ಶ್ರೀಮತಿ ಗೀತಾ ತಳಕಲ್
ಸಂಶೋಧನಾ ವಿದ್ಯಾರ್ಥಿನಿ, ಕನ್ನಡ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ.

ಮಕ್ಕಳ ಸಾಹಿತ್ಯ ಆರಂಭದಲ್ಲಿ ಕಿವಿಯ ಮೂಲಕ ಗ್ರಹಿಸುವ ಲಾಲಿ ಹಾಡುಗಳಿಂದಲೇ ಕೂಡಿದ್ದು, ಅನಂತರ ಕಥೆಗಳಿಂದ ಬೆಳೆದು ಬಂದಿರಬಹುದು.. ಹಾಡುವ ಹಾಗೂ ಕಥೆ ಹೇಳುವವರ ಹಾವಭಾವಗಳನ್ನು ನೋಡಿಯೂ ಮಗು ಗ್ರಹಿಸಬಹುದು. ಈ ಕಾರಣದಿಂದ ಮಾನವನ ಸಾಹಿತ್ಯದ ಬುನಾದಿ ಇದಾಗಿದೆ ಎಂದರೆ ತಪ್ಪಾಗಲಾರದು. ಮಕ್ಕಳ ಸಾಹಿತ್ಯದ ಮೂಲ ಆಶಯ ಜಾನಪದವಾಗಿರುವುದು. ಜಗತ್ತಿನಲ್ಲಿ ಇದು ಹೇಗೇ ಪ್ರಾರಂಭವಾಗಿರಲಿ ಮಕ್ಕಳಿಗೆ ಅಗತ್ಯವಾದದ್ದು, ಉಪಯುಕ್ತವಾದದ್ದು ಎನ್ನುವುದಕ್ಕೆ ಎರಡನೇ ಮಾತಿಲ್ಲ. ಹಿರಿಯರೂ ಇದನ್ನು ಸವಿಯಬಹುದು ಎನ್ನುವುದು ಇದರ ಒಂದು ವಿಶೇಷ ಲಕ್ಷಣ.
ಮಕ್ಕಳ ಸಾಹಿತ್ಯ ಮಕ್ಕಳಿಗೆ ನಲಿವು, ತಿಳಿವು ಎರಡನ್ನು ಕೊಡಬೇಕು. ಸಂಸ್ಕೃತಿ, ಶಿಕ್ಷಣ, ಕುಟುಂಬ ಮತ್ತು ಪರಿಸರ ಈ ನಾಲ್ಕರ ಪ್ರಭಾವ ಮಕ್ಕಳ ಸಾಹಿತ್ಯದಲ್ಲಿ ಬರಬೇಕು. ಮಕ್ಕಳ ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಭಾಷಿಕ ಬೆಳವಣಿಗೆಗೆ ಸಹಾಯಕವಾಗಬೇಕು ಮೊದಲಾದ ಅನೇಕ ಅಭಿಪ್ರಾಯಗಳು ಮಕ್ಕಳ ಸಾಹಿತ್ಯ ಕುರಿತು ವ್ಯಕ್ತವಾಗಿದೆ. ಒಟ್ಟಾರೆ ಮಕ್ಕಳ ಸಾಹಿತ್ಯ ಎಂಬುದು ಮಕ್ಕಳಿಗೆ ಸಂತೋಷ ನೀಡಬೇಕು, ಭಾಷೆಯನ್ನು ಕಲಿಸಬೇಕು, ಆಲೋಚನಾ ಶಕ್ತಿಯನ್ನು ಬೆಳೆಸಬೇಕು, ಜೊತೆಗೆ ಬದುಕುವ ವಿವೇಕವನ್ನು ಕಲಿಸುವಂತಿರಬೇಕು ಮತ್ತು ಆಲೋಚನೆ ಮಾಡುವಂತಿರಬೇಕು. ಆಗ ಮಕ್ಕಳ ಸಾಹಿತ್ಯವೆಂಬುದು ಸಾರ್ಥಕವಾದೀತು, ಕಾವ್ಯ ಜಗತ್ತಿನಲ್ಲಿ ಮಕ್ಕಳ ಪದ್ಯಗಳನ್ನು ಫ್ರಾನ್ಸ್ ದೇಶದ ಪೆಕಾಟ್ ಎನ್ನುವ ಅತ ಮೊದಲು ಪ್ರಕಟಿಸಿದನೆಂದು ನಂಬಲಾಗಿದೆ . ‘ಸಾಂಗ್ಸ್ ಆಫ್ ನರ್ಸರಿ’ 1717 ರಲ್ಲಿ ಪ್ರಕಟವಾಯಿತು ಎಂದು ತಿಳಿದು ಬರುತ್ತದೆ. ಕನ್ನಡದಲ್ಲಿ 1862 ರಲ್ಲಿ ಹೊರಬಂದ “ಬಾಲ ಗೀತೆಗಳು” ಎನ್ನುವ ಮೊದಲ ಸಂಕಲನವನ್ನು ಸಿದ್ಧಪಡಿಸಿದವರು ಜಿ. ಮ್ಯಾಕ್ ಅವರು. ಆದರೆ ಅವರ ಈ ಕೃತಿ ಲಭ್ಯವಿಲ್ಲ. ಕೆರೋಡಿ ಸುಬ್ಬರಾಯರು, ಎಸ್. ಜಿ ನರಸಿಂಹಚಾರ್ಯರು ಇಂಗ್ಲೀಷ್ ಭಾಷೆಯಿಂದ ಮಕ್ಕಳಿಗಾಗಿ ಹಲವಾರು ಕವಿತೆಗಳನ್ನು ಅನುವಾದಿಸಿದ್ದಾರೆ. ಇವುಗಳಲ್ಲಿ ಭಾಷೆ, ಛಂದಸ್ಸುಗಳು ಹಳೆಯ ಶೈಲಿಯಲ್ಲಿದ್ದರೂ ಇವು ಮೊದಲ ಪ್ರಯತ್ನಗಳಾಗಿವೆ.
