ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಎಡಿಸಿ ಮಹಾದೇವ ಮುರಗಿ ಆಶಯ
ವಿಜಯಪುರ: ಕಲೆ ಎಂದೆಂದಿಗೂ ಶಾಶ್ವತ, ಅಮರಶಿಲ್ಪಿ ಜಕಣಾಚಾರಿಯಂತಹ ಮಹನೀಯರ ಕುರಿತಾಗಿ ತಕಳಿದುಕೊಳ್ಳುವ ಮೂಲಕ ಅವರ ಕಲೆಯ ಕುರಿತು ಸ್ಫೂರ್ತಿ ಪಡೆದುಕೊಂಡು, ಶಿಲ್ಪಕಲೆಯಲ್ಲಿ ಸಾಧನೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಗತ್ತು ಮರೆಯದ ಅಮರ ಶಿಲ್ಪಕಲೆಗಳನ್ನು ಕೊಟ್ಟ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಅಮರಶಿಲ್ಪಿ ಜಕಣಾಚಾರಿಯ ಸಾಧನೆಯು ನಮಗೆ ಪ್ರೇರಣೆ ಆಗಬೇಕು ಎಂದು ಸಲಹೆ ನೀಡಿದರು.
ಜಕಣಾಚಾರಿ ಅವರು ಹೇಗೆ ತಮ್ಮ ಶಿಲ್ಪಕಲೆಗಳನ್ನು ಕೆತ್ತಲೂ ಕೆಲಸದ ಮೂಲಕ ತಪಸ್ಸು ಮಾಡುತ್ತಿದ್ದರೋ ಹಾಗೆ ಇಂದಿನ ಜನರು ತಮ್ಮ ತಮ್ಮ ವೃತ್ತಿಯಲ್ಲಿ ಯಶಸ್ಸು ಹೊಂದಲು ತಮ್ಮ ವೃತ್ತಿಯ ಗೌರವ ಹೊಂದಿ, ಆ ದಿಸೆಯಲ್ಲಿ ಸಾಧನೆ ಮಾಡಬೇಕು ಎಂದರು.
ನಂತರ ಉಪನ್ಯಾಸ ನೀಡಿದ ಡಾ. ಮಾಧವ ಎಚ್. ಗುಡಿ, ಕಲ್ಲಿನಲ್ಲಿ ಹೂ ಅರಳಿಸಿದವರು ಜಕಣಾಚಾರಿ ಆಗಿದ್ದಾರೆ. ಸತತ ೨೬ ವರ್ಷಗಳ ಕಾಲ ಕೆತ್ತನೆಯ ಕಾಯಕ ಎಂದು ಬದುಕಿದ ಮಹನೀಯ ಜಕಣಾಚಾರಿ ಆಗಿದ್ದಾರೆ. ವಿಶ್ವ ಪ್ರಸಿದ್ಧ ಹಳೇಬೀಡು, ದೇವಾಲಯಗಳನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಿ ಮರೆಯಲಾಗದ ಕಾಣಿಕೆ ನೀಡಿದ್ದಾರೆ ಎಂದು ಹೇಳಿದರು.
ಅವರ ಶಿಲ್ಪ ಕಲೆಯ ಗಮನಿಸಿದ ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನ ಅವರಿಗೆ ಬೇಲೂರಿನ ಚನ್ನಕೇಶವ ದೇವಸ್ಥಾನ ಕಟ್ಟಲು ಅನುಮತಿ ಕೊಟ್ಟರು. ಅದನ್ನು ಜಕಣಾಚಾರಿ ಅವರು ನಿರ್ಮಿಸಿ ಜಗತ್ತಿಗೆ ಮಹತ್ತರವಾದ ಕೊಡುಗೆ ನೀಡಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಥಗಳನ್ನು ನಿರ್ಮಿಸುವಲ್ಲಿ ಪರಿಣಿತರಾದ ಪಾಂಡುರಂಗ ಬಡಿಗೇರ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೂರುಜಾವ ಮಠದ ಮಹೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯತ್ನ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಉಪಸ್ಥಿತರಿದ್ದರು.
ಸಂಗೀತ ಕಾರ್ಯಕ್ರಮವನ್ನು ಪ್ರಜ್ಞಾ ಮೇತ್ರಿ ಪಾಟೀಲ ಪ್ರಸ್ತುತ ಪಡಿಸಿದರು.

