ಇಂಡಿ: ಎಲ್ಲೆಡೆ ಸರ್ಕಾರಿ ಸೇವೆಯಲ್ಲಿರುವವರು ತಮ್ಮ ಸೇವಾ ನಿವೃತ್ತಿಯ ಬಳಿಕ ನಿಶ್ಚಿಂತೆಯಿಂದ ವಿಶ್ರಾಂತಿಯ ಜೀವನ ನಡೆಸುವುದು ಸಾಮಾನ್ಯ ಸಂಗತಿ. ಇಲ್ಲೊಬ್ಬ ಸರ್ಕಾರಿ ನೌಕರ ಸೇವಾ ನಿವೃತ್ತಿಯ ಗಳಿಗೆಯಲ್ಲಿ ಕಾನೂನು ಪದವಿ ತೇರ್ಗಡೆಯಾಗುವ ಮೂಲಕ ಹಲವರು ಹುಬ್ಬೇರಿಸುವಂತೆ ಮಾಡಿದ್ದಲ್ಲದೆ, ನಿವೃತ್ತಿಯ ಬಳಿಕ ವಕೀಲ ವೃತ್ತಿ ಆರಂಭಿಸಲು ಸಜ್ಜಾಗಿದ್ದಾರೆ.
ಪಟ್ಟಣದ ತಹಶೀಲ್ದಾರ ಕಚೇರಿಯ ಎಫ್.ಡಿ.ಎ. ಹುದ್ದೆ ನೌಕರ ಪುಂಡಲೀಕ ರಜಪೂತ ಎಂಬುವರೇ ಇಂತಹ ಅದಮ್ಯ ಉತ್ಸಾಹ ತೋರಿದ ಉತ್ಸಾಹಿ.
ಆರಂಭದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಪ್ರಾರಂಭಿಸಿದ ಇವರು ಕಾಲ ಕಳೆದಂತೆ ಎಫ್.ಡಿ.ಎ. ನೌಕರರಾಗಿ ಬಡ್ತಿ ಹೊಂದಿದ್ದಾರೆ. ಅತ್ತ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಬಂದ ಇವರು, ಯುವಕರೂ ನಾಚುವ ರೀತಿಯಲ್ಲಿ ಸೇವೆಯ ಜೊತೆಗೆ ಬಿಡುವಿನ ವೇಳೆಯಲ್ಲಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಕಾನೂನು ಪದವಿ ತೇರ್ಗಡೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಭವಿಷ್ಯದ ಕೆಲವೇ ದಿನಗಳಲ್ಲಿ ಸರ್ಕಾರಿ ಸೇವಾ ನಿವೃತ್ತಿಯ ಬಳಿಕ ವಕೀಲ ವೃತ್ತಿಯ ಸೇವೆ ಆರಂಭಿಸುವ ಕನಸು ಕಂಡ ಇವರ ಅಪರೂಪದ, ಯುವಕರಿಗೆ ಮಾದರಿಯಾದ ಗಮನಾರ್ಹ ಸಾಧನೆಗೆ ಇಂಡಿ ತಹಶೀಲ್ದಾರ ಬಿ.ಎಸ್. ಕಡಕಬಾವಿ, ಉಪ ತಹಶೀಲ್ದಾರ ಸಿದ್ದರಾಮ ಮುಜಗೊಂಡ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ ಇವರ ವಕೀಲ ವೃತ್ತಿಯ ಕನಸು ನನಸಾಗಲಿ ಎಂದು ಹಾರೈಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

