ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಮಹರ್ಷಿ ಪತಂಜಲಿ ಅವರು ಹೇಳಿರುವಂತೆ, “ಯೋಗವು ಕೇವಲ ಒಂದು ದೈಹಿಕ ವ್ಯಾಯಾಮವಲ್ಲ. ಅದು ಮನಸ್ಸು, ದೇಹ ಮತ್ತು ಉಸಿರಾಟಗಳ ನಡುವಿನ ಸಂಪರ್ಕದ ಸಾಧನವಾಗಿದೆ. ವ್ಯಕ್ತಿಯಲ್ಲಿರುವ ಚಿತ್ತದ ವೃತ್ತಿಗಳನ್ನು ನಿಯಂತ್ರಿಸುವುದಾಗಿದೆ. ಇದರಿಂದ ಜೀವನದಲ್ಲಿ ಶಿಸ್ತು, ಚೈತನ್ಯ, ಸಮತೋಲಿತ ಮತ್ತು ಸುಸ್ಥಿರ ಆರೋಗ್ಯಕ್ಕೆ ಸಹಕಾರಿ” ಎಂದು ಹೇಳಿದ್ದಾರೆ. ಯೋಗವು ಒತ್ತಡ, ಸಂಘರ್ಷ, ಆತಂಕ, ದುಗುಡ, ಖಿನ್ನತೆ, ನಿರ್ಲಿಪ್ತತೆ ಮತ್ತು ಮಾನಸಿಕ ಅಶಾಂತಿಯನ್ನು ಹೋಗಲಾಡಿಸಿ ಏಕಾಗ್ರತೆಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ದೈನಂದಿನವಾಗಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಜೀವನಶೈಲಿ ಬೆಳೆಸಲು ಇದೊಂದು ಶಕ್ತಿಯುತವಾದ ಸಾಧನ. ಒಟ್ಟಾರೆ ದೈಹಿಕ ಕಸರತ್ತು, ವ್ಯಾಯಾಮ, ಧ್ಯಾನ, ಯೋಗ, ಇವೆಲ್ಲವೂ ವ್ಯಕ್ತಿಯ ಸುಸ್ಥಿರ ಆರೋಗ್ಯ ಮತ್ತು ಯೋಗಕ್ಷೇಮದೊಂದಿಗೆ ಬದುಕಲು ಸಹಾಯಕವಾಗಿವೆ. ನಮ್ಮ ಋಷಿ ಮುನಿಗಳ ಪ್ರಕಾರ, ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನದ ಶಿಕ್ಷಣವೇ ಯೋಗ ಎಂದು ಉಲ್ಲೇಖಿಸಿದ್ದಾರೆ.
ಆದರೆ ಇಂದಿನ ಆಧುನಿಕ ಯುಗದಲ್ಲಿ ಮಾನವ ದುಡಿಮೆ, ಕೂಳು-ಬಾಕು ಸಂಸ್ಕೃತಿ, ಆಧುನಿಕ ಜೀವನಶೈಲಿ, ಪಾಶ್ಚಾತ್ಯರ ಮತ್ತು ಸಂಸ್ಕರಿಸಿದ ಆಹಾರ ಪದ್ಧತಿಯಿಂದ ತನ್ನ ಅಮೂಲ್ಯವಾದ ಆರೋಗ್ಯ ಸಂಪತ್ತನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಅದರಲ್ಲೂ ಯುವಜನತೆಯಂತೂ ಪಾನಿಪುರಿ, ಭೇಳ್, ಕಚೋರಿ, ಸಮೋಸಾ, ಪಾವ-ಬಾಜಿ, ವಡಾ-ಪಾವ ಮತ್ತು ಫಾಸ್ಟ್ ಫುಡ್ನಂತಹ ಕೆಟ್ಟ ಆಹಾರ ಸಂಸ್ಕೃತಿಗೆ ಮಾರು ಹೋಗುತ್ತಾ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರುತ್ತಿರುವದು ತೀರಾ ಕಳವಳಕಾರಿ ಸಂಗತಿಯಾಗಿದೆ.
