ವಿಜನ್ ವಿಜಯಪುರ-10 ಅಂಶಗಳಿಗೆ ಒತ್ತು” ವಿಜಯಪುರ ಕ್ಷೇತ್ರದ ಚುನಾವಣೆ ಪ್ರನಾಳಿಕೆ ಬಿಡುಗಡೆ
ವಿಜಯಪುರ: ಇಲ್ಲಿಯ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ನಾನು ತಮ್ಮ ಆಶೀರ್ವಾದದಿಂದ ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ ನನ್ನ ಅವಧಿಯಲ್ಲಿ ಜಿಲ್ಲೆಯ ಪ್ರಮುಖ ವಿಷಯಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸತತ ಪ್ರಯತ್ನ ಮಾಡಿ, ಜಾರಿಗೆ ತರುವಲ್ಲಿ ಶ್ರಮಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಭರವಸೆ ನೀಡಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಜಿಲ್ಲೆಯ ಅಭಿವೃದ್ಧಿಗಾಗಿ “ವಿಜನ್ ವಿಜಯಪುರ-10 ಅಂಶಗಳಿಗೆ ಒತ್ತು” ಎಂಬ ತಮ್ಮ ಕ್ಷೇತ್ರದ ಚುನಾವಣೆ ಪ್ರನಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
೧. ನೀರಾವರಿ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಲು ಅಗತ್ಯವಿರುವ ಕೇಂದ್ರ ಸರ್ಕಾರದಲ್ಲಿ 2010 ರಿಂದ ನೆನೆಗುದಿಗೆ ಬಿದ್ದಿರುವ ಬ್ರಿಜೇಶಕುಮಾರ ತೀರ್ಪು ಗೆಜೆಟ್ ನೋಟಿಫಿಕೇಶನಗೊಳಿಸಿ, ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಪೂರ್ಣಗೊಳಿಸುವುದು.
2.ಕೃಷ್ಣಾ ನ್ಯಾಯಾದೀಕರಣ:* ಬ್ರಜೇಶ ಕುಮಾರ ಆಯೋಗ ತೀರ್ಪು 2010 ರಲ್ಲಿ ನೀಡಿ,15 ವರ್ಷಗಳು ಕಳೆದರೂ ಇನ್ನೂ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಕೇಂದ್ರ ಸರ್ಕಾರದಿಂದ ಅಂತಿಮ ಅಧಿಸೂಚನೆ ಹೊರಡಿಸಿದರೆ, ಆಲಮಟ್ಟಿ ಆಣೆಕಟ್ಟು ಎತ್ತರಿಸಿ,130 ಟಿ.ಎಂ.ಸಿ ನೀರು ಬಳಸಿ, ಯುಕೆಪಿ-3 ನೇ ಹಂತದ ಮುಳವಾಡ-ಚಿಮ್ಮಲಗಿ, ಇಂಡಿ, ಪೀರಾಪುರ ಬೂದಿಹಾಳ ಸೇರಿದಂತೆ ಎಲ್ಲ ಯೋಜನೆಗಳನ್ನು ನೀರು ಒದಗಿಸಿ 10ಲಕ್ಷ ಎಕರೆ ಭೂಮಿಯನ್ನು ವಿಜಯಪುರ ಜಿಲ್ಲೆಯಲ್ಲಿ ನೀರಾವರಿಗೆ ಒಳಪಡಿಸಿ, ಕಾಲುವೆಗಳಿಗೆ ನೀರು ಹರಿಸಿ, ಕೆರೆ, ಹಳ್ಳ-ಕೊಳ್ಳಗಳನ್ನು ತುಂಬಿಸಿ, ಜಿಲ್ಲೆಯನ್ನು ಸಮೃದ್ಧಗೊಳಿಸುವುದು.
3.ರೈಲ್ವೆಸಂಪರ್ಕ: ವಿಜಯಪುರದಿಂದ ರಾಜಧಾನಿ ಬೆಂಗಳೂರು, ವಾಣಿಜ್ಯ ನಗರ ಮುಂಬೈ ಹಾಗೂ ಪ್ರಮುಖ ನಗರ ಹೈದ್ರಾಬಾದಗಳಿಗೆ ಸಂಚರಿಸಲು ರಾತ್ರಿ ಹೊರಟು ಬೆಳಿಗ್ಗೆ ತಲುಪುವಂತೆ ರೈಲ್ವೆ ಸಂಚಾರ ಒದಗಿಸುವುದು.
4. ವಿಮಾನ: ವಿಜಯಪುರದ ವಿಮಾನ ನಿಲ್ದಾಣ ಆರಂಭಗೊಂಡ ನಂತರ ರಾಷ್ಟ್ರದ ರಾಜಧಾನಿ ದೆಹಲಿ, ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಂಪರ್ಕಿಸುವಂತೆ ವಿಮಾನಯಾನ ವ್ಯವಸ್ಥೆ ಒದಗಿಸುವುದು.
