ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಯಾಂತ್ರಿಕೃತ ಮತ್ತು ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಿಗೂ ಯೋಗ ಅತ್ಯಂತ ಅವಶ್ಯಕವಾಗಿದೆ. ಪ್ರತಿನಿತ್ಯ ಯೋಗಾಸನ ಮತ್ತು ಪ್ರಾಣಾಯಾಮ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಏಕಾಗ್ರತೆ ವೃದ್ಧಿಸುತ್ತದೆ ಮತ್ತು ಒತ್ತಡದಿಂದ ಮುಕ್ತಿ ಪಡೆಯಬಹುದು ಎಂದು ನಗರದ ವಿವಾ ಫಿಟ್ನೆಸ್ ಸೆಂಟರ್ ಮುಖ್ಯಸ್ಥೆ ವಿಜಯಲಕ್ಷ್ಮಿ ಗಿರಗಾವಿ ಹೇಳಿದರು.
ನಗರದ ಸುಭಾಶ್ಚಂದ್ರ ಭೋಸ್ ವೃತ್ತದ ಬಳಿಯಿರುವ ತಮ್ಮ “ವಿವಾ ಫಿಟ್ನೆಸ್ ಕೇಂದ್ರ” ದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಮಹಿಳಾ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿ ಅವರು ಮಾತನಾಡಿದರು.
ಯೋಗವು ಯಾವುದೇ ವಯಸ್ಸಿನವರಿಗೂ ಸೂಕ್ತವಾಗಿದ್ದು, ಇದು ನಮಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನೀಡುತ್ತದೆ. ಯೋಗವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಅದನ್ನು ನಮ್ಮ ದೈನಂದಿನ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳೋಣ ಎಂದು ವಿಜಯಲಕ್ಷ್ಮಿ ಅವರು ಸಲಹೆ ನೀಡಿದರು.
’ಉದಯರಶ್ಮಿ’ ದಿನಪತ್ರಿಕೆ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಅವರು ಮಾತನಾಡಿ, ಭಾರತದ ಪ್ರಾಚೀನ ಸಂಸ್ಕೃತಿಯ ಕೊಡುಗೆಯಾಗಿರುವ ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಇದು ನಮ್ಮ ಮನಸ್ಸು, ದೇಹ ಮತ್ತು ಆತ್ಮದ ನಡುವೆ ಸಮತೋಲನವನ್ನು ಸಾಧಿಸುವ ಅದ್ಭುತ ಮಾರ್ಗವಾಗಿದೆ. ನಮ್ಮ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪ್ರೇರಣೆಯಿಂದಾಗಿ ಇಂದು ಯೋಗವು ಇಡೀ ವಿಶ್ವಕ್ಕೆ ಪಸರಿಸಿದೆ. “ಆರೋಗ್ಯವೇ ಭಾಗ್ಯ” ಎಂಬ ಮಾತಿನಂತೆ, ನಿತ್ಯ ಯೋಗಾಭ್ಯಾಸದ ಮೂಲಕ ಸದೃಢ ಸಮಾಜವನ್ನು ನಿರ್ಮಿಸೋಣ ಎಂದು ಕರೆ ನೀಡಿದರು.
ಸಿದ್ದಸಿರಿ ಬ್ಯಾಂಕಿನ ಅಧಿಕಾರಿ ಶ್ರೀಮತಿ ಮೋನಾ ಬಿರಾದಾರ ಅವರು ಮಾತನಾಡಿ, ಮಾನವನ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸಲು ಯೋಗವು ಅತ್ಯಂತ ಉಪಯುಕ್ತವಾಗಿದೆ. ನಾವೆಲ್ಲರೂ ಪ್ರತಿದಿನ ಯೋಗ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಹೇಳಿದರು.
ಉಪನ್ಯಾಸಕಿ ಅನುಪಮಾ ಬಿರಾದಾರ ಮಾತನಾಡಿ, ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮೀಸಲಾದ ಜಾಗತಿಕ ಕಾರ್ಯಕ್ರಮವಾಗಿದೆ. ಈ ದಿನವು ಲಕ್ಷಾಂತರ ಜನರನ್ನು ಒಗ್ಗೂಡಿಸಿ ಯೋಗದ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.
ತರಬೇತಿಯಲ್ಲಿ ಪ್ರಗತಿ, ಪೂರ್ಣಿಮಾ, ನಫೀಸಾ ಸೇರಿದಂತೆ ಹಲವು ಮಹಿಳೆಯರು ಪಾಲ್ಗೊಂಡಿದ್ದರು.

