-ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ, ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ಒಂದು ಹಳ್ಳಿಯ ಜಮೀನ್ದಾರನ ಜಮೀನಿನಲ್ಲಿ ಒಬ್ಬ ಬಡ ಕೆಲಸದಾಳು ಹೊಲದ ಕೆಲಸವನ್ನು ಮಾಡುತ್ತಿದ್ದನು. ಮಧ್ಯಾಹ್ನದ ವೇಳೆ ಅದು, ಆಗ ಅಲ್ಲೆಲ್ಲೋ ಪಕ್ಕದ ಜಮೀನಿನಲ್ಲಿ ಯಾರೋ ಒಬ್ಬರು ಅಯ್ಯೋ ನನ್ನನ್ನು ಯಾರಾದರೂ ಕಾಪಾಡಿ… ಕಾಪಾಡಿ ಎಂದು ಜೋರಾಗಿ ಕೂಗುತ್ತಿದ್ದುದು ಆ ಕೆಲಸದ ಆಳಿಗೆ ಕೇಳಿಸಿತು. ಕೂಡಲೇ ಕೂಗು ಕೇಳಿ ಬರುತ್ತಿದ್ದ ಕಡೆಗೆ ಹೋಗಿ ನೋಡಿದಾಗ ತರುಣನೊಬ್ಬ ಪಾಳು ಬಾವಿಯೊಳಗೆ ಬಿದ್ದು ಭಯದಿಂದ ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದನು. ಆ ತರುಣನ ದಯನೀಯ ಸ್ಥಿತಿಯನ್ನು ಗಮನಿಸಿದ ಆ ಕೆಲಸದಾಳು ತಕ್ಷಣ ಅಲ್ಲೇ ಸಮೀಪದ ಜಮೀನಿನ ಬಾವಿಯಲ್ಲಿದ್ದ ಹಗ್ಗವನ್ನು ತೆಗೆದುಕೊಂಡು ಬಂದು ಅದನ್ನು ತರುಣ ಬಿದ್ದಿದ್ದ ಪಾಳು ಬಾವಿಯ ಒಳಗೆ ಇಳಿಯಬಿಟ್ಟು ಅದರ ಮೂಲಕ ಆ ತರುಣನ್ನು ಮೇಲಕ್ಕೆ ಎತ್ತಿದನು. ನಂತರ ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಬಿಸಿ ನೀರಿನಿಂದ ಸ್ನಾನ ಮಾಡಿಸಿ, ಹೊಟ್ಟೆ ತುಂಬಾ ಊಟವನ್ನು ಕೊಟ್ಟು ಆತನ ಮನೆಗೆ ಕಳುಹಿಸಿದನು.
