ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಆಲಮೇಲದಲ್ಲಿ ಜೂ.೨೫ರಂದು ಸಾಯಂಕಾಲ ೪ಗಂಟೆಗೆ ನಡೆಯುವ ಆಲಮೇಲ ತಾಲೂಕಿನ ೬ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಚಿವ ಎಂ.ಬಿ.ಪಾಟೀಲ ಹಾಗೂ ಮಾಜಿ ಸಚಿವ, ಹಾಲಿ ಶಾಸಕ ಶಿವಾನಂದ ಪಾಟೀಲ ಅವರು ರೂ.೨೧೭ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆಗಮಿಸಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ಶಾಸಕರ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಲಮೇಲ ತಾಲೂಕಿಗೆ ೧೪೫ಕೋಟಿ ೭೩ಲಕ್ಷ ರೂ. ವೆಚ್ಚದ ತೋಟಗಾರಿಕೆ ಕಾಲೇಜು ಮಂಜೂರಾಗಿದ್ದು, ಅದರ ಮೊದಲ ಹಂತವಾಗಿ ರೂ.೩೯ಕೋಟಿ ೯೦ಲಕ್ಷ, ಕಡಣಿ ಸೇತುವೆ ನಿರ್ಮಾಣಕ್ಕೆ ರೂ.೪೪ಕೋಟಿ ೫೦ಲಕ್ಷ, ಆಲಮೇಲ ಪಟ್ಟಣದಲ್ಲಿ ರೂ.೨೦ಕೋಟಿ ವೆಚ್ಚದ ೧.೮ಕಿಮೀ ರಸ್ತೆ ಕಾಮಗಾರಿ ಪೂರ್ಣಗೊಂಡ ರಸ್ತೆಯ ಲೋಕಾರ್ಪಣೆ, ಆಲಮೇಲ ಪಟ್ಟಣದ ಬಜಾರ್ ರಸ್ತೆಯ ಅಭಿವೃದ್ಧಿಗೆ ರೂ.೧ಕೋಟಿ ೫೩ಲಕ್ಷ, ಕಡಣಿ ಕ್ರಾಸ್ನಿಂದ ವಿರಕ್ತಮಠದವರೆಗಿನ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ರೂ.೧ಕೋಟಿ ೮೬ಲಕ್ಷ ಹಾಗೂ ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ ರೂ.೨ಕೋಟಿ ೯೪ಲಕ್ಷ ಮಂಜೂರಾಗಿದ್ದು, ಈ ಎಲ್ಲ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನಾ ಸಮಾರಂಭ ನಡೆಯಲಿದೆ.
ಆಲಮೇಲ ಪಟ್ಟಣದಲ್ಲಿರುವ ಕೆಬಿಜೆಎನ್ಎಲ್ ೧೩ಎಕರೆ ೬ಗುಂಟೆ ಜಮೀನಿನಲ್ಲಿ ೩ಎ ಮಿನಿ ವಿಧಾನಸೌಧಕ್ಕೆ, ೩ಎ ಕೋರ್ಟ್ಗೆ ೧ಎ, ಅಗ್ನಿಶಾಮಕ ದಳಕ್ಕೆ ಮೀಸಲಿಡಲಾಗಿದ್ದು, ಉಳಿದ ೬ಎ. ೬ಗುಂಟೆ ಜಮೀನನ್ನು ತಾಲೂಕು ಕ್ರೀಡಾಂಗಣಕ್ಕೆ ಮೀಸಲಿಡಲಾಗಿದೆ. ಮುಂದಿನ ಎಲ್ಲ ಅನುದಾನಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಲವು ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಯೋಜಿಸಲಾಗಿದ್ದು, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಆಲಮೇಲದಲ್ಲಿ ಸಾಯಂಕಾಲ ನಡೆಯುವ ಈ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಕೋಳಾರಿ, ಜಿಲ್ಲಾ ಕೆಡಿಪಿ ಸದಸ್ಯ ನೂರಹಮ್ಮದ ಅತ್ತಾರ, ಪುರಸಭೆ ಮಾಜಿ ಉಪಾಧ್ಯಕ್ಷ ಸಂದೀಪ ಚೌರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಣಮಂತ ಸುಣಗಾರ, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ನಾಯ್ಕೋಡಿ, ಆಲಮೇಲ ಪಪಂ ಅಧ್ಯಕ್ಷ ಸಾದಿಕ್ ಸುಂಬಡ, ಪ್ರಭು ವಾಲಿಕಾರ, ಪ್ರವೀಣ ಕಂಠಿಗೊಂಡ, ಭೀಮು ಬಮ್ಮನಹಳ್ಳಿ, ಕುಮಾರ ದೇಸಾಯಿ, ಬಸವರಾಜ ತೇಲ್ಲೂರ, ಪ್ರಶಾಂತ ನಾಶಿ, ಮುನ್ನಾ ಚೌಧರಿ, ಶಶಿಧರ ಗಣಿಯಾರ, ಸುನಂದಾ ಯಂಪೂರೆ, ಜಯಶ್ರೀ ಹದನೂರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

