ತ್ರಿಕಾಲಜ್ಞಾನಿ, ಭವರೋಗ ವೈದ್ಯ, ಮಡಿವಾಳಪ್ಪನವರ ೨೦೧ನೇ ಅನುಭಾವ ಜಾತ್ರೆ ತನ್ನಿಮಿತ್ತ ವಿಶೇಷ ಲೇಖನ
– ಡಾ.ಸಂತೋಷ ನವಲಗುಂದ, ಮಳ್ಳಿ

“ಎಂಥಾ ಕಂಡಾಬಟ್ಟೆ ಸೂಳೆ ಮಕ್ಕಳಿವರೋ
ಸಾಧು ಸಂತರ ಕಂಡರೆ ನಿಂದೆನಾಡ್ತಿಹರೋ
ಅಂಥ ಇಂಥ ಮಾತಿಗೆ ಹಾಯ್ ಹಾಯ್ ಎಂಬುವರೋ
ಇವರ ಅಂತ ತಿಳಿಯದೆ ಸುಳ್ಳೆ ಸತ್ತು ಹೋಗುವರೊ ||
ದೊಡ್ಡ ಕಾಮಧೇನು ಸ್ನೇಹ ಮಾಡವಲ್ಲರೋ ಖಾಲಿ
ಗೊಡ್ಡಾಕಳ ಹಿಂಡಿ ಕೈ ಮುರಿದು ಕೊಂಬುವರೊ
ಗುಡ್ಡದ ಮಹಾಂತನ ಗುರ್ತು ಅರಿಯಲ್ಲರೋ | ಇಂಥ
ದಡ್ಡ ಸೂಳೆ ಮಕ್ಕಳನ್ನು ಯಾರು ಕೇಳುವರೋ”
ಸಾಧು-ಸತ್ಪುರುಷರಿಗೆ ಸಮಾಜದಲ್ಲಿನ ಕುಹಕಿಗಳು ನಿಂದೆಯನಾಡುವ ಪರಿಗೆ ಕಡಕೋಳದ ಮಡಿವಾಳಪ್ಪನವರು ಕೊಡುವ ತತ್ವದುತ್ತರ ಕನ್ನಡದ ಇನ್ನಾವ ಸಾಹಿತ್ಯದಲ್ಲಿ ಕಾಣುವುದು ವಿರಳ. ಕನ್ನಡ ನಾಡು ಆಯಾ ಕಾಲಘಟ್ಟದಲ್ಲಿ ಭಿನ್ನ ಪ್ರದೇಶ, ಭಿನ್ನ ಸನ್ನಿವೇಶಗಳಲ್ಲಿ ಸಾಹಿತ್ಯದ ಹುಟ್ಟು ಪಡೆದುಕೊಂಡಿದೆ. ಅಂತೆಯೇ, ೧೮ನೇ ಶತಮಾನದಲ್ಲಿ ರಚನೆಯಾದ ತತ್ವಪದ ಸಾಹಿತ್ಯ ಕನ್ನಡ ಸಾಹಿತ್ಯದ ಸಿರಿವಂತಿಕೆ ಹೆಚ್ಚಿಸುವುದಷ್ಟೇ ಅಲ್ಲದೇ; ಗಟ್ಟಿ ನೆಲೆಯೂ ಒದಗಿಸಿದೆ.
ಢಾಂಬಿಕತನಕ್ಕೆ ಬಲುಬೇಗ ನೆಚ್ಚುವ ಜನರು ನಿಜದ ಅರಿವು ಹೊಂದದೇ ವ್ಯರ್ಥ ಕಾಲಹರಣ ನಡೆದಿದೆ ಎಂಬುದು ಮಡಿವಾಳಪ್ಪನವರು ಸೂಚ್ಯವಾಗಿ ಈ ಮೇಲಿನ ತತ್ವದಲ್ಲಿ ತಿಳಿಸುತ್ತಾರೆ. ಸಮಾಜ, ಆಗಬೇಕಾದಲ್ಲಿ ಉದಾರಿಯಾಗುವಲ್ಲದು, ನಂಬುವಲ್ಲಿ ನಂಬುವಲ್ಲುದು, ಗುರುತಿಸುವಲ್ಲಿ ಗುರುತಿಸದೇ ಹೆಣಗಾಟದ ಬದುಕಿಗೆ ಸಾಕ್ಷಿಯಾಗಿದೆ. ತಮ್ಮನ್ನೇ ಅರಿಯದವರು ಗುರುವಿನ ಗುರ್ತು ಅರಿಯುವರೇ? ಎಂಬ ಪ್ರಶ್ನೆ ಮಡಿವಾಳಪ್ಪನವರದ್ದಾಗಿದೆ. ಮುಂದುವರೆದು ಮಡಿವಾಳಪ್ಪನವರು ಹೀಗೆ ದಾರಿ ತೋರುತ್ತಾರೆ;
“ತನ್ನತಾನು ತಿಳಿದ ಮೇಲೆ ಇನ್ನೇನಿನ್ನೇನೊ
ತನ್ನಂತೆ ಸರ್ವರ ಜೀವ ಮನ್ನಿಸಿ ಮೂಕಾದ ಮೇಲೆ”
ಎಂಬ ತತ್ವ ವ್ಯಕ್ತಿಯ ಅಂತಃಸತ್ವವನ್ನು, ಜೀವತ್ವವನ್ನು ಬಡಿದೆಬ್ಬಿಸವಂತದ್ದು.
