ಬಸವನ ಬಾಗೇವಾಡಿ: ಇಂದಿನ ಕಾಲದಲ್ಲಿ ಮಕ್ಕಳಿಗೆ ವಿದ್ಯೆ ಚೆನ್ನಾಗಿ ಸಿಗುತ್ತಿದೆಯಾದರೂ ಅವರಿಗೆ ಕಷ್ಟ ಗೊತ್ತಾಗದೇ ಇರುವದು ವಿಷಾದನೀಯ. ಮಕ್ಕಳು ವಿದ್ಯೆಯನ್ನು ಚೆನ್ನಾಗಿ ಕಲಿಯುವ ಜೊತೆಗೆ ಉತ್ತಮ ಸಂಸ್ಕಾರ ಕಲಿತುಕೊಳ್ಳುವಂತಾಗಬೇಕೆಂದು ಚಲನಚಿತ್ರ ಹಾಸ್ಯನಟ ವೈಜನಾಥ ಬಿರಾದಾರ ಹೇಳಿದರು.
ಪಟ್ಟಣಕ್ಕೆ ಸೋಮವಾರ ಸಂಜೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚಿಕ್ಕವರಿದ್ದಾಗ ಅಷ್ಟಾಗಿ ಹಿರಿಯರು ವಿದ್ಯೆಗೆ ಮಹತ್ವ ಕೊಡುತ್ತಿರಲಿಲ್ಲ. ನಾವು ಶಾಲೆಯಿಂದ ಬಂದ ನಂತರ ಮನೆಯಲ್ಲಿ ಹೇಳುವ ಎಲ್ಲ ಕೆಲಸಗಳನ್ನು ಮಾಡುವ ಪರಿಸ್ಥಿತಿಯಿತ್ತು. ಅಭ್ಯಾಸ ಮಾಡಲು ಅಷ್ಟಾಗಿ ಸಮಯ ಸಿಗುತ್ತಿರಲಿಲ್ಲ. ಇಂದು ಮಕ್ಕಳಿಗೆ ಹೆಚ್ಚು ಕೆಲಸಗಳನ್ನು ಹಚ್ಚದೇ ಅವರಿಗೆ ಅಭ್ಯಾಸ ಮಾಡಲು ಅವಕಾಶ ಕೊಟ್ಟರೂ ಅವರು ಅದನ್ನು ಸದುಪಯೋಗ ಪಡಿಸಿಕೊಳ್ಳದೇ ಮೊಬೈಲ್ದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಈ ಅಭ್ಯಾಸ ಹೋಗಿ ಅವರು ಉತ್ತಮ ವಿದ್ಯಾವಂತರಾಗಿ ಹೊರಹೊಮ್ಮುವಂತಾಗಬೇಕಾದ ಅಗತ್ಯವಿದೆ ಎಂದರು.
ನಾನು ಇದುವರೆಗೂ ಸುಮಾರು ೫೫೦ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದೇನೆ. ನಾನು ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದು. ರಂಗಭೂಮಿಯು ಕಲಾವಿದರರನ್ನು ಬೆಳೆಯಲು ಅವಕಾಶ ನೀಡುತ್ತದೆ. ನಾನು ನಟಿಸಿದ ನೈಂಟಿ ಹೊಡಿ ಮನಿಗೆ ನಡಿ ಎಂಬ ಚಲನಚಿತ್ರ ನೋಡಿ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಜನರು ಕುಡಿತವನ್ನು ಬಿಟ್ಟಿದ್ದಾರೆ. ಇದು ನನಗೆ ತೃಪ್ತಿ ತಂದಿದೆ. ಯಾವುದೇ ವೃತ್ತಿ ಮಾಡಲಿ ಅಲ್ಲಿ ಯಾವುದೇ ಒತ್ತಡದಿಂದ ಕಾರ್ಯನಿರ್ವಹಿಸಬಾರದು. ತಮಗೆ ಭಗವಂತ ನೀಡಿದ ವೃತ್ತಿಯಲ್ಲಿ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಯಾವುದೇ ಒತ್ತಡ ಇಲ್ಲದೇ ಕಾರ್ಯನಿರ್ವಹಿಸಿದರೆ ಜೀವನ ಸುಂದರವಾಗಿರಲು ಸಾಧ್ಯ. ನನಗೆ ಭಗವಂತ ನೀಡಿದ ಈ ವೃತ್ತಿಯಲ್ಲಿ ಯಾವುದೇ ಒತ್ತಡವಿಲ್ಲದೇ ನನಗೆ ಸಿಕ್ಕ ಅವಕಾಶವನ್ನು ನಾಡಿನ ಜನರಿಗೆ ಪ್ರಾಮಾಣಿಕವಾಗಿ ಮುಟ್ಟಿಸುವ ಕಾರ್ಯ ಮಾಡುತ್ತಿದ್ದೇನೆ. ಇಡೀ ರಾಜ್ಯವೇ ನನ್ನ ಮನೆ, ನಾಡಿನ ಜನರೇ ನನಗೆ ಬಾಂಧವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವಬಂಧು ಬಸವ ಸಮಿತಿಯ ಡಾ.ಅಮರೇಶ ಮಿಣಜಗಿ, ಶಿಕ್ಷಕ ಎಸ್.ಪಿ.ಮಡಿಕೇಶ್ವರ ಅವರು ಹಾಸ್ಯನಟ ವೈಜನಾಥ ಬಿರಾದಾರ ಅವರನ್ನು ಸನ್ಮಾನಿಸಿದರು. ಶ್ರೀಶೈಲ ಮಠಪತಿ, ರಮೇಶ ಮಂಗಳೂರ, ಬಸವರಾಜ ಮೇಟಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

