ವಂದಾಲದಲ್ಲಿ ಗುರುವಂದನ ಕಾರ್ಯಕ್ರಮ | ಗುರುಗಳ ಪಾದಪೂಜೆ ಮಾಡಿ ಸನ್ಮಾನಿಸಿದ ಶಿಷ್ಯರು
ಆಲಮಟ್ಟಿ: ೨೭ ವರ್ಷಗಳ ನಂತರ ಸ್ನೇಹಿತರೆಲ್ಲಾ ಸೇರಿ, ಗುರುವಂದನೆ ಕಾರ್ಯಕ್ರಮ ಏರ್ಪಡಿಸಿದ್ದು, ಭಾರತದಲ್ಲಿ ಮೊದಲಿನಿಂದಲೂ ಬಂದ ಗುರುಪರಂಪರೆಯನ್ನು ಮುಂದುವರೆಸಿದ್ದೀರಿ ಎಂದು ನಿವೃತ್ತ ಶಿಕ್ಷಕ ಎಸ್.ಎಸ್. ಭಾವಿಕಟ್ಟಿ ಅಭಿಪ್ರಾಯಪಟ್ಟರು.
ಸಮೀಪದ ವಂದಾಲ ಗ್ರಾಮದ ಶಾಕಂಬರಿ ಪ್ರೌಡಶಾಲಾ ಆವರಣದಲ್ಲಿ ಏರ್ಪಡಿಸಿದ್ದ ೧೯೯೨-೯೩ ನೇ ಸಾಲಿನ ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭ ನೇ ವರ್ಗ ಹಾಗೂ ೧೯೯೫-೯೬ ನೇ ಸಾಲಿನಲ್ಲಿ ಶಾಕಂಬರಿ ಪ್ರೌಡಶಾಲೆಯಲ್ಲಿ ೧೦ ನೇ ವರ್ಗ ಪಾಸಾದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗುರುವಿನ ಕೈಯಲ್ಲಿ ಕಲಿತಂತ ಮಕ್ಕಳು ಬದುಕಿನಲ್ಲಿ ಅಧಿಕಾರಿ, ನೌಕರ, ಉದ್ಯಮಿ, ಕೂಲಿ ಕಾರ್ಮಿಕ ಏನಾದರೂ ಆಗಿರಲಿ. ಆದರೆ ಮಾನವೀಯ ಮೌಲ್ಯವನ್ನೇ ಮರೆತು ಏನೇ ಸಾಧಿಸಿದರೂ ಅದು ವ್ಯರ್ಥ್ಯ ಎಂದರು.
ಸಾಹಿತಿ ಅಶೋಕ ಹಂಚಲಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಪ್ರಮೋದ ಕುಲಕರ್ಣಿ, ನಿವೃತ್ತ ಶಿಕ್ಷಕರಾದ ಬಿ.ಎನ್. ವಂದಾಲ, ಎಂ.ವಿ. ಪಾಟೀಲ, ಎಚ್.ಸಿ. ಭಜಂತ್ರಿ, ಬಿ.ಎ. ಪಿಂಜಾರ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಚಿಮ್ಮಲಗಿ ಅರಳೆಲೆ ಕಟ್ಟಿಮನಿ ಹಿರೇಮಠದ ಸಿದ್ದರೇಣುಕ ಶ್ರೀಗಳು ಆಶೀರ್ವಚನ ನೀಡಿದರು.
ಹಳೆ ವಿದ್ಯಾರ್ಥಿಗಳ ಪರವಾಗಿ ಶ್ರೀಶೈಲ ಹಿರೇಮಠ, ನಿಂಗರಾಜ ರಾಠೋಡ, ಚಂದ್ರು ಮುತ್ತಗಿ, ಬಸವರಾಜ ಕಂಪ್ಲಿ, ಸಂತೋಷ ಗಾಡದ, ರಮೇಶ ಹಳ್ಳದ, ವಿಜಯಕುಮಾರ ಹೆಬ್ಬಾಳ, ಯಮನವ್ವ ಲಂಕೆನ್ನವರ, ಸುರೇಖಾ ಮಸೂತಿ, ಕವಿತಾ ದೇಶಪಾಂಡೆ, ಲಕ್ಷ್ಮೀ ಬಾವಿಕಟ್ಟಿ, ಹೂವಪ್ಪ ಹೆಬ್ಬಾಳ, ಸಾವಿತ್ರಿ ಬಿರಾದಾರ, ರಾಘವೇಂದ್ರ ಹುಲಿಮನಿ, ಚಂದ್ರು ಮುತ್ತಗಿ, ಗುರುಬಾಯಿ ಹಟ್ಟಿ, ಜಯಶ್ರೀ ಭಾವಿಕಟ್ಟಿ, ವಿಜಯಾ ಹತ್ತರಕಿಹಾಳ ಮತ್ತಿತರರು ಮಾತನಾಡಿ, ಮೂರು ದಶಕದ ನಂತರದ ಈ ಸಮ್ಮಿಲನ ನಮ್ಮೆಲ್ಲರನ್ನು ಪುಳಕಗೊಳಿಸಿದೆ. ಭವಿಷ್ಯದಲ್ಲಿ ಇಂಥ ರಸಗಳಿಗೆ ಮತ್ತೆಂದೂ ಬಾರದು ಎಂದು ಭಾವನಾತ್ಮಕವಾಗಿ ಮಾತನಾಡಿ ಕಂಬನಿ ಮಿಡಿದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಶಂಕ್ರಪ್ಪ ಇಜೇರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಎಂ.ಬಿ. ಗುಡದಿನ್ನಿ, ಸಿ.ವಿ. ಖೇಡದ, ಜಿ.ಎಸ್. ಪತ್ತಾರ, ಸಿ.ಬಿ. ಕಲ್ಲೋಲ, ಐ.ಎಸ್. ಸಾಗರ, ಎಸ್.ಬಿ. ಹಳ್ಳದ, ಶಶಿ ಭಾವಿಕಟ್ಟಿ, ನಾಗಪ್ಪ ವಾಲಿ, ಈರಪ್ಪ ಚಲ್ಮಿ, ಬಸವರಾಜ ಚಾಲಿಮಿಂಚಿ, ಸಂಸ್ಥೆಯ ಉಪಾಧ್ಯಕ್ಷ ಶ್ರೀಕಾಂತ ಬೀಳಗಿ, ಬಸವಂತ ಬಸರಕೋಡ ಮತ್ತಿತರರು ಇದ್ದರು.

