– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಳು ಮೂಡಿಸೋ ಜಾದುಗಾರ ಅಪ್ಪ.. ಹಗಲು-ಬೆವರಿನ ಕೂಲಿಕಾರ, ರಾತ್ರಿ ಮನೆಯಲ್ಲಿ ಚೌಕಿದಾರ ಅಪ್ಪ.. ಎಂಬ ಅಪ್ಪನ ಕುರಿತ ಈ ಚಲನಚಿತ್ರದ ಹಾಡು ತಂದೆಯ ಪಾತ್ರವನ್ನು ವರ್ಣಿಸುವ ಸಾಲುಗಳಿವು. ಕುಟುಂಬದ ಎಲ್ಲ ಸದಸ್ಯರ ಇಷ್ಟ-ಕಷ್ಟಗಳ ಪೂರೈಸುವಲ್ಲಿಯೇ ತನ್ನೆಲ್ಲ ಜೀವಿವನ್ನು ಶ್ರೀಗಂಧದಂತೆ ತೇದು ಎಲ್ಲರ ಸಂತಸಕ್ಕಾಗಿ ದುಡಿಯುವ ದೈವವೇ ಅಪ್ಪ. ಇತರರ ಸುಖದಲ್ಲಿ ತನ್ನ ಸುಖವನ್ನು ಕಂಡು ಎಲ್ಲ ನೋವನ್ನು ತನ್ನ ಒಡಲೊಳಗೆ ಬಚ್ಚಿಟ್ಟು ಪಾಲನೆ-ಪೋಷಣೆ ಮಾಡಿ, ಬೆಳೆಸಿ, ಶಿಕ್ಷಣ ನೀಡಿ, ಬದುಕಿಗೊಂದು ದಾರಿ ತೋರಿದ ಅಪ್ಪ-ಅಮ್ಮರ ನೋವು ಇಂದು ನಾವು ಬೆಳೆದು ದೊಡ್ಡದವರಾದ ಮೇಲೆ ನಮಗ್ಯಾಕೆ ಅರ್ಥವಾಗತ್ತಾಯಿಲ್ಲ? ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ನಾವು ತಪ್ಪು ಮಾಡಿದಾಗ ಗದರಿಸಿರಬಹುದು. ಆದರೆ ತನ್ನ ಮಗ ಅಥವಾ ಮಗಳು ಜೀವನದಲ್ಲಿ ಶಿಸ್ತು, ಉತ್ತಮ ಶಿಕ್ಷಣ ಜತೆಗೆ ಸದಾಚಾರ, ಸನ್ನಡತೆ ಮತ್ತು ಮೌಲ್ಯಗಳ ಧಾರಣೆಯೊಂದಿಗೆ ಸನ್ಮಾರ್ಗದತ್ತ ಸಾಗಲೆಂಬುದೇ ಅವರ ಪರಮ ಧ್ಯೇಯ.
ಜೀವನದ ಸೂಪರ್ ಹೀರೋ ಅಪ್ಪನ ಪ್ರೀತಿ ಆಗಸದಷ್ಟು ಅಗಲ
ಶ್ರೇಷ್ಠ ತತ್ವಜ್ಞಾನಿ ಡಾನ್ ಬ್ರೌನ್ ಅವರು, “ಈ ಜಗತ್ತಿನಲ್ಲಿ ತಂದೆಗೆ ಸರಿಸಾಟಿ ಯಾರೂ ಇಲ್ಲ. ಅದಕ್ಕಾಗಿ ನಮ್ಮ ಜೀವ ನೀಡಿದ, ಬದುಕಿಗೊಂದು ಆಶ್ರಯ ಕಲ್ಪಿಸಿದ ಅಪ್ಪನಿಗೆ ಗೌರವ ನೀಡುವ ಮತ್ತು ವೃದ್ದಾಪ್ಯದಲ್ಲಿ ರಕ್ಷಿಸುವ, ಉಪಚರಿಸುವ ಮತ್ತು ಗೌರವ ಭಾವದಿಂದ ಕಾಣುವ ಮನೋಭಾವ ನಮ್ಮದಾಗಬೇಕು. ಅಂದಾಗ ಇಲ್ಲದೆ ಹೋದಲ್ಲಿ ತಂದೆ-ತಾಯಿ ಬಿಟ್ಟು ನೂರೊಂದು ದೇವರ ಅನುಗ್ರಹ ಪಡೆದರೂ ಏನೂ ಪ್ರಯೋಜನವಿಲ್ಲ” ಎಂದು ಹೇಳಿದ್ದಾರೆ. ನಮ್ಮನ್ನು