ಇದಾದ ಎರಡು ದಿನಗಳ ತರುವಾಯ ಆ ಕೆಲಸದ ಆಳು ತನ್ನ ಜಮೀನ್ದಾರನ ಜಮೀನಿನಲ್ಲಿ ನಿತ್ಯದ ಕೆಲಸಗಳನ್ನು ಮುಗಿಸಿ ಸಂಜೆಯ ವೇಳೆಗೆ ತನ್ನ ಮನೆಯಲ್ಲಿ ಕುಳಿತಿದ್ದಾಗ ಆತನ ಮನೆಯ ಮುಂದೆ ಒಬ್ಬ ಶ್ರೀಮಂತನ ಕುದುರೆ ಗಾಡಿಯು ಬಂದು ನಿಂತಿತು. ಗಾಡಿಯಿಂದ ಬೆಲೆಬಾಳುವ ಬಟ್ಟೆ, ಕೋಟು ಮತ್ತು ಟೈ ಧರಿಸಿ ಬೂಟು ಧರಿಸಿದ್ದ ವ್ಯಕ್ತಿಯೊಬ್ಬ ಇಳಿದು ನೇರವಾಗಿ ಕೆಲಸದ ಆಳಿನ ಮನೆಯೊಳಗೆ ಬಂದನು. ಆ ವ್ಯಕ್ತಿಯನ್ನು ಆಶ್ಚರ್ಯದಿಂದ ನೋಡಿದ ಕೆಲಸದ ಆಳು ತಾವು ಯಾರೆಂದು ಕೇಳಿದ. ಆಗ ಆತನನ್ನು ಪರಿಚಯಿಸಿಕೊಂಡ ಆ ಶ್ರೀಮಂತ ವ್ಯಕ್ತಿಯು ‘ನಾನು ನಿಮ್ಮ ಪಕ್ಕದ ಹಳ್ಳಿಯವನು, ನನ್ನ ಪ್ರಥಮ ಪುತ್ರನು ನೀವು ಕೆಲಸ ಮಾಡುತ್ತಿದ್ದ ಜಮೀನಿನ ಪಕ್ಕದಲ್ಲಿರು ಪಾಳು ಬಾವಿಗೆ ನಿನ್ನೆ ಬಿದ್ದಿದ್ದಾಗ ನೀವು ಆತನನ್ನು ಪಾಳು ಬಾವಿಯಿಂದ ಮೇಲೆತ್ತಿ ರಕ್ಷಿಸಿ ಆತನ ಪ್ರಾಣವನ್ನು ಉಳಿಸಿರುತ್ತೀರಿ. ನೀವು ನನ್ನ ಬದುಕಿನ ಆಶಾಕಿರಣವನ್ನು ಜೀವಂತ ಉಳಿಸಿರುವುದರಿಂದ ನಾನು ನಿಮಗೆ ಏನನ್ನು ಉಡುಗೊರೆಯಾಗಿ ಕೊಟ್ಟರೂ ಅದು ಕಡಿಮೆಯೇ, ಮತ್ತು ನೀವು ಮಾಡಿದ ಉಪಕಾರ ನನ್ನ ಜೀವಿತಾವಧಿಯ ಕೊನೆಯವರೆಗೂ ನೆನಪಿನಲ್ಲಿರುತ್ತದೆ. ನಿಮ್ಮ ಈ ಋಣವನ್ನು ಈ ಜನ್ಮದಲ್ಲಿ ನನ್ನಿಂದ ತೀರಿಸಲೂ ಸಾಧ್ಯವಿಲ್ಲ. ಆದ್ದರಿಂದ ನನ್ನೀ ಸಣ್ಣ ಉಡುಗೊರೆಯನ್ನು ನೀವು ಸ್ವೀಕರಿಸಬೇಕು’ ಎಂದು ಆ ಶ್ರೀಮಂತ ಒಂದಷ್ಟು ಒಡವೆಗಳನ್ನು ಹಾಗೂ ಹಣವನ್ನು ಆ ಕೆಲಸದ ಆಳಿನ ಮುಂದೆ ಇಟ್ಟನು.