5. ಹೆದ್ದಾರಿಗಳು : ವಿಜಯಪುರ ನಗರವನ್ನು ಸಂಪರ್ಕಿಸುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಿಗೆ ಎಲ್ಲ ಕಡೆ ರೈಲ್ವೆ ಮೆಲ್ಸೇತುವೆ ಹಾಗೂ ರಸ್ತೆ ಮೆಲ್ಸೇತುವೆ ನಿರ್ಮಿಸುವುದು ಮತ್ತು ಹೆದ್ದಾರಿಗಳಿಗೆ ಹೆಚ್ಚಿನ ಅನುದಾನ ಒದಗಿಸಿ, ದುರಸ್ಥಿಗೊಳಿಸಿ, ಸುಧಾರಣೆಗೊಳಿಸುವುದು.
೬. ಕೃಷಿ ತೋಟಗಾರಿಕೆ: ಕೇಂದ್ರ ಕೃಷಿ ಇಲಾಖೆಯಿಂದ ತೋಟಗಾರಿಕಾ ಬೆಳೆಗಾರರಿಗೆ ನೆರವಾಗಲು ರಾಷ್ಟ್ರೀಯ ದ್ರಾಕ್ಷಿ ಸಂಶೋಧನ ಕೇಂದ್ರ ಹಾಗೂ ತೋಟಗಾರಿಕಾ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸುವ ಫಾರ್ಮ್ ಆರಂಭಿಸುವುದು.
೭. ಪ್ರವಾಸೋದ್ಯಮ: ಐತಿಹಾಸಿಕ ವಿಜಯಪುರದಲ್ಲಿ ದೆಹಲಿ ಹೊರತು ಪಡಿಸಿದರೆ ಅತೀ ಹೆಚ್ಚು ಸ್ಮಾರಗಳ ನಗರವಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಆದರೆ, ಜಿಲ್ಲೆಗೆ ಆರ್ಥಿಕ ಚೈತನ್ಯ ಒದಗುತ್ತದೆ. ಆದ್ದರಿಂದ ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಜಯಪುರ ನಗರವನ್ನು ಸೇರ್ಪಡೆಗೊಳಿಸುವುದು.
೮. ಕ್ರೀಡೆ: ದೇಶದಲ್ಲಿಯೇ ಪಂಜಾಬ್ ಹೊರತು ಪಡಿಸಿದರೆ, ಸೈಕ್ಲಿಂಗ್ ಕ್ರೀಡೆಗೆ ವಿಜಯಪುರ ಜಿಲ್ಲೆ ಹೆಸರುವಾಸಿಯಾಗಿದ್ದು, ಕೆಂದ್ರ ಸರ್ಕಾರದ ಕ್ರೀಡಾ ಪ್ರಾಧಿಕಾರ ನೆರವಿನಿಂದ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಿಸುವುದು.
೯. ಸೌಲಭ್ಯ: ಹೈದ್ರಾಬಾದ ಕರ್ನಾಟಕದ ಮಾದರಿಯಲ್ಲಿ ವಿಜಯಪುರ ಜಿಲ್ಲೆಯನ್ನು 371 ಜೆ ಅಡಿಯಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
೧೦. ಶಿಕ್ಷಣ: ಐತಿಹಾಸಿಕ ವಿಜಯಪುರ ನಗರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ಐಐಟಿ, ಐಐಎಂ ಮತ್ತಿತರ ಕೇಂದ್ರೀಯ ಆರಂಭಿಸಲು ಪ್ರಯತ್ನ.
ಕಳೆದ ಮೂರು ಅವಧಿ, 15 ವರ್ಷಗಳಿಂದ ಸಂಸದರಾಗಿರುವವರು ಜಿಲ್ಲೆಗೆ ಅನುಕೂಲಕರವಾಗುವ ಒಂದೇ-ಒಂದು ವಿಷಯವನ್ನು ಸಂಸತ್ನಲ್ಲಿ ಪ್ರಸ್ತಾಪಿಸಿರುವುದಿಲ್ಲ. ರೈತರು ಸಂಕಷ್ಟದಲ್ಲಿದ್ದಾಗ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಪ್ರಜ್ಞಾವಂತ ಮತದಾರರು ತಮ್ಮ ಮತ ಚಲಾಯಿಸುವಾಗ ಮೇಲಿನ ವಿಷಯವನ್ನು ಗಮನಿಸಿ, ವಿಜಯಪುರ ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ ಸಂಸತ್ ಸದಸ್ಯತ್ವ ಬದಲಾವಣೆ ಆಗಲೇಬೇಕು ಎಂದು ಮತ ಹಾಕಬೇಕು. ಆದ್ದರಿಂದ ನನಗೆ ಮತ ನೀಡಿ, ಆಯ್ಕೆ ಮಾಡಿದರೆ ಪ್ರಾಮಾಣಿಕವಾಗಿ ಈ ಪ್ರಸ್ತಾಪಿಸಿದ ಎಲ್ಲ ವಿಚಾರಗಳನ್ನು ಕಾಯಾ, ವಾಚಾ, ಮನಸಾ ಅನುಷ್ಠಾನಗೊಳಿಸಲು ನಾನು ಹೆಜ್ಜೆ ಇಡುತ್ತೇನೆ ಎಂದು ಆಲಗೂರ ಸ್ಪಷ್ಠಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಮಹಾಂತೇಶ ಬಿರಾದಾರ, ಸಂಗಮೇಶ ಬಬಲೇಶ್ವರ ಸೇರಿದಂತೆ ಹಲವರಿದ್ದರು.

