ಲೇಖನ
– ಡಾ.ಮಲ್ಲಿಕಾರ್ಜುನ.ಎಸ್.ಆಲಮೇಲ.
ಯಡ್ರಾಮಿ
ಜೇವರ್ಗಿ ತಾಲೂಕು
ಕಲಬುರ್ಗಿ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಪಾಶ್ಚಿಮಾತ್ಯದ ಮೋಹಪರವಶದಲ್ಲಿ ಸಿಲುಕಿರುವ ನಾವುಗಳು, ಅವರನ್ನೇ ಮೀರಿಸುವ ಬರದಲ್ಲಿ (ಡ್ರಗ್ಸ್,ಗಾಂಜಾ, ಅಫೀಮು, ಹೆರಾಯಿನ್, ಕೊಕೇನ್, ಮದ್ಯಪಾನ, ತಂಬಾಕು ಮತ್ತು ಧೂಮಪಾನ, ಬ್ರೌನ್ ಶುಗರ್ )ಮಾದಕವೆಂಬ ವಿಷ ವರ್ತುಲದಲ್ಲಿ ಬಂದಿಯಾಗಿ, ಹಣ- ಗುಣದ ಜೊತೆಗೆ ಆರೋಗ್ಯವನ್ನು ಕಳೆದುಕೊಂಡು ಹೆಣವಾಗುತ್ತಿದ್ದೇವೆ, ಮೇಲಿನವು ದುಬಾರಿ ರಕ್ಕಸರಾದರೆ, ಸದುವಿನಯದಿ ಕೊಲ್ಲುವ ಭಯಂಕರ (10- 20 ರೂಪಾಯಿ ದೊರಕುವ )ಚಿಲ್ಲರೆ ಅಸುರ, ಗುಟ್ಕಾ..
“Chewing Tobacco” (ಅಗಿಯುವ ತಂಬಾಕು) ಅಥವಾ “Smokeless Tobacco” (ಹೊಗೆರಹಿತ ತಂಬಾಕು) ಎಂದು ಕರೆಯುವ ಇದು ಸದ್ದಿಲ್ಲದೆ ಮನುಜನ ಕತೆ ಮುಗಿಸಿಬಿಡುತ್ತದೆ.
ಗುಟ್ಕಾ ಸೇವನೆಯು ಕೇವಲ ಬಾಯಿಗೆ ಮಾತ್ರವಲ್ಲದೆ ಇಡೀ ದೇಹದ ಆಂತರಿಕ ಅಂಗಾಂಗಗಳಿಗೆ ಹರಡುವ ಹತ್ತಾರು ಮಾರಕ ಕಾಯಿಲೆಗಳಿಗೆ ನೇರ ಕಾರಣವಾಗುತ್ತದೆ. ಇದರಲ್ಲಿರುವ 28 ಕ್ಕೂ ಹೆಚ್ಚು ಕ್ಯಾನ್ಸರ್ ಕಾರಕ ಕೆಮಿಕಲ್ಗಳು ದೇಹವನ್ನು ನಿಧಾನವಾಗಿ ಕೊಲ್ಲುತ್ತವೆ.
ಮಹಾಮಾರಿ ಗುಟ್ಕಾ ಸೇವನೆಯಿಂದ ಬರುವ ರೋಗಗಳು
ಬಾಯಿಯ ಮತ್ತು ಗಂಟಲಿನ ಕ್ಯಾನ್ಸರ್ (Oral & Throat Cancer)
ಗುಟ್ಕಾ ತಿನ್ನುವುದರಿಂದ ಬರುವ ಅತ್ಯಂತ ಸಾಮಾನ್ಯ ಮತ್ತು ಪ್ರಾಣಾಪಾಯ ತರುವ ರೋಗವಿದು. ಕೆನ್ನೆ, ನಾಲಿಗೆ, ದವಡೆ, ಮತ್ತು ಗಂಟಲಿನಲ್ಲಿ ಗಡ್ಡೆಗಳು ಅಥವಾ ಎಂದಿಗೂ ವಾಸಿಯಾಗದ ಹುಣ್ಣುಗಳು (Ulcers) ಸೃಷ್ಟಿಯಾಗಿ ಇಡೀ ಮುಖದ ಭಾಗವನ್ನೇ ಕರಗಿಸಿಬಿಡುತ್ತದೆ.