19ನೇ ಶತಮಾನದ ಉತ್ತರಾರ್ಧದಲ್ಲಿ ಮಕ್ಕಳಿಗಾಗಿಯೇ ಸಿದ್ಧಪಡಿಸಿದ ಪಠ್ಯ ಹಾಗೂ ಕ್ರಮಿಕ ಪುಸ್ತಕಗಳಲ್ಲಿ, ವಾಚಿಕೆಗಳಲ್ಲಿ ಮಕ್ಕಳ ಕವಿತೆಗಳು ಕಂಡುಬರುತ್ತವೆ. ಈ ಪ್ರಯತ್ನಗಳಲ್ಲಿ ಕ್ರೈಸ್ತ ಮಿಷಿನರಿಗಳ ಪ್ರಯತ್ನ ಶ್ಲಾಘನೀಯ ಪಾತ್ರ. ಮೊದಮೊದಲಿಗೆ ದೇವರ ಪ್ರಾರ್ಥನೆ, ಆದರ್ಶಗಳ ಬೋಧನೆ ಇಂತವುಗಳ ಜೊತೆ ಕ್ಲಿಷ್ಟವಾದ ಪದಗಳ ಸಂಯೋಜನೆಗಳು ಕಾಣಿಸಿಕೊಂಡವು. ಬರಬರುತ್ತಾ ಕಾಲ ಮುಂದೆ ಸಾಗಿದಂತೆಲ್ಲ ಸರಳವಾದ ಹಾಗೂ ಸೊಗಸಾದ ರಚನೆಗಳು ಬಂದಿರುವುದು ಈಗ ಇತಿಹಾಸವಾಗಿದೆ. ಮುದ್ರಣಾಲಯಗಳು ಪ್ರಾರಂಭವಾದ ಮೇಲಂತೂ ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೊಸ ಕ್ರಾಂತಿಯೇ ನಡೆಯಿತು. ಜಯ ರಾಯಚಾರ್ಯರ ಅನುಕರಣ ಗೀತೆಗಳು, ಸೋಸಲೆ ಅಯ್ಯಾ ಶಾಸ್ತ್ರಿಗಳ ಪದ್ಯಗಳು ಗಮನಸೆಳೆಯುತ್ತವೆ. ಇಂಥವರು ಅನೇಕರು ಮಕ್ಕಳ ಕಾವ್ಯದ ಬೆಳಗಾಗಿ ನೆಲವನ್ನು ಹದ ಮಾಡಿದರು. ವಸ್ತು, ಭಾಷೆ, ತಂತ್ರಗಳಲ್ಲಿ ಪ್ರಯೋಗಗಳು ನಡೆಯುತ್ತಾ ಹೋದವು.
