ವಿಜಯಪುರದ ಭೂತನಾಳ ಕೆರೆಯಲ್ಲಿ ನಡೆದ ಹೃದಯವಿದ್ರಾವಕ ದುರ್ಘಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಆದರ್ಶನಗರ ಠಾಣೆ ವ್ಯಾಪ್ತಿಯ ಭೂತನಾಳ ಕೆರೆಯಲ್ಲಿ 6 ಜನರು ನೀರಲ್ಲಿ ಮುಳುಗಿ ಮರಣ ಹೊಂದಿದ ಹೃದಯವಿದ್ರಾವಕ ದುರ್ಘಟನೆ ಜರುಗಿದೆ.
ಬುಧವಾರ ಕೆರೆಯ ಅಂಚಿನಲ್ಲಿ ಶವಗಳು ತೇಲಿ ಬಂದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.
ಮೃತರು ನಗರದ ಹೊರವಲಯದ ತೊರವಿ ಗ್ರಾಮದ ಶಾಂತಿ ನಗರದ ನಿವಾಸಿಗಳಾಗಿದ್ದು ಶೋಭಾ ಗಂ. ಮಲ್ಲಿಕಾರ್ಜುನ ಜಾಲಗೇರಿ (35) ಎಂಬ ಮಹಿಳೆ ತನ್ನ ಐದು ಮಕ್ಕಳಾದ ವಿದ್ಯಾ (15), ಸುವರ್ಣಾ (13), ತಿಪ್ಪರಾಯ (12), ಸಾನಿಕಾ (10) ಮತ್ತು ವಿಕಾಶ (6) ಎಂದು ತಿಳಿದುಬಂದಿದೆ.
ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದ್ದು, ಘಟನೆಯ ಕುರಿತು ತನಿಖೆ ಮುಂದುವರೆದಿದೆ.
ಮೃತಳ ಗಂಡನಿಂದ ದೂರು ದಾಖಲು
ಮೃತಳಾದ ಶೋಭಾ ಜಾಲಗೇರಿ ಇವಳ ಪತಿ ಮಲ್ಲಿಕಾರ್ಜುನ ಭೀಮಸಿ ಜಾಲಗೇರಿ ಈತನು ತನ್ನ ಪತ್ನಿ ಶೋಭಾಗೆ ಪ್ರಾಪಂಚಿಕ ವಿಷಯವಾಗಿ ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡು ತನ್ನ ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೋದ ಬಗ್ಗೆ ದಿನಾಂಕ: 24-08-2026 ರಂದು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ನೀಡಿ ಪ್ರಕರಣ ದಾಖಲಿಸಿದ್ದನೆಂದು ತಿಳಿದುಬಂದಿದೆ.

