ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ
ವಿಜಯಪುರ: ಪೂಜ್ಯ ಸಿದ್ಧೇಶ್ವರ ಅಪ್ಪನವರಂತಹ ಗುರು ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಭಾವುಕ ನುಡಿಗಳನ್ನಾಡಿದರು.
ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಸಿದ್ಧೇಶ್ವರ ಅಪ್ಪನವರನ್ನು ಪ್ರತಿನಿತ್ಯ ಅತ್ಯಂತ ಸಮೀಪದಿಂದ ದಿನನಿತ್ಯ ನೋಡಿ ಕಣ್ಣು ತುಂಬಿಕೊಂಡ ನಾವೇ ಪುಣ್ಯರು. ತಮ್ಮ ವ್ಯಕ್ತಿತ್ವದಿಂದಲೇ ಅವರು ಜಗತ್ಪ್ರಸಿದ್ಧಿ ಗಳಿಸಿದ್ದರು. ಏನನ್ನು ಭಯಸದೆ ಸದಾ ಸಮಾಜಕ್ಕೆ ನೀಡಿದಂತವರು. ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ ಎಂದು ಸಿದ್ಧೇಶ್ವರ ಸ್ವಾಮೀಜಿಯವರನ್ನು ನೆನೆದು ಕಣ್ಣೀರಿಟ್ಟರು.
ಇದೇ ಸಂದರ್ಭದಲ್ಲಿ ಮೈಸೂರಿನ ಖ್ಯಾತ ಸಾಹಿತಿ ಕೆ.ಸಿ.ಶಿವಪ್ಪ ಮಾತನಾಡಿ, ಸಮಯ ಪಾಲನೆ, ಶಿಸ್ತು, ಪರಿಸರ ರಕ್ಷಣೆ ಬಗ್ಗೆ ಇರುವ ಕಾಳಜಿ, ಹಸಿರನ್ನು ಬೆಳೆಸುವ ಚಿಂತನೆಗಳನ್ನು ಎಲ್ಲರೂ ಸಿದ್ದೇಶ್ವರ ಅಪ್ಪನವರನ್ನು ನೋಡಿ ಕಲಿಯಬೇಕು. ಒಬ್ಬ ಸಂತನಾಗಿ ಯಾರೂ ಮಾಡದಂತಹ ಅಮೋಘ ಕೆಲಸವನ್ನು ಶ್ರೀ ಸಿದ್ಧೇಶ್ವರ ಶ್ರೀಗಳು ಮಾಡಿದ್ದಾರೆ. ಇಡೀ ಜಗತ್ತಿಗೆ ಜ್ಞಾನದಾಸೋಹ ಮಾಡಿದ್ದಾರೆ ಎಂದರು.
ಸೇಡಂ ನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಬಸವರಾಜ ಪಾಟೀಲ ಸೇಡಂ ಮಾತನಾಡಿದರು.
ಅವರು ಬದುಕು ನಮ್ಮೆಲ್ಲರಿಗೂ ಒಂದು ಆದರ್ಶ ಅವರು ನಡೆದ ಹಾದಿಯಲ್ಲಿ ನಾವೆಲ್ಲರೂ ಸಾಗಿ ಅವರ ತತ್ವಗಳನ್ನು ಪಾಲಿಸುವ ಮೂಲಕ ಅವರಿಗೆ ನಿಜವಾದ ನುಡಿನಮನ ಸಲ್ಲಿಸೋಣ ಎಂದರು.
ಸೂತ್ತೂರು ಮಠದ ಉತ್ತರಾಧಿಕಾರಿ ಜಯರಾಜೇಂದ್ರ ಮಹಾಸ್ವಾಮೀಜಿ,
ಶಿವಗಂಗೆಯ ಮಹಾಲಕ್ಷ್ಮಿ ಪೀಠದ ಜಗದ್ಗುರು ಜ್ಞಾನಾನಂದ ಪುರಿ ಮಹಾಸ್ವಾಮಿಗಳು, ಬಬಲೇಶ್ವರದ ಜಗದ್ಗುರು ಪಂಚಮಸಾಲಿ ಮಹಾಪೀಠದ ಜಗದ್ಗುರು ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು
ಹಾಗೂ ಗೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಬರೆದ ಪುಸ್ತಕಗಳನ್ನು ಗಣ್ಯಮಾನ್ಯರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಮಠಗಳಿಂದ ಆಗಮಿಸಿದ್ದ ಪೂಜ್ಯರು, ಶಾಸಕ ವಿಠ್ಠಲ ಕಟಕದೋಂಡ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ವಿವಿಧ ಮುಖಂಡರು, ಸಾವಿರಾರು ಭಕ್ತರು ಭಾಗವಹಿಸಿದ್ದರು.
ಸಂಗಮೇಶ್ವರ ಸ್ವಾಮಿಗಳು ಪ್ರಾರ್ಥನಾ ಗೀತೆ ಹಾಡಿದರು, ಸಿದ್ಧೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂ.ಗು. ಸಜ್ಜನ ಸ್ವಾಗತಿಸಿ, ಪರಿಚಯಿಸಿದರು. ಸಂಗಮೇಶ್ವರ ಮಹಾಸ್ವಾಮಿಗಳು ನಿರೂಪಿಸಿದರು.

