ಬಿ.ಆರ್.ಬನಸೋಡೆ ರಚಿತ “ವಿಜಯಪುರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಹೆಜ್ಜೆಗಳು” ಕೃತಿ ಬಿಡುಗಡೆ
ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು ಸರಕಾರ ನಾನಾ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ನಗರದ ಕಂದಗಲ ಹನುಮಂತರಾಯ ರಂಗಮಂದಿರಲ್ಲಿ ರವಿವಾರ ನಡೆದ ಬಿ. ಆರ್. ಬನಸೋಡೆ ಅವರು ರಚಿಸಿರುವ ವಿಜಯಪುರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಹೆಜ್ಜೆಗಳು(ಬೀಳಗಿ ಸೋಮನಗೌಡರ ಕೋರ್ಟ್ ಕೇಸ್) ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಬೇಡ್ಕರ ಅವರು ದೇಶಕ್ಕೆ ವಿಶ್ವಶ್ರೇಷ್ಠ ಸಂವಿಧಾನವನ್ನು ನೀಡುವ ಮೂಲಕ ದೇಶದಲ್ಲಿ ಜಗತ್ತಿನ ಅಗ್ರಗಣ್ಯ ನಾಯಕರಾಗಿದ್ದಾರೆ. ಅವರು ಕೇವಲ ದಲಿತರಿಗೆ ಶಕ್ತಿಯನ್ನು ಕೊಡಲಿಲ್ಲ. ಬದಲಾಗಿ ತುಳಿತಕ್ಕೊಳಗಾದ, ಶೋಷಣೆಗೀಡಾದ ಮತ್ತು ಅಸಮಾನತೆಯನ್ನು ಎದುರಿಸುತ್ತಿರುವ ಎಲ್ಲ ಸಮುದಾಯಗಳು ಹಾಗೂ ಭಾರತದ ಎಲ್ಲ 130 ಜನರಿಗೆ ಶಕ್ತಿಯನು ತುಂಬಿದ್ದಾರೆ. ಎಲ್ಲ ವಿವಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಡಾ. ಅಂಬೇಡ್ಕರ ಅವರ ಚಿಂತನೆಗಳ ಬಗ್ಗೆ ನೈಜ ಚಿಂತನೆಗಳು ಆಗಬೇಕು. ಅಧ್ಯಯನ ನಡೆಯಬೇಕು ಎಂದು ಅವರು ಹೇಳಿದರು.
ಅಂಬೇಡ್ಕರ ಅವರು ಬುದ್ಧ, ಬಸವಾದಿ ಶರಣರ ಅನುಭವ ಮಂಟಪದ ಪರಿಕಲ್ಪನೆ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಬಸವಣ್ಣನವರು ಬೇರೆಯಲ್ಲ. ಅಂಬೇಡ್ಕರ್ ಬೇರೆಯಲ್ಲ. ಬೇರೆ ದೇಶಗಳಲ್ಲಿ ಮತದಾನದಲ್ಲೂ ತಾರತಮ್ಯವಿತ್ತು. ಆದರೆ, ಅಂಬೇಡ್ಕರ್ ಅವರು ಎಲ್ಲರಿಗೂ ಒಂದೇ ಮತ ಜಾರಿ ಮಾಡುವ ಮೂಲಕ ಸಮಾನತೆ ಸಾರಿದ್ದಾರೆ. ಸಂವಿಧಾನಕ್ಕಿಂತ ಶ್ರೇಷ್ಠ ಯಾರೂ ಇಲ್ಲ. ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಂವಿಧಾನ ತಿರುಚುವ, ಮಾರ್ಪಡಿಸುವ ಧೈರ್ಯ ಯಾರಿಗೂ ಬರಬಾರದು. ಅದಕ್ಕೆ ಯಾರೂ ಕೈಹಾಕಬಾರದು. ಸಂವಿಧಾನವನ್ನು ತಿರುಚುವ ಶಕ್ತಿಗಳನ್ನು ನಾನು ವಿರೋಧಿಸುತ್ತೇನೆ ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರ ಬಗ್ಗೆ ಇಡೀ ಜಗತ್ತು ಶ್ರೇಷ್ಠ ಮಹಾಪುರುಷ ಎಂದೇ ಗುರುತಿಸುತ್ತಿದೆ. ಅವರ ವಿಜಯಪುರ ಭೇಟಿಯ ಕುರಿತು ಹೆಜ್ಜೆ ಗುರುತುಗಳನ್ನು ಪುಸ್ತಕದಲ್ಲಿ ದಾಖಲಿಸಿರುವ ಲೇಖಕ ಬಿ. ಆರ್. ಬನಸೋಡೆ ಉತ್ತಮ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಅವರು ವಿಜಯಪುರ ನಗರದ ರಾಣಿ ಬಗೀಚ್ ಪ್ರದೇಶಕ್ಕೂ ಬಂದು ಭಾಷಣ ಮಾಡಿದ್ದರು. ಅಂಬೇಡ್ಕರ್ ಅವರ ಚಿಂತನೆಗಳು ಜನರಿಗೆ ತಲುಪುವ ಕೆಲಸವಾಗಲಿ ಎಂದು ಹೇಳಿದರು.
ಈಗ ನಮ್ಮ ಸರಕಾರ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿ ಅಂಬೇಡ್ಕರ ಬಗ್ಗೆ ಇನ್ನೂ ಹೆಚ್ಚಿನ ಚಿಂತನೆಗಳನ್ನು ಜನರಿಗೆ ತಲುಪಿಸಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರೊ. ರಾಜು ಆಲಗೂರ, ಕಸಾಪ ಮಾಜಿ ಜಿಲ್ಲಾಧ್ಯ್ಕಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಉಪಮೇಯರ ದಿನೇಶ ಹಳ್ಳಿ, ನಿವೃತ್ತ ಎಂಜಿನಿಯರ್ ರಾಜಶೇಖರ ಯಡಹಳ್ಳಿ, ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ, ಮುಖಂಡರಾದ ಪುಂಡಲಿಕ ಮಾನವರ, ಶರಣು ಸಬರದ ಮುಂತಾದವರು ಉಪಸ್ಥಿತರಿದ್ದರು.
ಸೋಮಶೇಖರ ಕುರ್ಲೆ ಪ್ರಾರ್ಥಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಪ್ರೊ. ಯು. ಎನ್. ಕುಂಟೋಜಿ ಕೃತಿಯನ್ನು ಪರಿಚಯಿಸಿದರು. ಸೋಮಶೇಖರ್ ಕುರ್ಲೆ ಪ್ರಾರ್ಥಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ರಾಜಶೇಖರ ಉಮರಾಣಿ ನಿರೂಪಿಸಿದರು. ಡಾ. ಎಂ. ಎಸ್. ಮಾಗಣಗೇರಿ ವಂದಿಸಿದರು. ಡಾ. ರಾಜಕುಮಾರ ಜೊಲ್ಲೆ, ಮನು ಪತ್ತಾರ, ಬಸವರಾಜ ಕುಂಬಾರ ಕಾರ್ಯಕ್ರಮ ನಿರ್ವಹಿಸಿದರು.