“ಆಯಿತ ಆಯಿತ ಆಯಿತಂತಿ
ಆಗ ಮಾಡದೇ ನೀ ಕುಂತಿ
ಹೋಯ್ತು ಹೋಯ್ತು ಹೋಯ್ತೋಯ್ತೆಂಬುದು
ಹೋಗದೇ ಸುಳ್ಳೆ ಅಂತಿ”
……………………………….
ರತಿಯ ಮೋಹ ಆಯಿತಂತಿ
ಸತಿಯಳ ಕಾಲ್ದಸಿಲೆ ಕುಂತಿ
ರತಿಯ ಮೋಹವಾದಮೇಲೆ
ಸತಿಯಳದಿನ್ಯಾಕೋ ಚಿಂತಿ”
ಎಲ್ಲದನ್ನು ಆಸೆ ಪಡುವ ಮಾನವ ಮೋಹಿಸಿದ ಬಳಿಕವೂ ಇಲ್ಲೇ ಕುಂತು ಚಿಂತಿಯೊಳಗೆ ಬದುಕು ಸಾಗಿಸುವ ನಡೆಯನ್ನು ಈ ತತ್ವದಲ್ಲಿ ಮಡಿವಾಳಪ್ಪನವರು ಕಟ್ಟಿಕೊಡುತ್ತಾರೆ.
“ಹ್ಯಾಂಗ ಭ್ರಾಂತಿ ನೀಗುತಿ ನೀ ಹ್ಯಾಂಗ ಮಾಂತನಾಗುತಿ ಹಾಂಗೆ ಹೀಂಗೆ ಹೊತ್ತುಗಳಿದು ಹಿಂಗೆ ನೀ ಸತ್ತೋಗತಿ.. ಶಿವನ ನೆನೆಯುವ ನೆವನಗಳ್ಳ ಇವನಿಗ್ಯಾಕೊ ಮಾಂತ ಸೊಲ್ಲ” ಭಕ್ತಿಯಲ್ಲಿ ಪಲಾಯನವಾದ ತೋರುವವರ ಎದೆಗೆ ಒದ್ದಂತೆ ಮಡಿವಾಳಪ್ಪನವರು ಈ ಮಾತು ಹೇಳುತ್ತಾರೆ. ಇಂತಹ ಪಲಾಯನವಾದಿಗಳಿಗೆ ಗುರು ಮಹಾಂತ ಒಲಿಯುವನೇ? ಎಂಬ ಪ್ರಶ್ನಾರ್ಥಕ ಸಂದೇಶ ನೀಡುತ್ತಾನೆ. ಮಡಿವಾಳಪ್ಪ ತನ್ನ ಬಾಲ್ಯದಿಂದಲೇ ಅನುಭವಿಸಿದ ತೀರಾ ಭಿನ್ನ ಲೋಕಾನುಭವಗಳ ಪರಿಣಾಮ ಇಂತದ್ದೊಂದು ಅಪ್ಪಟ ದೇಶಿ ಗಂಡುಸಾಹಿತ್ಯ ಹುಟ್ಟಿಗೆ ಕಾರಣವಾಯಿತು ಎನ್ನುವುದು ನಿರ್ವಿವಿವಾದದ ಸಂಗತಿ. ಯಾವುದನ್ನು ಮುಚ್ಚಿಡದೇ ಎಲ್ಲವನ್ನು ಬಿಚ್ಚಿಡುವುದರ ಮೂಲಕ ಉಗ್ರ ನರಸಿಂಹನ ಅವತಾರಿಯಾಗಿ ಬಂದ ಹರಿ ಹಿರಣ್ಯಕಶ್ಯುಪನ ಎದೆ ಬಗೆದಂತೆ ಲೋಕದ ಭಿನ್ನ ಮನಸ್ಸುಳ್ಳ ಮಾನವರ ಎದೆಯನ್ನು ಮಡಿವಾಳಪ್ಪ ತನ್ನ ತತ್ವದ ಮೂಲಕ ಇರಿಯುತ್ತಾನೆ.
