– ಇಲಾಹಿ ಇ. ಜಮಖಂಡಿ
ಚಿಮ್ಮಡ: ಆಧುನಿಕತೆಯ ಭರಾಟೆ ನಡುವೆಯೂ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಂಕ್ರಾಂತಿ ಎಂದೇ ಕರೆಯಲ್ಪಡುವ ಮಕರ ಸಂಕ್ರಮಣವನ್ನು ಈ ಭಾಗದಲ್ಲಿ ಸೋಮವಾರ ಮತ್ತು ಮಂಗಳವಾರ ಸಂಭ್ರಮ, ಸಡಗರದೊಂದಿಗೆ ಆಚರಿಸಲಾಯಿತು.
ಸೂರ್ಯದೇವನು ತನ್ನ ಪಥ ಬದಲಾಯಿಸಿ ಒಂದು ರಾಶಿಯಿಂದ ಮತ್ತೊಂದು ರಾಶಿಯತ್ತ ತನ್ನ ಕಿರಣ ಬೀರುತ್ತಾನೆ. ದಕ್ಷಿಣ ದಿಕ್ಕಿನಿಂದ ಉತ್ತರದ ಕಡೆಗೆ ಅರ್ದ ವರ್ಷ ಪಯಣ ಮಾಡಿ ಮಕರ ರಾಶಿಗೆ ಆಗಮಿಸುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಈ ಸಮಯದಲ್ಲಿ ರೈತಾಪಿ ಜನರ ಸುಗ್ಗಿಕಾಲವಾಗಿದ್ದು ಸುಗ್ಗಿಯನ್ನು ಮುಕಾಯಗೊಳಿಸಿ ಭುವಿಯನ್ನು ಸೂರ್ಯನ ಒಡಲಿಗೆ ಹರಿಬಿಟ್ಟು ವಿವಿಧ ಬಣ್ಣ ವಸ್ತುಗಳಿಂದ ಶೃಂಗರಿಸಿದ ಎತ್ತಿನ ಬಂಡಿ ಹೂಡಿಕೊಂಡು ಇಡೀ ಕುಟುಂಬದೊಂದಿಗೆ ತಮ್ಮ ನಂಬಿಕೆಯ ದೇವರ ದರ್ಶನ ಮಾಡಿಕೊಂಡು ಕರೀ ದಿನವಾದ ಮಂಗಳವಾರ ನದೀ ತೀರಕ್ಕೆ ಹೋಗಿ ವಿಶೇಷ ಅಡುಗೆ ತಯಾರಿಸಿಕೊಂಡು ಕುಟುಂಬದೊಂದಿಗೆ ಊಟಮಾಡಿ ಜಲ ಚರಗಳಿಗೂ ಉಣಬಡಿಸಿ ಇಡೀದಿನ ಪ್ರಕೃತಿ ಮಡಿಲಲ್ಲಿ ಕಳೆಯುವ ಪಧ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು, ಅದರಂತೆ ಸೋಮವಾರವೂ ಈ ಭಾಗದ ರೈತರು ಚಿಮ್ಮಡ ಹಾಗೂ ಮಹಾಲಿಂಗಪುರದ ಅಲಂಕೃತ ನಂದಿಕೋಲು, ಪ್ರಭುವಿನ ಮೂರ್ತಿಹೊತ್ತ ಪಲ್ಲಕ್ಕಿ, ಮಲ್ಲಿಕಾರ್ಜುನ ದೇವರ ಕಂಬಿಯನ್ನು ಹೊತ್ತುಕೊಂಡು ಸಕಲವಾದ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖರಸ್ತೆಗಳಲ್ಲಿ ಭಕ್ತಿ-ಗೌರವದೊಂದಿಗೆ ಮೆರವಣಿಯ ಮೂಲಕ ರಬಕವಿಯ ಕೃಷ್ಣಾನದಿ ತೀರಕ್ಕೆ ಹೋಗಿ ನದಿಯಲ್ಲಿ ಮಿಂದೆದ್ದು “ಈಶ್ವರಲಿಂಗ”ದ ದರ್ಶನ ಪಡೆದು ಸಾಯಂಕಾಲ ವಾಪಸ್ಸಾಗುತ್ತಾರೆ. ಅಲ್ಲಿಂದ ಗ್ರಾಮದ ರೈತಾಪಿ ಜನರೆಲ್ಲ ಸೇರಿ ಪಾದಯಾತ್ರೆ ಮೂಲಕ ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನದ ವರೆಗೆ ಬಂದು ಅಲ್ಲಿ ವಿಶೇಷ ಪೂಜೆ ನೆರವೇರಿಸಿ ನಂತರ ಮಹಾಲಿಂಗಪುರದ ನಂದಿಕೋಲವನ್ನು ಬೀಳ್ಕೊಡಲಾಯಿತು.
ಈ ಉತ್ಸವದಲ್ಲಿ ಗ್ರಾಂ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಗುರಪ್ಪಾ ಬಳಗಾರ, ಗ್ರಾಂಪಂ ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ, ಬೀರಪ್ಪ ಹಳೆಮನಿ, ಬಸವರಾಜ ಕುಂಚನೂರ, ಸೇರಿದಂತೆ ಚಿಮ್ಮಡ, ಮಹಾಲಿಂಗಪುರ ಭಾಗದ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು.
ಗ್ರಾಪಂ ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ ಭಕ್ತಾಧಿಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಕೈಗೊಂಡಿದ್ದರು.

