ್ಮ ನಂತರವೂ ನಮ್ಮ ಮುಂದಿನ ಪೀಳಿಗೆಯವರು ನಮ್ಮ ಕೊಡುಗೆಯನ್ನು ಸ್ಮರಿಸುವಂತಹ ಸುಂದರ ಜಗತ್ತನ್ನು ಅವರ ಪಾಲಿಗೆ ಉಳಿಸೋಣ, ಬೆಳೆಸೋಣ ಎಂಬ ಆಶಯದೊಂದಿಗೆ..
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

