-ಸಂತೋಷ ಎಸ್ ಬಂಡೆ ಶಿಕ್ಷಕರು, ನಾಗಠಾಣ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಪರಂಪರೆಯೇ ಇದೆ. ಮೆರವಣಿಗೆಯ ಸಾಲಿನಂತೆ ಬರುವ ಈ ಹಬ್ಬಗಳಲ್ಲಿ ಮೊದಲನೇಯದೇ ಈ ಯುಗಾದಿ! ಹೊಸ ಸಂವತ್ಸರದ ಬಾಗಿಲನ್ನು ತೆರೆಯುವ ಕೀಲಿಕೈಯಂತಹ ಈ ಹಬ್ಬ ಕಳಸ-ಕನ್ನಡಿ ಹೊತ್ತು ಬರುವ ಹಿರಿಯ ಮುತ್ತೈದೆಯಂತೆ!ಯುಗಾದಿ ಹಬ್ಬ ಬದುಕಿನಲ್ಲಿ ಹೊಸತನವನ್ನು ಅಳವಡಿಸುವ –ಎಚ್ಚರಿಸುವ ಹಬ್ಬವೂ ಹೌದು, ಋತುಗಳ ರಾಜನ ಆಗಮನದ ಹಬ್ಬವಾದ ಈ ಯುಗಾದಿ ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಹರುಷ ತರುವ ಹಬ್ಬವೇ ಆಗಿದೆ. ಈ ಹಿನ್ನೆಲೆಯಲ್ಲೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಯುಗಾದಿ ಕುರಿತು ಹೀಗೆ ಹಾಡಿರುವದು.
‘ಒಳಿತು ಕೆಡುಕು ಏನು ಬಂದರು
ಇರಲಿ ಎಲದ್ದಕ್ಕೂ ಸ್ವಾಗತ
ಯುಗ-ಯುಗಾದಿಗೆ
ಹೊಸತು ಹರ್ಷವು ಬರಲಿ ಬಾರದೆ ಹೋಗಲಿ
ಬಂದ ಚೈತ್ರ ಚಿರವಿನೂತನ
ಮಂದಹಾಸವೇ ಉಳಿಯಲಿ!,,,,,ಎಂದು ಯುಗಾದಿ ಕುರಿತು ಹಾಡಿ ಹೊಗಳಿದ್ದಾರೆ.
ಕನಸು ಮತ್ತು ವಾಸ್ತವಗಳ ಸಂಗಮವಾದ ಯುಗದ ‘ಆದಿ’ ಯುಗಾದಿ ಮತ್ತೆ ಬಂದಿದೆ. ಕನಸುಗಳನ್ನು ಸಾಕಾರಗೊಳಿಸುವ ಚೈತನ್ಯ ಮತ್ತು ವಾಸ್ತವಗಳಿಗೆ ಮುಖಾಮುಖಿಯಾಗಿ ಸೆಣಸುವ ದೃಢ ಸಂಕಲ್ಪ ಮಾಡಬೇಕೆಂಬ ಸಂದೇಶ ಸಾರುವ ಈ ಹಬ್ಬ ಬೇವು-ಬೆಲ್ಲದ ಹಬ್ಬವೂ ಆಗಿದೆ. ಹಳೆಯದನ್ನು ಮರೆತು ಹೊಸದರತ್ತ ಅಡಿ ಇಡುವ ಹೊಸ ಆಲೋಚನೆಯತ್ತ ಕರೆದೊಯ್ದು ಬದುಕನ್ನು ಚಲನಶೀಲಗೊಳಿಸುವ ಈ ಹಬ್ಬ ಹಿಂದೂ ಧರ್ಮಿಯರಿಗೆ ಅಮೃತ ಘಳಿಗೆಯೂ ಹೌದು! ಹೊಸ ಚೈತನ್ಯವನ್ನು ಮನ-ಮನಗಳಲ್ಲಿ ಮೂಡಿಸುವ, ನೋವು-ನಲಿವುಗಳಿಗೆ ವಿರಾಮ ಹೇಳುವ ಈ ಹಬ್ಬದ ಆಗಮನಕ್ಕೆ ಪ್ರಕೃತಿಯೇ ಅಲಂಕೃತಳಾಗುತ್ತಾಳೆ.
ನಾಡಿನಾದ್ಯಂತ ಎಲ್ಲರ ಮನೆ-ಮನಗಳ ಅಂಗಳದಲ್ಲಿ ಸಂಭ್ರಮ-ಸಡಗರ ಇಂದು ತುಂಬಿರುತ್ತದೆ. ದೇವಸ್ಥಾನಗಳಲ್ಲಿ ಘಂಟೆಯ ನಿನಾದ-ತುಪ್ಪದದೀಪ-ಮಂಗಳಾರತಿ ಇಂದಿನ ವಿಶೇಷ. ಈ ದಿನದ ಮತ್ತೊಂದು ಆಕರ್ಷಣೆಯೆಂದರೆ ಬೇವು-ಬೆಲ್ಲವನ್ನು ಸೇವಿಸುವದು.
