ಮೋರಟಗಿ ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ ನಡೆದ ಸಮಾರಂಭ |ಇಸ್ರೋ ವಿಜ್ಞಾನಿ ದಂಪತಿಗೆ ಸನ್ಮಾನ | ವಿದ್ಯಾರ್ಥಿಗಳೊಂದಿಗೆ ಸಂವಾದ
ಮೋರಟಗಿ: ಮೊಟ್ಟ ಮೊದಲು ವಿದ್ಯಾರ್ಥಿಗಳ ಗುರಿ ಗಟ್ಟಿಯಾಗಿರಬೇಕು ಮನಸ್ಸಿಟ್ಟು ಪುಸ್ತಕ ಓದಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ, ಪುಸ್ತಕವನ್ನು ತಲೆಬಾಗಿ ಓದಿದರೆ ಮುಂದೊಂದು ದಿನ ಪುಸ್ತಕ ನಿಮ್ಮನ್ನು ತಲೆ ಎತ್ತಿ ತಿರುಗಾಡುವಂತೆ ಮಾಡುತ್ತದೆ. ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ ಕಳೆದುಕೊಳ್ಳಬೇಡಿ ಎಂದು ಚಂದ್ರಯಾನ ರೂವಾರಿ ಇಸ್ರೋ ವಿಜ್ಞಾನಿ ಯೋಜನಾ ನಿರ್ದೇಶಕ ವಿಲಾಸ ರಾಠೋಡ್ ಹೇಳಿದರು.
ಸ್ಥಳೀಯ ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ಸನ್ಮಾನ ಸಮಾರಂಭ ಹಾಗೂ ಇಸ್ರೋ ವಿಜ್ಞಾನಿ ಜೊತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೊದಲು ಮೂಡನಂಬಿಕೆಯಿಂದ ಹೊರಬನ್ನಿ. ದೇವರು ಎಂದರೆ ಒಂದು ಭಯ ಇರಲಿ, ದೇವರ ಕೃಪಾಶಿರ್ವಾದದಿಂದ ಉತ್ತೀರ್ಣ ಆಗುತ್ತೀರಿ ಎನ್ನುವ ಭರವಸೆಯಲ್ಲಿ ಕೂಡಬೇಡಿ. ಶಿಕ್ಷಕರು ಹೇಳಿದ ಮಾರ್ಗದಲ್ಲಿ ನಡೆದು ಕಷ್ಟಪಟ್ಟು ಓದಿದರೆ ಮಾತ್ರ ನೀವು ಕಂಡ ಕನಸು ಖಂಡಿತ ಈಡೇರುತ್ತದೆ ಎಂದರು.
ನಂತರ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿ ವಿಲಾಸ ರಾಠೋಡ್ ದಂಪತಿಗೆ ಕಲ್ಪವೃಕ್ಷ ಆಡಳಿತ ಮಂಡಳಿ ವತಿಯಿಂದ ವಿಶೇಷ ಸನ್ಮಾನ ಮಾಡಿದರು.
ಕಾರ್ಯದಲ್ಲಿ ಕಲ್ಪವೃಕ್ಷ ಸಂಸ್ಥೆಯ ಸಂಸ್ಥಾಪಕ ಶಿವಶರಣಗೌಡ ಬಿರಾದಾರ, ಅಧ್ಯಕ್ಷತೆ ವಹಿಸಿದ್ದರು, ಆಡಳಿತಾಧಿಕಾರಿ ಎಸ್. ಎಚ್. ದುಳಬಾ, ಎಸ್. ವ್ಹಿ. ಬಿರಾದಾರ, ಪ್ರಾಂಶುಪಾಲ ಎ. ಬಿ. ಸಿಂದಗಿ, ಸಿ. ಸಿ. ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಸಂಸ್ಥೆಯ ಆಡಳಿತ ಮಂಡಳಿ ಉಪಸ್ಥಿತರಿದ್ದರು.


