ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸದೆ ನಿಷ್ಕ್ರಿಯವಾಗಿರುವ ವಿವಿಧ ಸಹಕಾರ ಸಂಘಗಳನ್ನು ಸಮಾಪನಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರು ಹಾಗೂ ಸದಸ್ಯರಿಗೆ ೭ ದಿನಗಳ ಕಾಲಾವಕಾಶ ನೀಡಲಾಗಿದೆ.
ಈ ಸಂಘಗಳಿಗೆ ಸಂಬಂಧಿಸಿದಂತೆ ಸದಸ್ಯರು, ಸಾರ್ವಜನಿಕರು ಅಥವಾ ಇತರೆ ಹಕ್ಕುದಾರರು ತಮ್ಮ ಹಕ್ಕು-ಬಾಧ್ಯತೆಗಳು ಹಾಗೂ ಕೊಡತಕ್ಕ-ಬರತಕ್ಕ ಬಾಬುಗಳ ಕುರಿತು ಮಾಹಿತಿ ಅಥವಾ ಆಕ್ಷೇಪಣೆಗಳಿದ್ದರೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ಸಮಾಪನಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ನಿರೀಕ್ಷಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ವಿಜಯಪುರ ಉಪವಿಭಾಗ, ವಿಜಯಪುರ. ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.
ಸಮಾಪನೆಗೊಳ್ಳಲಿರುವ ಸಹಕಾರ ಸಂಘಗಳ ವಿವರ: ನಗರದ ಸಹಕಾರ ಸಂಘಗಳಾದ ರಕ್ಷಾ ಪತ್ತಿನ ಸಹಕಾರ ಸಂಘ, ವಿದ್ಯಾನಗರ ಗೃಹ ನಿರ್ಮಾಣ ಸಹಕಾರ ಸಂಘ, ರೇಣುಕಾ ಪತ್ತಿನ ಸಹಕಾರ ಸಂಘ, ವಿಜಯಪುರ ಶಹರ ಟಿನ್ ತಗಡಿನ ಸಾಮಾನುಗಳ ತಯಾರಕರ ಕೂಲಿಕಾರರ ಸಹಕಾರ ಸಂಘ, ಸತ್ಕಾರ ಪತ್ತಿನ ಸಹಕಾರ ಸಂಘ ಹಾಗೂ ಭಾರತ ಕೋಳಿ ಸಾಕಾಣಿಕೆ ಮತ್ತು ಮಾರಾಟಗಾರರ ಸಹಕಾರ ಸಂಘ, ಅಫಜಲಪುರ ಟಕ್ಕೆಯ ಕಲ್ಪವೃಕ್ಷ ಗ್ರಾಹಕರ ಸಹಕಾರ ಸಂಘ, ಹಂಚಿನಾಳ ಗ್ರಾಮದ ಬಂಜಾರಾ ಮತ್ತು ಮಹಿಳಾ ಕೈಗಾರಿಕಾ ಸಹಕಾರ ಸಂಘ, ಹುಣಶ್ಯಾಳ ಗ್ರಾಮದ ಹುಣಶ್ಯಾಳ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಶಿವಣಗಿ ಗ್ರಾಮದ ಶಿವಣಗಿ ವಿವಿಧೋದ್ದೇಶಗಳ ಸಹಕಾರ. ನಿಗದಿತ ೭ ದಿನಗಳೊಳಗೆ ಯಾವುದೇ ಆಕ್ಷೇಪಣೆಗಳು ಬರದಿದ್ದಲ್ಲಿ, ನಿಯಮಾನುಸಾರ ಸಂಘಗಳ ನೋಂದಣಿ ರದ್ದುಪಡಿಸಲಾಗುತ್ತದೆ. ಬಳಿಕ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಮಾಪನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