ಇದನ್ನು ನೋಡಿದ ಆ ಕೂಲಿ ಆಳು ಕ್ಷಮಿಸಿ ಸ್ವಾಮಿ, ನಾನು ಯಾವುದೇ ಪ್ರತ್ಯುಪಕಾರವನ್ನು ಬಯಸಿ ಆ ಹುಡುಗನನ್ನು ರಕ್ಷಿಸಲಿಲ್ಲ, ಅದಕ್ಕಿಂತ ಮಿಗಿಲಾಗಿ ಆ ಹುಡುಗ ನಿಮ್ಮ ಮಗ ಎನ್ನುವುದು ನನಗೆ ಈಗಲೇ ತಿಳಿದದ್ದು. ಮನುಷ್ಯನಾಗಿ ನಾನು ಮನುಷ್ಯತ್ವದಿಂದ ಇನ್ನೊಂದು ಜೀವ ಅಪಾಯದಲ್ಲಿ ಇದ್ದಾಗ ಅದರ ರಕ್ಷಣೆಯನ್ನು ಮಾಡಿದ್ದೇನೆ. ಅದು ನನ್ನ ಕರ್ತವ್ಯ ಅಷ್ಟೇ ಎನ್ನುತ್ತಾ ಶ್ರೀಮಂತ ನೀಡಿದ ಒಡವೆ ಹಾಗೂ ಹಣವನ್ನು ತಿರಸ್ಕರಿಸಿದ. ಆ ವೇಳೆಗೆ ಕೂಲಿ ಆಳಿನ ಮಗನೂ ಅಲ್ಲಿಗೆ ಬಂದು ಶ್ರೀಮಂತ ವ್ಯಕ್ತಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿದನು. ಆಗ ಆ ಶ್ರೀಮಂತನು ಕೂಲಿ ಆಳಿನ ಬಳಿ ಆತನ ಮಗ ಏನು ಓದುತ್ತಿದ್ದಾನೆ ಎಂದು ಕೇಳಿದನು. ಆಗ ಆ ಕೂಲಿ ಆಳು, ನಾನಂತೂ ಕೂಲಿ ಕೆಲಸವನ್ನು ಮಾಡಿ ಜೀವನವನ್ನು ನಿರ್ವಹಿಸುತ್ತಿದ್ದೇನೆ, ನನ್ನಿಂದ ಸಾಧ್ಯವಾದಷ್ಟು ಓದಿಸಿದ್ದೇನೆ, ಹೆಚ್ಚಿನ ವಿದ್ಯಾಭ್ಯಾಸವನ್ನು ಬಡತನದ ಕಾರಣದಿಂದ ಕೊಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಈಗ ನನ್ನ ಮಗನೂ ನನ್ನ ಜೊತೆಗೆ ಜಮೀನ್ದಾರರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದನು.
ಇದನ್ನು ಕೇಳಿದ ಆ ಶ್ರೀಮಂತನು, ಹಾಗಾದರೆ ನಾನು ನನ್ನ ಸ್ವಂತ ಖರ್ಚಿನಲ್ಲಿ ನಿನ್ನ ಮಗನಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸುತ್ತೇನೆ. ಆ ಮೂಲಕವಾದರೂ ನನ್ನ ಮಗನನ್ನು ಕಾಪಾಡಿದ ನಿನ್ನ ಋಣ ತೀರಿಸಲು ಅವಕಾಶ ಮಾಡಿ ಕೊಡು ಎಂದು ಕೂಲಿ ಆಳಿನ ಬಳಿ ಬೇಡಿಕೊಂಡ. ಶ್ರೀಮಂತನ ಪರಿಪರಿಯಾದ ಮನವಿಗೆ ಕರಗಿದ ಕೂಲಿ ಆಳು ಒಪ್ಪಿಕೊಂಡ. ನಂತರ ಶ್ರೀಮಂತನ ಮಗ ಮತ್ತು ಕೂಲಿ ಆಳಿನ ಮಕ್ಕಳಿರೂ ಚೆನ್ನಾಗಿ ಓದಿ ವಿದ್ಯಾವಂತರಾದರು.
