ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ (ಜಮಖಂಡಿ): ಗ್ರಾಮೀಣ ಬದುಕಿನ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಜಾನಪದ ಕಲೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿದ್ದು, ಅವುಗಳ ಸಂರಕ್ಷಣೆ ಹಾಗೂ ಬೆಳವಣಿಗೆಯಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಬೇಕು ಎಂದು ಸಮಾಜಮುಖಿ ಚಿಂತಕ ಕಂಬಾಗಿ ಸುರೇಶ್ ಕರೆ ನೀಡಿದರು.
ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ದುರ್ಗಾದೇವಿ ವಾರದ ಅಂಗವಾಗಿ ಆಯೋಜಿಸಲಾದ “ಗೀ ಗೀ ಪದ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಯ ವೇಗದಲ್ಲಿ ಅನೇಕ ಜಾನಪದ ಕಲಾಪ್ರಕಾರಗಳು ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಗ್ರಾಮೀಣ ಬದುಕಿನ ಅನುಭವ, ಜನಜೀವನದ ಮೌಲ್ಯಗಳು ಹಾಗೂ ಜನಪದ ಜ್ಞಾನವನ್ನು ಒಳಗೊಂಡಿರುವ ಇಂತಹ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಾನಪದ ಗಾಯಕಿ ಪೂರ್ಣಿಮಾ ಹಂದಿಗುಂದ, “ಗೀ ಗೀ ಪದ” ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದು ರೈತರ ಬದುಕು, ಸಾಮಾಜಿಕ ಕಳಕಳಿ, ಇತಿಹಾಸ ಹಾಗೂ ಜನರ ಭಾವನೆಗಳನ್ನು ಜೀವಂತವಾಗಿ ಕಟ್ಟಿಕೊಡುವ ಮೌಖಿಕ ಸಾಹಿತ್ಯದ ಅಪರೂಪದ ಪರಂಪರೆಯಾಗಿದೆ. ಇಂತಹ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಹಿರಿಯ ಗೀ ಗೀ ಪದ ಕಲಾವಿದರು ಹಾಗೂ ಜಾನಪದ ತಜ್ಞರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮವು ಜಾನಪದ ಗೀತೆಗಳು, ಗೀ ಗೀ ಪದಗಳ ಗಾಯನ ಹಾಗೂ ಗ್ರಾಮೀಣ ಸಾಂಸ್ಕೃತಿಕ ವೈಭವದ ಮೂಲಕ ನೆರೆದಿದ್ದ ಜನರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ರಾವಾಸಾಬ ದಳವಾಯಿ, ಶಿವಲಿಂಗಪ್ಪ ಕುಂಬಾರ, ಕಂಬಾಗಿ ಸುರೇಶ್, ಪೂರ್ಣಿಮಾ ಹಂದಿಗುಂದ, ರಾಜು ಪಾಟೀಲ, ಗಣಪತಿ ಕೋತ, ಬಸವರಾಜ ತಳವಾರ, ಬಾಳುಗೌಡ ಪಾಟೀಲ, ಬಾಳು ಗುರವ, ಬಸಪ್ಪ ಬಾಲಪ್ಪನವರ, ಗ್ಯಾಂಗಯ್ಯ ಮಠದ, ಅಪ್ಪಾಸಾಬ ದಳವಾಯಿ, ರಾಜು ಕವಟಗಿ, ರಾವಸಾಬ ಪಾಟೀಲ, ರಾವಸಾಬ ಕುಂಬಾರ, ಈರಪ್ಪ ಬೋರ್ಯಾಳ, ಶಿವಲಿಂಗಪ್ಪ ಬಿರಾದಾರ, ಗುರಬಾಳು ಕಿತ್ತೂರು ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

