ವಿಜಯಪುರದಲ್ಲಿ ಖ್ಯಾತ ನೀರಾವರಿ ತಜ್ಞ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಲು ಇಲ್ಲಿಯವರೆಗೆ ಆಡಳಿತ ಮಾಡಿದ ಯಾವುದೇ ಪಕ್ಷದ ಸರ್ಕಾರ ಇದ್ದರೂ ಕೂಡ ಮುತುವರ್ಜಿ ವಹಿಸಿಲ್ಲ ಇದರಿಂದ ವಿಜಯಪುರ – ಬಾಗಲಕೋಟ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ನೀರಾವರಿ ಯೋಜನೆ ಸಂಪೂರ್ಣವಾಗಿ ಜಾರಿಯಾಗಿಲ್ಲ. ಇದರಿಂದ ರೈತರಿಗೆ ಕೃಷಿಗೆ ನೀರಿಲ್ಲದೇ ಪರಿತಪಿಸುವಂತಾಗಿದೆ ಎಂದು ಖ್ಯಾತ ನೀರಾವರಿ ತಜ್ಞರಾದ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಹೇಳಿದರು.
ಮಂಗಳವಾರದಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಕೃಷ್ಣಾ ಕೊಳ್ಳ ಜಲಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಕರೆದಿದ್ದ ಮಾಧ್ಯಮಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೊದಲಿನಿಂದಲೂ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಾ ಬಂದಿದೆ ಒಂದು ರೀತಿ ಉತ್ತರ ಕರ್ನಾಟಕವೆಂದರೆ ರಾಜ್ಯ ಸರ್ಕಾರಕ್ಕೆ ಅಲರ್ಜಿ ಉಂಟಾಗುತ್ತದೆ ಉತ್ತರ ಕರ್ನಾಟಕದಲ್ಲಿ ಬೃಹತ್ ಜಲಾಶಯಗಳನ್ನು ನಿರ್ಮಿಸಿದ್ದರು. ಸಮರ್ಪಕವಾಗಿ ರೈತರಿಗೆ ನೀರು ಕೊಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಿಜಯಪುರ ಜಿಲ್ಲೆ ಎಂದರೆ ಸರಕಾರ ಸಂಪೂರ್ಣ ನಿರ್ಲಕ್ಷ ಮಾಡುತ್ತಾ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ ಹೀಗಾಗಿ ನಮ್ಮ ಭಾಗದಲ್ಲಿ ಸಂಪೂರ್ಣ ನೀರಾವರಿಗೆ ಆದ್ಯತೆ ನೀಡುತ್ತಿಲ್ಲ ಅದರಂತೆ ತುಂಗಭದ್ರ ಹಿಡಕಲ್ ಜಲಾಶಯ ಸೇರಿದಂತೆ ಇನ್ನೂ ಕೆಲವು ಆಣೆಕಟ್ಟುಗಳು ಉತ್ತರ ಕರ್ನಾಟಕದಲ್ಲಿ ಇವೆ ಹೀಗಿದ್ದರೂ ನಿರಂತರ ನೀರಿನಿಂದ ವಂಚಿತರಾಗಿದ್ದೇವೆ. ಮತ್ತು ಈ ಸದ ಜಲ ಸಂಪನ್ಮೂಲ ಸಚಿವ ಸ್ಥಾನವನ್ನು ದಕ್ಷಿಣ ಭಾಗದವರಿಗೆ ನೀಡಲಾಗಿದೆ ಅವರು ನಮ್ಮ ಭಾಗದ ನೀರಾವರಿ ಹಾಗೂ ರೈತರ ಸಂಕಷ್ಟದ ಬಗ್ಗೆ ಅರಿವಿಲ್ಲ ಜಲಸಂಪನ್ಮೂಲ ಸಚಿವರಾದಾಗಿನಿಂದ ಆಲಮಟ್ಟಿ ಆಣೆಕಟ್ಟಿನ ಬಗ್ಗೆ ಒಂದು ದಿನವೂ ಹೇಳಿಕೆ ನೀಡಿಲ್ಲ ಇದರಿಂದ ನಮ್ಮ ಭಾಗದ ರೈತರಿಗೆ ನ್ಯಾಯ ಸಿಗುವುದು ಸಾಧ್ಯವಿಲ್ಲ ಇಡೀ ರಾಜ್ಯವನ್ನು ನಿಭಾಯಿಸುವ ಶಕ್ತಿ ಜಲಸಂಪನ್ಮೂಲ ಸಚಿವರಿಗೆ ಅಗತ್ಯವಾಗಿ ಬೇಕು. ಈ ಹಿಂದೆ ಬಿ.ಎಸ್.ಪಾಟೀಲ ಮನಗೂಳಿಯವರಿಗೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಜಲಸಂಪನ್ಮೂಲ ಸಚಿವ ಸ್ಥಾನವನ್ನು ನೀಡಲಾಗಿತ್ತು. ಆದರೆ ಅದು ಕೇವಲ ೬ ತಿಂಗಳವರೆಗೆ ಮಾತ್ರ ನೀಡಿ ನಂತರ ಮತ್ತೆ ಸಚಿವಸ್ಥಾನವನ್ನು ಹಿಂದಕ್ಕೆ ಪಡೆದಿದ್ದಾರೆ. ಆದ್ದರಿಂದ ಈಗ ಮತ್ತೆ ಉತ್ತರ ಕರ್ನಾಟಕ ಭಾಗದ ಯಾವುದೇ ಶಾಸಕರಲ್ಲಿ ಒಬ್ಬರಿಗೆ ಜಲಸಂಪನ್ಮೂಲ ಸಚಿವ ಖಾತೆಯನ್ನು ನೀಡಬೇಕು ಎಂದು ಆಗ್ರಹಿದ್ದಾರೆ.
ಈ ಸಂದರ್ಭದಲ್ಲಿ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ ಸಮಿತಿಯ ಮುಖಂಡರು ಹಾಗೂ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಉತ್ತರ ಕರ್ನಾಟಕ್ಕೆ ಇನ್ನೊಂದು ಜಲಸಂಪನ್ಮೂಲ ಸಚಿವ ಸ್ಥಾನದ ಖಾತೆಯನ್ನು ನಮ್ಮ ಭಾಗಕ್ಕೆ ಪ್ರತ್ಯೇಕವಾಗಿ ಕೊಟ್ಟರೆ ಶೀಘ್ರವಾಗಿ ಎಲ್ಲ ನೀರಾವರಿ ಯೋಜನೆಗಳು ಮುಕ್ತಾಯಗೊಳಿಸಿ ಕೃಷಿಗೆ ಸಮರ್ಪಕವಾಗಿ ನೀರು ಕೊಡಲು ಸಾಧ್ಯವಾಗುತ್ತದೆ ಎಂದರು.