ಶಿಕ್ಷಣವಂತರನ್ನಾಗಿಸಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ಜೀವಿ. ತಾನು ಒಂದು ಹರೆದ ಬಟ್ಟೆ ಉಟ್ಟರೆ ತೊಂದರೆಯಿಲ್ಲ, ನನ್ನ ಮಕ್ಕಳಿಗೆ ಏನೂ ತೊಂದರೆಯಾಗಬಾರದೆಂಬ ನಿಸ್ವಾರ್ಥ ಗುಣದ ನೈಜ ದೇವರು ಅಪ್ಪ ಎಂದರೆ ಅತಿಶಯೋಕ್ತಿಯಾಗಲಾರದು. ಅವರು ಕುಟುಂಬ ಏಳ್ಗೆಗೆ ಸರ್ವಸ್ವವನ್ನೇ ತ್ಯಾಗ ಮಾಡಿದ್ದನ್ನು ಯಾವುದರಿಂದಲೂ ಬೆಲೆ ಕಟ್ಟಲಾಗಲ್ಲ. ಇಂತಹ ಅದ್ಭುತ ವ್ಯಕ್ತಿತ್ವದ ದೃವತಾರೆಯಾದ ಅಪ್ಪನನ್ನು ಗೌರವಿಸುವ ದಿನವೇ ವಿಶ್ವ ಅಪ್ಪಂದಿರ ದಿನವಾಗಿದೆ. ಸಂಸಾರದಲ್ಲಿ ಅದೇಷ್ಟೋ ಸಂಕಷ್ಟ-ನೋವುಗಳಿದ್ದರೂ ಮನದಲ್ಲಿ ಬಚ್ಚಿಟ್ಟು ನಮ್ಮ ಮುಂದೆ ಸದಾ ಹಸನ್ಮುಖಿಯಾಗಿ ನಮ್ಮೆಲ್ಲರ ಖುಷಿಯಲ್ಲೇ ಕಾಲ ಕಳೆಯುವ ಶ್ರೇಷ್ಠ ತ್ಯಾಗಮಯಿ ನನ್ನಪ್ಪ. ಮಕ್ಕಳು, ಮಡದಿ ಮತ್ತು ಕುಟುಂಬದ ಬೇಡಿಕೆ ಈಡೇರಿಸುವಲ್ಲಿ ಹಗಲಿರುಳು ಕಷ್ಟಪಟ್ಟು ಹೆಣಗಾಡುತ್ತಾ, ಇನ್ನೊಬ್ಬರ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುವವ ನನ್ನ ತಂದೆ.
ಅಪ್ಪನೆಂದರೆ ಆಲದ ಮರವಿದ್ದಂತೆ

ಅಪ್ಪನ ಪ್ರೀತಿ, ತ್ಯಾಗ ಮತ್ತು ಔದಾರ್ಯ ಗುಣಗಳನ್ನು ಬಣ್ಣಿಸುವ ಪದಗಳು ಯಾವುದೇ ಡಿಕ್ಸನರಿಯಲ್ಲಿಯೂ ಸಿಗಲಾರದು. ತಂದೆಗೆ ತಂದೆಯೇ ಸಾಟಿ. ನಮಗೆ ತಂದೆಯೇ ಆದರ್ಶವಾಗಬೇಕು. ಕೆಲವು ಸಲ ಅಪ್ಪ ನಮಗೆ ಸ್ನೇಹಿತ, ಸಲಹೆಗಾರ, ಮಾರ್ಗದರ್ಶಕನಾಗಿ ನಾವು ಮಾಡುವ ಸಾಧನೆಗೆ ಸದಾ ನೈತಿಕ ಬೆಂಬಲ ನೀಡುತ್ತಾ ಸ್ಪೂರ್ತಿಯಾಗುತ್ತಾರೆ. ನಾವು ಸ್ನಾತಕೋತ್ತರ ಪದವಿ ಪಡೆಯುವ ಸಂದರ್ಭದಲ್ಲಿ ಊರಿಗೆ ಬಂದಾಗ ಬಸ್ ನಿಲ್ದಾಣದಲ್ಲಿ ರಾತ್ರಿ ೧ ಗಂಟೆಗೆ ಕಾಯುತ್ತಿದ್ದ ನನ್ನಪ್ಪ. ಜೀವನದಲ್ಲಿ ಸಂಸ್ಕೃತಿ-ಸಂಸ್ಕಾರ ಮತ್ತು ಜೀವನ ಮೌಲ್ಯಗಳ ಅಳವಡಿಕೆಗೆ ಸ್ಪೂರ್ತಿ. ಬದುಕು ಕಟ್ಟಿಕೊಳ್ಳಲು, ಕಷ್ಟದಲ್ಲೂ ಗೆಲುವಿಗಾಗಿ ಹಂಬಲಿಸಿದ ನಡೆ ಕಲಿಸಿದವರು