ಸುಮಾರು ೧೦-೧೫ ವರ್ಷಗಳ ನಂತರ ಆ ಶ್ರೀಮಂತನ ಮಗನಿಗೆ ಯಾವುದೋ ಒಂದು ಅಜ್ಞಾತ ಹಾಗೂ ಮಾರಣಾಂತಿಕ ರೋಗವು ಬಾಧಿಸಿತ್ತು ಮತ್ತು ಆ ದೇಶದ ಎಲ್ಲಾ ಹೆಸರಾಂತ ವೈದ್ಯರೂ ಆತನ ರೋಗವನ್ನು ಗುರುತಿಸಲು ಸಾಧ್ಯವಾಗದೆ ಅಸಹಾಯಕರಾಗಿ ಬಿಟ್ಟಿದ್ದರು. ಆ ವೇಳೆಗೆ ಒಂದು ಕಾಲದಲ್ಲಿ ಶ್ರೀಮಂತ ಓದಿಸಿದ್ದ ಕೂಲಿ ಆಳಿನ ಮಗನು ಶ್ರೀಮಂತನ ರೋಗಗ್ರಸ್ತ ಮಗನ ಬಳಿಗೆ ಬಂದು ಪರೀಕ್ಷಿಸಿ ಆ ಕಾಯಿಲೆಯನ್ನು ಗುರುತಿಸಿ ಅದಕ್ಕೆ ತಾನೇ ಕಂಡುಹಿಡಿದಿದ್ದ ಔಷಧವನ್ನು ನೀಡಿದನು. ಕೂಲಿ ಆಳಿನ ಮಗನು ನೀಡಿದ ಔಷಧದ ಫಲವಾಗಿ ಶ್ರೀಮಂತನ ಮಗನ ಕಾಯಿಲೆಯು ಶೀಘ್ರವೇ ಗುಣವಾಯಿತು.
ಆ ಬಡ ಕೂಲಿ ಆಳಿನ ಮಗನೇ ಜಗತ್ತಿನ ಪ್ರಖ್ಯಾತ ವಿಜ್ಞಾನಿ ಪೆನ್ಸಿಲಿನ್ ಲಸಿಕೆಯನ್ನು ಕಂಡುಹಿಡಿದ ‘ಅಲೆಕ್ಸಾಂಡರ್ ಫ್ಲೇಮಿಂಗ್’. ಕೂಲಿ ಆಳಿನ ಮಗನ ಓದಿಗೆ ಸಹಾಯ ಮಾಡಿದ್ದ ಆ ಶ್ರೀಮಂತ ವ್ಯಕ್ತಿಯ ಮಗನೇ ಬ್ರಿಟನ್ ದೇಶದ ಮಾಜಿ ಪ್ರಧಾನ ಮಂತ್ರಿ ‘ವಿನ್ಸಟನ್ ಚರ್ಚಿಲ್’.
ಪ್ರತಿಫಲವನ್ನು ಅಪೇಕ್ಷಿಸದೇ ಸಹಾಯ ಮಾಡುವ ಕೆಲಸ ಸುಮ್ಮನೆ ವ್ಯರ್ಥವಾಗುವುದಿಲ್ಲ ಮತ್ತು ಅದು ಸದಾ ಸಹಾಯ ಮಾಡಿದವನ ಜೊತೆಗೇ ಪುಣ್ಯವಾಗಿ ತಿರುಗುತ್ತಾ ಇರುತ್ತದೆ. ಈ ಪುಣ್ಯವೇ ಮುಂದೊಂದು ದಿನ ಇನ್ಯಾವುದೋ ಅಜ್ಞಾತ ರೂಪದಲ್ಲಿ ನಿರೀಕ್ಷೆಗೂ ಮೀರಿದ ಫಲವನ್ನು ನೀಡುತ್ತದೆ. ಆದರೆ ಸಹಾಯವನ್ನು ಮಾಡುವಾಗ ನನಗೆ ಇದರಿಂದ ಮುಂದೆ ಒಂದು ದಿನ ದುಪ್ಪಟ್ಟು ಸಹಾಯ ಸಿಗುತ್ತದೆ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಅಷ್ಟೇ. ಭಕ್ತಿಯಿಲ್ಲದ ಪೂಜೆಯು ವ್ಯರ್ಥವಾದಂತೆ, ಗುರುಗಳು ಇಲ್ಲದ ವಿದ್ಯೆಯು ಅರ್ಥಹೀನ ಆದಂತೆ, ಕಷ್ಟದಲ್ಲಿ ಇರುವವರಿಗೆ ಸಹಾಯವನ್ನು ಮಾಡುವ ಸಂದರ್ಭದಲ್ಲಿ ಪ್ರತಿಫಲದ ಅಪೇಕ್ಷೆಯೇ ಇಲ್ಲದೇ ಸಹಾಯವನ್ನು ಮಾಡಬೇಕು. ಪ್ರತಿಫಲದ ಅಪೇಕ್ಷೆಯಿಂದ ಮಾಡುವ ಸಹಾಯವು ಸದಾ ಸ್ವಾರ್ಥ ಎಂದೇ ಕರೆಯಲ್ಪಡುತ್ತದೆ. ಸಹಾಯವನ್ನು ಮಾಡುವ ಕಿಂಚಿತ್ತು ಅವಕಾಶ ದೊರೆತರೂ ಜಾತಿ, ಮತ, ಅಂತಸ್ತು ಮತ್ತು ಪಕ್ಷಬೇಧವಿಲ್ಲದೇ ಪ್ರಾಮಾಣಿಕತೆಯಿಂದ ಮಾಡಬೇಕು. ಸ್ವಾರ್ಥ ರಹಿತವಾಗಿ ಮಾಡುವ ಸಹಾಯವು ಅತ್ಯಂತ ಶ್ರೇಷ್ಠವಾದದ್ದು.
ಸುಮಾರು ಎಂಭತ್ತು ವರ್ಷ ವಯಸ್ಸಿನ ವೃದ್ಧರೊಬ್ಬರು ರಸ್ತೆಯ ಬದಿಯಲ್ಲಿ ಮಾವಿನ ಗಿಡವೊಂದನ್ನು ನೆಡುತ್ತಿದ್ದರು. ಇದನ್ನು ನೋಡಿದ ಯುವಕನು ಜೋರಾಗಿ ನಗುತ್ತಾ ಅಯ್ಯೋ ಅಜ್ಜಾ ಇವತ್ತೋ ನಾಳೆಯೋ ಸಾಯುವಂತೆ ಇರುವ ನೀನು ಈ ಮಾವಿನ ಗಿಡವನ್ನು ನೆಡುತ್ತಿದ್ದೀಯಲ್ಲಾ, ನಿನಗೇನು ಹುಚ್ಚೇ? ಈ ಮಾವಿನ ಗಿಡ ಬೆಳೆದು ಮರವಾಗುವುದು ಯಾವಾಗ? ಮರವಾದ ಈ ಗಿಡವು ಹೂವನ್ನು ಬಿಡುವುದು ಯಾವಾಗ? ಬಿಟ್ಟ ಹೂವು ಮಾವಿನ ಹಣ್ಣು ಆಗುವುದು ಯಾವಾಗ? ಆ ಮಾವಿನ ಹಣ್ಣನ್ನು ತಿನ್ನಲು ನೀನು ಬದುಕಿ ಇರುವೆಯಾ? ಎಂದು ಕೇಳಿದನು. ಆಗ ಆ ವೃದ್ಧನು, ‘ಮಗನೇ ನಾನು ಈ ಮಾವಿನ ಗಿಡವು ಬೆಳೆದು ಮರವಾದಾಗ ಬಿಡುವ ಹಣ್ಣಿನ ಅಪೇಕ್ಷೆಯಿಂದ ನೆಡುತ್ತಿಲ್ಲ, ಬದಲಿಗೆ ನಾನು ನೆಟ್ಟ ಈ ಗಿಡದಿಂದ ನನ್ನ ಮಕ್ಕಳು ಅಥವಾ ಮೊಮ್ಮಕ್ಕಳು ಆದರೂ ರುಚಿ ಭರಿತವಾದ ಮಾವಿನ ಹಣ್ಣನ್ನು ತಿನ್ನುತ್ತಾರೆ ಎನ್ನುವ ಭರವಸೆಯಿಂದ ಗಿಡವನ್ನು ನೆಡುತ್ತಿದ್ದೇನಪ್ಪಾ’ ಎಂದು ಹೇಳಿದರು.
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

