ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮಕ್ಕಳು ಮಾದಕ ವ್ಯಸನದಿಂದ ದೂರ ಇರುವುದರ ಜೊತೆಗೆ ಸುತ್ತಮುತ್ತಲಿನ ಜನರಲ್ಲಿ ಅದರ ಕುರಿತು ಜಾಗೃತಿ ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ಪೋಲಿಸ್ ಅಧಿಕಾರಿ ಪಿ.ಎಚ್.ಘಾಟಗೆ ಅಭಿಪ್ರಾಯ ಪಟ್ಟರು.
ಹತ್ತಿರದ ಕುಂಬಾರಹಳ್ಳ ಪಿ.ಎ. ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಸಿದ ಮಾದಕ ವ್ಯಸನ ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಇಂದು ಯುವ ಜನತೆ ಡ್ರಗ್ಸ, ಗಾಂಜಾ, ಬಿಡಿ , ಸಿಗರೇಟ್, ಮಾವಾ ಇವೇ ಮೊದಲಾದ ಮಾದಕ ವ್ಯಸನಕ್ಕೆ ಬಲಿಯಾಗಿ ಜೀವನವನ್ನು ಹಾಳು ಮಾಡಿ ಕೊಳ್ಳುತ್ತಿದ್ದಾರೆ, ಒಮ್ಮೆ ಚಟಕ್ಕೆ ಬಿದ್ದರೆ ಅದರಿಂದ ತಪ್ಪಿಸಿ ಕೊಳ್ಳುವುದು ಬಹಳ ಕಷ್ಟ ಆದ್ದರಿಂದ ಮಾದಕವ್ಯಸನಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು. ನಿಮ್ಮ ಸುತ್ತಮುತ್ತಲು ಯಾರಾದರೂ ಮಾದಕ ವ್ಯಸನಕ್ಕೆ ಬಲಿಯಾದರೆ ನಾವು ನೀಡುವ ಆ್ಯಪ ಮೂಲಕ ನಮಗೆ ತಿಳಿಸಿದರೆ ಅವರನ್ನೂ ಸಹ ಸನ್ಮಾರ್ಗಕ್ಕೆ ತರಲು ಸಾಧ್ಯ ಎಂದು ಹೇಳಿ ಸ್ಕ್ಯಾನರ್ ನ್ನು ಪರಿಚಯಿಸಿ ಶಾಲೆಯಲ್ಲಿ ಎಲ್ಲರಿಗೂ ಸಿಗುವಂತೆ ಪ್ರದರ್ಶಿಸಲು ತಿಳಿಸಿದರು. ಮಕ್ಕಳ ಸಮಸ್ಯೆಗಳಿಗೆ ಪೋಲಿಸ್ ಇಲಾಖೆ ಸದಾ ಸ್ಪಂದಿಸುತ್ತದೆ ನಿಮ್ಮ ಸಮಸ್ಯೆಗಳಿದ್ದರೆ 1098ಕ್ಕೆ ದೂರವಾಣಿ ಮಾಡಿ ಮತ್ತು ಇನ್ನಿತರ ಸಮಸ್ಯೆಗಳಾದಲ್ಲಿ, ನಮ್ಮ ಸಹಾಯ ಬೇಕಾದಲ್ಲಿ 112ಕ್ಕೆ ಸಂಪರ್ಕಿಸಿ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಮಾತನಾಡಿ “ಮನುಷ್ಯ ಅರಿಯದೇ ಆಕರ್ಷಣೆಗೆ ಒಳಗಾಗಿ ಚಟ ಮಾಡುತ್ತಾನೆ, ನಂತರ ಚಟವೇ ಚಟ ಮಾಡುತ್ತದೆ ಕೊನೆಗೆ ಚಟ ಮಾನವನನ್ನೇ ಬಲಿ ಪಡೆದುಕೊಳ್ಳುತ್ತದೆ ಆದ್ದರಿಂದ ಮಾದಕದ್ರವ್ಯದಿಂದ ದೂರವಿರಿ ಮತ್ತು ಅದಕ್ಕೆ ಒಳಗಾದವರನ್ನು ರಕ್ಷಿಸುವ ಪಣ ತೊಡಿ ಎಂದರು.
ಶಿಕ್ಷಕ ಬಾಹುಬಲಿ ಮುತ್ತೂರ ಪ್ರಾಸ್ತಾವಿಕವಾಗಿ ಮಾತನಾಡಿ, ಮಾದಕ ವಸ್ತುಗಳು ನಮ್ಮ ಜೀವನವನ್ನೇ ಹಾಳು ಮಾಡುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಜಾಗೃತಿಯಿಂದ ಬಾಳಬೇಕು ಎಂದರು.
ಆರಕ್ಷಕ ಎಸ್.ಪಿ.ಮಠಪತಿ, ಶಿಕ್ಷಕರಾದ ಅಶೋಕ ಬಿರಾದಾರ ಪಾಟೀಲ, ಚಂದ್ರಕಾಂತ ಪೋಲಿಸ್, ಶ್ರೀಮತಿ ಶಾರದಾ ಮಠ, ಮಂಜುಳಾ ಕಡಕೋಳ, ಆಸೀಫಾಬಾನು ಮೋಮಿನ್, ಶಕುಂತಲಾ ಬಿರಾದಾರ ಮತ್ತು ಶಾಲೆಯ ಎಲ್ಲಾ ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳು ಮಾದಕವ್ಯಸನ ವಿರೋಧಿ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಬಾಹುಬಲಿ ಮುತ್ತೂರ ಗುರುಗಳು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