ಇಡೀ ಜಗತ್ತಿಗೆ ಯೋಗದ ಮೂಲಕ ಅಧ್ಯಾತ್ಮಕತೆಯನ್ನು ಸಾರಿದ ನಾಡು ನಮ್ಮದು
ಭಾರತವು ಭವ್ಯ ಪರಂಪರೆ-ಸಂಸ್ಕೃತಿಯ ತವರೂರು. ಸಾಧು-ಸಂತ, ಋಷಿಮುನಿಗಳ ಭವ್ಯತೆ ನಾಡು. ಅಧ್ಯಾತ್ಮಕತೆಯ ಪುಣ್ಯಭೂಮಿ. ಪ್ರಾಚೀನ ಕಾಲದಲ್ಲಿ ನಮ್ಮ ದೇಶದ ಋಷಿ-ಮುನಿಗಳು, ಸಾಧು-ಸಂತರು ತಮ್ಮ ತಪಸ್ಸು, ಮನಃಶಾಂತಿ, ಭಕ್ತಿ ಮತ್ತು ಧ್ಯಾನದಲ್ಲಿ ಏಕಾಗ್ರತೆಯನ್ನು ತರಲು ಯೋಗವನ್ನು ಮಾಡುತ್ತಿದ್ದರು. ಮಾನವ ಇಂದು ಹಣದ ಗಳಿಕೆ ಮತ್ತು ಆಧುನಿಕತೆಗೆ ಬೆನ್ನು ಹತ್ತಿ ತನ್ನ ಆರೋಗ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಜೂನ್ ೨೧, ೨೦೧೫ ರಂದು ಮೊಟ್ಟಮೊದಲು ಭಾರತದಲ್ಲಿ ಪ್ರಾರಂಭಗೊಂಡು ನಂತರ ಅಧಿಕೃತವಾಗಿ ವಿಶ್ವಸಂಸ್ಥೆಯು ಪ್ರತಿ ವರ್ಷ ಜೂನ್ ೨೧ ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಕರೆಕೊಟ್ಟಿತು. ಆದ್ದರಿಂದ ಯೋಗವು ಮಾನವನ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಅಧ್ಯಾತ್ಮಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.

ಯೋಗದ ಮೂಲಕ ಜಾಗತಿಕ ಐಕ್ಯತೆ ಮತ್ತು ಸಂಸ್ಕೃತಿಯ ಪರಿಚಯಿಸಿದ ಭಾರತ
ಯೋಗವು ನಮ್ಮ ದೇಶದಲ್ಲಿ ಸುಮಾರು ೬ ರಿಂದ ೭ ಸಾವಿರ ವರ್ಷಗಳ ಹಿಂದೆಯೇ ಇರುವ ಜಾಗತಿಕ ವಿದ್ಯೆ. ಯೋಗ ಒಂದು ವ್ಯಾಯಾಮ ಮಾತ್ರವಲ್ಲದೇ ನಮ್ಮೊಂದಿಗೆ ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ತಿಳಿಸುತ್ತದೆ. ಇದು ವ್ಯಕ್ತಿಯ ಮನಸ್ಸು, ದೇಹದಲ್ಲಿ ಸಮತೋಲನವನ್ನು ಕಾಪಾಡಲು ಹಾಗೂ ಕ್ರಿಯೆ, ಸಂಯಮ, ಚಿಂತನೆ, ಏಕಾಗ್ರತೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವನ್ನಾಗಿಸುತ್ತದೆ. ಯೋಗದಿಂದ ಒತ್ತಡ, ಆತಂಕ ಮತ್ತು ಸಂಘರ್ಷಯುಕ್ತವಾದ ಜೀವನದಿಂದ ಮುಕ್ತಿ ಹೊಂದಲು ಸಾಧ್ಯ. ನಮ್ಮ ಋಷಿ-ಮುನಿಗಳು ನೀಡಿದ ಈ ಯೋಗದ ಕೊಡುಗೆ ಇಂದು ಇಡೀ ಜಗತ್ತಿಗೆ ಆರೋಗ್ಯ-ಸ್ವಾಸ್ಥ್ಯ ಕಾಪಾಡುವ ಸಾಧನವಾಗಿದೆ.
