ಬಸವನಬಾಗೇವಾಡಿ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಕಾಂಗ್ರೆಸ್ ಪಕ್ಷವು ನೀಡಿರುವ ಗ್ಯಾರಂಟಿಗಳಾದ ಯುವನ್ಯಾಯ, ಮಹಿಳಾನ್ಯಾಯ, ರೈತನ್ಯಾಯ, ಶ್ರಮಿಕನ್ಯಾಯ, ಪಾಲುದಾರಿಕೆಯ ನ್ಯಾಯ ಜಾರಿಗೆ ಬರುವ ಮೂಲಕ ದೇಶದ ಪ್ರಗತಿಗೆ ನಾಂದಿಯಾಗಲಿದೆ. ಎಲ್ಲ ವರ್ಗದವರ ಹಿತರಕ್ಷಣೆ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರನ್ನು ವಿಜಯಪುರ ಲೋಕಸಭೆ ಕ್ಷೇತ್ರದಿಂದ ಬಹುಮತದೊಂದಿಗೆ ಮತದಾರರು ಆಯ್ಕೆ ಮಾಡಬೇಕೆಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮುತ್ತಗಿ ಗ್ರಾಮದ ಮಾರುತೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜಯಪುರ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದೆ. ಗ್ರಾಮಗಳಲ್ಲಿರುವ ಸಾಮರಸ್ಯ ಪಟ್ಟಣಗಳಲ್ಲಿ ಇಲ್ಲ. ಸಾಮರಸ್ಯದ ಕೊರತೆಯಿಂದಾಗಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಬೆಂಬಲಿಸಬೇಕು. ಬಿಜೆಪಿ ಒಂದೇ ಜಾತಿಗೆ ಸೀಮಿತವಾಗಿ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ಮೊದಲು ಮಿಲಟರಿಯಲ್ಲಿ ಜಾತ ಇರಲಿಲ್ಲ. ಅಲ್ಲಿಯೂ ಜಾತಿ ಬೆರೆಸಲಾಗಿದೆ. ಪ್ರಜಾಪ್ರಭುತ್ವ ಅಳಿವಿನ ಅಂಚಿಗೆ ಹೋಗಬಾರದು. ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಬೆಂಬಲಿಸಬೇಕೆಂದರು.
ಕಳೆದ ಹತ್ತು ವರ್ಷದಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಅವರ ಸರ್ಕಾರ ರೈತರ ಆದಾಯ ದ್ವಿಗುಣ ಮಾಡಲಾಗುವುದು, ಅವರ ಬೆಳೆಗೆ ಸೂಕ್ತ ಬೆಲೆ, ಕಪ್ಪು ಹಣದಿಂದ ಪ್ರತಿಯೊಬ್ಬರ ಖಾತೆಗೆ ರೂ.೧೫ ಲಕ್ಷ, ಪ್ರತಿ ವರ್ಷ ಯುವಜನಾಂಗಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿ ಸೇರಿದಂತೆ ನೀಡಿರುವ ಅನೇಕ ಭರವಸೆಗಳನ್ನು ಈಡೇರಿಸಿಲ್ಲ. ಯುಪಿಎ ಸರ್ಕಾರ ಅವಧಿಯಲ್ಲಿ ಪ್ರಧಾನಿ ಮನಮೋಹನಸಿಂಗ ಅವರು ರೈತರ ೭೨ ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರು. ಅದೇ ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ಉದ್ದಿಮೆದಾರರ ರೂ.೧೪ ಲಕ್ಷ ಕೋಟಿ ಸಾಲಮನ್ನಾ ಮಾಡಿದೆ.ರೈತರ ಬೆಳೆಗೆ ಯೋಗ್ಯ ದರ ನೀಡಲಿಲ್ಲ. ಈಗ ಶ್ರೀಮಂತ-ಬಡವ, ರೈತ-ಕಾರ್ಮಿಕ, ಜಾತಿ ಸಂಘರ್ಷ ಕಡಿಮೆ ಮಾಡಲು ಮತದಾರರು ಬದಲಾವಣೆ ಮಾಡುವ ಅಗತ್ಯವಿದೆ ಎಂದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ೮ ತಿಂಗಳಲ್ಲಿ ಸಮರ್ಪಕವಾಗಿ ಜಾರಿಗೆ ತರುವ ಮೂಲಕ ನುಡಿದಂತೆ ನಡೆದ ಸರ್ಕಾರವಾಗಿದೆ. ನಮ್ಮದು ಹೇಳಿದ್ದನ್ನು ಮಾಡುವ ಸತ್ಯ ನುಡಿಯುವ ಸರ್ಕಾರ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ನಾವು ನೀಡಿರುವ ೨೫ ಗ್ಯಾರಂಟಿಗಳನ್ನು ಖಂಡಿತ ಜಾರಿಗೆ ಬರಲಿವೆ. ನಮ್ಮ ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಗೆ ಬದಂರೆ ಮಹಿಳೆಯರಿಗೆ ಒಂದು ವರ್ಷಕ್ಕೆ ರೂ. ೧ ಲಕ್ಷ, ರೈತರ ಬೆಳೆಗೆ ಸೂಕ್ತ ಬೆಲೆ ಅನೇಕ ಯೋಜನೆಗಳು ಜಾರಿಗೆ ಬರಲಿವೆ ಎಂದರು.
