ಬಸವಕಲ್ಯಾಣ ಪಿಎಸೈ ವಾಗಮೋರೆ ಅಮಾನತಿಗೆ ಪಟ್ಟು | ಪಿಎಸೈಯಿಂದ ಅಮಾನವೀಯ ವರ್ತನೆ, ಜಾತಿ ನಿಂದನೆ ಆರೋಪ
ಇಂಡಿ: ಪಟ್ಟಣದ ಮತ್ತು ತಾಲೂಕಿನ ಬಂಗಾರ ಮಾರಾಟದ ಅಂಗಡಿಕಾರರು ಮತ್ತು ಆಭರಣ ತಯಾರಕರು ಬಸವಕಲ್ಯಾಣ ಪಿಎಸ್ಐ ಅಂಬರೀಷ ವಾಗಮೋರೆ ಇಂಡಿಯ ಇಬ್ಬರು ಬಂಗಾರದ ವ್ಯಾಪಾರಿಗಳ ಜೊತೆ ಅಮಾನವೀಯವಾಗಿ ವರ್ತಿಸಿ ಜಾತಿ ನಿಂದನೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಮೆರವಣಿಗೆ ಪಟ್ಟಣದ ಅಗಸಿಯ ಹನುಮಾನ ಮಂದಿರದಿಂದ ಮಿನಿ ವಿಧಾನಸೌಧವರೆಗೆ ನಡೆಯಿತು.
ದಾರಿಯೂದ್ದಕ್ಕೂ ಪಿಎಸ್ಐ ವರ್ತನೆ ವಿರುದ್ಧ ಘೋಷಣೆ ಕೂಗಿದರು.
ಸಂಘದ ಅಧ್ಯಕ್ಷ ಸೋಮನಗೌಡ ಬಿರಾದಾರ ಮಾತನಾಡಿ, ಬಸವಕಲ್ಯಾಣದಿಂದ ಆಗಮಿಸಿದ ಐದು ಜನರು ಯಾರೂ ಸಮವಸ್ತ್ರದಲ್ಲಿ ಇರಲಿಲ್ಲ. ಇಂಡಿಯ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿರಲಿಲ್ಲ. ಇಲ್ಲವೆ ಬಸವ ಕಲ್ಯಾಣ ಪೋಲಿಸರಿಂದ ಯಾವದೇ ತರಹದ ಲಿಖಿತ ಮಾಹಿತಿ ಇಲ್ಲ. ಮತ್ತು ಬಾಡಿಗೆ ವಾಹನದಲ್ಲಿ ಬಂದಿದ್ದರು ಎಂದು ಹೇಳಿದರು.
ಅಪ್ಪು ಮೋರೆ ಮಾತನಾಡಿ, ತಾನು ತುಡುಗಿನ ಬಂಗಾರ ತೆಗೆದುಕೊಂಡಿರುವುದಾಗಿ ಆರೊಪಿಸಿ ತನಗೆ ಹಣ ನೀಡಬೇಕೆಂದು ಕೇಳಿದರು. ತಾನು ನೀಡದೇ ಇದ್ದಾಗ ಬಸವಕಲ್ಯಾಣಕ್ಕೆ ತೆಗೆದುಕೊಂಡು ಹೋಗಿ ಲಾಡ್ಜ ನಲ್ಲಿ ಇಟ್ಟು ಹಣ ಕೊಡಲು ಕೇಳಿಕೊಂಡರು. ಎಟಿಎಂ ನಲ್ಲಿ ಹಣ ಕೊಡಬೇಕು, ಇಲ್ಲದಿದ್ದರೆ ಹಣ ತರಿಸಲು ತಿಳಿಸಿದರು. ಕೊನೆಗೆ ಅವರ ಹತ್ತಿರ ಇರುವ ಎರಡು ತೊಲಿ ಬಂಗಾರ ಮತ್ತು ಎರಡು ಲಕ್ಷ ರೂ ತೆಗೆದುಕೊಂಡು ಅವರನ್ನು ಇಂಡಿಯ ೨೦ ಕಿ.ಮಿ ದೂರದಲ್ಲಿ ಹಲಸಂಗಿ ಕ್ರಾಸ್ ವರೆಗೆ ತಂದು ಬಿಟ್ಟಿದ್ದಾರೆ ಎಂದರು.
ಪ್ರದೀಪ ಹಳ್ಳಿ ಮಾತನಾಡಿದರು.
ನ್ಯಾಯವಾದಿ ಮತ್ತು ಇಂಡಿ ಜೈನ ಸಮಾಜದ ಅಧ್ಯಕ್ಷ ಅಜೀತ ಧನಶೆಟ್ಟಿ, ಸನತ ಹಳ್ಳಿ, ಸುಜಿತ ಲಾಳಸಂಗಿ, ಮುಸ್ತಾಕ ನಾಯ್ಕೊಡಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಬಂಗಾರ ಮಾರಾಟಗಾರರ ಸಂಘದ ಉಪಾಧ್ಯಕ್ಷ ರಮೇಶ ಪೊದ್ದಾರ, ಗಂಗಾಧರ ಬಡಿಗೇರ, ಗೋಪಾಲ ಪತ್ತಾರ, ಶ್ರೀಶೈಲ ಅರ್ಜುಣಗಿ, ನಾಮದೇವ ಡಾಂಗೆ, ಸಂದೀಪ ಧನಶೆಟ್ಟಿ, ಖಜಾಂಚಿ ವಿಜಯಕುಮಾರ ಮಹೀಂದ್ರಕರ, ಡಿ.ಸಿ.ಉಡಚಾಣ, ಬಸವರಾಜ ಅರ್ಜುಣಗಿ ಮತ್ತಿತರಿದ್ದರು.
ಶಿರಸ್ತೆದಾರ ಎಸ್.ಆರ್.ಮುಜಗೊಂಡ ಇವರಿಗೆ ಮನವಿ ಸಲ್ಲಿಸಿದರು.

