ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಜನರು ಸೋಮವಾರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ರೈತ ಬಾಂಧವರು ತಮ್ಮ ಹೊಲದಲ್ಲಿ ಬೆಳೆದು ನಿಂತಿದ್ದ ಬೆಳೆಯಲ್ಲಿನ ಐದು ಜೋಳದ ತೆನೆ, ಗೋಧಿ ತೆನೆ, ಕಡಲೆ ಗಿಡ ಮಾರುಕಟ್ಟೆಯಲ್ಲಿ ಖರೀದಿಸಿದ್ದ ಬಾರಿಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು ತಂದು ಮನೆಯಲ್ಲಿನ ದೇವರ ಜಗುಲಿ ಮೇಲೆ ಇಟ್ಟು ದೇವರ ಪೂಜೆಯೊಂದಿಗೆ ಬೆಳೆಗಳ ತೆನೆಗಳಿಗೆ ಪೂಜೆ ಸಲ್ಲಿಸಿದರು. ಹಬ್ಬಕ್ಕಾಗಿ ತಯಾರಿಸಿದ ವಿವಿಧ ಖಾದ್ಯದೊಂದಿಗೆ ಎಳ್ಳು, ಬೆಲ್ಲದೊಂದಿಗೆ ಮನೆಯ ದೇವರಿಗೆ ನೈವೇದ್ಯ ಅರ್ಪಿಸಿದರು.
ಸಂಜೆ ಕುಟುಂಬ ಸದಸ್ಯರು ಎಳ್ಳು, ಬೆಲ್ಲ, ಕಾಯಿ ಕರ್ಪೂರದೊಂದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕುಟುಂಬ ಸದಸ್ಯರು, ಸಂಬಂಧಿಕರು, ಹಿರಿಯರು, ಸ್ನೇಹಿತರಿಗೆ ಪರಸ್ಪರ ಎಳ್ಳು ಬೆಲ್ಲ (ಕುಸುರೆಳ್ಳು) ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು.
ಲಕ್ಷ್ಮೀ ನಗರದಲ್ಲಿ ವಿಶಿಷ್ಟ ಆಚರಣೆ : ಪಟ್ಟಣದ ಲಕ್ಷ್ಮೀ ನಗರದ ನಿವಾಸಿಗಳು ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದು ಗಮನ ಸೆಳೆಯಿತು. ಮಹಿಳೆಯರು ಬಡಾವಣೆಯ ವಿಶಾಲ ಜಾಗೆಯನ್ನು ಸ್ವಚ್ಛಗೊಳಿಸಿ, ನೀರು ಸಿಂಪಡಿಸಿ ರಂಗವಲ್ಲಿ ಚಿತ್ತಾರ ಬಿಡಿಸಿದ ನಂತರ ಕಬ್ಬು, ಎಳ್ಳು, ಬೆಲ್ಲ, ಬಣ್ಣ ಹಚ್ಚಿದ ಮಡಕೆಯಲ್ಲಿ ವಿವಿಧಧಾನ್ಯಗಳನ್ನು ಹಾಕಿ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ನಂತರ ಪರಸ್ಪರ ಎಳ್ಳು, ಬೆಲ್ಲ ಹಂಚಿದರು.
ಹಬ್ಬದ ವಿಶೇಷ ಪೂಜೆಯಲ್ಲಿ ಶಿವಮ್ಮ ಬಿಜಾಪುರ, ಶಂಕ್ರಮ್ಮ ನಾಯ್ಕೋಡಿ, ಭಾಗಮ್ಮ ಇಂಗಳೇಶ್ವರ, ಶಾರದಾ ಹಿಪ್ಪರಗಿ, ಪುಷ್ಪಾ, ಪ್ರತಿಭಾ ಪಡಶೆಟ್ಟಿ , ಶಿಲ್ಪಾ ಓಜಿ, ಶ್ರೀದೇವಿ ಹಿರೇಮಠ, ಸವಿತಾ ರಾಂಪೂರ, ನಿರ್ಮಲಾ ಬಿಸನಾಳ, ಶೃತಿ ನಾಯಕ, ತಾಯಮ್ಮ ಬೇಲಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

