ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಯೋಗವು ವ್ಯಕ್ತಿಯ ದೇಹ ಮತ್ತು ಮನಸ್ಸಿನ ಶುದ್ಧೀಕರಣದ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗಿದೆ. ಹಾಗಾಗಿ ಯುವಜನತೆ ಸೇರಿದಂತೆ ಪ್ರತಿಯೊಬ್ಬರೂ ಯೋಗವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತ, ಸದೃಢ ಹಾಗೂ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಹಾಗೂ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಕರೆ ನೀಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಜೀವನ ಪದ್ಧತಿಯಾಗಿದೆ. ಪ್ರತಿನಿತ್ಯ ಕೆಲವೇ ನಿಮಿಷಗಳ ಯೋಗಾಭ್ಯಾಸವು ಒತ್ತಡವನ್ನು ಕಡಿಮೆ ಮಾಡಿ, ಉತ್ತಮ ಚಿಂತನೆಗಳನ್ನು ಬೆಳೆಸುತ್ತದೆ. ಯೋಗದಿಂದ ವ್ಯಕ್ತಿಯಲ್ಲಿ ಸಹನೆ, ಸಂಯಮ, ಶಿಸ್ತು ಹಾಗೂ ಸಮಾಜದ ಬಗ್ಗೆ ಕಾಳಜಿ ಮೂಡುತ್ತದೆ. ಇದೇ ಗುಣಗಳು ಉತ್ತಮ ನಾಗರಿಕನ ನಿರ್ಮಾಣಕ್ಕೆ ನೆರವಾಗುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಯೋಗ ಮತ್ತು ಪ್ರಾಣಾಯಾಮಗಳು ಭಾರತದ ಪ್ರಾಚೀನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳಾಗಿದ್ದು, ಸಾವಿರಾರು ವರ್ಷಗಳಿಂದ ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಆಚರಣೆಯಲ್ಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನದ ಫಲವಾಗಿ ೨೦೧೪ರಲ್ಲಿ ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಯೋಗ ದಿನವನ್ನು ಘೋಷಿಸಿತು. ಅಂದಿನಿಂದ ಪ್ರಪಂಚದಾದ್ಯಂತ ಪ್ರತಿವರ್ಷ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ವಿಷಯ ಎಂದರು.
ಪ್ರತೀ ವರ್ಷ ಅಂತರಾಷ್ಟ್ರೀಯ ಯೋಗ ದಿನದಂದು ನ್ಯಾಯಾಲಕ್ಕೆ ಆಗಮಿಸಿ ಯೋಗಾಭ್ಯಾಸದ ಬಗ್ಗೆ ಅರಿವು ಮೂಡಿಸುತ್ತಿರುವ ಯೋಗ ಶಿಕ್ಷಕ ಎ.ಬಿ.ಹಡಪದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಹಾಗೂ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್, ನ್ಯಾಯವಾದಿಗಳ ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ನ್ಯಾಯವಾದಿಗಳಾದ ಚೇತನ ಶಿವಶಿಂಪಿ, ನಾಗಭೂಷಣ ನಾವದಗಿ, ರವಿ ನಾಲತವಾಡ, ವಿ.ಸಿ.ಉರಾನ್, ರಾಯನಗೌಡ ಬಿರಾದಾರ, ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ್ ಮಹಾಂತೇಶ ಹಚರೆಡ್ಡಿ, ಶಿರಸ್ತೇದಾರ ಸುರೇಶ ಬಳಗಾನೂರ, ಸಿಬ್ಬಂದಿಗಳಾದ ರೇಣುಕಾ ಜಾನಮಟ್ಟಿ, ಪದ್ಮಾ ಗಾಯಕವಾಡ, ಶೀಲಾ ವೆಂಕಟರೆಡ್ಡಿ, ಎ.ಆರ್.ಕರಡಿ, ಲಲಿತಾ ನಾಯಕ, ಸುಶ್ಮಾ ಬಾಣಿ, ಜ್ಯೋತಿ ಹೆಬ್ಬಾಳ, ಕಾವೇರಿ ರಾಠೋಡ, ಅಶೋಕ ಕುಂಬಾರ, ಕೆ.ವಾಯ್.ಬಿಸನಾಳ, ತಿರುಪತಿ ದಾಸರ, ಬಸವರಾಜ ಹುಣಶ್ಯಾಳ, ರೇಣುಕಾ ಚಲವಾದಿ, ಮಲ್ಲಿಕಾರ್ಜುನ ಕಂಚಲಕಾಯಿ, ಪ್ರಸನ್ನ ಎಸ್, ಮಹೇಶ್, ನಿಸಾರ ನೆಗಿನಾಳ, ಬಸವರಾಜ ದಡ್ಡಿ, ಗಪೂರಸಾಬ ಜಾಹಗೀರದಾರ, ಶ್ರೀಶೈಲ ಹಿರೇಮಠ, ಸಂತೋಷ ಗಣಿ, ಸಂಗು ರೆಡ್ಡಿ, ಈರಯ್ಯ ಹಿರೇಮಠ, ಮಹೇಶ ಕೆ.ಎಸ್ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.
ಇಂದಿನ ಸಮಾಜದಲ್ಲಿ ಮನುಷ್ಯನಿಗೆ ಸ್ವಾರ್ಥದ ಮನೋಭಾವ ಹೆಚ್ಚಾಗುತ್ತಿದೆ. ಆದರೆ ಪ್ರತಿದಿನ ಯೋಗಾಭ್ಯಾಸವನ್ನು ಜೀವನದ ಭಾಗವನ್ನಾಗಿ ಮಾಡಿಕೊಂಡರೆ ಸ್ವಾರ್ಥ ತಾನಾಗಿಯೇ ಕರಗಿ, ನಿಸ್ವಾರ್ಥ ಸೇವಾ ಮನೋಭಾವ ಬೆಳೆಯುತ್ತದೆ. ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ.”
– ಸಚಿನ್ ಕೌಶಿಕ್
ಅಧ್ಯಕ್ಷರು, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು.
ಯುವ ಜನತೆ ಈಗಿನಿಂದಲೇ ಯೋಗಾಭ್ಯಾಸವನ್ನು ತಮ್ಮ ದಿನನಿತ್ಯದ ಜೀವನದ ಭಾಗವನ್ನಾಗಿ ಮಾಡಿಕೊಂಡರೆ, ವೃದ್ಧಾಪ್ಯದಲ್ಲಿಯೂ ಉತ್ತಮ ಆರೋಗ್ಯ ಮತ್ತು ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಯೋಗ ಮತ್ತು ಪ್ರಾಣಾಯಾಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.”
– ಶಶಿಕಾಂತ ಮಾಲಗತ್ತಿ
ಅಧ್ಯಕ್ಷರು, ನ್ಯಾಯವಾದಿಗಳ ಸಂಘ.