ನಾನು ವಿಜಯಪುರ, ಬಾಗಲಕೋಟ, ಹಾವೇರಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕಾಗಿರುವದರಿಂದಾಗಿ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಎಲ್ಲ ಜಾತಿಯವರು ನಮ್ಮ ಸರ್ಕಾರ ಸಾಧನೆ, ಕ್ಷೇತ್ರದಲ್ಲಿಯಾಗಿರುವ ಸಾಧನೆ ನೋಡಿ ನನ್ನ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಮತಗಳಗಿಂತಲೂ ಹೆಚ್ಚು ಮತಗಳನ್ನು ನೀಡುವ ಮೂಲಕ ರಾಜು ಆಲಗೂರ ಅವರನ್ನು ಆಯ್ಕೆ ಮಾಡಲು ಶ್ರಮಿಸಬೇಕೆಂದರು.
ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪನವರ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷದಿಂದ ಹೊರಹಾಕುವುದಾಗಿ ಹೇಳಿದ್ದಾರೆ. ಅದೇ ೨ ವರ್ಷದಿಂದ ಬಸನಗೌಡ ಪಾಟೀಲ ಯತ್ನಾಳ ಅವರು ಅಪ್ಪ-ಮಗನ ಬಗ್ಗೆ ಬೈಯುತ್ತಾ ಬಂದಿದ್ದರೂ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಎಲ್ಲರಿಗೂ ಒಂದೇ ನ್ಯಾಯ ಇರಬೇಕೆ ತಾನೇ ಎಂದು ಪ್ರಶ್ನಿಸಿದ ಅವರು, ಈಚೆಗೆ ಯತ್ನಾಳ ಅವರು ನನ್ನ ಬಗ್ಗೆ ಒಂದೆರಡು ದಿನಗಳಿಂದ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ರಾಷ್ಟ್ರದ ಅರಿವು ಇರಬೇಕು. ಕಳೆದ ೩೦ ವರ್ಷಗಳಿಂದ ಲೋಕಸಭೆಯನ್ನು ಪ್ರತಿನಿಧಿಸುತ್ತಿರುವ ರಮೇಶ ಜಿಗಜಿಣಗಿ ಅವರು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ. ಜಿಲ್ಲೆಯ ನೀರಾವರಿ, ಕೈಗಾರಿಕೆ ಬಗ್ಗೆ ಯಾವುದೇ ಕಾರ್ಯ ಮಾಡಿಲ್ಲ. ರಸ್ತೆಗಳು ತಾನಾಗಿಯೇ ಆಗಿರುವದನ್ನು ತಾವು ಮಾಡಿರುವುದಾಗಿ ಹೇಳುತ್ತಾರೆ. ರೈಲು ಬ್ರಾಡ್ಗೇಜ್ ಎನ್ಪಿಟಿಸಿಯಿಂದ ಆಗಿದೆ ಎಂದರು.
ಜಿಲ್ಲೆಯ ಮತದಾರರರು ನನ್ನ ಆಯ್ಕೆ ಮಾಡಿದರೆ ಜಿಲ್ಲೆಯ ಅಭಿವೃದ್ಧಿಗೆ ಜೀತದಾಳಾಗಿ ದುಡಿಯುತ್ತೇನೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ, ಈ ಕ್ಷೇತ್ರದಲ್ಲಿ ಶಿವಾನಂದ ಪಾಟೀಲರು ಮಾಡಿರುವ ಅಭಿವೃದ್ಧಿ ಗಮನಿಸಿ ಜಿಲ್ಲೆಯ ಮತದಾರರು ನನಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ರಮೇಶ ಸೂಳಿಭಾವಿ, ಚಂದ್ರಶೇಖರಗೌಡ ಪಾಟೀಲ, ಸಂಗಮೇಶ ಓಲೇಕಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಬಸವರಾಜ ಸೋಮಪುರ, ಮಲ್ಲಿಕಾರ್ಜುನ ನಾಯಕ, ಪ್ರೇಮಕುಮಾರ ಮ್ಯಾಗೇರಿ, ಎ.ಎಂ.ಪಾಟೀಲ, ಶಂಕರಗೌಡ ಬಿರಾದಾರ, ರವಿ ರಾಠೋಡ, ರಾಜುಗೌಡ ಪಾಟೀಲ, ಶಿವನಗೌಡ ಗುಜಗೊಂಡ, ಜಗದೇವಿ ಗುಂಡಳ್ಳಿ, ನೀಲಾ ಬಿರಾದಾರ, ರಮಜಾನ ಹೆಬ್ಬಾಳ, ಬಂದೇನವಾಜ ಡೋಲಚಿ, ಭೀಮಶಿ ಜಗ್ಗಲ, ಇಲಿಯಾಸ ದೊಡ್ಡಮನಿ, ಮಹಿಬೂಬ ನಾಯ್ಕೋಡಿ, ನಾಗನಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು. ರವಿ ರಾಠೋಡ ನಿರೂಪಿಸಿದರು. ದ್ಯಾಮನಗೌಡ ಪಾಟೀಲ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