ಮಡಿವಾಳಪ್ಪ ಅಪ್ಪಟ ವೈಚಾರಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದವರು. ಕಂದಾಚಾರ, ಮೂಢನಂಬಿಕೆ, ಮಡಿವಂತಿಕೆ, ಜಾತಿಭೇದ ಇವೆಲ್ಲವುಗಳನ್ನು ಎದುರಿಸಿ ಜಗವನೇ ಬೆಳಗಿದವರು. ಸಮಾಜದ ಮೂಢರ ಮನಸ್ಸು, ಬುದ್ಧಿ ಅರಿತು ತಮ್ಮ ತತ್ವದಡುಗೆಯ ಮೂಲಕ ಅಜ್ಞಾನದ ಮಸ್ತಕಕ್ಕೆ ಜ್ಞಾನದ ಹಸಿವು ನೀಗಿಸಿದರು. ಆದರೂ ಸಮಾಜ ಮಡಿವಾಳಪ್ಪನವರನ್ನು ನಡೆಸಿಕೊಂಡ ಪರಿ ಪ್ರಸ್ತುತ ದಿನಮಾನದ ಯಾವೊಬ್ಬ ಸತ್ಪುರುಷಗೂ ಬಾರದಿರಲಿ ಎನ್ನುವ ಭಾವ ಎಲ್ಲರ ಅಂತರಂಗಕ್ಕೆ ಇಳಿಯುವುದು ಆತ್ಯಂತಿಕ ಸತ್ಯವಾಗಿದೆ.
ಬದುಕು ಕಟ್ಟಿಕೊಳ್ಳುವ, ಗುರುವಿನ ಗುಲಾಮನಾಗುವ, ನಿರ್ಮಲ ಭಕ್ತಿ ತೋರುವ, ಆದರ್ಶ ಸಂಸಾರ ಸಾಗಿಸುವ, ಜಾತಿರಹಿತ ಸಮಾಜ ಕಟ್ಟುವ ಕೊನೆಗೆ ಮುಕ್ತಿಯ ಹಾದಿ ಸುಗಮಗೊಳಿಸಿಕೊಳ್ಳುವ ಪರಿಗೆ ತನ್ನ ತತ್ವಪದ ಸಾಹಿತ್ಯ ಮತ್ತು ಸ್ವರವಚನಗಳ ಮೂಲಕ ದಿವ್ಯಪಥವನೇ ತೋರುತ್ತಾನೆ ಮಡಿವಾಳಪ್ಪ. ಎಷ್ಟೇ ಪರಿಪರಿಯಾಗಿ ಭಿನ್ನವಿಸಿದ ತತ್ವಜ್ಞಾನಿಗೆ ಸಮಾಜದ ಕೆಲ ಕಿಡಿಗೇಡಿಗಳ ಕಾಟ ತಪ್ಪಿಲ್ಲ ಅನ್ನುವುದು ಸರ್ಯನಷ್ಟೇ ಸತ್ಯವಾದುದು.
“ನಾ ಬರಬಾರದಿತ್ತು ಈ ಊರಿಗೆ
ಬಂದು ಬಿದ್ದೇನ ಮಾಯದ ಬಲಿಯೊಳಗ” ಎಂದು ಈ ಭವಕೆ ಬಂದು ಅನುಭವಿಸಿದ ಲೋಕನಿಂದೆಗಳಿಗೆ ಕವಿ ಯಾಕಾರ ಬಂದೆ ಈ ಭವದೂರಿಗೆ ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಕೊನೆಗೆ ಮನುಷ್ಯ ಜನ್ಮಕ್ಕೆ ಜ್ಞಾನೋದಯದ ತತ್ವ ಹೇಳುತ್ತಾರೆ;
“ಜಲ್ದಿ ನೋಡಿಕೊಳ್ಳೊ ತಮ್ಮ ಬಂದುದೆಲ್ಲಿ ಮುಂದ್ಕ ಹೋಗುದೆಲ್ಲಿ
ಇಂದ ನಿನ್ನ ಸತಿ ಸುತ ಭ್ರಾಂತಿ ಎಲ್ಲ| ಮುಕ್ತಿ ಆಗುದೆಲ್ಲಿ”