ನನ್ನಪ್ಪ. ಇಂದು ನಾನು ಪ್ರಾಧ್ಯಾಪಕನಾಗಲು ಪ್ರೇರಣೆ ನೀಡಿ, ಸದಾ ಮಕ್ಕಳಿಗೆ ಜ್ಞಾನಧಾರೆ ಎರೆದು ವೃತ್ತಿ ನಿಷ್ಠೆ, ಬದ್ಧತೆ ಮತ್ತು ಕಾಯಕ ನಿಷ್ಠೆಯ ಪಾಠ ಬೋಧಿಸಿದ ದೈವ ಸ್ವರೂಪ ನನ್ನ ತಂದೆ. ಅಪ್ಪ ನಿವಿಂದೂ ನಮ್ಮ ಜೊತೆಯಿಲ್ಲ ಅಂದರೂ ನೀವು ಹಾಕಿಕೊಟ್ಟ ಮಾರ್ಗ ನಮಗೆಲ್ಲ ಭವಿಷ್ಯದ ದಿಕ್ಸೂಚಿಯಾಗಿವೆ.

ತಂದೆಗೆ ಭೌತಿಕ ವಸ್ತುಗಳ ಉಡುಗೊರೆ ಬೇಡ ಗೌರವ ಸಮರ್ಪಣೆ ಭಾವ ಮೂಡಲಿ
ವಿಶೇಷವಾಗಿ ಅಪ್ಪಂದಿರ ದಿನವನ್ನು ಜೂನ್ ತಿಂಗಳ ಮೂರನೇಯ (ಜೂನ್-೨೧) ರಂದು ಭಾನುವಾರ ಆಚರಿಸಲಾಗುತ್ತಿದೆ. ಪ್ರೀತಿ, ತ್ಯಾಗ, ಮಮತೆ, ಮಾರ್ಗದರ್ಶನವನ್ನು ಸ್ಮರಿಸುವ ಮಹೋನ್ನತ ಉದ್ಧೇಶದಿಂದ ವಿಶ್ವ ಅಪ್ಪಂದಿರ ದಿನವನ್ನು ಅವರ ಮಾಡಿದ ಅವಿಸ್ಮರಣೀಯ ಸೇವೆ ಮತ್ತು ತ್ಯಾಗದ ಪ್ರತೀಕ ಅವರಿಗೆ ನೀಡುವ ಗೌರವವಾಗಿದೆ. ಇಡೀ ಬದುಕಿನಲ್ಲಿ ತಂದೆ-ತಾಯಿಯರ ಪಾತ್ರವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಈ ಕಾಲದಲ್ಲಿ ಅಪ್ಪಂದಿರ ದಿನದಂದು ಮಕ್ಕಳು ಕೇವಲ ಅವರಿಗೆ ಭೌತಿಕ ವಸ್ತುಗಳ ರೂಪದಲ್ಲಿ ಉಡುಗೊರೆಯನ್ನು ನೀಡಿದರೆ ಸಾಲದು. ಅವರ ತ್ಯಾಗ ಮತ್ತು ಪರಿಶ್ರಮಕ್ಕೆ ಗೌರವ ನೀಡುತ್ತಾ, ಅವರು ಕಂಡ ಕನಸನ್ನು ನನಸಾಗಿಸಲು ಮತ್ತು ವೃದ್ಧಾಪ್ಯ ಕಾಲದಲ್ಲಿ ಗೌರವ ಭಾವದಿಂದ ಕಾಣುವ, ರಕ್ಷಿಸುವ, ಉಪಚರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅದುವೇ ನಾವು ನಿಜವಾದ ಉಡುಗೊರೆ. ಭಾರತೀಯ ಸಂಸ್ಕೃತಿ ವಸುದೈವ ಕುಟುಂಬಂ ಎಂಬ ಪರಂಪರೆ ನಮ್ಮದು. ಎಲ್ಲರೂ ಒಟ್ಟಿಗೆ ಬದುಕಿ ಬಾಳುವ ಮತ್ತು ಪರಸ್ಪರ ಸ್ನೇಹ-ಪ್ರೀತಿ, ಬಾಂಧವ್ಯ, ಮಮತೆ, ಅನುಬಂಧ-ಭಾವಾನುಬಂಧ ಮತ್ತು ಮಾನವೀಯ ಮೌಲ್ವಿಕ ಗುಣಗಳನ್ನು ಬೆಳೆಸಿಕೊಂಡು ಆ ನಮ್ಮ ತಂದೆ-ತಾಯಿಯರನ್ನು ದೈವರೆಂದು ಕಾಣುವ ಮನೋಧೋರಣೆ ನಮ್ಮದಾಗಬೇಕು.
