ನಾಗೂರ: ಮಕ್ಕಳ ಕಲಿಕಾ ಮೇಳದಲ್ಲಿ ಬಿಇಓ ವಸಂತ ರಾಠೋಡ ಅಭಿಮತ
ಬಸವನಬಾಗೇವಾಡಿ: ಪ್ರತಿಯೊಂದು ಶೈಕ್ಷಣಿಕ ಮೇಳಗಳು ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗಿವೆ. ಮಕ್ಕಳ ಕಲಿಕಾ ಮೇಳದಿಂದ ಮಕ್ಕಳ ಶೈಕ್ಷಣಿಕ ಮಟ್ಟ ಹೆಚ್ಚಳಕ್ಕೆ ಪೂರಕವಾಗುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ತಾಲೂಕಿನ ನಾಗೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಜೀಂ ಪ್ರೇಮ್ಜಿ ಫೌಂಡೇಶನ್ ಜಿಲ್ಲಾ ಸಂಸ್ಥೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ನಾಗೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುತ್ತಗಿ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಮೇಳದಲ್ಲಿ ಮಾತನಾಡಿದ ಅವರು, ಮಕ್ಕಳ ಕಲಿಕಾ ಮೇಳದಿಂದ ಮಕ್ಕಳಿಗೆ ವಿಷಯದ ಸರಳತೆ ಉಂಟಾಗುತ್ತದೆ. ಮಕ್ಕಳಲ್ಲಿ ಆಟದೊಂದಿಗೆ ಪಾಠ ಎನ್ನುವಂತೆ ವಿಷಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಈ ಕಲಿಕಾ ಮೇಳ ಮಕ್ಕಳಲ್ಲಿ ಹೊಸ ಹುಮ್ಮಸ್ಸು ಮೂಡಿಸುತ್ತದೆ ಎಂದರು.
ಶಿಕ್ಷಕರು ಪಾಠೋಪಕರಣ ಬಳಕೆ ಮಾಡಿಕೊಂಡು ಬೋಧನೆ ಮಾಡಿದರೆ ಉತ್ತಮವಾದ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ. ಕಲಿಕಾ ಮೇಳವು ಪ್ರತಿಯೊಂದು ಶಾಲೆಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಪ್ರೇರಣೆಯಾಗುತ್ತದೆ. ಇದೇ ಸಂದರ್ಭದಲ್ಲಿ ವಿಜ್ಞಾನ ದಿನಾಚರಣೆಯನ್ನು ಆಚರಿಸುತ್ತಿರುವುದು ಶ್ಲಾಘನೀಯ. ಅನೇಕ ವಿಜ್ಞಾನಿಗಳು ವಿಜ್ಞಾನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ವಿಜ್ಞಾನಿಗಳ ಕೊಡುಗೆ ಮಕ್ಕಳು ಅರಿತು ಅವರು ಮುಂದಿನ ದಿನಗಳಲ್ಲಿ ವಿಜ್ಞಾನಿಗಳಾಗಿ ಹೊರಹೊಮ್ಮುವಂತಾಗಲಿ ಎಂದರು.
ಮುಖ್ಯಗುರುಗಳ ಸಂಘದ ಅಧ್ಯಕ್ಷ ಎಂ.ಬಿ.ತೋಟದ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ರೇವಣಸಿದ್ದ ನಂದ್ಯಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಣ್ಣೂರ ಗ್ರಾಮ ಪಂಚಾಯಿತಿ ಸದಸ್ಯ ಶರಣಪ್ಪ ನಾಲತವಾಡ, ಶಿಕ್ಷಣ ಸಂಯೋಜಕಿ ಎ.ಎಸ್.ಗುಬ್ಬಾ, ಅಜೀಂ ಪ್ರೇಮ್ಜಿ ಫೌಂಡೇಶನ್ ಜಿಲ್ಲಾ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ನಿಂಗರಾಜ, ಪ್ರೌಢಶಾಲೆಯ ಪ್ರಭಾರಿ ಮುಖ್ಯಗುರುಮಾತೆ ಎಸ್.ಎ. ಮುಂಡಗೋಡ, ಮುಖಂಡ ಚಂದ್ರಶೇಖರ ಮುಳವಾಡ, ವಿಕಲಚೇತನರ ಸಂಘದ ಅಧ್ಯಕ್ಷ ಬಂದೇನವಾಜ ವಾಲೀಕಾರ ಇತರರು ಇದ್ದರು.
ಸಿಆರ್ಸಿ ಮಹೇಶ ಪೂಜಾರಿ ಪ್ರಾಸ್ತವಿಕವಾಗಿ ಮಾತನಾಡಿದರು.
ಶರಣಬಸು ಮಿಣಜಗಿ ಸ್ವಾಗತಿಸಿದರು. ಸಿ.ಎಸ್.ಹಡಪದ ನಿರೂಪಿಸಿದರು. ಎಸ್.ವ್ಹಿ.ಕಾಳಗಿ ವಂದಿಸಿದರು.
ಮೇಳದಲ್ಲಿ ಮುತ್ತಗಿ ಕ್ಲಸ್ಟರ್ ವ್ಯಾಪ್ತಿಯಲ್ಲಿರುವ ಎಲ್ಲ ಶಾಲೆಗಳ ಮುಖ್ಯಗುರುಗಳು, ಸಹಶಿಕ್ಷಕರು ತಮ್ಮ ಮಕ್ಕಳೊಂದಿಗೆ ವಿವಿಧ ಮಾದರಿ, ಪಾಠೋಪಕರಣಗಳೊಂದಿಗೆ ಭಾಗವಹಿಸಿದ್ದರು.