ವ್ಯರ್ಥದ ಸಂಸಾರದಲ್ಲಿ ಮುಳುಗಿ ನಿನ್ನ ನಿಜದ ಅರಿವನೇ ಮರೆತಿರುವೆ. ಗುರುವಿನ ಪಾದ ನಂಬಿ ನಡೆದರೆ ಮಾತ್ರ ಜನ್ಮ ಸಾರ್ಥಕ್ಯದೆಡೆಗೆ ಸಾಗುವುದೆಂಬ ಜೀವನದ ಮೌಲ್ಯವನ್ನು ಉದಾಹರಿಸುತ್ತಾನೆ. ಮಡಿವಾಳಪ್ಪನವರು ತಮ್ಮ ಜೀವನನುದ್ದಕ್ಕೂ ಲೋಕದ ಬೆಳಗಿಗೆ ತೈಲವನು ಎರೆಯುತ್ತಲೇ ಬದುಕು ಸಾಗಿಸಿ ತ್ರಿಕಾಲ ವಂದ್ಯರಾಗಿ ಜನಮಾನಸದಲ್ಲಿ ಅಚ್ಚಳಿಯದ ಜ್ಞಾನಿಗಳೆನಿಸಿದ್ದಾರೆ. ಇಂಥ ಅಪೂರ್ವ ಸಾಹಿತ್ಯ ನೀಡಿದ ಮಡಿವಾಳಪ್ಪನವರ ಸಮಗ್ರ ತತ್ವಪದ ಮತ್ತು ಸ್ವರವಚನಗಳ ಅಧ್ಯಯನಕ್ಕಾಗಿ ಸರ್ಕಾರ ಒಂದು ಮಡಿವಾಳಪ್ಪನವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಕನ್ನಡದ ಶ್ರೇಷ್ಠ ತತ್ವಪದಕಾರ ನೀಡಿದ ಲೋಕಜ್ಞಾನದ ಋಣ ತೀರಿಸಬೇಕಾಗಿದೆ. ಈ ಕುರಿತು ಹಲವು ಬಾರಿ ಶ್ರೀಮಠದ ಪೀಠಾಧಿಪತಿ ಡಾ| ರುದ್ರಮುನಿ ಶಿವಾಚರ್ಯ ಸ್ವಾಮೀಜಿ ಮೊದಲ್ಗೊಂಡು ಕಲ್ಯಾಣ ಕರ್ನಾಟಕದ ಸಾಹಿತಿ, ಚಿಂತಕ ಮಲ್ಲಿಕಾರ್ಜುನ ಕಡಕೋಳ, ಡಾ.ಮೀನಾಕ್ಷಿ ಬಾಳಿ, ಸಾಹಿತಿ, ಲೇಖಕರು, ಮುಂತಾದವರು ಸರ್ಕಾರದ ಗಮನ ಸೆಳೆಯುತ್ತಲೇ ನಡೆದಿದ್ದಾರೆ. ಆದರೆ ಯಾವ ಸರ್ಕಾರಗಳು ಈ ಬಗೆಗೆ ಸೂಕ್ತ ನಿರ್ಣಯಗಳನ್ನು ಕೈಗೊಳ್ಳದೇ ಇರುವುದು ಈ ಭಾಗದ ಸಾಹಿತಿ, ಲೇಖಕರ ಮತ್ತು ಸಾಹಿತ್ಯಾಸಕ್ತರ ಮುನಿಸಿಗೆ ಕಾರಣವಾಗಿದೆ. ಇನ್ನಾದರೂ ಸರ್ಕಾರ ಕೂಡಲೇ ಈ ಕುರಿತು ಗಮನಹರಿಸಿವುದು ಜರೂರಿಯಾಗಿದೆ. ಪ್ರತಿ ವರ್ಷವೂ ಮಡಿವಾಳ್ಪನವರ ಐಕ್ಯಸ್ಥಳ ಕಡಕೋಳದಲ್ಲಿ ಅನುಭಾವ ಜಾತ್ರೆ ನಡೆಯುತ್ತದೆ. ಈ ಬಾರಿಯೂ ಇದೇ ಜ.೪ ಮತ್ತು ೫ ರಂದು ಅದ್ದೂರಿ ಜಾತ್ರೆ ನಡೆಯುತ್ತಲಿದೆ. ಮಡಿವಾಳೇಶ್ವರ ಮಹಾಮಠದ ಪೀಠಾಧಿಪತಿ ಡಾ| ರುದ್ರಮುನಿ ಶಿವಾಚರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿವರ್ಷವೂ ಪುರಾಣ, ಪ್ರವಚನ, ಸಾಹಿತ್ಯ, ಸಾಂಸ್ಕೃತಿಕ ಕರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ತತ್ವಪದ ಸಾಹಿತ್ಯ ಬೆಳವಣಿಗೆ, ಪ್ರಚಾರ ಮತ್ತು ಪ್ರಸಾರಕ್ಕಾಗಿ ಹಗಲಿರುಳು ಮಡಿವಾಳೇಶ್ವರ ಮಹಾಮಠವು ಶ್ರಮಿಸುತ್ತಿದೆ ಎನ್ನುವುದು ಸಂತಸದ ಸಂಗತಿ.

– ಡಾ.ಸಂತೋಷ ನವಲಗುಂದ, ಮಳ್ಳಿ