ಸ್ವಾಸ್ಥ್ಯ ಆರೋಗ್ಯಕ್ಕಾಗಿ ದಿವೌ಼ಷಧಿ
ದೇಹದ ಸಮತೋಲನವನ್ನು ಕಾಯ್ದುಕೊಂಡು ಶಕ್ತಿ-ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಸುಸ್ಥಿರ ಆರೋಗ್ಯವನ್ನು ಹೊಂದಲು ಪ್ರಯೋಜನಕಾರಿ. ಮನುಷ್ಯನ ಸರ್ವತೋಮುಖ ದೈಹಿಕ ಸದೃಢತೆ ಮತ್ತು ಆರೋಗ್ಯ ಸುಧಾರಣೆಯಲ್ಲಿ ಯೋಗದ ಮಹತ್ವ ಪ್ರಮುಖವಾಗಿದೆ. ಯೋಗದಿಂದ ಮನೋಬಲವನ್ನು ಹೆಚ್ಚಿಸಿ, ಜೀವನದಲ್ಲಿ ಎದರಾಗುವ ಮಾನಸಿಕ ಒತ್ತಡಗಳನ್ನು ನಿಯಂತ್ರಿಸಬಹುದು. ಮಾರಣಾಂತಿಕ ರೋಗಗಳ ನಿವಾರಣೆಗೆ ಯೋಗವು ರಾಮಬಾಣವಾಗಿದೆ. ಇಂದಿನ ಒತ್ತಡ ಮತ್ತು ಸಂಘರ್ಷಯುಕ್ತವಾದ ಜೀವನದಲ್ಲಿ ಯೋಗವು ಮಾನಸಿಕ ವೇದನೆ, ಖಿನ್ನತೆ ಮತ್ತು ಆತಂಕವನ್ನು ದೂರ ಮಾಡುತ್ತಾ, ಏಕಾಗ್ರತೆ ಮತ್ತು ಸಮಚಿತ್ತತೆಯನ್ನು ಹೆಚ್ಚಿಸಲು ಸಹಕಾರಿ. ಪ್ರಾಣಾಯಾಮ, ಧ್ಯಾನ, ತಪಸ್ಸು, ಯೋಗಾಸನ ಮತ್ತು ದೈಹಿಕ ಕಸರತ್ತುಗಳನ್ನು ಮಾಡುವುದರಿಂದ ಮನುಷ್ಯನ ರಕ್ತದೊತ್ತಡ, ಮಧುಮೇಹ ಮತ್ತು ಇತರ ಕಾಯಿಲೆಗಳನ್ನು ನಿಯಂತ್ರಿಸಲುವಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸುತ್ತದೆ.
’ಆರೋಗ್ಯಕರ ವಯಸ್ಸಿಗೆ ಯೋಗ’ ಈ ವರ್ಷದ ಘೋಷವಾಕ್ಯ
ವ್ಯಕ್ತಿಯ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಯೋಗದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಪ್ರತಿನಿತ್ಯ ಯೋಗ ಮಾಡುವುದರಿಂದ ಅದು ಸಕ್ರೀಯ ಜೀವನಕ್ಕೆ ಹೇಗೆ ಸಹಕಾರಿಯಾಗಬಲ್ಲದು ಎಂಬುದನ್ನು ತಿಳಿಸಿಕೊಡುವುದೇ ಈ ವರ್ಷದ ಯೋಗ ದಿನದ ಪ್ರಮುಖ ಧ್ಯೇಯವಾಗಿದೆ. ಯೋಗ ವಯಸ್ಸಿಗರಿಗೆ ಮತ್ತು ವೃದ್ಧಾಪ್ಯದಲ್ಲಿ ಇರುವವರಿಗೆ ದಿವೌಷಧಿಯಾಗಿ ಸಮತೋಲಿತ ಆರೋಗ್ಯದ ಯೋಗಕ್ಷೇಮವನ್ನು ಸುಧಾರಿಸಲು ಪೂರಕವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ.

