ವಚನ ವಿಶ್ವವಿದ್ಯಾಲಯ ಸ್ಥಾಪನೆ ಘೋಷಣೆ: ರಾಷ್ಟ್ರೀಯ ಬಸವ ಸೈನ್ಯ ಹರ್ಷ
ಬಸವನಬಾಗೇವಾಡಿ: 12ನೇ ಶತಮಾನದಲ್ಲಿ ವಚನದ ಮೂಲಕ ಕ್ರಾಂತಿಯನ್ನು ಮಾಡಿದ ಮಹಾ ಮಾನವತವಾದಿ ವಿಶ್ವಗುರು ಬಸವಣ್ಣನವರ ಸಮಕಾಲಿನ ಶರಣರ ವಚನಗಳ ಅಧ್ಯಯನಕ್ಕಾಗಿ ವಚನ ವಿಶ್ವವಿದ್ಯಾಲಯವನ್ನು ಮುಂದಿನ ವರ್ಷ ಸರ್ಕಾರ ಆರಂಭಿಸುವುದಾಗಿ ಘೋಷಣೆ ಸಿಎಂ ಘೋಷಣೆ ಮಾಡಿರುವುದನ್ನು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸ್ವಾಗತಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಕಲ್ಯಾಣದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿರುವುದು ಸ್ವಾಗತಾರ್ಹ ವಿಷಯವಾಗಿದೆ.ಈಚೆಗೆ ಸರ್ಕಾರ ಬಸವಣ್ಣನವರನ್ನು ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡಿರುವದು ಬಸವನಾಡಿನ ಜನರಿಗೆ ಸಂತಸ ತಂದಿದೆ. ಈಗಾಗಲೇ ರಾಜ್ಯ ಸರ್ಕಾರವು ಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಸುಮಾರು 600 ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡುತ್ತಿದೆ. ಕೂಡಲಸಂಗಮದಲ್ಲಿ ವಚನ ಅಧ್ಯಯನ ಪೀಠ ಸೇರಿದಂತೆ ಬಸವಣ್ಣನವರ ಸಮಕಾಲಿನ ಶರಣರ ಸ್ಮಾರಕಗಳು ನಿರ್ಮಾಣಗೊಂಡಿದ್ದು ಸಂತೋಷದ ವಿಷಯವಾಗಿದೆ. ರಾಜ್ಯ ಸರ್ಕಾರ ಬಜೆಟಿನಲ್ಲಿ ಬಸವ ಜನ್ಮಸ್ಥಳ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಘೋಷಣೆ ಮಾಡಿರುವದು ಸಹ ಬಸವ ನಾಡಿನ ಜನತೆಯಲ್ಲಿ ಹರ್ಷ ಉಂಟು ಮಾಡಿದೆ. ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ, ಐಕ್ಯಸ್ಥಳ ಕೂಡಲಸಂಗಮಕ್ಕೆ ಕೊಟ್ಟ ಆದ್ಯತೆಯನ್ನು ಬಸವ ಜನ್ಮ ಸ್ಥಳಕ್ಕೆ ಸರ್ಕಾರ ನೀಡಬೇಕು. ವಚನ ವಿಶ್ವವಿದ್ಯಾಲಯವನ್ನು ಬಸವನಬಾಗೇವಾಡಿಯಲ್ಲಿ ಸ್ಥಾಪನೆ ಮಾಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಗುವದು ಎಂದರು.
ಬಸವ ಜನ್ಮ ಸ್ಥಳ ಬಸವನಬಾಗೇವಾಡಿಯಲ್ಲಿ ವಚನ ವಿವಿ ಸ್ಥಾಪನೆ ಮಾಡಿದರೆ ಬಸವಜನ್ಮ ಸ್ಥಳವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪೂರಕವಾಗುತ್ತದೆ. ಈ ಪ್ರದೇಶ ಶೈಕ್ಷಣಿಕವಾಗಿ ಬಹಳಷ್ಟು ಹಿಂದುಳಿದಿದ್ದು ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದರ ಮೂಲಕ ನಮ್ಮ ಬಸವ ನಾಡಿನಲ್ಲಿ ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು. ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದ ವಚನ ಗುಮ್ಮಟ ಫ.ಗು. ಹಳಕಟ್ಟಿ ಅವರು ವಿಜಯಪಯರ ಜಿಲ್ಲೆಯವರು. ಈ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದರ ಮೂಲಕ ಫ.ಗು. ಹಳಕಟ್ಟಿ ಅವರಿಗೂ ಕೂಡ ಸರ್ಕಾರ ಗೌರವ ಸಲ್ಲಿಸಿದ ಹಾಗೆ ಆಗುತ್ತದೆ ಎಂದ ಅವರು, ವಚನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿ ವಚನಗಳಲ್ಲಿ ಬರುವ ಕೃಷಿ ಸೇರಿದಂತೆ ಪ್ರತಿಯೊಂದು ಕಾಯಕಗಳಿಗಾಗಿ ಆದ್ಯತೆಯನ್ನು ನೀಡಬೇಕು. ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್ಲ ಪ್ರಕಾರದ ಗಿಡ ಮರ ಬಳ್ಳಿಗಳು ಮತ್ತು ಔಷಧೀಯ ಸಸ್ಯಗಳು, ಪುಟ್ಟ ಅರಣ್ಯ ಮತ್ತು ಭವ್ಯವಾದ ಉದ್ಯಾನವನವನ್ನು ಸ್ಥಾಪಿಸಬೇಕು. ಉದ್ಯಾನವನದಲ್ಲಿ ದೇಶದಲ್ಲಿ ಅತಿ ಎತ್ತರದ ವಿಶ್ವಗುರು ಬಸವಣ್ಣನವರ ಪುತ್ಥಳಿ ಸ್ಥಾಪನೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಚಾಲಕ ಶ್ರೀಕಾಂತ ಕೊಟ್ರಶೆಟ್ಟಿ, ಮನ್ನನ ಶಾಬಾದಿ, ಪ್ರಶಾಂತ ಮುಂಜಾನೆ, ಸುನಿಲ ಚಿಕ್ಕೊಂಡ, ಮಹಾಂತೇಶ ಕೆರೂಟಗಿ, ಮಹಾಂತೇಶ ಹೆಬ್ಬಾಳ, ಸಂಗಮೇಶ ಬಿದರಿ ಇದ್ದರು.