ಪಂಜೆ ಮಂಗೇಶರಾಯ, ಜಿ.ಪಿ. ರಾಜರತ್ನಂ ಮತ್ತು ಹೊಯ್ಸಳ ಈ ಮೂವರನ್ನು ಮಕ್ಕಳ ಸಾಹಿತ್ಯದ ರತ್ನತ್ರಯರು ಎನ್ನಬಹುದು. ಕುವೆಂಪು, ಶಿವರಾಂ ಕಾರಂತ, ದಿನಕರ ದೇಸಾಯಿ, ರಾಘವ, ಎಲ್. ಗುಂಡಪ್ಪ, ಮೇವುಂಡಿ ಮಲ್ಲಾರಿ, ಸಿದ್ದಯ್ಯ ಪುರಾಣಿಕ, ತುಂ. ಸೆ ಮಂಗೇಶರಾವ್, ಸಿ. ಫಾ. ಕಟ್ಟಿಮನಿ ಮೊದಲಾದವರು ಮಕ್ಕಳ ಕವಿತೆಗಳನ್ನು ರಚಿಸಿ ಮಕ್ಕಳನ್ನು ಖುಷಿಪಡಿಸಿದರು. ಜಿ.ಪಿ. ರಾಜರತ್ನಂ ಅವರ ಒಂದು ಚುಟುಕು ಹೀಗಿದೆ: ಗಡಗಡ ಓಡಿತು ರೈಲು! ನಿಮಿಷಕ್ಕೆ ಸಾವಿರ ಮೈಲು! ಸಾವಿರ ಮೈಲನ್ನು! ಮೀರುತ್ತ ಹೋಗಲು! ಆಗದು ರೈಲಿನ ಕೈಲು!.ಅವರ ರಚನೆಗಳಲ್ಲಿ ಇಂತಹ ಚೋಟಾರಿ ಮೋಟಾರಿ ಚುಟುಕಗಳ ಜೊತೆಗೆ ಮಕ್ಕಳನ್ನು ಕುಣಿಸಿ ತಣಿಸಬಲ್ಲ ಪದ್ಯಗಳಿವೆ. ಇಂತಹ ಹಿರಿಯರೆಲ್ಲ ಬಿತ್ತಿದ ನೆಲಕ್ಕೆ ನೀರೆರೆದು ಗೊಬ್ಬರ ಹಾಕಿದವರು ಮುಂದಿನ ಹಂತದ ಕವಿಗಳು.
ಶಂ.ಗು.ಬಿರಾದಾರ, ಸಿ.ಸು.ಸಂಗಮೇಶ, ಬಿ.ಎ.ಸನದಿ, ರಸಿಕ.ಪುತ್ತಿಗೆ, ಶಶಿಕುಮಾರ, ಫಳಕಳ ಸೀತಾರಾಮ ಭಟ್ಟ ಮುಂಡಾಜಿ ರಾಮಚಂದ್ರಭಟ್ಟ, ಶ್ರೀನಿವಾಸ ಶೆಟ್ಟಿ, ಈಶ್ವರ್ ಕಮ್ಮಾರ, ಚೆನ್ನವೀರ ಕಣವಿ, ಕಂಚಾಣಿ ಶರಣಪ್ಪ, ಎಂ .ವಿ ಸೀತಾರಾಮಯ್ಯ, ನೀ.ರೇ. ಹಿರೇಮಠ ಮೊದಲಾದವರು ಈ ಸಾಲಿಗೆ ಸೇರುತ್ತಾರೆ. ತಲೆಯೆತ್ತಿದ ಸಸಿಗೆ ಆಧಾರ ನೀಡಿ, ಅದನ್ನು ಪೋಷಿಸುತ್ತಿರುವವರು ಹಲವಾರು ಕವಿಗಳು. ಎಚ್.ಎಸ್ . ವೆಂಕಟೇಶಮೂರ್ತಿ, ಎನ್. ಎಸ್ .ಲಕ್ಷ್ಮೀನಾರಾಯಣ ಭಟ್, ಟಿ.ಎಸ್. ನಾಗರಾಜ ಶೆಟ್ಟಿ, ಎನ್ ಶ್ರೀನಿವಾಸ್ ಉಡುಪ, ಸಿ.ಎಂ. ಗೋವಿಂದ ರೆಡ್ಡಿ, ಸುಮಿತಿಂದ್ರ ನಾಡಿಗ, ಆರ್ .ಕೆ .ಶಾನುಭೋಗ, ಬಿ. ತಿಪ್ಪೇರುದ್ರಪ್ಪ ಮೊದಲಾದವರನ್ನು ಹೆಸರಿಸಬಹುದು.
ಮುಪ್ಪಿನ ಷಡಕ್ಷರಿಯ ( ಸು.1500) ತಿರುಕನ ಕನಸು, ಹಳೆಯದಾದರೂ ಅತ್ಯಂತ ಆಕರ್ಷಕ ಮತ್ತು ಅರ್ಥಪೂರ್ಣವಾದ ಗೋವಿನ ಹಾಡು, ಕುವೆಂಪು ಅವರ ಬೊಮ್ಮನ ಹಳ್ಳಿಯ ಕಿಂದರಿ ಜೋಗಿ, ಎನ್ ಶ್ರೀನಿವಾಸ್ ಉಡುಪರವರ “ಕುಂಭಕರ್ಣನ ನಿದ್ದೆ” ಶ್ರೇಷ್ಠ ಮಟ್ಟದ ಕಥನ ಕವನಗಳು. ಎಚ್ ಎಸ್ ವೆಂಕಟೇಶಮೂರ್ತಿಯವರ ಘಟ್ಟದ ಯೋಗಿ ಕೂಡ ಚೆನ್ನಾಗಿದೆ. ಹಾಗೇಯೇ ಅನುಪಮ ನಿರಂಜನ ಅವರ ದಿನಕ್ಕೊಂದು ಕಥೆ ಕೂಡ ತುಂಬಾ ಅವಿಸ್ಮರಣೀಯವಾದದ್ದು.