‘ಶತಾಯವಜ್ರ ದೇಹಾಯ
ಸರ್ವ ಸಂಪತ್ಕರಾಯಚ
ಸರ್ವರಿಷ್ಟ ವಿನಾಶಯ
ನಿಂಬ ಕಂದಳ ಭಕ್ಷಣಂ!’….ಎಂದು ಮಂತ್ರ ಹೇಳುತ್ತಾ ‘ಸರ್ವೇ ಜನೋ ಸುಖಿನೋಭವಂತು’ ಎಂಬ ಆಶಯದೊಂದಿಗೆ ಬೇವು-ಬೆಲ್ಲವನ್ನು ಸ್ವೀಕರಿಸಿ ಮೆಲ್ಲುವುದು ಯುಗಾದಿಯ ಸದಾಶಯವನ್ನು ನೆನೆಸುತ್ತದೆ. ಕಳೆದು ಹೋದ ವರುಷದ ನೆನಪುಗಳನ್ನು ಮೆಲುಕು ಹಾಕುವ ಮುಂದೆ ಸಾಧಿಸಬೇಕೆನ್ನುವುದಕ್ಕೆ ಸಂಕಲ್ಪ ತೊಡುವಂತೆ ಮಾಡುವ ಯುಗಾದಿ ಸುಖ-ದುಃಖಗಳ ರೂಪ.
ಪ್ರಕೃತಿಯಲ್ಲಾಗುವ ಬದಲಾವಣೆಯಂತೆ ಮನುಷ್ಯನ ಬದುಕು ಸದಾ ಬದಲಾವಣೆಗೆ ತೆರೆದುಕೊಂಡಿರಬೇಕು. ಸಿಹಿ-
ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು. ನಿರಾಶೆಗಳಿಗೆ ಕುಗ್ಗದೆ ಆಶಾವಾದಿಯಾಗಿರಬೇಕು. ಪ್ರಕೃತಿಯಲ್ಲಿರುವ ಸಮಯಪ್ರಜ್ಞೆಯನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡುವುದೇ ಈ ಹಬ್ಬದ ವಿಶೇಷ. ನಾವೆಲ್ಲರೂ ನಮ್ಮ ಬದುಕಿನಲ್ಲಿ ಸ್ವಾರ್ಥತೆಯನ್ನು ತೊರೆದು, ವಿಶಾಲಹೃದಯದ ಮನುಷ್ಯರಾದಾಗ ಮಾತ್ರ ಯುಗಾದಿ ಹಬ್ಬದ ಕಳಕಳಿ ಅರ್ಥವಾಗುತ್ತದೆ. ಬೇವು ತಿಂದವರಿಗೆ ಬೆಲ್ಲ ತಿನ್ನಿಸುವ, ಪರಿಪಾಠವನ್ನು ಬೆಳೆಸುವದೇ ಯುಗಾದಿ ಹಬ್ಬ ಆಚರಣೆಯ ಉದ್ದೇಶ. ಯುಗಾದಿ ಒಂದು ದಿನದ ಜಾತ್ರೆಯಾಗುವುದು ಬೇಡ. ಅದು ನೂರು ದಿನದ ಜಾತ್ರೆಯಾಗಲಿ, ಇಲ್ಲಿನ ದಾರಿದ್ರ್ಯ ಅಸಮಾನತೆ ತೊಲಗಿ ಬಾಳು ಬೆಳಗುವಂತಾಗಲಿ.
ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ
‘ಜೀವನವೆಲ್ಲ
ಬೇವುಬೆಲ್ಲ
ಎರಡೂ ಮೆಲ್ಲುವವನೆ
ಕವಿಮಲ್ಲ!’….ಎಂಬಂತೆ ಆಗಬೇಕಿದೆ. ನೆಮ್ಮದಿಯ ನಾಳೆಗಾಗಿ ನಾವೆಲ್ಲ ಇಂದೇ ಪಣತೊಡಬೇಕಾಗಿದೆ. ಆದ್ದರಿಂದ ಈ ಯುಗಾದಿ ಸಂದರ್ಭದಲ್ಲಾದರೂ ಒಳ್ಳೆಯದರತ್ತ ಹೋಗೋಣ, ಆಲೋಚಿಸೋಣ, ಕಾರ್ಯಸನ್ನದ್ಧರಾಗೋಣ!

– ಸಂತೋಷ ಎಸ್ ಬಂಡೆ
ಶಿಕ್ಷಕರು, ನಾಗಠಾಣ.