ಓರಲ್ ಸಬ್ಮ್ಯೂಕಸ್ ಫೈಬ್ರೋಸಿಸ್ (OSF – ಬಾಯಿ ಗಟ್ಟಿಯಾಗುವುದು)
ಈ ಕಾಯಿಲೆ ಬಂದಾಗ ಬಾಯಿಯ ಒಳಗಿನ ಮೃದುವಾದ ಚರ್ಮವು ಸಂಪೂರ್ಣವಾಗಿ ಗಟ್ಟಿಯಾಗುತ್ತದೆ. ರೋಗಿಗೆ ಬಾಯಿಯನ್ನು ಸಹ ಪೂರ್ತಿಯಾಗಿ ತೆರೆಯಲು ಸಾಧ್ಯವಾಗುವುದಿಲ್ಲ. ಕೊನೆಗೆ ಕೇವಲ ಒಂದು ಸ್ಟ್ರಾ (Straw) ಹೋಗುವಷ್ಟು ಮಾತ್ರ ಬಾಯಿ ತೆರೆಯುತ್ತದೆ, ಇದರಿಂದ ಆಹಾರ ಅಗಿಯುವುದು ಅಸಾಧ್ಯವಾಗುತ್ತದೆ. ಇದು ಮುಂದೆ 100% ಕ್ಯಾನ್ಸರ್ ಆಗಿ ಬದಲಾಗುತ್ತದೆ.
ಹೃದಯಾಘಾತ ಮತ್ತು ಪಾರ್ಶ್ವವಾಯು (Heart Attack & Stroke)
ಗುಟ್ಕಾದಲ್ಲಿರುವ ನಿಕೋಟಿನ್ ಅಂಶವು ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು (BP) ತಕ್ಷಣವೇ ಹೆಚ್ಚಿಸುತ್ತದೆ. ಇದು ರಕ್ತನಾಳಗಳನ್ನು ಕಿರಿದಾಗಿಸಿ, ಹೃದಯಕ್ಕೆ ರಕ್ತದ ಹರಿವನ್ನು ನಿಲ್ಲಿಸುತ್ತದೆ. ಇದರಿಂದ ಹೃದಯಾಘಾತ (Heart Attack) ಅಥವಾ ಮೆದುಳಿನ ಪಾರ್ಶ್ವವಾಯು (Stroke) ಸಂಭವಿಸುವ ಅಪಾಯ ತುಂಬಾ ಹೆಚ್ಚಿರುತ್ತದೆ
ಅನ್ನನಾಳ ಮತ್ತು ಜಠರದ ಕ್ಯಾನ್ಸರ್ (Esophagus & Stomach Cancer)
ಗುಟ್ಕಾ ಜಗಿಯುವಾಗ ಅದರ ರಸವನ್ನು ಹೊಟ್ಟೆಗೆ ನುಂಗುವುದರಿಂದ, ಆ ಕೆಮಿಕಲ್ಗಳು ಅನ್ನನಾಳ ಮತ್ತು ಜಠರದ ಒಳಗಿನ ಪದರಗಳನ್ನು ಸುಟ್ಟು ಹಾಕುತ್ತವೆ. ಇದು ಜಠರದಲ್ಲಿ ತೀವ್ರವಾದ ಆಲ್ಸರ್ (ಹೊಟ್ಟೆಯ ಹುಣ್ಣು) ಮತ್ತು ಮುಂದೆ ಅನ್ನನಾಳದ ಕ್ಯಾನ್ಸರ್ಗೆ ಕಾರಣವಾಗುತ್ತದೆ.
ಲಿವರ್ ಮತ್ತು ಕಿಡ್ನಿ ವೈಫಲ್ಯ (Liver & Kidney Damage)
ಗುಟ್ಕಾದಲ್ಲಿ ಸೀಸ (Lead), ಆರ್ಸೆನಿಕ್ ಮತ್ತು ಕ್ರಿಮಿನಾಶಕಗಳಂತಹ ಭಾರ ಲೋಹಗಳ (Heavy metals) ಅಂಶಗಳಿರುತ್ತವೆ. ಇವುಗಳನ್ನು ದೇಹದಿಂದ ಹೊರಹಾಕಲು ಕೆಲಸ ಮಾಡುವ ಲಿವರ್ ಮತ್ತು ಕಿಡ್ನಿಗಳು ದೀರ್ಘಕಾಲದ ಬಳಕೆಯಿಂದ ಸಂಪೂರ್ಣವಾಗಿ ಕೆಟ್ಟುಹೋಗುತ್ತವೆ.
ಪುರುಷತ್ವ ದೌರ್ಬಲ್ಯ ಮತ್ತು ಗರ್ಭಪಾತ (Infertility & Pregnancy Risks)
ಪುರುಷರಲ್ಲಿ ತಂಬಾಕು ಸೇವನೆಯು ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ತೀವ್ರವಾಗಿ ಕುಂಠಿತಗೊಳಿಸಿ ನಪುಂಸಕತ್ವಕ್ಕೆ ದಾರಿ ಮಾಡಿಕೊಡುತ್ತದೆ.