ಅಪ್ಪ ನೀವು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ನಿಮ್ಮ ನೆರಳು ಸದಾ ನಮ್ಮೊಂದಿಗೆ ಇರಲಿ
ತಾಯಿ ಪ್ರೀತಿಯ ಸಮುದ್ರವಾದರೆ, ತಂದೆಯು ನಮ್ಮ ಜೀವನದ ಭರವಸೆಯ ಆಕಾಶ. ಮಕ್ಕಳ ಆಸೆಗಳನ್ನು ಪೂರೈಸಲು ತನ್ನ ಇಷ್ಟಗಳನ್ನು ಬಲಿಕೊಡುವ ಏಕೈಕ ಜೀವಿ ಎಂದರೆ ಅವರೇ ಅಪ್ಪ. ಬೈಗುಳದಲ್ಲಿ ಭವಿಷ್ಯಕ್ಕೆ ಆಶೀರ್ವಾದ ಮತ್ತು ಬದುಕಿಗೊಂದು ದಾರಿದೀಪವಿದೆ. ಮೌನದಲ್ಲಿ ಜೀವನದ ಪಾಠ ಇರುತ್ತದೆ ಎಂಬುದನ್ನ ನಾವೆಲ್ಲರೂ ಮನಗಾಣಬೇಕು. ಅಪ್ಪ ಎಂದರೆ ಕೇವಲ ಒಂದು ಪದವಲ್ಲ. ಅದು ಧೈರ್ಯ, ಶಕ್ತಿ ಮತ್ತು ರಕ್ಷಣೆಯ ಸಂಕೇತವೆಂದು ಹೇಳಬಹುದು. ಇಂದು ನಾವು ನಮ್ಮ ತಂದೆ-ತಾಯಿಯರನ್ನು ನೋಡಿಕೊಳ್ಳುವ ಸಂಸ್ಕೃತಿ ಅದು ನಮ್ಮ ಮಕ್ಕಳಿಗೆ ಮುಂದೆ ಹೇಗೆ ನಮ್ಮನ್ನು ಗೌರವಿಸುವಂತೆ ಸೂಚಿಸುವ ಸಂಕೇತ. ಅದಕ್ಕಾಗಿ ಈ ನಮ್ಮ ಬದುಕಿಗೆ ಜೀವ ನೀಡಿ, ನಮಗೆ ಆಸ್ತಿ ಮಾಡದೇ ನಮಗೆ ಉತ್ಕೃಷ್ಟ ಮಟ್ಟದ ಶಿಕ್ಷಣ ನೀಡಿ, ಬಾಳಿಗೆ ಬೆಳಕಾಗಿ ನಮ್ಮನ್ನೇ ಆಸ್ತಿ ಮಾಡಿದ ಶ್ರೇಷ್ಠ ಜೀವಿ ನನ್ನಪ್ಪ. ಅಪ್ಪ ನೀವು ನಮ್ಮೊಂದಿಗೆ ಭೌತಿಕವಾಗಿ ಇಲ್ಲದೇ ಹೋದರೂ ನಿಮ್ಮ ಕೃಪೆ, ಅನುಗ್ರಹ, ಮಾರ್ಗದರ್ಶನ, ತೋರಿದ ದಾರಿ ಮತ್ತು ನೆರಳು ಸದಾ ನಮ್ಮೊಂದಿಗೆ ಇರುತ್ತದೆ. ನಿಮ್ಮ ನಡೆ-ನುಡಿ ನಮ್ಮ ಪಾಲಿಗೆ ದಾರಿದೀಪವಾಗಲಿ. ಅದುವೇ ನಮ್ಮ ಬಾಳಿಗೆ ಹೊಂಗಿರಣ ಎಂದು ಹೇಳುತ್ತಾ ಈ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳನ್ನು ತಿಳಿಸುತ್ತಾ ನನ್ನಪ್ಪನ್ನು ಒಂದು ಸಾರಿ ಮನದಲ್ಲಿ ನೆನೆದ ಭಾವ ತುಂಬಿ ಬರುತ್ತದೆ.