ಕೊನೆಯ ನುಡಿ
ಇಂದು ಮನುಷ್ಯ ಏನೆಲ್ಲವನ್ನು ಏನೆಲ್ಲ ಗಳಿಸಬಲ್ಲ ಆದರೆ ಆರೋಗ್ಯವೆಂಬ ಅಮೂಲ್ಯ ಸಂಪತ್ತನ್ನು ಪಡೆಯಲು ಯೋಗ-ಧ್ಯಾನ, ವ್ಯಾಯಾಮ ,ದೈಹಿಕ ಕಸರತ್ತು ಜತೆಗೆ ಆರೋಗ್ಯ ಸ್ವಾಸ್ಥ್ಯ ವನ್ನು ಕಾಪಾಡಿಕೊಳ್ಳಲು ಯೋಗ ಶಿಬಿರದಲ್ಲಿ ಆಯೋಜಿಸುತ್ತಿರುವ ಉತ್ತಮ ಕಾರ್ಯವಾಗಿದೆ. ಕೋವಿಡ್ ನಂತಹ ಕಾಲಘಟ್ಟದಲ್ಲಿ ಜನರು ಜೀವ-ಜೀವನ ಮತ್ತು ಆರೋಗ್ಯದ ಮಹತ್ವ ಎಷ್ಟೆಂಬುದನ್ನು ಅರಿತಿದ್ದಾರೆ. ಯೋಗ-ವ್ಯಾಯಾಮಗಳಂತಹ ನಮ್ಮ ದೇಶೀಯ ಸಂಸ್ಕೃತಿಯನ್ನು ರೂಢಿಸಿಕೊಂಡು ನಮ್ಮ ಮುಂದಿನ ಜನಾಂಗದ ಉತ್ತಮ ಆರೋಗ್ಯಕ್ಕೆ ಯೋಗದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ ತನ್ಮೂಲಕ ಈ ಭವ್ಯ ಭಾರತವನ್ನು ಸ್ವಾಸ್ಥ್ಯ ಮತ್ತು ಆರೋಗ್ಯಯುತವನ್ನಾಗಿಸಲು ನಾವೆಲ್ಲ ಕಂಕಣಬದ್ಧರಾಗೋಣ. ದೈಹಿಕ ಕಸರತ್ತು, ವ್ಯಾಯಾಮ, ಆಟೋಟದಂತಹ ದೈಹಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ನಮ್ಮ ಆರೋಗ್ಯವನ್ನು ಸದೃಢ, ಸುಸ್ಥಿರ ಮತ್ತು ಸ್ವಾಸ್ಥ್ಯಯುತವನ್ನಾಗಿಸಲು ಪ್ರಯತ್ನಿಸೋಣ. ಕೇವಲ ಈ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಿ, ಒಂದು ದಿನ ಯೋಗ ಮಾಡಿ, ಮೋಬೈಲ್ ನಲ್ಲಿ ಸ್ಟೇಟಸ್ ಇಟ್ಟು ಸಂಭ್ರಮಿಸಿದರೆ ಸಾಲದು. ಇದು ಪ್ರತಿನಿತ್ಯ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ರಾಷ್ಟçದ ಸ್ವಾಸ್ಥ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಾಗಬೇಕಾಗಿರುವುದು ಅತಿ ಅವಶ್ಯಕವಾಗಿದೆ.