ಇನ್ನು ಮಹಿಳೆಯರಲ್ಲಿ ಗರ್ಭಿಣಿಯರು ಗುಟ್ಕಾ ಬಳಸಿದರೆ ಹುಟ್ಟುವ ಮಗು ಕಡಿಮೆ ತೂಕ ಹೊಂದಿ ಹೊಟ್ಟೆಯಲ್ಲೇ ಮಗು ಸಾಯುವ (Stillbirth) ಅಪಾಯವಿರುತ್ತದೆ. ಇಷ್ಟೆಲ್ಲ ಅಪಾಯಗಳ ಆಗರವಾಗಿರುವ ಗುಟ್ಕಾ ಸೇವಿಸುವ ಅಗತ್ಯವಿದೆಯೇ..? ಉತ್ಪನ್ನ ಮತ್ತು ಮಾರಾಟದ ಅವಶ್ಯವಿದೆಯೇ..? ಇದನೆಲ್ಲ ಮನಗಂಡಂತೆ ಕಂಡ ಸರ್ಕಾರವು ಕರುನಾಡನ್ನು ಪಾನ ಮುಕ್ತ ಕರ್ನಾಟಕವನ್ನಾಗಿ ಮಾಡಲು ಗುಟ್ಕಾ ನಿಷೇಧಿಸಿ 10/8/2026ರಂದು ಆದೇಶ ಹೊರಡಿಸಿತು, ಆದ್ರೆ ಆದೇಶಕ್ಕೆ ಸ್ವಪಕ್ಷೀಯ ಶಾಸಕ – ಸಚಿವರು, ಮತ್ತು ವಿರೋಧ ಪಕ್ಷದ ಶಾಸಕರು ( ಬಹುಶಃ ಇವರು ಗುಟ್ಕಾ ಕಂಪನಿಗಳ ಆಮಿಷಕ್ಕೆ ಒಳಗಾಗಿರಬಹುದು ) ಅಡಕೆ ಬೆಳೆಗಾರರ ಹಿತದೃಷ್ಟಿಯ ನೆಪವೊಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ, ಆದೇಶ ಹೊರಡಿಸಿದ ಕೇವಲ ಎರಡೇ ದಿನದಲ್ಲಿ 14-8-26ರಂದು ರದ್ದು ಪಡಿಸಿ ಮತ್ತೆ ಜನತೆಯನ್ನು ಮಹಾಮಾರಿಗೆ ಬಲಿಯಾಗಲು ತಳ್ಳಿತು. ಇದು ಸರಿಯಾದ ಕ್ರಮವಲ್ಲ, ಸರ್ಕಾರವು ಈ ಕೆಲ ಬಿಟ್ಟಿ ಭಾಗ್ಯಗಳ ಬದಲು, ಗುಟ್ಕಾ ಜೊತೆಗೆ ಮದ್ಯಪಾನ, ಬೀಡಿ – ಸಿಗರೇಟ್ ಸಮೇತ ಎಲ್ಲಾ ಮಾದಕವಸ್ತುಗಳನ್ನು ಸಂಪೂರ್ಣ ನಿಷೇದ ಮಾಡಿದರೆ, ಜನತೆಗೆ ಅಪಾರ ಪ್ರಮಾಣದ ದುಡ್ಡು ಉಳಿಯುವದರ ಜೊತೆಗೆ ಪ್ರತಿ ಮನೆ-ಮನಗಳಲ್ಲಿ ಶಾಂತಿ ನೆಮ್ಮದಿ ಲಭಿಸಿ ಸರ್ಕಾರಕ್ಕೆ ಒಳ್ಳೇ ಹೆಸರು ಬರುತ್ತೆ. ಭಾಗ್ಯಳ ಬೆನ್ನು ಹತ್ತಿ, 6 ಲಕ್ಷಕೋಟಿ ಸಾಲ ಮಾಡಿ ನಾಡಿನ ಮರ್ಯಾದೆ ಕಳೆಯೋದು ತಪ್ಪುತ್ತೆ ಅಲ್ವಾ?
ಒಂದು ಅಂದಾಜಿನ ಪ್ರಕಾರ
ಭಾರತ ದೇಶದ ಒಟ್ಟಾರೆ ಅಂಕಿ-ಅಂಶಗಳು (National Level) ಒಟ್ಟು ಕ್ಯಾನ್ಸರ್ನಲ್ಲಿ ಪಾಲು

ಇಡೀ ದೇಶದಲ್ಲಿ ವರದಿಯಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 47.6 ರಷ್ಟು ಪ್ರಕರಣಗಳು ತಂಬಾಕು ಮತ್ತು ಗುಟ್ಕಾ ಬಳಕೆಯಿಂದಲೇ ಆಗುತ್ತಿವೆ.
ಬಾಯಿಯ ಕ್ಯಾನ್ಸರ್ (Oral Cancer)
ಭಾರತದಲ್ಲಿ ಬಾಯಿಯ ಕ್ಯಾನ್ಸರ್ ಪೀಡಿತರಾಗಿರುವವರಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು (90%+) ಜನ ಗುಟ್ಕಾ, ಖೈನಿ, ಪಾನ್ ಮಸಾಲಾ ಅಥವಾ ಅಡಿಕೆ-ಸುಣ್ಣದ ಮಿಶ್ರಣವನ್ನು ಅಗಿಯುವ ಹವ್ಯಾಸ ಹೊಂದಿದ್ದವರಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ
ಇತ್ತೀಚಿನ ಪ್ರತಿಷ್ಠಿತ ದಿ ಲ್ಯಾನ್ಸೆಟ್ (The Lancet) ಅಧ್ಯಯನದ ಪ್ರಕಾರ, ಪ್ರಪಂಚದಲ್ಲೇ ಹೊಗೆರಹಿತ ತಂಬಾಕು (ಗುಟ್ಕಾ) ಸೇವನೆಯಿಂದ ಬರುವ ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ.
ಇನ್ನು ಕರ್ನಾಟಕದ ಪರಿಸ್ಥಿತಿ (Kidwai Oncology Report)
ಕರ್ನಾಟಕದ ಪ್ರಮುಖ ಕ್ಯಾನ್ಸರ್ ಸಂಸ್ಥೆಯಾದ ಕಿದ್ವಾಯಿ (KMIO) ವರದಿಯ ಪ್ರಕಾರ, ರಾಜ್ಯದಲ್ಲಿ ದಾಖಲಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು (40.4%) ಪ್ರಕರಣಗಳು ಗುಟ್ಕಾ, ತಂಬಾಕು ಮತ್ತು ಸಿಗರೇಟ್ ಸೇವನೆಯಿಂದಲೇ ಉಂಟಾಗುತ್ತಿವೆ.
ಪುರುಷರಲ್ಲಿ ಹೆಚ್ಚು
ರಾಜ್ಯದಲ್ಲಿ ಕ್ಯಾನ್ಸರ್ ಪೀಡಿತರಾಗುವ ಪುರುಷರಲ್ಲಿ ಶೇಕಡಾ 52.5 ರಷ್ಟು ಮಂದಿ ತಂಬಾಕು ಮತ್ತು ಗುಟ್ಕಾ ವ್ಯಸನದಿಂದಾಗಿ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮಹಿಳೆಯರಲ್ಲಿ ಈ ಪ್ರಮಾಣ ಶೇಕಡಾ 30.7 ರಷ್ಟು ಇದೆ.ಇಷ್ಟೆಲ್ಲಾ ಭಯಂಕರ ಅಪಾಯವಿರುವ ಗುಟ್ಕಾ, ತಂಬಾಕು ಸೇವನೆ ಅಗತ್ಯವೆ ತಾವೇ ಒಮ್ಮೆ ಯೋಚಿಸಿರಿ.
ಒಂದು ವೇಳೆ ತಾವು ಬಿಡಲಾಗದಷ್ಟು ಅಂಟಿಕೊಂಡು ಬಿಟ್ಟಿದ್ದರೆ ಅದಕೊಂದು ಸರಳ ಪರ್ಯಾಯ ಮಾರ್ಗವಿದೆ.
ಅಡಿಕೆ ಮತ್ತು ಸುಣ್ಣ, ವೀಳ್ಯದೆಲೆ ಮಿಶ್ರಣ ಸೇವನೆ
ಅಡಿಕೆ ಮತ್ತು ಸುಣ್ಣದ ಸಂಯೋಜನೆಯನ್ನು ಭಾರತೀಯ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕವಾಗಿ ತಾಂಬೂಲ (ವೀಳ್ಯದೆಲೆ) ಅಥವಾ ಪಾನ್ ಜೊತೆಗೆ ಸೇರಿಸಿ ಮಿತ ಪ್ರಮಾಣದಲ್ಲಿ ಇವುಗಳನ್ನು ಅಗಿಯುವುದರಿಂದ ದೇಹಕ್ಕೆ ಕೆಲವು ಆರೋಗ್ಯಕರ ಪ್ರಯೋಜನಗಳು ಸಿಗುತ್ತವೆ.
ಅಡಿಕೆ ಮತ್ತು ಸುಣ್ಣವನ್ನು ಒಟ್ಟಿಗೆ ಅಗಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಅಡಿಕೆ ಮತ್ತು ಸುಣ್ಣದ ಮಿಶ್ರಣವು ಬಾಯಿಯಲ್ಲಿ ಹೆಚ್ಚು ಲಾಲಾರಸ (Saliva) ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ.
ಆಹಾರದ ಜೀರ್ಣ

ಈ ಲಾಲಾರಸವು ಹೊಟ್ಟೆಯಲ್ಲಿನ ಆಹಾರವನ್ನು ಸುಲಭವಾಗಿ ಜೀರ್ಣ ಮಾಡಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಎರಡನೆಯದು ದೇಹಕ್ಕೆ ಕ್ಯಾಲ್ಸಿಯಂ ಲಭ್ಯತೆ, ಸುಣ್ಣವು (Slaked lime) ನೈಸರ್ಗಿಕವಾಗಿ ಕ್ಯಾಲ್ಸಿಯಂ ಕಾರ್ಬೋನೇಟ್ ಆಗಿದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸುಣ್ಣವನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ದೊರೆತು, ಮೂಳೆ ಮತ್ತು ಹಲ್ಲುಗಳ ಆರೋಗ್ಯಕ್ಕೆ ಪೂರಕವಾಗುತ್ತದೆ. ಜೊತೆಗೆ ಬಾಯಿಯ ದುರ್ವಾಸನೆ ತಡೆಗಟ್ಟುತ್ತದೆ ಅಡಿಕೆಯಲ್ಲಿರುವ ಸಂಕೋಚಕ ಗುಣ (Astringent property) ಮತ್ತು ಸುಣ್ಣದ ಮಿಶ್ರಣವು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಿ, ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಅಡಿಕೆಯಲ್ಲಿರುವ ನೈಸರ್ಗಿಕ ಅಂಶಗಳು ನರಮಂಡಲವನ್ನು ಸ್ವಲ್ಪ ಮಟ್ಟಿಗೆ ಉತ್ತೇಜಿಸುತ್ತವೆ. ಇದು ಆಲಸ್ಯವನ್ನು ದೂರ ಮಾಡಿ, ತಕ್ಷಣದ ಶಕ್ತಿ ಅಥವಾ ಚುರುಕುತನ ನೀಡುತ್ತದೆ.
ಆಯುರ್ವೇದದ ಪ್ರಕಾರ, ಅಡಿಕೆಯಲ್ಲಿರುವ ಕಹಿ ಮತ್ತು ಒಗರು ಗುಣಗಳು ಹೊಟ್ಟೆಯಲ್ಲಿರುವ ಜಂತುಹುಳುಗಳನ್ನು (Intestinal worms) ನಾಶಪಡಿಸಲು ಸಹಾಯ ಮಾಡುತ್ತವೆ.
ಎಚ್ಚರಿಕೆ: ಮಿತ ಬಳಕೆ ಅತ್ಯಗತ್ಯ
ಇವುಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ಬಳಸಬೇಕು. ಅತಿಯಾಗಿ ಬಳಸಿದರೆ ಸುಣ್ಣವು ಬಾಯಿ ಮತ್ತು ಜಠರದ ತೇವಾಂಶವನ್ನು ಹೀರಿ ಹುಣ್ಣುಗಳನ್ನು (Ulcers) ಉಂಟುಮಾಡಬಹುದು. ತಂಬಾಕು ಮುಕ್ತವಾಗಿರಲಿ
ಅಡಿಕೆ-ಸುಣ್ಣದ ಜೊತೆಗೆ ತಂಬಾಕು (Tobacco) ಅಥವಾ ಗುಟ್ಕಾ ಮಿಶ್ರಣ ಮಾಡಿದರೆ ಅದು ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಕೇವಲ ಸಾಂಪ್ರದಾಯಿಕ ತಾಂಬೂಲದ ರೂಪದಲ್ಲಿ ಮಾತ್ರ ಬಳಸಿದರೆ ಅಡಿಕೆ ಬೆಳೆಗಾರರ ಸಮಸ್ಯೆಯು ಪರಿಹಾರವಾಗುತ್ತೆ, ಆರೋಗ್ಯಕರವಾದ ಬದುಕು ಲಭಿಸುತ್ತೆ ಏನಂತೀರಾ..?


